
ಎಡದಿಂದ ರಾಮಚಂದ್ರ.ಕೆ., ವೆಂಕಟಾಚಲ.ಹೆಚ್.ವಿ., ಲಕ್ಷ್ಮಣಗೌಡ, ರಾಧಮಣಿ.
ಹೊರಗೆ ದೋ ಎಂದು ಸುರಿಯುತ್ತಿರುವ ಮಳೆ, ಒಳಗೆ ದೋ ಎಂಬ ಮಾತಿನ ಮಳೆ, ಮಾತು, ಮಾತು, ನಗು, ತರಲೇ ಮತ್ತದೇ ನೆನಪು, ಸವಿ ಸವಿ ನೆನಪು ಕೆದಕಿದಂತೆಲ್ಲಾ ನೆನಪುಗಳೇ ಅವು ಎಂದೂ ಮಾಸದ, ಅಳಿಯದ, ಉಳಿದೇ ಇರುವ ನೆನಪುಗಳು ಅವೂ ಹಾಗೆಯೇ ಬಗೆದಷ್ಟೂ ಮತ್ತಷು ಬಗೆದು ಆಳಕ್ಕೆ ಆಳಕ್ಕೆ ಇಳಿಯುವ ತವಕ, ಉತ್ಸಾಹ, ಏನೋ ಉಲ್ಲಾಸ ……..
ತುಮಕೂರಿನಿಂದ ಹೊರಟಾಗಲೇ ಮೋಡ ಮುಸುಕಿದ ವಾತವರಣ ಮಳೆ ಆಗಲೋ-ಈಗಲೋ ಬರುವ ಸೂಚನೆ, ಮಳೆ ಬರುವುದಕ್ಕಿಂತ ಆ 38 ವರ್ಷಗಳ ನೆನಪುಗಳನ್ನು ಹೊತ್ತು ಹೊರಟಿದ್ದು, 38 ವರ್ಷಗಳ ಹಿಂದೆ ನಾವು ನಮ್ಮ ಮೂತಿ-ಮುಖಗಳನ್ನು ನೋಡಿಕೊಂಡಿದ್ದು, ಆಗ ನಮಗೆ ಇನ್ನೂ ಹುಡುಗಾಟ, ನೆಗೆಯುತ್ತಿದ್ದೆವು, ಕುಣಿಯುತ್ತಿದ್ದೆವು, ಸಿಟ್ಟು ಮಾಡಿಕೊಳ್ಳುತ್ತಿದ್ದೆವು, ಮುನಿಸಿಕೊಳ್ಳುತ್ತಿದ್ದೆವು, ನೋಟ್ಸ್ಗಾಗಿಯೇ ಅಂಗಲಾಚುವಿಕೆ, ಲಗೋರಿ, ಕಬ್ಬಡ್ಡಿ, ಹುಡುಗಿಯರು ಹುಡುಗರ ಕಡೆ, ಹುಡುಗರು ಹುಡುಗಿಯರ ಕಡೆ ಬೀರಿದ ನೋಟ, ಬಾವಿಗಳಿಂದ ನೀರು ಸೇದಿದ್ದು, ಅಡ್ಡೆಯಲ್ಲಿ ಬಿಂದಿಗೆಗಳನ್ನು ಹಾಕಿಕೊಂಡು ತಲೆ ಮೇಲೆ, ಕಂಕುಳಲ್ಲಿ ಬಿಂದಿಗೆ ಹೊತ್ತ ಹುಡುಗಿಯರ ಹಿಂದೆ-ಮುಂದೆ ನಡೆದದ್ದು, ರೇಗಿಸಿದ್ದು, ಬೈಯಿಸಿಕೊಂಡಿದ್ದು ಎಲ್ಲಾ ನೆನಪುಗಳ ಸರ ಮಾಲೆ ಒಂದು ಕಡೆ ಓಡುತ್ತಿದ್ದರೆ ಮತ್ತೊಂದು ಕಡೆ ರೈಲು ಓಡುತ್ತಿತ್ತು ಓಡುತ್ತಿತ್ತು ಓಡುತ್ತಲೇ ಇತ್ತು.

