ಉಪಮುಖ್ಯಮಂತ್ರಿಗಳ ಮೂಲಕ ಕಾಮಗಾರಿ ಆರಂಭಿಸುವ ಮಾತನಾಡುತ್ತಿರುವುದು ತರವಲ್ಲ-ರಾಜ್ಯ ರೈತ ಸಂಘ ತೀವ್ರ ಖಂಡನೆ

ತುಮಕೂರು:ರೈತರು, ಸಾರ್ವಜನಿಕರ ತೀವ್ರ ಹೋರಾಟದ ಫಲವಾಗಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯಿಂದ ಹಿಂದೆ ಸರಿದಿದ್ದ ಸರಕಾರ, ಈಗ ಮತ್ತೊಮ್ಮೆ ಲಿಂಕ್ ಕೆನಾಲ್ ಕಾಮಗಾರಿಗೆ ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಕುಣಿಗಲ್, ಮಾಗಡಿ,ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಮೂಲ ನಾಲೆಯ ನಿಯಮಗಳನ್ನೇ ಉಲ್ಲಂಘಿಸಿ, ತುಮಕೂರು ಜಿಲ್ಲೆಯ 7 ತಾಲೂಕುಗಳಿಗೆ ನೀರಿಲ್ಲದಂತೆ ಮಾಡುವ ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್‍ಗೆ ತುಮಕೂರು ಜಿಲ್ಲೆಯ ಜನರ ಸಂಪೂರ್ಣ ವಿರೋಧವಿದ್ದರೂ, ಮತ್ತೊಮ್ಮೆ ಉಪಮುಖ್ಯಮಂತ್ರಿಗಳ ಮೂಲಕ ಕಾಮಗಾರಿ ಆರಂಭಿಸುವ ಮಾತನಾಡುತ್ತಿರುವುದು ತರವಲ್ಲ. ಇದನ್ನು ವಿರೋಧಿಸಿ ಮತ್ತೊಮ್ಮೆ ನಾವು ಬೀದಿಗೆ ಇಳಿಯುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.

ಕಳೆದ ಎರಡು ಮೂರು ವರ್ಷಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರೆ,ಹೇಮಾವತಿ ನಾಲೆಯಿಂದ ಕುಣಿಗಲ್ ತಾಲೂಕಿಗೆ ಹರಿಯಬೇಕಾಗಿದ್ದ 3.05 ಟಿ.ಎಂ.ಸಿ ನೀರಿಗಿಂತಲೂ ಹೆಚ್ಚು ನೀರು ಹರಿದಿದೆ.ಒಂದು ವೇಳೆ ನಿಗಧಿತ ನೀರು ಬಂದಿಲ್ಲವೆಂದಾದರೆ, ಈಗಾಗಲೇ ಆಗಲೀಕರಣಗೊಂಡಿರುವ ನಾಲೆಯನ್ನು ಮತ್ತಷ್ಟು ಆಗಲ ಮಾಡಿ ತೆಗೆದುಕೊಂಡು ಹೋಗಲು ಯಾರ ಅಭ್ಯಂತರವೂ ಇಲ್ಲ.ಆದರೆ ಕುಣಿಗಲ್ ಹೆಸರಿನಲ್ಲಿ ರಾಮನಗರ, ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿದೆ.ಈ ಯೋಜನೆಯಿಂದ ಕುಣಿಗಲ್ ತಾಲೂಕಿನ ಜನರಿಗೂ ಯಾವುದೇ ಪ್ರಯೋಜನವಾಗದು.ಇದನ್ನು ಕುಣಿಗಲ್ ತಾಲೂಕಿನ ಜನರು ಅರ್ಥ ಮಾಡಿಕೊಳ್ಳಬೇಕು.ಶಾಸಕ ಹೆಚ್.ಡಿ.ರಂಗನಾಥ್ ಅವರು ಜನರನ್ನು ಎತ್ತಿಕಟ್ಟುವ ಹುನ್ನಾರಕ್ಕೆ ಯಾರು ಬಲಿಯಾಗಬಾರದು ಎಂದು ಎ.ಗೋವಿಂದರಾಜು ಮನವಿ ಮಾಡಿದ್ದಾರೆ.

ರಾಜ್ಯದ ಉಪಮುಖ್ಯಮಂತ್ರಿಗಳಾಗಿರುವ ಕೊರಟಗೆರೆ ಶಾಸಕರು, ತಾವು ಉಪಮುಖ್ಯಮಂತ್ರಿಯಾಗಲು ಮತ ನೀಡಿ, ಗೆಲುವು ತಂದಕೊಟ್ಟ ಜನರನ್ನು ತಿರಸ್ಕಾರ ಮಾಡಿ, ಸರಕಾರದ ಭಾಗ ಎಂಬ ಮುಲಾಜಿಗೆ ಒಳಗಾಗಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಬೆಂಬಲ ವ್ಯಕ್ತಪಡಿಸಿರುವುದು ಸರಿಯಲ್ಲ.ಈ ಕಾಮಗಾರಿಯಿಂದ ಜಿಲ್ಲೆಯ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಗಳ ಜನರಿಗೆ ತೀವ್ರ ತೊಂದರೆಯಾಗಲಿದೆ. ಇದರ ಅರಿವಿದ್ದು, ತಾವು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಮಗಾರಿಗಾಗಿ ಜನರ ಮನವೊಲಿಸುವ ಮಾತನಾಡುತ್ತಿರುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ.ಡಾ.ಜಿ.ಪರಮೇಶ್ವರ್ ಅವರ ಈ ಹೇಳಿಕೆ,ಇಡೀ ಜಿಲ್ಲೆಯ ಜನತೆಯ ನಂಬಿಕೆಗೆ ಧಕ್ಕೆ ತರುವಂತಿದೆ. ತಾವು ಮತ್ತೊಮ್ಮೆ ಈ ನಿರ್ಧಾರವನ್ನು ಮರು ಪರಿಶೀಲನೆ ನಡೆಸಬೇಕು.ಇಲ್ಲದಿದ್ದರೆ ನಿಮ್ಮ ವಿರುದ್ದವೂ ಜಿಲ್ಲೆಯ ಜನ ಬೀದಿಗೆ ಇಳಿಯಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ ಎಂದು ಎ.ಗೋವಿಂದರಾಜು ಎಚ್ಚರಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ. ಮುಂದಿನ ಹೋರಾಟದ ರೂಪುರೇಷನ್‍ಗಳ ಕುರಿತು ಚರ್ಚಿಸಲು ಜೂನ್.11ರ ಗುರುವಾರ ಗುಬ್ಬಿಯಲ್ಲಿ ರೈತ ಸಂಘ,ಸಂಯುಕ್ತ ಕಿಸಾನ್ ಹೋರಾಟ ಸೇರಿದಂತೆ ಎಲ್ಲಾ ಸಂಘ,ಸಂಸ್ಥೆಗಳ ಸಭೆಯನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ನೀವು ಕಾಮಗಾರಿ ನಡೆಸಲು ಮುಂದಾದರೆ ಜಿಲ್ಲೆಯ ಜನರು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದವಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.ಮತ್ತೊಮ್ಮೆ ಈ ವಿಚಾರದಲ್ಲಿ ಆಲೋಚಿಸುವಂತೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *