ಶ್ರೀಸತ್ಯ ಸಾಯಿ ಸೇವಾ ಆಶ್ರಮದಿಂದ ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಸೇವೆ-ಶ್ರೀಮಧುಸೂಧನ್ ಸಾಯಿ

ತುಮಕೂರು : ಗ್ರಾಮೀಣ ಜನರಿಗೆ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಮಟ್ಟದಲ್ಲಿ 50 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿಯೂ ತೆರೆದು ಸೇವೆ ಒದಗಿಸಲು ಶ್ರೀಸತ್ಯ ಸಾಯಿ ಸೇವಾ ಆಶ್ರಮದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಸತ್ಯಸಾಯಿ ಸೇವಾಶ್ರಮದ ಶ್ರೀಮಧುಸೂಧನ್ ಸಾಯಿ ತಿಳಿಸಿದರು.

ಇಂದು ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅವರ ಮನೆಗೆ ಭೇಟಿ ನೀಡಿದ ವೇಳೆ ಭಕ್ತರ ಕೋರಿಕೆ ಮೇರೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಆರೋಗ್ಯ, ಶಿಕ್ಷಣವೆಂಬುದು ವ್ಯಾಪಾರವಾಗಿರುವ ಇಂದಿನ ದಿನಗಳಲ್ಲಿ ಬಡವರು, ಮಧ್ಯಮ ವರ್ಗದ ಜನರು ಗುಣಮಟ್ಟ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆಯುವುದು ಮರಿಚೀಕೆಯಾಗಿದೆ. ಸರಕಾರದ ಆಸ್ಪತ್ರೆಯ ಬಗ್ಗೆ ಇಂದಿಗೂ ಜನರಲ್ಲಿ ಅಸಡ್ಡೆಯ ಭಾವನೆ ಇದೆ. ಹಾಗಾಗಿ ಮುದ್ದೇನಹಳ್ಳಿಯಲ್ಲಿರುವ ಶ್ರೀಸಾಯಿ ಗ್ರಾಮದಲ್ಲಿ ಇರುವ ಧರ್ಮಾಸ್ಪತ್ರೆಯ ರೀತಿಯಲ್ಲಿಯೇ ನುರಿತ ವೈದ್ಯರು ಮತ್ತು ಸಿಬ್ಬಂದಿಯನ್ನು ಒಳಗೊಂಡ ಸಣ್ಣ ಸಣ್ಣ ಆಸ್ಪತ್ರೆಗಳನ್ನು ಗ್ರಾಮೀಣ ಭಾಗದಲ್ಲಿ ತೆರದು ಸೇವೆ ಒದಗಿಸಬೇಕೆಂಬುದು ಭಕ್ತರ ಕೋರಿಕೆಯಾಗಿದೆ. ನಮ್ಮ ಇಚ್ಚೆಯೂ ಆ ನಿಟ್ಟಿನಲ್ಲಿಯೇ ಇದ್ದು, ನಮ್ಮ ಉಚಿತ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು ರಾಜ್ಯದಾದ್ಯಂತ ವಿಸ್ತರಿಸಲಿವೆ. ನಮ್ಮ ಮೆಡಿಕಲ್ ಕಾಲೇಜಿನ ನುರಿತ ತಜ್ಞ ವೈದ್ಯರೇ ನಿಗಧಿತ ದಿನಗಳಂದು ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ರೋಗಿಗಳನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲಿದ್ದಾರೆ ಎಂದರು.

ಮಧುಗಿರಿಯಲ್ಲಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯುತ್ತಿದೆ.ಹೆದ್ದಾರಿ ಅಕ್ಕಪಕ್ಕದಲ್ಲಿ ಜಾಗ ನೋಡಿ, ಅಲ್ಲಿ ಐವತ್ತು ಬೆಡ್ ಆಸ್ಪತ್ರೆ ತೆರೆಯಲು ಚಿಂತನೆ ನಡೆದಿದೆ. ಹೆದ್ದಾರಿಗಳಲ್ಲಿ ಅಪಘಾತ ನಡೆದಾಗ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇರುವುದಿಲ್ಲ.ಹಾಗಾಗಿ ಶಿರಾ ತುಮಕೂರು ಮತ್ತು ದಾಬಸ್‍ಪೇಟೆ ನಡುವೆ ಇಂತಹ ಆಸ್ಪತ್ರೆ ತೆರೆಯುವ ಬಗ್ಗೆ ಆಲೋಚನೆ ಇದೆ. ಜಾಗ ಎಷ್ಟು ಶೀಘ್ರವಾಗಿ ದೊರೆಯುತ್ತದೆಯೋ ಅಷ್ಟು ಬೇಗ ಆಸ್ಪತ್ರೆ ನಿರ್ಮಾಣ ಕಾರ್ಯವೂ ನಡೆಯಲಿದೆ. ನಮ್ಮ ಆಸ್ಪತ್ರೆಯಿಂದ ಹೊರಬರುವ ವೈದ್ಯರುಗಳನ್ನೇ ಈ ಅಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ನೇಮಕ ಮಾಡಲಾಗುವುದು ಎಂದು ಸ್ವಾಮೀಜಿ ನುಡಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಈಗಾಗಲೇ ಆಂಧ್ರ ಪ್ರದೇಶದಲ್ಲಿ ಕೆಲ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಮ್ಮ ಸಂಸ್ಥೆ ವತಿಯಿಂದ ಈಗಾಗಲೇ ಶುದ್ದೀಕರಣ ಘಟಕಗಳನ್ನು ಹಾಕಿ ನೋಡಿದ್ದೇವೆ. ಒಳ್ಳೆಯ ಫಲಿತಾಂಶ ಬಂದಿದೆ.ಹಾಗಾಗಿ ತುಮಕೂರು ಜಿಲ್ಲೆಯಲ್ಲಿಯೂ ಅಗತ್ಯವಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಶುದ್ದೀಕರಣ ಘಟಕಗಳನ್ನು ಹಾಕಲು ಸತ್ಯ ಸಾಯಿ ಸಂಸ್ಥೆ ಸಿದ್ದವಿದೆ.ಅಲ್ಲದೆ ಶಿರಾ ತಾಲೂಕು ಗಾಣದ ಹುಣಸೆ ಗ್ರಾಮದಲ್ಲಿರುವ ನಮ್ಮ ಸಂಸ್ಥೆಯ ಶಾಲೆಯಲ್ಲಿ ಮುಂದಿನ ವರ್ಷದಿಂದ ಪಿಯು ಆರಂಭಿಸುವ ಗುರಿ ಇದೆ.ಸುಮಾರು 500 ಜನ ಮಕ್ಕಳಿಗೆ ಉಳಿದುಕೊಂಡು ಓದಲು ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀಮಧುಸೂಧನ್ ಸಾಯಿ ತಿಳಿಸಿದರು.

ಜನರಿಗೆ ಒಳ್ಳೆಯ ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದು ಸರಕಾರದ ಒಂದರದ್ದೇ ಕೆಲಸವಲ್ಲ. ನಾವು ಕೂಡ ನಮ್ಮ ಕೈಲಾದ ಸೇವೆಯನ್ನು ಸಲ್ಲಿಸಬೇಕಾಗುತ್ತದೆ. ಸಮಾಜದ ಹಿರಿಯರು, ರಾಜಕೀಯ ನಾಯಕರು, ಸಮುದಾಯಗಳ ಮುಖಂಡರು ಕೈಜೋಡಿಸಿ, ಭೂಮಿ ದೊರಕಿಸಿಕೊಟ್ಟರೆ ಒಂದೆರಡು ವರ್ಷಗಳಲ್ಲಿ ಆಸ್ಪತ್ರೆ ರೋಗಿಗಳ ಸೇವೆಗೆ ಸಿದ್ದವಾಗಲಿದೆ. ಮುರುಳೀಧರ ಹಾಲಪ್ಪ ಸೇರಿದಂತೆ ರಾಜಕೀಯ ನಾಯಕರು ಸರಕಾರದ ಜೊತೆ ಮಾತುಕತೆ ನಡೆಸಿ, ಶೀಘ್ರ ಜಮೀನು ದೊರೆಯುವಂತಹ ವ್ಯವಸ್ಥೆ ಮಾಡಿದರೆ ಜನರಿಗೆ ಅನುಕೂಲವಾಗಲಿದೆ ಎಂದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಸೇವಾಶ್ರಮದಿಂದ ಹಲವಾರು ಸಮಾಜ ಸೇವಾ ಕಾಂiÀರ್iಗಳು ಜರುಗುತಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿದೆ. ಅವುಗಳನ್ನು ತುಮಕೂರು ಜಿಲ್ಲೆಗೂ ವಿಸ್ತರಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಮಾಡಿರುವಂತೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ಶಿರಾ ತಾಲೂಕು ಗಾಣದಹುಣಸೆ ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆಯ ಉನ್ನತ್ತೀಕರಣ ಹಾಗೂ ಆರೋಗ್ಯ ಸೇವೆಗಳ ವಿಸ್ತರಣೆ ಮಾಡಿದರೆ ಹೆಚ್ಚಿನ ಅನುಕೂಲ ಜಿಲ್ಲೆಯ ಜನರಿಗೆ ಆಗಲಿದೆ.ತುಮಕೂರು 17 ಜಿಲ್ಲೆಗಳಿಗೆ ರಹದಾರಿ ಒದಗಿಸುವ ಜಿಲ್ಲೆಯಾಗಿದೆ. ಸುಮಾರು ಐದು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಈ ಭಾಗದಲ್ಲಿ ಉಚಿತ ಆಸ್ಪತ್ರೆ ತೆರೆಯುವುದರಿಂದ ಹೆಚ್ಚಿನ ಅನುಕೂಲ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಆಗಲಿದೆ ಎಂಬ ಕೋರಿಕೆಯನ್ನು ಶ್ರೀಮಧುಸೂಧನ ಸಾಯಿ ಅವರ ಮುಂದಿಟ್ಟರು.

ಇದೇ ವೇಳೆ ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮದ್, ಡಾ.ಎಸ್.ಷಪಿ ಅಹಮದ್ ಸೇರಿದಂತೆ ಹಲವರು ಶ್ರೀಮಧುಸೂಧನ್ ಸಾಯಿ ಅವರ ದರ್ಶನ ಪಡೆದು,ಗೌರವಿಸಿದರು.

Leave a Reply

Your email address will not be published. Required fields are marked *