38ವರ್ಷಗಳ ಹಿಂದಿನ ಚಿತ್ರವೇ ಕಣ್ಣ ಮುಂದು ಬಿಚ್ಚಿಕೊಳ್ಳುತ್ತಿತ್ತು ಅವನು, ಅವಳು, ಅವರು ಹೇಗಿರಬಹುದು, ತೆಳ್ಳಗಿರಬಹುದಲ್ಲವೇ, ದಪ್ಪಗಾಗಿರಬಹುದಲ್ಲವೇ, ನನ್ನ ಹಾಗೆಯೇ 50 ದಾಟಿರುವುದಂತೂ ಸತ್ಯ, ಏಕೆಂದರೆ ಉರುಳುವ ವರ್ಷಗಳನ್ನು ತಡೆಯಲು ಸಾಧ್ಯವೆ ಇಲ್ಲ, ಅದು ಓಡುತ್ತಲೇ ಇರುತ್ತದೆ, ನಾವು ಮಾತ್ರ ಅಯ್ಯೋ ಇನ್ನೂ ಹುಡುಗರು, ಯುವಕರು ಎಂದುಕೊಳ್ಳುತ್ತಲೇ ಇರುತ್ತೇವೆ, ಆದರೆ ದೇಹದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ, ಬಿಳಿ ಕೂದಲು, ಬೊಕ್ಕ ತಲೆ, ಕಣ್ಣಿಗೆ ಕನ್ನಡಕ ಎಲ್ಲಾ ಬಂದಿರುತ್ತವೆ, ಆದರೂ ಇಲ್ಲಾ ನಾನು ಹಾಗೆಯೇ ಇದ್ದೇನೆ ಎಂದು ನಮ್ಮನ್ನು, ನಮ್ಮ ಮನಸ್ಸನ್ನು ಸಮಾಧಾನ ಮಾಡಿಕೊಳ್ಳುತ್ತಲೇ ವರ್ಷಗಳನ್ನು ಕಳೆದಿರುತ್ತೇವೆ.
ನಾನು ಮಲೆನಾಡ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿದರೂ ನಮ್ಮ ಊರು ಕಡೂರು ತಾಲ್ಲೂಕಿನ ಬಯಲು ಸೀಮೆಯ ಬರ ಪ್ರದೇಶ ಎಂದು ಕರೆಸಿಕೊಳ್ಳುವ ಪಂಚನಹಳ್ಳಿಯ ಸಮೀಪದ ದೇವರ ಹೊಸಹಳ್ಳಿಯಾದರೂ ನಮ್ಮ ಓದೆಲ್ಲಾ ಪಂಚನಹಳ್ಳಿಯಲ್ಲಿಯೇ ಆಗಿದ್ದು, ನಾನು 5ನೇ ತರಗತಿಗೆ ಪಂಚನಹಳ್ಳಿಗೆ ಬಂದಾಗ ತುಂಟರು, ದಡ್ಡರು, ಬುದ್ದಿವಂತರು ಎಂಬ ಬೇದ-ಭಾವವಿಲ್ಲದೆ ಗೆಳೆಯರಾಗಿದ್ದೆವು.
ಅಂದಿನ ಶಿಕ್ಷಕರ ಹೊದೆಯಿಂದ ನಾವೆಲ್ಲಾ ಕಷ್ಟಪಟ್ಟು ಓದುವುದರಲ್ಲಿ ಮುಂದಿದ್ದರೆ, ಸ್ವಲ್ಪ ದಂಡರೆನಿಸಿಕೊಂಡವರು ನೋಟ್ಸ್ ಮತ್ತು ಲೆಕ್ಕ ಹೇಳಿಸಿಕೊಳ್ಳುವುದಕ್ಕಾಗಿ ನನಗೆ ಹುಡುಗ-ಹುಡುಗಿಯರು ಎಂಬ ಯಾವ ಬೇಧವೂ ಇಲ್ಲದೆ ಗೆಳೆಯರಾಗಿದ್ದೆವು. ಶಿಕ್ಷಕರು ಆಗಿನ ಕಾಲದಲ್ಲಿ ಪದ್ಯ ಮತ್ತು ಲೆಕ್ಕಗಳನ್ನು ಕೇಳಿದಾಗ ಹೇಳಿದವರು ಹೇಳದೆ ಇದ್ದ ಹುಡುಗ-ಹುಡುಗಿಯರಿಗೆ ಮೂಗು ಹಿಡಿಸಿ ಹೊಡೆಸುತ್ತಿದ್ದರು, ಹುಡುಗಿಯರಿಗೆ ನಿಧಾನಕ್ಕೆ ಹೊಡೆದರೆ, ಶಿಕ್ಷಕರು ಹುಡುಗಿಯರು ಅಂತ ಮೆತ್ತಗೆ ಹೊಡೆಯುತ್ತೀಯ ಎಂದು ಅಂಗೈ ಕೆಂಪಾಗುವಂತೆ ರೂಲ್ ದೊಣ್ಣೆಯಲ್ಲಿ ಹೊಡೆಯುತ್ತಿದ್ದರು.

ಲಕ್ಷ್ಮಣಗೌಡರ ಕುಟುಂಬದವರೊಂದಿಗೆ.
ನಾವೆಲ್ಲಾ 7ನೇ ತರಗತಿಯ ನಂತರ ಒಬ್ಬೊಬ್ಬರು ಒಂದೊಂದು ಕಡೆ ಓದುವ ನಿಮಿತ್ತ ಹೊರಟು ಹೋದೆವು, ಆದರೆ ನಮ್ಮ ಆ ದಿನಗಳ ಗೆಳೆತನದ ನೆನಪುಗಳು, ಆಟ ಆಡಿದ್ದು, ಶಾಲೆಯಲ್ಲಿ ಹಾಡು ಹೇಳಿದ್ದು, ಗಣಪತಿ ಕೂರಿಸಿದ್ದು, ಗಣಪತಿ ಹಬ್ಬದಲ್ಲಿ ಲಾಟರಿ ಟಿಕೆಟ್ ಮಾಡಿದ್ದು, ಹಳ್ಳ-ಕೊಳ್ಳದಲ್ಲಿ ಈಜು ಕಲಿಯಲು ಕೆಸರು ನೀರಿನಲ್ಲಿ ಹೊರಳಾಡಿದ್ದು ಎಲ್ಲಾ ನೆನಪುಗಳು ಹಾಗೆಯೇ ಆಗಾಗ ನನ್ನ ಸ್ಮತಿ ಪಟಲದಲ್ಲಿ ಕಾಡುತ್ತಿದ್ದವು.
ಇಂದಿರಾಗಾಂಧಿ ಸತ್ತಾಗ ಓಡಿ ಬಂದು ಇಂದಿರಾಗಾಂಧಿಯನ್ನ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಿದ ಪೊಲೀಸರ ಮಗ ಲಕ್ಷ್ಮಣಗೌಡ, ಕಷ್ಟವಾದ ಲೆಕ್ಕಗಳನ್ನು ಚರ್ಚಿಸಿ ಲೆಕ್ಕ ಮಾಡಿಕೊಂಡು ಹೋಗುತ್ತಿದ್ದ ರಾಮಚಂದ್ರ, ನೋಟ್ಸ್ಗಾಗಿ ಪದೇ ಪದೇ ಹಾಸ್ಟಲ್ ಹತ್ತಿರ ನೀರು ತರುವ ನೆಪದಲ್ಲಿ ಆಗಿನ ಕಾಲಕ್ಕೆ ಸೈಕಲ್ನಲ್ಲಿ ಬರುತ್ತಿದ್ದ ರಾಧಾಮಣಿ ಇವರು ಮೂಡಿಗೆರೆ ಆಸು ಪಾಸಿನಲ್ಲೆ ಇದ್ದಾರೆ ಎಂಬುದು ತಿಳಿದಿದ್ದರೂ ಮತ್ತೆ ಸಿಗುವರು ಎಂಬುದು ಕಲ್ಪಸಿಕೊಳ್ಳಲು ಆಗಿರಲಿಲ್ಲ.
ಜೂನ್ ತಿಂಗಳಲ್ಲಿ ನನ್ನ ಬಾಲ್ಯದ ಗೆಳೆಯನೊಬ್ಬ ಉನ್ನತ ಹುದ್ದೆಗೆ ಹೋಗಿದ್ದಕ್ಕೆ ಅಭಿನಂದಿಸುವ ನೆಪದಲ್ಲಿ ಸೇರಿಕೊಂಡಾಗ ಎಲ್ಲಾ ನೆನಪುಗಳು ಬಿಚ್ಚುಕೊಳ್ಳುತ್ತಾ ಹೋದವು, ಅಲ್ಲಿದ್ದ ಗೆಳೆಯನೊಬ್ಬ ರಾಧಮಣಿಯ ನಂಬರ್, ಭಾಗ್ಯಮ್ಮ ನಂಬರ್ ನೀಡಿದ.
ನಂಬರ್ ಸಿಕ್ಕಿದ ಒಂದ್ಹತ್ತು ದಿನಗಳ ನಂತರ ರಾಧಮಣಿಗೆ ಪೋನ್ ಮಾಡಿದ್ದೇ ತಡ ಪಟ ಪಟನೇ ಅರಳುರಿದಂತೆ ಬಾಲ್ಯದಲ್ಲಿ ಹೇಗೆ ಮಾತನಾಡುತ್ತಿದ್ದಳೋ ಹಾಗೆ ಮಾತನಾಡಿ ಏನೋ ಎಷ್ಟು ದಿನದಿಂದ ನಿನ್ನ ಮಾತನಾಡಿಸಬೇಕು, ಅಂತ ಇದ್ದೆ, ಸಿಕ್ಕಿದ್ದು ಖುಷಿಯಾಯಿತು, ಲಕ್ಷ್ಮಣಗೌಡ ಇಲ್ಲೇ ಇದ್ದಾನೆ ಅಂತ ನಂಬರ್ ಕೊಟ್ಟಳು.
ಲಕ್ಷ್ಮಣಗೌಡನಿಗೆ ಸಂಪರ್ಕಿಸಿದರೆ ಆತನು ಪ್ರೀತಿಯ ಮಳೆಯನ್ನೇ ಸುರಸಿ ಬಿಟ್ಟ, ಆತ ತೊರಿಸಿದ ಆತ್ಮೀಯತೆ, ಪ್ರೀತಿ, ನೀನು ಬರಬೇಕು, ನಿನ್ನ ನೋಡಲೇ ಬೇಕು 40ವರ್ಷಗಳ ನಂತರ ಸಿಕ್ಕಿದ್ದೀಯ, ಬಾರೋ, ಅಯ್ಯೋ ನಿನ್ನ ನೋಡಬೇಕು, ಮಾತನಾಡಬೇಕು ಅಂತ ಹೇಳಿದ್ದಲ್ಲದೆ, ನನ್ನ ಮೇಲೆ ಎರಡು ಕವಿತೆಗಳನ್ನು ಬರೆದು ಹಾಡಿದ್ದು ಮತ್ತಷ್ಟು ಪೇಚಿಗೆ ಸಿಕ್ಕಿಸಿತು.
ದೋ ಎಂದು ಸುರಿಯುತ್ತಿರುವ ಮಳೆ.
ಈ ಮಧ್ಯೆ ರಾಮಚಂದ್ರನ ವಿಷಯವೂ ಪ್ರಸ್ತಾಪವಾದಾಗ ಲಕ್ಷ್ಮಣಗೌಡ 25ವರ್ಷಗಳ ಹಿಂದೆ ರಾಮಚಂದ್ರನ ಅಕ್ಕ ಬಣಕಲ್ನಲ್ಲಿ ಸಿಕ್ಕಿದ ಬಗ್ಗೆ ಹೇಳಿದ, ನಾನು ಅದೆಲ್ಲಾ ಗೊತ್ತಿಲ್ಲ ಆತನ ನಂಬರ್ ಬೇಕೆಂದು ಪಟ್ಟು ಹಿಡಿದೆ, ಲಕ್ಷ್ಮಣಗೌಡ ಮೂಡಿಗೆರೆಯ ಆತನ ಕೆಲ ಗೆಳೆಯರ ಸಂಪರ್ಕಿಸಿ ರಾಮಚಂದ್ರನನ್ನೂ ಹುಡುಕಿದ ನಾವ್ಯಾರು 38 ವರ್ಷಗಳಿಂದ ಒಬ್ಬರನೊಬ್ಬರು ನೋಡಿಕೊಂಡಿಲ್ಲ, ಮಾತನಾಡಿಲ್ಲ, ಈಗ ನಾವು ನಾಲ್ವರು ಸಿಕ್ಕಿದ್ದು ಶಬರಿ ರಾಮನನ್ನು ಕಂಡಂತೆ, ಮೋಡದ ಮರೆಯಲ್ಲಿದ್ದ ಚಂದ್ರನನ್ನು ಕಂಡಂತೆ ಪೋನ್ನಲ್ಲೇ ಹರಟೆ, ನಗು, ಬದುಕು ಎಲ್ಲಾ ಹಂಚಿಕೊಂಡು, ನಗುವುದು, ಮತ್ತೆ ಕಿಚಾಯಿಸಿಕೊಳ್ಳುವುದು ನಡೆಯುತ್ತಲೇ ಇತ್ತು.
ಲಕ್ಷ್ಮಣಗೌಡ ಇಷ್ಟು ವರ್ಷವಾದ ಮೇಲೆ ಸಿಕ್ಕಿದ್ದೇವೆ ನಾವು ಮೂವರು ಅಲ್ಲಿಗೆ ಬರುವುದಕ್ಕಿಂತ ನೀನೇ ಬಾ ನಾವು ಮೂವರೂ ಸಿಗುತ್ತೇವೆ ಎಂದು ಕಾಡುತ್ತಾ, ಕವನ ಬರೆಯುತ್ತಾ, ಮತ್ತೆ ಮತ್ತೆ ಹಳೆಯ ನೆನಪುಗಳನ್ನು ನೆನಪಿಸುತ್ತಿದ್ದ. ರಾಧಮಣಿಯೂ ಬಾರೋ ಎಲ್ಲರೂ ಸೆರಿಕೊಳ್ಳೋಣ ಜೀವನ ಇದ್ದದ್ದೇ ಅಂದಳು,
ಕೊನೆಗೂ ಜೂನ್ 22ರಂದು ಮೂಡಿಗೆರೆಯತ್ತ ಪಯಣ ಬೆಳೆಸಿದೆ, ಕಡೂರಿನಲ್ಲಿ ನಮ್ಮ ಕುಟುಂಬದ ತಂದೆಯ ಗೆಳೆಯರಾಗಿದ್ದ ಆಣೇಗೆರೆ ಶಂಕರಪ್ಪನವರ ಮಗ ರಘುರವರನ್ನು ಭೇಟಿ ಮಾಡಿಕೊಂಡು, ಬಣಕಲ್ನತ್ತ ಪ್ರಯಾಣ ಬೆಳೆಸಿದೆ.
4.30ರ ವೇಳೆಗೆ ಬಣಕಲ್ ತಲುಪಿ ಲಕ್ಷ್ಮಣಗೌಡಗೆ ಪೋನ್ ಮಾಡಿದೆ, ಆತನನ್ನು ನಾನು ನೋಡಿಲ್ಲ, ಆತ ನನ್ನ ನೋಡಿಲ್ಲ ಏನೋ ಒಂದು ತರಹ ಕುತೂಹಲ, ಲಕ್ಷ್ಮಣಗೌಡ ತಮ್ಮ ಕಾರನ್ನು ತಗೊಂಡು ಬಂದು ಎರಡೂ ಛತ್ರಿಗಳನ್ನು ಹಿಡಿದುಕೊಂಡು ಬಂದು ನನ್ನ ಎದುರಿನಿಂದ ಪೋನ್ ಮಾಡುತ್ತಿರುವುದನ್ನು ಕಂಡು ಆತನೇ ಇರಬೇಕೆಂದು ಕೈ ಬೀಸಿದೆ, ಆತನೂ ಕೈ ಬೀಸಿದ, ಬಂದವನೇ ತಬ್ಬಿಕೊಂಡ ಅಲ್ಲಿಯ ಅಂಗಡಿವರಿಗೆಲ್ಲ 40 ವರ್ಷಗಳ ನಂತರ ಗೆಳೆಯ ಸಿಕ್ಕಿದ್ದಾನೆ, ಬಂದಿದ್ದಾನೆ ಎಂದು ಪರಿಚಯಿಸಿ ಸಂಭ್ರಮಿಸಿದ, ಮಳೆ ದೋ ಎಂದು ಸುರಿಯುತ್ತಲೇ ಇತ್ತು ಕಾರು ಮಲೆನಾಡ ಕಾಫಿ ಡೇಗೆ ಬಂದು ನಿಂತಿತು, ಬಿಸಿ ಬಿಸಿ ಕಾಫಿ ಹೀರಿದ ನಂತರ ಅವರ ಮನೆಯತ್ತ ಹೊರೆಟೆವು.
ಮನೆಯಲ್ಲಿ ಬಿಸಿ ಟೀ, ಅವಲಕ್ಕಿ ಜೊತೆಗೆ ಅವರ ಮನೆಯವರು ಅಯೋ ನೀವು ಪೋನ್ ಮಾಡಿದ ದಿನದಿಂದಲೂ ನಮ್ಮ ಮನೆಯವರಿಗೆ ಏನೋ ಜೀವನದಲ್ಲಿ ಸಿಗದೇ ಇರುವ ವಸ್ತುವೊಂದು ಸಿಕ್ಕಂತೆ ಆಡುತ್ತಿದ್ದಾರೆ, ಕೋಟಿ ರೂ. ಸಿಕ್ಕರೂ ಈ ಸಂತೋಷ, ಸಂಭ್ರಮ ಸಿಕ್ಕುತ್ತಿರುತ್ತಿರಲಿಲ್ಲವೋನೋ ಅಂದರು, ತಡ ರಾತ್ರಿಯವರೆಗೂ ಬಾಲ್ಯದ ನೆನಪಿನ ಮಾತುಗಳು, ಈ ಮಧ್ಯೆ ರಾಮಚಂದ್ರನಿಗೆ ಪೋನ್ ಮಾಡಿ ಬಾ ಅಂದರೆ ಮೀಟರ್ ರೀಡಿಂಗ್ಗೆ ಹೋಗಿ ಮಳೆಯಲ್ಲಿ ನೆನದು ಬಂದಿರುವುದಾಗಿ ಹೇಳಿ ಬೆಳಿಗ್ಗೆ ಅವರ ಮನೆಗೆ ತಿಂಡಿಗೆ ಆಹ್ವಾನಿಸಿದ.
ಲಕ್ಷ್ಮಣಗೌಡ ಸಿಕ್ಕ ಸಿಕ್ಕ ಗೆಳೆಯರಿಗೆಲ್ಲಾ ಪೋನ್ ಮಾಡಿ 40 ವರ್ಷಗಳ ನಂತರ ಗೆಳೆಯರೊಬ್ಬರು ನಮ್ಮನ್ನು ಹುಡುಕಿ ನೋಡಲು ಬಂದಿದ್ದಾರೆ, ಪ್ರಪಂಚದಲ್ಲಿ ಇದೊಂದು ಅದ್ಭುತ, ಮರೆಯಲಾಗದ ನೆನಪು, ಹೀಗೂ ಆಗುವುದುಂಟ ಎಂದು ಸಂಭ್ರಮಿಸಿದ, ಹಾಡು ಹೇಳಿದ, ಕುಣಿದ ಅವನ ಆನಂದವನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ.
ರಾಧಗೆ ಪೋನ್ ಮಾಡಿ ಬೆಳೆಗ್ಗೆ ಬರುವುದಾಗಿ ತಿಳಿಸಿದೆವು, ಹೊರಗೆ ದೋ ಎಂಬ ಮಳೆ ಸುರಿಯುತ್ತಲೇ ಇತ್ತು, ಲಕ್ಷ್ಮಣಗೌಡ ನೀನು ಬಂದ ಮೇಲೆ ಮಳೆ ಹೆಚ್ಚಾಯಿತು ಎಂದ, ಬೆಳಿಗ್ಗೆ ಲಕ್ಷ್ಮಣಗೌಡನ ಮನೆಯಲ್ಲಿ ಬಿಸಿ ಬಿಸಿ ದೋಸೆ, ಫಲ್ಯ, ಚಟ್ನಿ ಸವಿದು ರಾಮಚಂದ್ರನ ಮೂಡಿಗೆರೆಗೆ ಬಂದಾಗ ಅಲ್ಲಿಯೂ ರೊಟ್ಟಿ ಬದನೆಕಾಯಿ ಎಣ್ಣೆಗಾಯಿ ಸವಿದು ರಾಧಮಣಿ ಇರುವ ಕಣತಿಯತ್ತ ಹೊರೆಟೆವು, ಕಾರಿನಲ್ಲೂ ಮಾತು ಮಾತು, 12ಗಂಟೆಯ ವೇಳೆಗೆ ಕಣತಿ ತಲುಪಿದೆವು.

ಮಲೆನಾಡ ಸೌಂದರ್ಯ.
ರಾಧಮಣಿ ನಮ್ಮನ್ನೆಲ್ಲಾ ನೋಡಿ ಖುಷಿ, ಖುಷಿ ಪಟ್ಟಿದ್ದಲ್ಲದೆ ಬಿಸಿ ಬಿಸಿ ಕಾಫಿ ಕೊಟ್ಟಳು, ಅವರ ಮಕ್ಕಳೊಂದಿಗೆ ಆಟ, ನಲಿವು, ರಾಧಮಣಿಯವರ ಪತಿ ಮಂಜುನಾಥರವರು ಹೊಸಬರು ಅನ್ನಿಸಲೇ ಇಲ್ಲ, ಎಲ್ಲಾ ಬಾಲ್ಯದ ನೆನಪುಗಳು, ಬದುಕನ್ನು ಕಟ್ಟಿಕೊಂಡಿದ್ದು, ಒಂದೆ ಎರಡೇ ಆ ಮಾತುಗಳಿಗೆ ಪಾರವೇ ಇಲ್ಲವಾಯಿತು, ಪಂಚನಹಳ್ಳಿಯ ಬಾಲ್ಯದ ನೆನಪುಗಳು ಸಮುದ್ರದ ಅಲೆಗಳಂತೆ ತೇಲಿ ತೇಲಿ ಹೋದವು.
ರಾಧಮಣಿಯವರ ಪತಿ ಮಂಜುನಾಥರವರಂತೂ ಕೆಲ ಮಾತಿನ ಮಧ್ಯೆ ಒಗಟಿನ ಜೋಕ್ಗಳನ್ನು ಹೇಳಿ ನಗಿಸಿ ನಗಿಸಿ ಇಟ್ಟರು, “ಮಂದಿ ಮುಂದೆ ಕೂತು ಮಂಡೆ ಬಿಸಿ ಮಾಡಿಕೊಳ್ಳುವುದಕ್ಕಿಂತ ಹಂಡೆ ಮುಂದೆ ಕೂತು ಉರಿ ಹಾಕಿದರೆ ಹಂಡೆ ನೀರಾದರೂ ಕಾಯುತ್ತದೆ” ಎಂಬ ಮಾತಿಗೆ ಎಷ್ಟು ನಕೆÀ್ಕವು ಎಂದರೆ ಹೊಟ್ಟೆ ನೋವೇ ಬಂತು.
ಮಂಜುನಾಥ ಅವರು ನಮಗೆ ಅಪರಿಚಿತರು ಅನ್ನಿಸಲೇ ಇಲ್ಲ, ರಾಧ-ಮಂಜುನಾಥರವರ ಕುಟುಂಬ ಪ್ರೇಮವನ್ನು ಕಂಡು ನಾವು ಮೂವರೂ ಮೂಕರಾದೆವು, ಅದಕ್ಕೆ ಈ ಪ್ರಪಂಚದಲ್ಲಿ ಬೆಲೆ ಕಟ್ಟಲಾಗದು, ಅದನ್ನು ಯಾವ ಪದಗಳಲ್ಲೂ ವರ್ಣಿಸಲು ಸಾಧ್ಯವಿಲ್ಲ. ಸಂಸಾರವೆಂದರೆ ಹೇಗಿರಬೇಕು ಬರೀ ಹಣ, ಅಂತಸ್ತು, ಬಂಗಲೇ ಅಷ್ಟೇ ಅಲ್ಲ ಬದುಕಿನ ಪ್ರೀತಿ, ಕರುಣೆ ಮೈತ್ರಿ ಹೇಗಿರುತ್ತದೆ ಎಂಬುದು ಆ ಕುಟುಂಬವನ್ನು ನೋಡಿದ ಮೇಲೆ ಮತ್ತೊಂದು ಲೋಕ ಅರ್ಥ ನಮಗೆ ಸಿಕ್ಕಿತು.
ಅವರು ಮಕ್ಕಳಿಗೆ ತೋರುವ ಪ್ರೀತಿ ನಾವ್ಯಾರು ಕೊಡಲು ಸಾಧ್ಯವಿಲ್ಲ, ರಾಧಮಣಿ, ಮಂಜುನಾಥ್ ಅವರು ಬಡಿಸಿದ ಚಿಕನ್ ಬಿರಿಯಾನಿ, ಚಿಕನ್ ಫ್ರೈ, ಚಿಕನ್ ಮಸಾಲಕ್ಕಿಂತ ಅವರು ನಮಗೆ ತೋರಿದ ಪ್ರೀತಿ ಮರೆಯಲಾಗದು, ಬೆಲೆ ಕಟ್ಟಲಾಗದು, ನಾವೆಲ್ಲ ಮತ್ತೆ ಸೇರಿದ ಸಂಭ್ರಮಕ್ಕೆ ಪಾರವೇ ಇಲ್ಲದಂತಾಯಿತು, ಮನೆಯ ಹೊರಗೆ ಮಳೆ ದೋ ಎಂದು ಸುರಿಯುತ್ತಲೇ ಇತ್ತು, ಮಾತಿನ ಮಧ್ಯೆ ಸಮಯ ಹೋಗಿದ್ದೇ ತಿಳಿಯಲಿಲ್ಲ, ರಾಧ ಅದೆಷ್ಟು ಸಲ ಕಾಫಿ ಕೊಟ್ಟಳೋ, ಮಾತಿನ ಮಧ್ಯೆ, ನೀನು ಹಾಗೆ ಮಾಡುತ್ತಿದ್ದೆ, ನೀನು ಹೀಗೆ ಆಡುತ್ತಿದ್ದೆ ಎಂದು ರಾಮಚಂದ್ರ ಹೇಳುತ್ತಿದ್ದ, ಲಕ್ಷ್ಮಣಗೌಡ ನಾವೆಲ್ಲಾ ಹೇಗೆಲ್ಲಾ ಕ್ಲಾಸಿನಲ್ಲಿ ಆಡುತ್ತಿದ್ದೆವು, ಓದುತ್ತಿದ್ದೆವು ಹೀಗೆ ಮಾತಿನ ಅಲೆಗಳು ತೇಲಿ ಹೋದವು.
ಸಂಜೆ 7ಕ್ಕೆ ನಾವು ಮೂವರು ಹೊರಡಲು ಮುಂದಾದೆವು ಎಲ್ಲರೂ ಪೋಟೋ ಕ್ಲಿಕ್ಕಿಸಿಕೊಂಡೆವು, ರಾಧ ಬಜ್ಜಿ ಮಾಡಲೇ ಅಂದಳು ಬ್ಯಾಡ ಸಮಯವಾಗಿದೆ ಎಂದು ಒಲ್ಲದ ಮನಸ್ಸಿನಿಂದ, ಭಾರದ ಹೆಜ್ಜೆಗಳನ್ನು ಮನೆಯಿಂದ ಹೊರಗಿಟ್ಟೆವು, ರಾಧ-ಮಂಜು, ಶಿವಾನಿ ಬಾಗಿಲಲ್ಲಿ ನಿಂತು ನಾವು ಕಾರು ಹತ್ತಿದ ನಂತರವೂ ವೆಂಕಟಾಚಲ ಉಳಿದುಕೊಳ್ಳಬಹುದಿತ್ತು ಅಂತ ಮಂಜು-ರಾಧ ಹೇಳಿದರು, ನನಗೂ ಮನಸ್ಸಿದ್ದರೂ ತುಮಕೂರಿಗೆ ಬೆಳಿಗ್ಗೆಯ ವೇಳೆಗೆ ಹೋಗಲೇ ಬೇಕು ಕಾರು ಹೊರಟಿತು, ಟಾಟಾ ಮಾಡಿ ಹೊರೆಟೆವು ಮಳೆ ಬೀಳುತ್ತಲೇ ಇತ್ತು, ಏನೋ ಮೌನ ಆವರಿಸಿದಂತಾಯಿತು, ಮನಸ್ಸು, ಹೃದಯ ಭಾರವಾದಂತಾಯಿತು ಮೂವರೂ ಕೆಲ ಹೊತ್ತು ಮಾತನಾಡಲಿಲ್ಲ, ಸ್ವಲ್ಪ ಸಮಯದ ನಂತರ ಬೆಳಿಗ್ಗೇನೆ ಬರ ಬೇಕಿತ್ತು ಅಂದುಕೊಂಡೆವು. ಮುಂದೆ ಬರುವಾಗ ಮಕ್ಕಳು ಮನೆಯವರೊಂದಿಗೆ ಸೇರಿಕೊಳ್ಳುವ ನಿರ್ಧಾರವಾಯಿತು.
