ಸಿಂಪಲ್ ಮ್ಯಾನ್‍ ಇಕ್ಬಾಲ್ ಅಹ್ಮದ್ ಗೆ ಟಿಕೆಟ್ ನೀಡಿ ಬದಲಾವಣೆಗೆ ಮುನ್ನುಡಿ ಬರೆದ ಕಾಂಗ್ರೆಸ್

ತುಮಕೂರು : ಕಾಂಗ್ರೆಸ್‍ನ ಸಾಮಾನ್ಯ ಕಾರ್ಯಕರ್ತ ಹಾಗೂ ಸಿಂಪಲ್ ಮ್ಯಾನ್ (ಸರಳ ವ್ಯಕ್ತಿ)ಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿ ಬದಲಾವಣೆಗೆ ಮುನ್ನುಡಿ ಬರೆದಿದೆ.

ಕಳೆದ 30 ವರ್ಷಗಳಿಂದ ಮಾಜಿ ಶಾಸಕ ಎಸ್.ಷಫಿ ಅಹ್ಮದ್ ಮತ್ತು ಕುಟುಂಬ ವರ್ಗಕ್ಕೆ ಟಿಕೆಟ್ ನೀಡುತ್ತಾ ಬಂದಿದ್ದ ಕಾಂಗ್ರೆಸ್ ಪಕ್ಷವು, ಇದೀಗ ಬದಲಾವಣೆ ಬಯಸಿ ಜನ ಸಾಮಾನ್ಯರೊಂದಿಗೆ ಇದ್ದುಕೊಂಡು ಪಕ್ಷವನ್ನು ಕಟ್ಟುತ್ತಾ, ವಕ್ಫ್ ಬೋರ್ಡ್ ಸದಸ್ಯರಾಗಿ ತುಮಕೂರು ನಗರದಲ್ಲಿ ಎಲ್ಲಾ ಸಮುದಾಯದ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದ ಇಕ್ಬಾಲ್ ಅಹ್ಮದ್ ಕಳೆದ ಎರಡ್ಮೂರು ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ವರಿಷ್ಟರಲ್ಲಿ ಎಡ ತಾಕುತ್ತಿದ್ದರು, ಷಫಿ ಅಹ್ಮದ್ ಅವರ ಕುಟುಂಬವೇ ಟಿಕೆಟ್ ತರುವಲ್ಲಿ ಯಶಸ್ವಿಯಾಗುತ್ತಿತ್ತು.

ಈ ಬಾರಿ ಕೋಟ್ಯಾಧಿಪತಿ ಎನ್ನಿಸಿಕೊಂಡಿದ್ದ ಅಟ್ಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಬಾಬು, ಮಾಜಿ ಶಾಸಕ ಡಾ.ರಫೀಕ್ ಅಹ್ಮದ್, ಅತೀಕ್ ಅಹ್ಮದ್ ಮತ್ತು ಡಾ.ಫರ್ಹಾನ ಬೇಗಂ ಅವರುಗಳು ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆಸಿದರೂ ಕೊನೆಗೆ ಸಿಂಪಲ್ ಮ್ಯಾನ್, ಕಾಂಗ್ರೆಸ್‍ನ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿದೆ.

ಟಿಕೆಟ್ ಘೋಷಣೆಯಾದ ನಂತರ ಮೈತ್ರಿನ್ಯೂಸ್‍ನೊಂದಿಗೆ ಮಾತನಾಡಿದ ಇಕ್ಬಾಲ್ ಆಹ್ಮದ್ ಅವರು, ಎಲ್ಲಾ ಸಮುದಾಯದ ವಿಶ್ವಾಸದೊಂದಿಗೆ ಚುನಾವಣೆಗೆ ಹೋಗುತ್ತೇನೆ, ಇದುವರೆವಿಗೂ ಎಲ್ಲರನ್ನೂ ಅಣ್ಣ ತಮ್ಮಂದಿರಂತೆ ಕಂಡಿದ್ದೇನೆ, ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಯುವಕರಿಗೆ ಉದ್ಯೋಗವಿಲ್ಲ, ಬೆಲೆ ಏರಿಕೆ, ಸೇರಿದಂತೆ ದೇಶವನ್ನು ಅದಾನಿ, ಅಂಬಾನಿಯವರಿಗೆ ಅಡ ಇಡಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಕೋಟಿ ಕೋಟಿ ನಮಸ್ಕಾರ ತಿಳಿಸುವುದಾಗಿ ಹೇಳಿದ ಅವರು, ಸಾಮಾನ್ಯ ಹಾಗೂ ಪ್ರಾಮಾಣಿಕ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿರುವುದಕ್ಕೆ ಎಲ್ಲಾ ನಾಯಕರಿಗೆ ಅಭಿನಂದಿಸುವುದಾಗಿ ತಿಳಿಸಿದ ಅವರು, ನನಗೆ ಟಿಕೆಟ್ ಸಿಗುತ್ತದೆ ಎಂದು ಹೇಳಿದರೆ ನಗುತ್ತಿದ್ದರು, ನನಗೆ ನಿಜವಾಗಿಯೂ ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆಯಿತ್ತು, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಸಲೀಂ ಅಹ್ಮದ್ ಎಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದು, ಅವರ ಒತ್ತಾಸೆಯನ್ನು ಗೌರವಿಸುವುದಾಗಿ ತಿಳಿಸಿ, ನನ್ನ ಮೇಲಿನ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ, ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತೇನೆ ಎಂದರು.

ತುಮಕೂರಿಗೆ ವೈದ್ಯಕೀಯ ಕಾಲೇಜು, ಹೈಟೆಕ್ ಶಾಲೆಗಳನ್ನು ತೆರೆಯುವುದು ಮತ್ತು ಸ್ಮಾರ್ಟ್ ಸಿಟಿಯ ಮುಂದುವರೆದ ಕಾಮಗಾರಿಗಳನ್ನು ಉನ್ನತೀಕರಣಗೊಳಿಸಲಾಗುವುದು ಎಂದರು.

ಕಾಂಗ್ರೆಸ್‍ನ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡಲಿದೆ ಎಂದ ಇಕ್ಬಾಲ್ ಅಹ್ಮದ್ ಅವರು ನನ್ನ ರಾಜಕೀಯ ಗುರು ಡಾ.ಜಿ.ಪರಮೇಶ್ವರ್, ಎಂದ ಅವರು, ತುಮಕೂರಿನ ಜನರ ಆಶಯಗಳಿಗೆ ಸ್ಪಂದಿಸಿ ಕೆಲಸ ಮಾಡಲಾಗುವುದು, ನನ್ನ ಜೊತೆ ಟಿಕೆಟ್ ಅಕಾಂಕ್ಷಿಗಳಾಗಿದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲಾಗುವುದು ಎಂದರು.

ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗಬೇಡಿ, ಮತವನ್ನು ಮಾರಿಕೊಳ್ಳಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *