ವ್ಯವಹಾರವನ್ನು ಡಿಸಿಸಿ ಮೂಲಕವೇ ಮಾಡಲು ಕೆ.ಎನ್.ರಾಜಣ್ಣ ಕರೆ

ತುಮಕೂರು:ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಕೇವಲ ಸಾಲಕ್ಕಾಗಿ ಡಿಸಿಸಿ ಬ್ಯಾಂಕಿಗೆ ಬರಬೇಡಿ, ಪ್ರತಿಯೊಬ್ಬರುತಮ್ಮ ವ್ಯಾಪಾರ, ವ್ಯವಹಾರವನ್ನು ಡಿಸಿಸಿ ಬ್ಯಾಂಕಿನ ಮೂಲಕ ಮಾಡಿದರೆ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಹಕಾರ ಇಲಾಖೆ ಮಾಜಿ ಮಂತ್ರಿ ಹಾಗೂ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ತಿಳಿಸಿದರು.

ನಗರದ ಡಯಟ್ ಸಭಾಂಗಣದಲ್ಲಿ ಆಯೋಜಿಸಿದ್ದ 72 ನೇ ವರ್ಷದ ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್ ನ ವಾರ್ಷಿಕೋತ್ಸವ, ಸರ್ವ ಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು,ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ಸಹಕಾರಿಗಳು ತಮ್ಮ ವ್ಯವಹಾರ ಮಾಡಿದರೆ, ಅದರಿಂದ ಬರುವ ಹಣವನ್ನು ಮತ್ತಷ್ಟುಜನರಿಗೆ ಸಾಲ ನೀಡಲು ಸಾಧ್ಯವಾಗಲಿದೆ. ಇದರಿಂದ ಬ್ಯಾಂಕು ಸಹ ಬೆಳೆಯಲಿದೆ ಹಾಗೂ ಸಹಕಾರಿಗಳು ಬೆಳೆಯಲಿದ್ದಾರೆ ಎಂದರು.

ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆಯುವುದು ಜನರ ಹಕ್ಕು,ಹಾಗೆಯೆ ಮರುಪಾವತಿ ಅವರ ಜವಾಬ್ದಾರಿ. ಬರಗಾಲದಲ್ಲಿ ಬೆಳೆ ಸಾಲ ಪಡೆಯುವುದರಿಂದ ಯಾವುದೇ ಪ್ರಯೋಜನವಾಗದು, ಹಸು, ಕುರಿ ಸಾಕಾಣಿಕೆ ಸಾಲ ಪಡೆದರೆ ಅದರಿಂದ ಅದಾಯ ಪಡೆಯಬಹುದು. ಒಂದು ಸಾಲ ತೀರಿಸಲು ಮತ್ತೊಂದು ಸಾಲ ಪಡೆಯುವುದು ತರವಲ್ಲ. ಇದರಿಂದ ಬಡ್ಡಿ, ಚಕ್ರ ಬಡ್ಡಿ ಸೇರಿ, ಅಡಮಾನವಿಟ್ಟ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಕೆ.ಎನ್.ರಾಜಣ್ಣ ಅವರು, ಈ ಬಾರಿ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಸುಸ್ಥಿದಾರರ ಸಾಲ ವಸೂಲಿಗೆ ಸೂಚಿಸಿದ್ದೇನೆ. ಬ್ಯಾಂಕಿನ ಅಕೌಂಟಿನಲ್ಲಿ ಕನಿಷ್ಠ ಒಂದು ಸಾವಿರರೂ ಉಳಿತಾಯ ಹಣವಿರಲಿ, ಅದಕ್ಕೆ ಬಡ್ಡಿಯನ್ನು ನೀಡುತ್ತೇವೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕಿನ ವತಿಯಿಂದ ರೈತರಿಗೆ ನೀಡುತ್ತಿರುವ ಸಾಲದಲ್ಲಿ ಸರಕಾರದ ಒಂದು ನೈಯಾಪೈಸೆ ಹಣವಿಲ್ಲ. ಸಾಲ ನೀಡುವ ಪ್ರತಿ ಪೈಸೆಯೂ ರೈತರು ನೀಡುವ ಷೇರು, ಠೇವಣಿ ಹಣದಿಂದಲೇ ನೀಡುತ್ತಿರುವುದು. ರೈತರಿಗೆ ಹೊರೆಯಾಗ ಬಾರದು ಎಂಬ ಕಾರಣಕ್ಕೆ ಈ ವರ್ಷದಿಂದ ನಬಾರ್ಡ್ ಮತ್ತು ಅಪೇಕ್ಸ್ ಬ್ಯಾಂಕಿನ ಸಾಲವನ್ನು ಕಡಿಮೆ ಮಾಡಿದ್ದೇವೆ. ಹಾಗಾಗಿ ಸೊಸೈಟಿಗಳು ಕೃಷಿಯೇತರ ಸಾಲಗಳನ್ನು ನೀಡಲು ಮುಂದಾಗಬೇಕು. ಇದಕ್ಕೆ ಬೇಕಾದ ಸಾಲ ಸೌಲಭ್ಯವನ್ನು ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲು ಸಿದ್ದ.ವಿ.ಎಸ್.ಎಸ್.ಎನ್ ಸಿಇಓ ಪದಾಧಿಕಾರಿಗಳು ಸೊಸೈಟಿಗಳ ಅಭಿವೃದ್ದಿಯ ಕಡೆಗೆ ಗಮನಹರಿಸ ಬೇಕು ಎಂದು ಕೆ.ಎನ್.ರಾಜಣ್ಣ ಸಲಹೆ ನೀಡಿದರು.