ನಾವಿರುವ ತನಕ ಈ ಸ್ನೇಹದ ಬಂಧ ಹೀಗೆ ಇರಲಿ ಎಂದುಕೊಂಡೆವು, ಮೂಡಿಗೆರೆ ಬಂತು ಲಕ್ಷ್ಮಣಗೌಡ ಪೊಲೀಸ್ ಆಗಿದ್ದರಿಂದ ಕೆಲಸಕ್ಕೆ ಹಾಜರಾಗಲೇ ಬೇಕಿತ್ತು, ಕೊನೆಯ ಬಸ್ಸು ನಿಂತಿತ್ತು, ಬಸ್ ಹತ್ತಿ ಹೊರಟ, ನಾನು ರಾಮಚಂದ್ರ ಇಬ್ಬರೇ ಉಳಿದೆವು,10 ನಿಮಿಷ ಮತ್ತೇ ಎಲ್ಲಾ ಮಾತನಾಡಿದೆವು, ಧರ್ಮಸ್ಥಳದ ಬಸ್ ಬಂದಿತು, ಹತ್ತಿ ಹೊರಟೆ ಈಗ ಬರೀ ದೋ ಎನ್ನುವ ಮಳೆ, ಬಾಲ್ಯದ ಸವಿ ಸವಿ ನೆನಪನ್ನು ನೆನೆಸಿಕೊಂಡು ನಕ್ಕ, ಕಿಚಾಯಿಸಿದ ಕ್ಷಣಗಳು ಹಾಗೆ ತೇಲಿ ಹೋಗುತ್ತಿವೆ…….
ನಾವು ನಾಲ್ವರು ಎಲ್ಲಿಯೂ ಈ ಕೊಳಕು ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ, ಭ್ರಷ್ಟಚಾರ, ಲಂಚ ಎಂಬುದರಿಂದ ಕೈಗಳನ್ನು ಕೊಳಕು ಹೊಲಸು ಮಾಡಿಕೊಂಡಿದ್ದೇವೆ ಎನ್ನಿಸಲಿಲ್ಲ, ಆದಷ್ಟು ನಮ್ಮ ಬದುಕನ್ನು ನಮ್ಮ ನಮ್ಮ ಇತಿಮಿತಿಯಲ್ಲೇ ಸಂತೋಷದಿಂದ, ಖುಷಿಯಿಂದ ಕಟ್ಟಿಕೊಂಡಿದ್ದೇವೆ, ಲಂಚ, ಭ್ರಷ್ಟಚಾರ ಇದ್ಯಾವುದಕ್ಕೂ ನಮ್ಮನ್ನು ನಾವು ಬಲಿಯಾಗದೆ ಸ್ವಚ್ಛ ಬದುಕನ್ನು ಕಟ್ಟಿಕೊಂಡಿರುವುದಕ್ಕೆ ನಾವು ಮತ್ತೆ ಸೇರಿದ್ದು, ಮನಬಿಚ್ಚಿ ನಕ್ಕಿದ್ದು, ನಮ್ಮನ್ನು ನಾವು ಅರ್ಥ ಮಾಡಿಕೊಂಡು ಬುದ್ಧನಂತೆ ಧ್ಯಾನಸ್ಥರಂತೆ ಬದುಕಲು ಸಾಧ್ಯವಾಗಿರುವುದು. ಲೋಕದೊಳಗೆ ಪ್ರೀತಿಯೊಂದೇ ಎಲ್ಲದನ್ನೂ ಕೊಡಬಲ್ಲದು ಎಂಬುದಕ್ಕೆ ನಾವು ಯಾವ ಕಲ್ಮಶವೂ ಇಲ್ಲದೆ ಮತ್ತೇ ಸೇರಿದ್ದು, ನಕ್ಕಿದ್ದು, ನಮ್ಮನ್ನು ನಾವು ಅರ್ಥ ಮಾಡಿಕೊಂಡಿದ್ದು, ಈ ಬದುಕಿಗಿಂತ ಮತ್ತೊಂದು ಬದುಕು ಬೇಡ, ನಮಗೆ ಮೋಸ, ವಂಚನೆ, ದುರಾಸೆಗಿಂತ ಪ್ರೀತಿಯೇ ಲೇಸು, ನಮ್ಮ ಸ್ನೇಹ ಹೀಗೆ ಇರಲಿ, ನಮ್ಮ ಬದುಕು ಹೀಗೆ ಇರಲಿ ಮತ್ತೆ ಮತ್ತೆ ಸೇರೋಣ, ನಲಿಯೋಣ …………… ಈಗ ಲಕ್ಷ್ಮಣಗೌಡರ ಮನೆಯವರು, ರಾಧ ಮನೆಯವರು ತೋರಿದ ಪ್ರೀತಿ, ರಾಮಚಂದ್ರನ ಮಾತುಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.
-ವೆಂಕಟಾಚಲ.ಹೆಚ್.ವಿ.