ತುಮಕೂರು : 2024 ಆಗಸ್ಟ್ 9 ರ ರಾತ್ರಿ ಕಲ್ಕತ್ತಾ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷದ ಸ್ನಾತಕೋತರ ವೈದ್ಯೆ ಕರ್ತವ್ಯ ನಿರತ ಸಮಯದಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ದಿನವನ್ನು ನೆನಪಿಸಿಕೊಂಡು ಮಹಿಳೆಯರ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಆಗಸ್ಟ್ 9 ದೇಶಾದ್ಯಂತ “ಅಭಯಾ ಕರಾಳ ದಿನ” ವಾಗಿ ಆಚರಿಸುತ್ತಿರುವುದಾಗಿ ತುಮಕೂರು ಜಿಲ್ಲಾ ಪ್ರಸೂತಿ ಮತ್ತು ಸ್ತ್ರಿರೋಗ ವೈದ್ಯರ ಸಂಘದ ಅಧ್ಯಕ್ಷರಾದ ಡಾ.ಬಸವರಾಜು ತಿಳಿಸಿದರು.
ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪ್ರತಿ ವರ್ಷ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳನ್ನು ತಡೆಯುವ ಸಲುವಾಗಿ ಹೊಸ ಕಾಯ್ದೆಯನ್ನೇ ಜಾರಿಗೆ ತಂದರೂ,ಇಂದಿಗೂ ರೋಗಿಗಳ ಸಂಬಂಧಿಸಿಕರು,ಸಾರ್ವಜನಿಕರು ಸೇವೆಯ ಲೋಪದೋಷಗಳನ್ನೇ ನೆಪ ಮಾಡಿಕೊಂಡು ವೈದ್ಯರ ಮೇಲೆ ಹಲ್ಲೆ ನಡೆಸುವುದನ್ನು ಮುಂದುವರೆಸಿದ್ದಾರೆ.ಹಾಗಾಗಿ ಹೊಸ ಕಾಯ್ದೆಯ ಪ್ರಕಾರ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡುವ ವ್ಯಕ್ತಿಗಳಿಗೆ ಆಗುವ ಶಿಕ್ಷೆ ಮತ್ತು ದಂಡದ ಪ್ರಮಾಣ ಹಾಗೂ ಇಂತಹ ತಪ್ಪುಗಳು ನಡೆದಾಗ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅಭಯ ದಿನ ಅಂಗವಾಗಿ ದೇಶದಾದ್ಯಂತ ಮಾಡಲಾಗುತ್ತಿದೆ ಎಂದರು.
ದೇಶದಾದ್ಯಂತ ವೈದ್ಯರ ಸಂಘಟನೆಗಳು, ಮಹಿಳಾ ಸಂಘಟನೆಗಳು, ನಾಗರಿಕ ಗುಂಪುಗಳು ಇಡೀ ವಾರ ಕಾರ್ಯಕ್ರಮಗಳನ್ನು ಮಾಡುತ್ತಿವೆ, 2024 ಆಗಸ್ಟ್ 15 ರಂದು ಶುರುವಾದ ಈ ಚಳವಳಿ ಈಗ ಪ್ರತಿ ವರ್ಷ ಆಗಸ್ಟ್ 9 ರಂದು ನಡೆಯುತ್ತದೆ. ಮಹಿಳೆಯರು ರಾತ್ರಿಯೂ ಸುರಕ್ಷಿತವಾಗಿ ಹೊರಗೆ ಹೋಗುವ ಹಕ್ಕಿಗಾಗಿ ಮೆರವಣಿಗೆ ಮಾಡುತ್ತಾರೆ, ಪ್ರತಿ ವರ್ಷ junior doctors, senior doctors torch ಹಿಡಿದು ಕೆಲವಡೆ ಮೆರವಣಿಗೆ ಮಾಡುತ್ತಾರೆ ಎಂದು ತಿಳಿಸಿದರು.
ಸಿಬಿಐ ತನಿಖೆ ಇನ್ನೂ ಮುಗಿದಿಲ್ಲ. “ದೊಡ್ಡ ಷಡ್ಯಂತ್ರ” ಬಗ್ಗೆ ತನಿಖೆ ಆಗಬೇಕು ಎಂದು ಪೋಷಕರು ಮತ್ತು ಜನರು ಆಗ್ರಹಿಸುತ್ತಿದ್ದಾರೆ, ಆಸ್ಪತ್ರೆ, ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಯ ದಿನದ ಆಚರಣೆಯಲ್ಲಿ ಒಂದಾಗಿದ್ದು, “ಅಭಯಾ” ಅಂದರೆ “ನಿರ್ಭೀತ”, ಆಕೆಯ ನೆನಪಿಗಾಗಿ ಅಭಯ ನೆನಪಿನ ಕಾರ್ಯಕ್ರಮವಾಗಿ ಆಗಸ್ಟ್ 9ರಂದು ದೇಶದ ಎಲ್ಲಾ ಐಎಂಎ ಸಂಘಟನೆ ವತಿಯಿಂದ ಆಚರಿಸಲಾಗುತ್ತಿದೆ, ಆಗಸ್ಟ್ 9 ಈಗ ಕೇವಲ ಒಂದು ಪ್ರಕರಣದ ದಿನ ಅಲ್ಲ. ಇದು “ಮಹಿಳಾ ಸುರಕ್ಷತೆ ಮತ್ತು ನ್ಯಾಯ”ದ ಸಂಕೇತವಾಗಿ ದೇಶಾದ್ಯಂತ ನೆನಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ಜನರ ನಿರೀಕ್ಷೆಗಳು ಹೆಚ್ಚಾಗಿವೆ, ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರೂ ನಿರೀಕ್ಷಿಸುವುದು ಸಹಜ.ಯಾವ ವೈದ್ಯರು ರೋಗಿ ಸಾಯಬೇಕೆಂದು ಬಯಸುವುದಿಲ್ಲ.ಎಲ್ಲರೂ ಜೀವ ಉಳಿಸುವ ನಿಟ್ಟಿನಲ್ಲಿ ತಾವು ಕಷ್ಟಪಟ್ಟು ಕಲಿತ ವಿದ್ಯೆಯನ್ನು ಅವರ ಮೇಲೆ ಪ್ರಯೋಗಿಸುತ್ತಾರೆ.ಕೆಲವೊಂದು ಸಂದರ್ಭಗಳಲ್ಲಿ ಕೈ ಮೀರಿ ಹೋಗುತ್ತದೆ.ಇಂತಹ ವೇಳೆಯಲ್ಲಿ ರೋಗಿಗಳ ಕಡೆಯವರು ಸಹನೆ, ತಾಳ್ಮೆ ಕಳೆದುಕೊಳ್ಳದೆ ವಾಸ್ತವವನ್ನು ಅರ್ಥಮಾಡಿ ಕೊಂಡು ವರ್ತಿಸಿದರೆ ಇಂತಹ ಅನಾಹುತಗಳು ನಡೆಯುವುದಿಲ್ಲ. ಆದರೆ ಕೆಲವರು ಇಂತಹ ಪ್ರಕರಣವನ್ನು ಮುಂದಿಟ್ಟು, ವೈದ್ಯರು,ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಯ ವಸ್ತುಗಳನ್ನು ಹಾನಿ ಮಾಡುವುದು ಜೀವ ಉಳಿಸಬೇಕೆಂದು ಕಷ್ಟಪಡುವ ವೈದ್ಯರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ. ಪ್ರತಿ ಬಾರಿ ಗಂಭೀರ ಪ್ರಕರಣಗಳಲ್ಲಿ ಕೆಲಸ ಮಾಡುವಾಗಲೂ ಹಿಂಜರಿಯುವಂತಹ ಸ್ಥಿತಿಗೆ ತಲುಪುತ್ತಾರೆ. ಇದರಿಂದ ಮತ್ತಷ್ಟು ಜನರ ಪ್ರಾಣ ಹರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ವೈದ್ಯರು ಮತ್ತು ರೋಗಿಗಳ ನಡುವೆ ಒಳ್ಳೆಯ ಭಾಂಧವ್ಯ ಬೆಳೆಸುವುದು ಅಭಯದಿನದ ಉದ್ದೇಶವಾಗಿದೆ ಎಂದರು.