ಸರಕಾರ ಜಿಲ್ಲೆಯಲ್ಲಿ ಮೇವು ಬ್ಯಾಂಕ್, ಗೋಶಾಲೆ ತೆರೆದರೆ ಡಿಸಿಸಿ ಬ್ಯಾಂಕು, ಆಯಾಯ ಗೋಶಾಲೆಗಳ ವ್ಯಾಪ್ತಿಯ ಸೊಸೈಟಿಗಳ ಮೂಲಕ ರೈತರಿಗೆ ಗುಣಮಟ್ಟದ ಮದ್ಯಾಹ್ನದ ಊಟ ಒದಗಿಸಲು ಸಿದ್ದರಿದ್ದೇವೆ. ಸೋಸೈಟಿ ಖರ್ಚು ಮಾಡಿದ ಹಣವನ್ನು ಡಿಸಿಸಿ ಬ್ಯಾಂಕು ಬರಿಸಲಿದೆ. ರೈತನದ್ದು ನೀಡುವಕೆಯೇ ಹೊರತು ಬೇಡುವಕೆಯಲ್ಲ. ಆದರೆ ಪ್ರಕೃತಿ ಒಮ್ಮೊಮ್ಮೆ ಆತನನ್ನು ಸಹ ಅಸಹಾಯಕನನ್ನಾಗಿ ಮಾಡಿಬಿಡುತ್ತದೆ. ಜಿಲ್ಲೆಯಲ್ಲಿ ಎಷ್ಟೇ ಗೋಶಾಲೆ ತೆರೆದರೂ ಅಲ್ಲಿಗೆ ಬರುವ ರೈತರಿಗೆ ಮದ್ಯಾಹ್ನ ಊಟ ನೀಡಲು ಸಿದ್ದ ಎಂದು ರಾಜಣ್ಣ ಘೋಷಿಸಿದರು.

ಕೇಂದ್ರ ಸರಕಾರ ಸಹಕಾರಿಕಾಯ್ದೆ 1964ಕ್ಕೆ 2025ರಲ್ಲಿ ತಿದ್ದುಪಡಿ ತಂದು ಓರ್ವ ವ್ಯಕ್ತಿ 10 ವರ್ಷಗಳ ಕಾಲ ಮಾತ್ರ ಪದಾಧಿಕಾರಿಯಾಗಿ ಮುಂದುವರೆಯಬೇಕು ಎಂಬ ನಿಯಮ ರೂಪಿಸಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಇದು ಸರಕಾರದ ಸಹಕಾರಿ ಕ್ಷೇತ್ರದ ಬ್ಯಾಂಕುಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಸರಕಾರದ ಯಾವುದೇ ನೆರವಿಲ್ಲದೆ, ರೈತರ ಷೇರುಗಳಿಂದಲೇ ನಡೆಯುವ ಸಹಕಾರಿ ಬ್ಯಾಂಕುಗಳಿಗೆ ಇದನ್ನು ಅನ್ವಯಿಸುವುದನ್ನು ಖಂಡಿಸುತ್ತೇವೆ. ಇದಕ್ಕೆ ಡಿಸಿಸಿ ಬ್ಯಾಂಕಿನ ಸರ್ವ ಸದಸ್ಯರ ಒಪ್ಪಿಗೆ ಇದ್ದು, ಈ ನಿರ್ಣಯವನ್ನು ಆರ್.ಬಿ.ಐ ಗೆ ಕಳುಹಿಸಿ ಕೊಡಲಾಗುವುದು ಎಂದು ಕೆ.ಎನ್.ರಾಜಣ್ಣ ತಿಳಿಸಿದರು.

