ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಸುಭದ್ರ; ಹೆಚ್. ನಿಂಗಪ್ಪ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಸುಭದ್ರವಾಗಿದೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಉತ್ತಮ ಫಲಿತಾಂಶ ನೀಡಿದ್ದಾರೆ. ಹೆಚ್ಚಿನ ಸಹಕಾರ ಸಂಸ್ಥೆಗಳು ಜೆಡಿಎಸ್ ಬೆಂಬಲದಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷ ಸಂಘಟನೆ ಕುಂಠಿತಗೊಂಡಿದ್ದು ಅದರ ಪುನಶ್ಚೇತನಕ್ಕಾಗಿ ಹೆಚ್ಚು ಕಾಳಜಿವಹಿಸಲಾಗಿದೆ ಎಂದು ಕ್ಷೇತ್ರದ ಮಾಜಿ ಶಾಸಕರೂ ಆದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ ಹೇಳಿದರು.

ಬುಧವಾರ ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಯುವ ಘಟನ ಅಧ್ಯಕ್ಷರನ್ನಾಗಿ ದೊಡ್ಡಸಾರಂಗಿಯ ಡಿ.ಬಿ. ಪರಮೇಶ್ ಅವರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಿ ಮಾತನಾಡಿದ ಹೆಚ್. ನಿಂಗಪ್ಪ, ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿಯವರು ತುಮಕೂರಿಗೆ ಆಗಮಿಸಿದ್ದಾಗ ‘ಹೆಚ್. ನಿಂಗಪ್ಪ ಅವರನ್ನು ವಿಧಾನಸಭೆಗೆ ಕರೆದೊಯ್ಯುತ್ತೇನೆ’ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಾಗಿದೆ, ಪಕ್ಷ ಸಂಘಟನೆಗೆ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಅದರ ಭಾಗವಾಗಿ ಉತ್ಸಾಹಿ ಯುವಕ ಪರಮೇಶ್ ಅವರನ್ನು ಯುವ ಘಟಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದರು.

ತಾವು ಹಿಂದೆ ಶಾಸಕರಾಗಿದ್ದಾಗ ಗ್ರಾಮಾಂತರ ಕ್ಷೇತ್ರದಲ್ಲಿ ಮಾಡಿದ ಹಲವು ಅಭಿವೃದ್ಧಿ ಕೆಲಸಗಳ ಬಗ್ಗೆ ಅಲ್ಲಿನ ಜನರು ಈಗಲೂ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಹಳಷ್ಟು ಕೆಲಸಗಳನ್ನು ಮಂಜೂರು ಮಾಡಿಕೊಟ್ಟರು. ಆ ಅವಧಿಯಲ್ಲಿ ಕ್ಷೇತ್ರದಲ್ಲಿ ಪ್ರೌಢಶಾಲೆ, ಜ್ಯೂನಿಯರ್ ಕಾಲೇಜು, ವಿದ್ಯುತ್ ಉಪಸ್ಥಾವರ, ಆಸ್ಪತ್ರೆಗಳನ್ನು ಸ್ಥಾಪಿಸಲಾಯಿತು. ತಾವು ಶಾಸಕರಾಗಿದ್ದಾಗಲೇ ಗೂಳೂರು-ಹೆಬ್ಬೂರು ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಂದಿತು. ಅದಲ್ಲದೆ ಅನೇಕ ಕೆರೆಗಳಿಗೆ ನೀರು ತುಂಬಿಸಿ ಕುಡಿಯುವ ನೀರು ಹಾಗೂ ಕೃಷಿಗೆ ನೆರವಾಗಲಾಯಿತು ಎಂದು ಹೆಚ್. ನಿಂಗಪ್ಪ ಹೇಳಿದರು.

ಸುಮಾರು 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ತಾವು ಅಧಿಕಾರ ಅನುಭವಿಸಿದ್ದು ಕಡಿಮೆ ಅವಧಿ. ಆದರೆ ಅಧಿಕಾರ ಇರಲಿ, ಇಲ್ಲದಿರಲಿ ಜನರೊಂದಿಗನಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಮುಂದೆಯೂ ಇದೇ ರೀತಿ ಜನರೊಂದಿಗೆ ಇರುತ್ತೇನೆ ಎಂದು ಹೇಳಿದರು.

ನಗರ ಜೆಡಿಎಸ್ ಅಧ್ಯಕ್ಷ ಟಿ.ಹೆಚ್. ಜಯರಾಮ್, ಕಾರ್ಯಾಧ್ಯಕ್ಷ ಮೋಹನ್‍ಕುಮಾರ್, ಎಸ್.ಸಿ. ಘಟಕ ಜಿಲ್ಲಾಧ್ಯಕ್ಷ ಬೆಳಗುಂಬ ವೆಂಕಟೇಶ್, ಮುಖಂಡರಾದ ಶಿವಕುಮಾರ್, ಮಂಜುನಾಥ್, ಕಂಬತ್ತನಹಳ್ಳಿ ಶ್ರೀಧರ್, ಕೈದಾಳ ರಮೇಶ್, ಕೆ.ಪಿ. ಜಗದೀಶ್ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *