ತುಮಕೂರು(ಕ.ವಾ.)ಏ.12: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 13 ರಿಂದ ಏಪ್ರಿಲ್ 20ರವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಒಬ್ಬ ಅಭ್ಯರ್ಥಿಯು ಒಂದು ವಿಧಾನಸಭಾ ಕ್ಷೇತ್ರಕ್ಕೆ 4 ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೋಟೆಲ್ ಶಿವಪ್ಪ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು ಹಾಗೂ ಏಪ್ರಿಲ್ 24 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶವಿದ್ದು, ಮೇ 10ರಂದು ಮತದಾನ ಹಾಗೂ ಮೇ 13ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.
ಅಭ್ಯರ್ಥಿಗಳು ಏಪ್ರಿಲ್ 13 ರಿಂದ 20ರವರೆಗೆ ಸರ್ಕಾರಿ ರಜಾ ದಿನ ಹೊರತುಪಡಿಸಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರಗಳ ನಮೂನೆಯನ್ನು ತಹಶೀಲ್ದಾರರ ಕಚೇರಿಯಲ್ಲಿ ಪಡೆಯಬಹುದಾಗಿದೆ. ನಾಮಪತ್ರವನ್ನು ನಮೂನೆ-2ಬಿಯಲ್ಲಿ ಸಲ್ಲಿಸಬೇಕು. ನಾಮಪತ್ರದಲ್ಲಿ ಸೂಚಕರು ಮತ್ತು ಅಭ್ಯರ್ಥಿಯು ಕಡ್ಡಾಯವಾಗಿ ಸಹಿ ಮಾಡಿರಬೇಕು. ಸಹಿ ಮಾಡದ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು. ಹೆಸರು ಮತ್ತು ಅಂಚೆ ವಿಳಾಸವನ್ನು ಸ್ಪಷ್ಟ ಹಾಗೂ ಪೂರ್ಣವಾಗಿ ನಮೂದಿಸಬೇಕು.
ನಮೂನೆ 26ರಲ್ಲಿ ಅಫಿಡವಿಟ್ ಅನ್ನು 20 ರೂ.ಗಳ ಛಾಪಾ ಕಾಗದದಲ್ಲಿ(ಒಂದು ಮೂಲ ಪ್ರತಿ ಹಾಗೂ 3 eóÉರಾಕ್ಸ್ ಪ್ರತಿಗಳೊಂದಿಗೆ) ಸಲ್ಲಿಸಬೇಕು. ಅಫಿಡವಿಟ್ನ ಎಲ್ಲಾ ಪುಟಗಳಲ್ಲಿ ಅಭ್ಯರ್ಥಿಯು ಸಹಿ ಮಾಡಿರಬೇಕು ಹಾಗೂ ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿರಬೇಕು. ಅನ್ವಯವಾಗದ ಕಾಲಂಗಳಲ್ಲಿ ಅನ್ವಯಿಸುವುದಿಲ್ಲ/ಇಲ್ಲ/ಓIಐ ಎಂದು ಬರೆಯಬೇಕು. ಅಫಿಡವಿಟ್ ಅನ್ನು ರೋಟರಿ ಪಬ್ಲಿಕ್ ಅವರಿಂದ ದೃಢೀಕರಿಸಿರಬೇಕು ಎಂದು ತಿಳಿಸಿದರಲ್ಲದೆ, ಟ್ವಿಟರ್/ಫೇಸ್ ಬುಕ್/ಇನ್ಸ್ಟಾಗ್ರಾಮ್/ಯೂಟ್ಯೂಬ್ ಚಾನಲ್/ಬ್ಲಾಗ್/ಇಮೇಲ್ ವಿಳಾಸ ಸೇರಿದಂತೆ ಅಭ್ಯರ್ಥಿ ಹೊಂದಿರುವ ಸಾಮಾಜಿಕ ಜಾಲತಾಣಗಳ ವಿವರ ನೀಡಬೇಕು. ಅಫಿಡವಿಟ್ ಸಲ್ಲಿಸದಿದ್ದಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಕಲಂ 36ರನ್ವಯ ಅನರ್ಹತೆಯ ಮಾನದಂಡವಾಗುತ್ತದೆ. ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ವಿಧಾನಸಭಾ ಕ್ಷೇತ್ರದ ಮತದಾರರಾಗಿರದಿದ್ದಲ್ಲಿ ಕಡ್ಡಾಯವಾಗಿ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ದೃಢೀಕೃತ ನಕಲು ಪ್ರತಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇರಬಾರದು. ರಾಷ್ಟ್ರೀಯ/ ರಾಜ್ಯ ರಾಜಕೀಯ ಪಕ್ಷವಾಗಿದ್ದಲ್ಲಿ ಒಬ್ಬರು ಸೂಚಕರು, ನೋಂದಾಯಿತ ಪಕ್ಷ/ಪಕ್ಷೇತರರಾಗಿದ್ದಲ್ಲಿ 10 ಮಂದಿ ಸೂಚಕರು ಸಹಿ ಮಾಡಿರಬೇಕು. ಸೂಚಕರು ಕಡ್ಡಾಯವಾಗಿ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ಮೂಲ ಫಾರಂ ಅನ್ನು ನಾಮಪತ್ರ ಸಲ್ಲಿಸುವ ಕಡೆಯ ದಿನಾಂಕ ಏಪ್ರಿಲ್ 20ರ ಮಧ್ಯಾಹ್ನ 3 ಗಂಟೆಯೊಳಗಾಗಿ ಸಲ್ಲಿಸಬೇಕು. ಠೇವಣಿ ಹಣ ಸಾಮಾನ್ಯ ಅಭ್ಯರ್ಥಿಗೆ 10,000 ರೂ. ಹಾಗೂ ಪ.ಜಾತಿ/ಪಂಗಡದ ಅಭ್ಯರ್ಥಿ(ಜಾತಿ ಪ್ರಮಾಣಪತ್ರ ಸಲ್ಲಿಸಬೇಕು)ಯಾಗಿದ್ದರೆ 5,000 ರೂ.ಗಳನ್ನು ನಿಗಧಿಪಡಿಸಲಾಗಿದೆ. ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ ನಂತರ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ತಿಳಿಸಿದರು.
ಅಭ್ಯರ್ಥಿಯು ನಾಮಪತ್ರದೊಂದಿಗೆ ಇತ್ತೀಚಿನ 5 ಪಾಸ್ಪೋರ್ಟ್ ಹಾಗೂ 3 ಸ್ಟಾಂಪ್ ಅಳತೆಯ ಭಾವಚಿತ್ರ, ಚುನಾವಣಾ ಉದ್ದೇಶಕ್ಕಾಗಿಯೇ ತೆರೆದಿರುವ ಹೊಸ ಬ್ಯಾಂಕ್ ಖಾತೆಯ ಪಾಸ್ಬುಕ್ ನಕಲು ಪ್ರತಿಯನ್ನು ಸಲ್ಲಿಸಬೇಕು. ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕೊಠಡಿಯೊಳಗೆ ಅಭ್ಯರ್ಥಿಯೊಂದಿಗೆ 4 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಓಂಕಾರಪ್ಪ, ತಹಶೀಲ್ದಾರ್ ಸಿದ್ದೇಶ್, ಜೆಡಿಎಸ್ ಪಕ್ಷದ ಬಿ.ಎಸ್.ವೆಂಕಟೇಶ್, ಆಪ್ ಪಕ್ಷದ ಡಿ.ಕೆ. ಪ್ರಕಾಶ್ ಮತ್ತು ದಿನೇಶ್ ಕುಮಾರ್ ಬಿ., ಬಿಜೆಪಿ ಪಕ್ಷದ ಪಿ.ಎನ್.ಶಂಕರ್, ಕಾಂಗ್ರೆಸ್ ಪಕ್ಷದ ಕೆಂಪಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.