ತುಮಕೂರಿನಲ್ಲಿ ತೀರ ಪ್ರಾಮಾಣಿಕ ಪತ್ರಿಕರ್ತರು ಎಂದರೆ ವಿಜಯವಾಣಿಯ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದ ಹೆಚ್.ಆರ್.ಗುಂಡುರಾವ್ ರವರು, ನಂತರ ಅವರ ಮಗ ಹೆಚ್.ಜಿ.ವೆಂಕಟೇಶಮೂರ್ತಿ ಅವರುಗಳನ್ನು ನೆನಸಿಕೊಳ್ಳದಿದ್ದರೆ ತುಮಕೂರಿನ ಪತ್ರಿಕಾ ಕ್ಷೇತ್ರಕ್ಕೆ ಬಗೆದ ಅಪಚಾರ.
ಹೆಚ್.ಆರ್.ಗುಂಡುರಾವ್ ಅವರ ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದವರು, ಇವರು ಪತ್ರಿಕೆಯ ಕಛೇರಿಗೆ ಅಂದಿನ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಭೇಟಿ ನೀಡುತ್ತಿದ್ದರು, ಆ ಭೇಟಿಯು ಸ್ನೇಹದ ಭೇಟಿಯಾಗಿತ್ತೇ ವಿನಃ ಅಲ್ಲಿ ಯಾವುದೇ ಹುಲ್ಲು ಕಡ್ಡಿಯಷ್ಟು ಪತ್ರಿಕೆಗಾಗಲಿ, ಅವರ ಸ್ವಂತಕ್ಕಾಗಲಿ ಅವರ ಜೀವಮಾನದಲ್ಲಿ ಏನನ್ನೂ ಪಡೆದವರಲ್ಲ.
ಗುಂಡುರಾವ್ ರವರಿಗೆ ಮನೆ ತುಂಬಾ ಮಕ್ಕಳು ಅವರನ್ನೆಲ್ಲಾ ತಮ್ಮ ಪತ್ರಿಕಾ ಕ್ಷೇತ್ರದ ದುಡಿಮೆಯಿಂದಲೇ ಸಾಕಬೇಕಾಗಿತ್ತು, ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ತಮ್ಮ ಪತ್ರಿಕಾ ಧರ್ಮವನ್ನು ಒಂದು ಕ್ಷಣವೂ ಬಲಿ ಕೊಟ್ಟವರಲ್ಲ, ಅವರು ಇರುವಷ್ಟು ಕಾಲ ಪತ್ರಿಕೆಯನ್ನು ಕಿಚಿತ್ತು ಚ್ಯುತಿ ಬಾರದಂತೆ ನಡೆಸಿದವರು.
ಇದೇ ಸಂಸ್ಕಾರ ಅವರ ಹಿರಿಯ ಮಗನಾದ ಹೆಚ್.ಜಿ.ವೆಂಕಟೇಶಮೂರ್ತಿಯವರಲ್ಲಿ ಅಚ್ಚು ತಪ್ಪದೆ ಮೈದಳೆದಿತ್ತು, ಗುಂಡುರಾವ್ ನಿಧನದ ನಂತರ ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಹೆಚ್.ಜಿ.ವೆಂಕಟೇಶಮೂರ್ತಿಯವರು ಎಂದೂ ಪತ್ರಿಕೆ ಹೆಸರಲ್ಲಿ ಅಡ್ಡ ದಾರಿ ಹಿಡಿದವರಲ್ಲ, ಇವರಿಗೆ ದೊಡ್ಡ ರಾಜಕಾರಣಿಗಳಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಲಕ್ಷ್ಮೀನರಸಿಂಹಯ್ಯ ಅವರಂತಹವರು ಆಪ್ತ ಗೆಳೆಯರಾಗಿದ್ದರೂ ಎಂದೂ ತಮ್ಮ ಪತ್ರಿಕೆ ಸಂಕಟ ಮತ್ತು ಅವರ ಬಡತನದ ಸಂಕಟವನ್ನು ಹೇಳಿಕೊಂಡವರಲ್ಲ.
ಹಗಲೆಲ್ಲಾ ಸುದ್ದಿ ಸಂಗ್ರಹಿಸಿ ಪತ್ರಿಕೆಗೆ ಸುದ್ದಿ ಬರವಣಿಗೆ, ಪುಟ ವಿನ್ಯಾಸ ಮಾಡಿಸಿ ರಾತ್ರಿ 10ರ ನಂತರ ಮನೆಗೆ ತೆರಳಿದರೆ, ಬೆಳಗಿನ ಜಾವ 4.30ಕ್ಕೆಲ್ಲಾ ಎದ್ದು ತುಮಕೂರಿನ ತುಂಬಾ ಒಂದು ಹಳೆ ಸೈಕಲ್ ನಲ್ಲಿ ಪತ್ರಿಕೆಯನ್ನು ಮನೆ ಮನೆಗೆ, ಕಛೇರಿಗಳಿಗೆ ಅವರೇ ವಿತರಿಸುತ್ತಿದ್ದರು.
ಮಳೆ ಇರಲಿ, ಚಳಿ ಇರಲಿ, ಬಿರುಗಾಳಿ ಇರಲಿ ಒಂದು ದಿನವೂ ತಪ್ಪದೆ ಮನೆಗಳಿಗೆ ತಪ್ಪದೆ ಪ್ರತಿ ದಿನವೂ ಪತ್ರಿಕೆಯನ್ನು ಹಾಕುತ್ತಿದ್ದರು. ಅವರು ಎಂದೂ ನಾನೊಬ್ಬ ಸಂಪಾದಕ ಎಂಬ ಬಿರುದನ್ನು ತಲೆ ಮೇಲೆ ಹೊತ್ತು ತಿರುಗಿದವರೇ ಅಲ್ಲ, ಯಾರಾದರೂ ನೀವು ಸಂಪಾದಕರಾಗಿ ಪತ್ರಿಕೆ ಹಾಕುತ್ತೀರಲ್ಲ ಎಂದರೆ ಅಯ್ಯೋ ಬಿಡಿ ಸ್ವಾಮಿ ಅದರಲ್ಲೇನಿದೆ, ನಮ್ಮ ಕೆಲಸವನ್ನು ನಾವು ಮಾಡಿದಾಗಲೇ ಅದಕ್ಕೊಂದು ತೃಪ್ತಿ ಅಂತ ನಗುತ್ತಿದ್ದರು.
ಬೆಳಿಗ್ಗೆ 10ಗಂಟೆಗೆ ಮನೆಯಿಂದ ಪತ್ರಿಕಾ ಸುದ್ದಿ ಸಂಗ್ರಹಕ್ಕೆ ಹೊರಟರೆ ಕಿರಿಯರು, ಹಿರಿಯರು ಎನ್ನದೆ ಎಲ್ಲರನ್ನೂ ತಮ್ಮ ಬೆನ್ನಿಗೆ ಅಂಟಿಸಿಕೊಂಡು ಸುದ್ದಿಯ ಬೆನ್ನು ಹತ್ತುತ್ತಿದ್ದರು, ಇವರು ಅದೆಷ್ಟು ಜನಕ್ಕೆ ಸುದ್ದಿ ಬರೆಯುವುದನ್ನು ಕಲಿಸಿದರೋ, ಕಷ್ಟ ಎಂದವರ ಬೆನ್ನಿಗೆ ನಿಂತು ಸಹಾಯ ಮಾಡಿಸಿದರೋ, ಪತ್ರಿಕಾ ಕ್ಷೇತ್ರದಲ್ಲಿ ಪ್ರಕಾಂಡ ಬುದ್ದಿವಂತ ವರದಿಗಾರರು ಸಂಕಷ್ಟಕ್ಕೆ ಸಿಲುಕಿದಾಗ ಅವರ ಕಷ್ಟ ನನ್ನದೇ ಎಂಬಂತೆ ಮರುಗುತ್ತಾ ಯಾರ ಯಾರನ್ನೋ ಕಂಡು ಪತ್ರಕರ್ತರ ಕಷ್ಟ ಕಾರ್ಪಣ್ಯಗಳಿಗೆ ತಮ್ಮ ಎದೆಯನ್ನು ಸವೆಸಿದವರು ಹೆಚ್.ಜಿ.ವೆಂಕಟೇಶಮೂರ್ತಿಯವರು.
ಇವರು ಪತ್ರಕರ್ತರು ಕಷ್ಟದಲ್ಲಿದ್ದಾರೆಂದು ದೈನೇಶಿಯಾಗಿ ನನ್ನ ಗೆಳೆಯರಿಗೆ ಸಹಾಯ ಮಾಡಿ ಎಂದು ಕೈ ಚಾಚಿ ನಿಂತಾಗ, ಸಹಾಯ ಮಾಡುವವರು ಏನ್ರೀ ನಿಮಗಾಗಿ ಎಂದೂ ಏನು ಕೇಳಲಿಲ್ಲ ಎಂದು ಹುಸಿ ಕೋಪದಿಂದ ಕೇಳಿದರೆ, ಬಿಡಿ ಸ್ವಾಮಿ ನನ್ನ ನಂಬಿರುವ ಪತ್ರಕರ್ತರ ಕಷ್ಟದ ಮುಂದೆ ನನ್ನ ಕಷ್ಟ ಯಾವುದು, ಮೊದಲು ಅವರ ಕಷ್ಟಕ್ಕೆ ಸಹಾಯ ಮಾಡಿ ಎಂದು ಕೈ ಚಾಚಿ ಸಹಾಯ ಕೇಳುತ್ತಿದ್ದರು.