ಪ್ರಸ್ತಕ ವರ್ಷದಲ್ಲಿ ಡಿಸಿಸಿ ಬ್ಯಾಂಕು 146 ಕೋಟಿ ಷೇರು ಬಂಡವಾಳದೊಂದಿಗೆ, 215 ಕೋಟಿ ಸಾಲ ಸೌಲಭ್ಯ ವಿತರಿಸಿದೆ.25.60 ಕೋಟಿಒಟ್ಟು ಲಾಭ ಗಳಿಸಿದ್ದು, ಇದರಲ್ಲಿ ವಾರ್ಷಿಕಖರ್ಚು, ವೆಚ್ಚ ಕಳೆದು 5.55 ಕೋಟಿ ರೂ. ನಿವ್ವಳ ಲಾಭ ಪಡೆದಿದೆ. ಎನ್.ಪಿ.ಎ ಪ್ರಕಾರ ಶೇ2.96 ಇದ್ದು,ಶೇ12.20 ಡಿವಿಡೆಂಟ್‍ನ್ನು ಷೇರುದಾರರಿಗೆ ನೀಡುತ್ತಿದೆ. ಲೆಕ್ಕ ಪರಿಶೋಧನೆಯಲ್ಲಿ ಎ ಶ್ರೇಣಿ ಹೊಂದಿದೆ. ಮೃತರಾದ ಸಾಲಗಾರರ 25 ಸಾವಿರರೂ ಸಾಲವನ್ನು ಮನ್ನಾ ಮಾಡಲಾಗುತ್ತಿದ್ದು, ಇದುವರೆಗೂ ಸುಮಾರು 50 ಕೋಟಿ ರೂ.ಗಳನ್ನು ಮೃತರಾದ ಸಾಲಗಾರ ಸಾಲಮನ್ನಾಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕೆ.ಎನ್.ರಾಜಣ್ಣ ಅಂಕಿ ಅಂಶಗಳ ಮೂಲಕ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಎಂ.ಎಲ್.ಸಿ. ಆರ್.ರಾಜೇಂದ್ರ, ಶಾಸಕ ಕೆ.ಷಡಕ್ಷರಿ, ಬಿ.ಶಿವಣ್ಣ, ಎಸ್.ಲಕ್ಷ್ಮಿನಾರಾಯಣ, ಎಸ್.ಹನುಮಾನ್, ಜಿ.ಎಸ್. ರವಿ, ಎಸ್.ಆರ್.ರಾಜಕುಮಾರ್, ಎಂ.ಸಿದ್ದಲಿಂಗಪ್ಪ, ಪ್ರಭಾಕರ್, ಬಿ.ನಾಗೇಶಬಾಬು, ಮಾಲತಿ, ಆರ್.ರವಿಕುಮಾರ್, ಪಿ.ಆರ್.ನಾರಾಯಣಗೌಡ, ಸಿಇಓ ಜಂಗಮಪ್ಪ, ಸಲಹೆಗಾರರಾದ ರಮಣರೆಡ್ಡಿ, ಸಹಕಾರ ಇಲಾಖೆ ಉಪನಿಭಂಧಕರಾದ ಚಂದ್ರಶೇಖರ್, ಚಂದ್ರಗಿರಿ ಲಕ್ಷ್ಮಿನಾರಾಯಣ, ಕುಂಭಣ್ಣ, ಟಿ.ಪಿ.ಮಂಜುನಾಥ್, ನಬಾರ್ಡ್ ಅಧಿಕಾರಿ ಮೋಹನ್ ಸಾಯಿ ಗಣೇಶ್, ಗಣಕಯಂತ್ರ ವಿಭಾಗದ ಮಹಾಪ್ರಭಂಧಕ ಎಸ್.ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *