ಮೈಸೂರು ಜುಲೈ. 27 : ಅಂತರ್ಜಾತಿ ವಿವಾಹದಂತಹ ಚಳುವಳಿಯನ್ನು ಬಸವಣ್ಣವರು ಪ್ರಾರಂಭಿಸಿದ್ದು, ಇಂತಹ ಚಳುವಳಿಯನ್ನು ನಿರಂತರವಾಗಿ ತುಳಿಯುವಂತಹ ದೊಡ್ಡ ಪ್ರಯತ್ನಗಳು ಅಂದಿನಿಂದ ಇಂದಿನವರೆವಿಗೂ ನಡೆಯುತ್ತಲೇ ಇವೆ ಎಂದು ಮೈಸೂರು ರಂಗಾಯಣ ನಿದೇಶಕರಾದ ಸತೀಶ್ ತಿಪಟೂರು ಆತಂಕ ವ್ಯಕ್ತಪಡಿಸಿದರು.
ಅವರು ಜುಲೈ 25ರ ಸಂಜೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಅಂತರ್ಜಾತಿ ವಿವಾಹಿತರಾದ ರೇಖಾ.ಆರ್. ಮತ್ತು ಕಿರಣ್ ಕುಮಾರ್ ಅವರಿಗೆ ಏರ್ಪಡಿಸಿದ್ದ ಔತಣಕೂಟ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನನಗೇಕೆ ಇಂತಹ ಅಂತರ್ಜಾತಿ ವಿವಾಹಿತರ ಮೇಲೆ ತುಂಬಾ ಪ್ರೀತಿಯೆಂದರೆ ನಮ್ಮ ಕುಟುಂಬದಲ್ಲಿ ಮೂರು ತಲೆಮಾರುಗಳಿಂದ ಅಂತರ್ಜಾತಿ ವಿವಾಹವಾಗುತ್ತಾ ಬರುತ್ತಿರುವುದರಿಂದ ನಾನು ಯಾರನ್ನೂ ಯಾವ ಜಾತಿ ಎಂದು ಕೇಳಿಲ್ಲ, ಈ ಹಿನ್ನೆಲೆಯಲ್ಲಿ ನಮ್ಮದೇಯಾದ ಒಂದು ಅಂತರ್ಜಾತಿ ಕುಟುಂಬದ ಸಂಬಂಧ, ಒಡನಾಟವಿದೆ, 12 ವರ್ಷಗಳ ಹಿಂದೆ ಹಿಂದು ಹುಡುಗ, ಮುಸ್ಲಿಂ ಹುಡುಗಿಯ ವಿವಾಹವನ್ನು ಇದೇ ಛತ್ರದಲ್ಲಿ ಮಾಡಿಸಲಾಗಿತ್ತು ಎಂದು ಹೇಳಿದರು.
ಅಂತರ್ಜಾತಿ ವಿವಾಹವಾದವರಿಗೆ ಇಂತಹ ಔತಣಕೂಟ ಏರ್ಪಡಿಸುವುದರಿಂದ ಸಾಮಾಜಿಕ ಜವಾಬ್ದಾರಿ ಬರುತ್ತದೆ, ಇದಲ್ಲದೆ ನಾವೆಲ್ಲಾ ಅಂತರ್ಜಾತಿ ವಿವಾಹಿತರ ಜೊತೆ ಇದ್ದೇವೆ ಎಂಬ ಧೈರ್ಯ ಬರುತ್ತದೆ, ಹೆಚ್ಚು ಹೆಚ್ಚು ಅಂತರ್ಜಾತಿ ವಿವಾಹಗಳಾಗುತ್ತಾ ಹೋದಲ್ಲಿ ಭಾರತದಲ್ಲಿ ಒಂದು ಸಾಮರಸ್ಯದ ಸಮಾಜ ನಿರ್ಮಾಣವಾಗಲಿದೆ ಎಂದರು.
ಅಂತಸ್ತು, ಆಸ್ತಿ ಬೇರೆ ಜಾತಿಯವರಿಗೆ ಹೋಗಬಾರದು ಎಂದು ಒಂದೇ ಜಾತಿಯಲ್ಲಿ ಮದುವೆಗಳಾಗಿರುವವರಿಗೆ 53 ಖಾಯಿಲೆಗಳು ಕಾಡುತ್ತಾ ಇವೆ ಎಂದು ವೈಜ್ಞಾನಿಕವಾಗಿ ಮತ್ತು ಬೈಲಾಜಿಕಲಿ ಧೃಡಪಟ್ಟಿದೆ ಎಂದು ಹೇಳಿದರು.
ಸಾಹಿತಿ ಹಾಗೂ ಸಾಂಸ್ಕøತಿಕ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಕನ್ನಡ ಸಾಹಿತಿಗಳು ಜಾತಿಯ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ, ಅದೇ ರೀತಿ ಪೆರಿಯಾರ್ ಹೋರಾಟ ಮತ್ತು ಗಾಂಧಿ-ಅಂಬೇಡ್ಕರ್ ಅವರು ಹೋರಾಟವು ಈ ದೇಶದಲ್ಲಿ ಜಾತಿ ನಿರ್ಮೂಲನೆಗಾಗಿ ನಡೆದಿದೆ, ಗಾಂಧೀಜಿ ಒಮ್ಮೆ ಅಂಬೇಡ್ಕರ್ ಅವರಿಗೆ ನಾನು ನಿಮ್ಮವನೇ ಅಲ್ಲವೇ ಎಂದು ಕೇಳಿದಾಗ, ಅಂಬೇಡ್ಕರ್ ನಾನು ಜಾತಿಯ ಸಂಕಟವನ್ನು ಜಾತಿಯೊಳಗಿದ್ದು ಅನುಭವಿಸುವ ನೋವು ನಮಗೆ ಮಾತ್ರ ಅದರ ಸಂಕಟ ತಿಳಿಯುತ್ತದೆ, ಆದರೆ ನೀವು ಹೊರಗಿದ್ದು ಅದರ ನೋವು, ಸಂಕಟ ತಿಳಿಯಲಾಗುವುದಿಲ್ಲ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಜಾತಿಯ ಪಿಡುಗನ್ನು ಹೋಗಲಾಡಿಸಲು ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ ಎಂದು ಹೇಳಿದರು.
ಸಹಜ ಸಮೃದ್ಧಿ ನಿರ್ದೇಶಕರಾದ ಕೃಷ್ಣಪ್ರಸಾದ್ ಮಾತನಾಡಿ 90ರ ದಶಕದಲ್ಲಿ ನಮ್ಮ ಕುಟುಂಭದಲ್ಲಿ ಅಂತರ್ಜಾತಿ ವಿವಾಹವಾದಾಗ ಹಲವಾರು ಕಷ್ಟಗಳನ್ನು ಎದುರಿಸಬೇಕಾಯಿತು, ಆ ಕಷ್ಟಗಳು ಈಗ ಕಡಿಮೆಯಾಗಿದ್ದರೂ ಸಾಫ್ಟ್ವೇರ್ ಕಂಪನಿ ಮತ್ತು ಐಟಿ-ಬಿಟಿಗಳಲ್ಲಿ ಕೆಲಸ ಮಾಡುವವರು ಅಂತರ್ಜಾತಿ ವಿವಾಹವಾದಾಗ ಹಲವಾರು ಮೌಢ್ಯಗಳಿಗೆ ಮಾರು ಹೋಗುತ್ತಿದ್ದಾರೆ, ಹೆಣ್ಣು-ಗಂಡು ಎರಡೂ ಕಡೆಯವರ ಸಮಪ್ರದಾಯಗಳ ಆಚರಣೆ, ವರಲಕ್ಷ್ಮೀ ಪೂಜೆ ಇಂತಹವುಗನ್ನು ಮಾಡುವುದರಿಂದ ಅಂರ್ಜಾತಿ ವಿವಾಹಕ್ಕೆ ಅರ್ಥವಿಲ್ಲದಂತಾಗುತ್ತದೆ, ಅಫ್ರಿಕಾ ಇನ್ನು ಇತರ ದೇಶಗಳಲ್ಲಿ ಹುಡುಗ-ಹುಡುಗಿಯರೇ ಅವರ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಯಾವುದೇ ಚೌಕಟ್ಟುಗಳಿಲ್ಲದೆ ಮದುವೆ ಅನ್ನುವುದು ಹುಡುಗ-ಹುಡುಗಿಯ ಆಯ್ಕೆಯಾಗಿರಬೇಕು, ಇದರಿಂದ ಜಾತಿ ಬಂಧನದಿಂದ ಬಿಡುಗಡೆಯಂತಾಗುತ್ತದೆ, ಹಲವಾರು ಕಡೆ ಅಂತರ್ಜಾತಿ ವಿವಾಹವಾದವರಿಗೆ ಊರಿನಿಂದ ಬಹಿಷ್ಕಾರ, ಮರ್ಯಾದೆ ಹತ್ಯೆಗಳು ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಮಂಟೇಸ್ವಾಮಿಯವರು ಮಾತನಾಡಿ, 90ರ ದಶಕದಲ್ಲಿ ಮೈಸೂರಿನಲ್ಲಿ ಕೆ.ರಾಮದಾಸ್, ಪೋಲಂಕಿ ರಾಮಮೂರ್ತಿರವರ ನೇತೃತ್ವದಲ್ಲಿ ಸಾಹಿತ್ಯ ವಲಯದ ಹಲವಾರು ಗೆಳೆಯರು ಅಂತರ್ಜಾತಿ ವಿವಾಹವಾದವರು, ಅದರಲ್ಲಿ ನಾನು ಸಹ ಒಬ್ಬ, ಜಾತಿಯನ್ನು ಮೀರಬೇಕೆಂದು ಅಂಬೇಡ್ಕರ್ ಸಿದ್ಧಾಂತದಡಿ ಸೈದ್ಧಾಂತಿಕವಾಗಿ ಅಂತರ್ಜಾತಿ ವಿವಾಹಗಳಿಗೆ ಒತ್ತು ನೀಡುತ್ತಾ ಬರುತ್ತಿದ್ದೇವೆ, ಅಂತರ್ಜಾತಿ ವಿವಾಹವಾದವರು ಇಷ್ಟಪಟ್ಟು ಮದುವೆಯಾಗಿದ್ದೇವೆ, ಕಷ್ಟಪಟ್ಟು ಸಂಸಾರಿಕ ಜೀವನ ನಡೆಸಿ ಸಮಾಜ ಏನು ಅಂದುಕೊಳ್ಳುತ್ತದೆ ಎಂಬುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟೆವು ಎಂಬುದನ್ನು ನನಸಾಗುವಂತಹ ಜೀವನ ನಡೆಸಬೇಕು, ಆ ರೀತಿ ಬದುಕಿ-ಬಾಳಬೇಕು ಅಂತರ್ಜಾತಿ ವಿವಾಹಗಳು ಆ ಕ್ಷಣಿಕದ ಮದುವೆಗಳಾಗದೆ ಸಮಾಜ ಮತ್ತು ನಮ್ಮ ಕುಟುಂಬಗಳಿಗೆ ಮಾದರಿಯಾಗುವಂತೆ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು.

ಸಹಜ ಕೃಷಿಯ ಸೀಮಾ ಅವರು ಮಾತನಾಡಿ ಎಲ್ಲಾದಕ್ಕಿಂತ ಪ್ರೀತಿ ದೊಡ್ಡದು, ಪ್ರೀತಿಸಿ ಮದುವೆಯಾದವರು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು, ಗಟ್ಟಿಯಾಗಿ ನಿಂತಾಗ ಯಾವ ಸಮಾಜವು ಏನು ಮಾಡಲು ಸಾಧ್ಯವಿಲ್ಲ, ಈಗ ಗಂಡುಗಳಿಗೆ ಹೆಣ್ಣುಗಳೇ ಸಿಗುತ್ತಿಲ್ಲ, ಒಂದು ಹೆಣ್ಣು ಸಿಕ್ಕಿ ಮದುವೆಯಾದರೆ ಸಾಕು ಎಂಬಂತಾಗಿದೆ ಇಂತಹ ಕಾಲದಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ಆದಲ್ಲಿ ಜಾತಿಯ ಸಂಕೋಲೆಯ ಪರದೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕರಾದ ಮಹದೇವ ಭರಣಿ ಮಾತನಾಡಿ ಅಂತರ್ಜಾತಿ ವಿವಾಹದ ಮೂಲಕ ಅಂಬೇಡ್ಕರ್ ಮತ್ತು ಗಾಂಧೀಜಿಯ ಆಶಯಗಳನ್ನು ಈಡೇರಿಸುವ ಮೂಲಕ ಜಾತಿಯ ಸಂಕೋಲೆಯಿಂದ ಹೊರಬರಬೇಕಾಗಿದೆ, ಮೈಸೂರಿನಲ್ಲಿ 90ರ ದಶಕದಿಂದ ಅಂತರ್ಜಾತಿ ವಿವಾಹಗಳು ಆಗುತ್ತಾ ಇವೆ, ಅದೇ ರೀತಿ ಇಂದು ಅಂತರ್ಜಾತಿ ವಿವಾಹವಾದವರಿಗೆ ಔತಣಕೂಟ ಏರ್ಪಡಿಸಿರುವುದು ಅವರಿಗೆ ನೈತಿಯ ಧೈರ್ಯ, ಬೆಂಬಲ ನೀಡಿದಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುರೇಶ್ ಅಮ್ಮಸಂದ್ರ ಮಾತನಾಡಿದರು, ಔತಣಕೂಟದ ಅಧ್ಯಕ್ಷತೆಯನ್ನು ವಿಜಯವಾಣಿ ಪತ್ರಿಕೆಯ ನಿವೃತ್ತ ಸಂಪಾದಕರಾದ ಹೆಚ್.ಜಿ.ವೆಂಕಟೇಶಮೂರ್ತಿ ವಹಿಸಿದ್ದರು, ತುಮಕೂರಿನ ಮೈತ್ರಿನ್ಯೂಸ್ ಸಂಪಾದಕರಾದ ಹೆಚ್.ವಿ.ವೆಂಕಟಾಚಲ ಅವರು ಆಶಯ ನುಡಿಗಳನ್ನಾಡಿದರು.