ಓರ್ವ ನುರಿತ ವೈದ್ಯನಾಗಲು ಕನಿಷ್ಠ 15 ವರ್ಷಗಳ ಕಾಲ ಓದುವುದರ ಜೊತೆಗೆ ಕೆಲಸ ಮಾಡಬೇಕಾಗುತ್ತದೆ, ಇದರಿಂದ ಭಾರತದ ವೈದ್ಯರಿಗೆ ವಿಶ್ವದಲ್ಲಿ ಒಳ್ಳೆಯ ಹೆಸರಿದ್ದು, ಇಷ್ಟೆಲ್ಲಾ ಕಷ್ಟಪಟ್ಟು ಓದಿದ ವೈದ್ಯರು, ಅದರಲ್ಲಿಯೂ ಮಹಿಳಾ ವೈದ್ಯರ ಮೇಲಾಗುವ ಹಲ್ಲೆ, ದೌರ್ಜನ್ಯ,ಅತ್ಯಾಚಾರಗಳು ನಿಲ್ಲಬೇಕಾಗಿದೆ. ಒಂದು ವೇಳೆ ವೈದ್ಯರು ತಮ್ಮ ಸೇವೆಯಲ್ಲಿ ನಿರ್ಲಕ್ಷ ತೋರಿದರೆ, ಅವರ ವಿರುದ್ದ ಗ್ರಾಹಕರ ನ್ಯಾಯಾಲಯದ ಜೊತೆಗೆ,ರೋಗಿಗಳ ಪರವಾಗಿಯೂ ಒಂದು ಕಾಯ್ದೆ ಇದ್ದು, ಅದರ ಮೂಲಕವೂ ಕಾನೂನು ಹೋರಾಟ ನಡೆಸಬಹುದಾಗಿದೆ. ಅದನ್ನು ಬಿಟ್ಟು, ಹಲ್ಲೆ ಮಾಡುವುದು, ಆಸ್ಪತ್ರೆಯ ವಸ್ತುಗಳನ್ನು ಹಾನಿ ಮಾಡುವುದು, ಅತ್ಯಾಚಾರದಂತಹ ದುಷ್ಕ್ರತ್ಯಗಳಿಗೆ ಇಳಿಯುವುದು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲದಂತಾಗುತ್ತದೆ, ಇದರಿಂದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದವರು ಸಹ ಜಾಮೀನು ರಹಿತ ಕೇಸಿನದಲ್ಲಿ ಜೈಲು ವಾಸದ ಜೊತೆಗೆ ದಂಡ ಕಟ್ಟಬೇಕಾಗದ ಕಾನೂನು ಇದ್ದರೂ ಇಂತಹ ಕೃತ್ಯಗಳು ನಡೆಯುತ್ತಿರುವುದರಿಂದ ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವಂತಹವುದು ಎಂದು ಡಾ.ಬಸವರಾಜು ತಿಳಿಸಿದರು.
ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಹನುಮಕ್ಕ ಮಾತನಾಡಿ,ನನ್ನ ಐವತ್ತು ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೂ ಕೆಲವೊಮ್ಮೆ ಸಣ್ಣ, ಪುಟ್ಟ ಲೋಪದೋಷಗಳಾಗುವುದನ್ನು ನೋಡಿದ್ದೇವೆ, ಅಷ್ಟಕ್ಕೆ ತಾಳ್ಮೆ ಕಳೆದುಕೊಂಡು ಹಲ್ಲೆ ನಡೆಸುವುದರಿಂದ ಉಳಿದ ರೋಗಿಗಳಿಗೆ ಆರೋಗ್ಯ ಸೇವೆ ನೀಡುವುದು ಹೇಗೆ ಎಂದು ಪ್ರಶ್ನಿಸಿದರು.
ಅಭಯ ದಿನದ ಅಂಗವಾಗಿ ಆಗಸ್ಟ್ 09 ರಂದು ಜಿಲ್ಲೆಯ ಎಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರು ಐಎಂಎ ಹಾಲ್ನಲ್ಲಿ ಸೇರಿ,ಅಭಯ ದಿನದ ಪ್ರಯುಕ್ತ ಶ್ರದ್ದಾಂಜಲಿ ಸಲ್ಲಿಸಲಾಗುವುದು ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಜೀವನ್ ರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರ ಸಂಘದ ಕಾರ್ಯದರ್ಶಿ ಜೀವನರೆಡ್ಡಿ,ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರಾದ ಡಾ.ನಾಗಲಕ್ಷ್ಮಿ, ಡಾ.ದ್ವಾರಕನಾಥ್, ಇಂದಿರಾ ಶಿವಾನಂದ್,ಡಾ.ಗಿರೀಶ್, ಡಾ.ನಾಗೇಶ್, ಡಾ.ಪಾವನ ಸೇರಿದಂತೆ ಹಲವರು ಉಪಸ್ಥಿತರಿದ್ದರು.