ಅವರು ತುಮಕೂರಿನಲ್ಲಿ ವಿಜಯವಾಣಿ ಪತ್ರಿಕೆಯ ಸಂಪಾದಕರಾಗಿದ್ದ ಕಾಲದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಸಂಘವನ್ನು ಒಂದು ಹಂತೋಟಿಗೆ ತಂದು ಎಲ್ಲರೂ ಒಂದೇ ದೋಣಿಯಲ್ಲಿ ಸಾಗಬೇಕೆಂದು ತಮ್ಮ ಕೆಲಸದ ಮೂಲಕ ತೋರಿಸಿ ಕೊಟ್ಟವರು.
ತುಮಕೂರಿನಲ್ಲಿ ಮೊದಲಿಗೆ ಪತ್ರಕರ್ತರಿಗೆ ಕ್ರೀಡಾಕೂಟ ನಡೆಸಿದ ಕೀರ್ತಿಯೂ ಇವರಿಗೆ ಸಲ್ಲಬೇಕು, ಕ್ರೀಡಾಕೂಟಕ್ಕೆ ಸಂಗ್ರಹಿಸಿದ್ದ ಹಣವು ಉಳಿದಾಗ ಅದನ್ನು ಬ್ಯಾಂಕೊಂಡರಲ್ಲಿ ಡಿಪಾಸಿಟ್ ಇಟ್ಟು ಉಳಿತಾಯವಾಗುವಂತೆಯಾಗಲು ಇವರ ಪಾತ್ರ ದೊಡ್ಡದಿದೆ. ಈ ಕ್ರೀಡಾಕೂಟದ ಹಣವೂ ಇಂದಿಗೂ ಬ್ಯಾಂಕ್ ಒಂದರಲ್ಲಿ ಡಿಪಾಸಿಟ್ ಮಾಡಲಾಗಿದ್ದು, ಆ ಹಣವನ್ನು ಕೆಲವರು ನಮಗೆ ಕೊಡಿ ಅಂದರೆ, ಮತ್ತೆ ಕೆಲವರು ನಮಗೆ ಕೊಡಿ ಅಂತ ದಯಾದಿ ಕಲಹದಂತೆ ಕ್ರೀಡಾಕೂಟದ ಹಣಕ್ಕೆ ಆಗಾಗ ಸಣ್ಣ ಒಳ ಜಗಳ ನಡೆಯುತ್ತಲೇ ಇದೆ. ಅದು ಏನೇ ಆಗಲಿ ಬಿಡಿ.
ಪತ್ರಿಕಾ ರಂಗ ಆಧುನಿಕತೆ ಒಗ್ಗಿಕೊಂಡಂತೆ, ಪತ್ರಿಕೆಯ ಖರ್ಚು-ವೆಚ್ಚ ಹೆಚ್ಚಾದಂತೆ ಪತ್ರಿಕೆ ನಡೆಸುವುದು ಕಷ್ಟ ಎನಿಸಿದಾಗ ಹೆಚ್..ಜಿ.ವೆಂಕಟೇಶಮೂರ್ತಿಯವರು ವಿ.ಆರ್.ಎಲ್. ಸಂಸ್ಥೆಗೆ ಪತ್ರಿಕೆಯ ಟೈಟಲ್ ನ್ನು ಮಾರಾಟ ಮಾಡಿದರು. ಅದರಿಂದ ಬಂದ ಹಣವನ್ನು ತಮ್ಮ ಸಹೋದರಿಯರು, ಸಹೋದರರಿಗೆ ಸಮವಾಗಿ ಹಂಚಿದರೂ, ಇವರ ಮೇಲೆ ಹೆಚ್ಚು ಹಣ ಪಡೆದಿದ್ದಾರೆಂಬ ಆರೋಪವನ್ನು ಮಾಡಲಾಯಿತು, ಇದರಿಂದ ನೊಂದ ವೆಂಕಟೇಶಮೂರ್ತಿಯವರು ತುಮಕೂರನ್ನೇ ಬಿಟ್ಟು ಮೈಸೂರಿಗೆ ಹೋಗಿ ಸೇರಿಕೊಂಡರು.
ಇವರ ಪತ್ರಿಕೆಯಲ್ಲಿ ಪ್ರಕಟವಾದ ಸರ್ಕಾರಿ ಜಾಹೀರಾತು ಬಿಲ್ ಲಕ್ಷಾಂತರ ರೂಪಾಯಿಗಳು ಇವರು ಸಂಪಾದಕ ಸ್ಥಾನ ತ್ಯಜಿಸಿದರೂ ಯಾವ ಸರ್ಕಾರ ಬಂದರೂ ನೀಡಲಿಲ್ಲ, ಇವರೂ ಆ ಜಾಹೀರಾತು ಹಣಕ್ಕೆ ಬೆನ್ನು ಹತ್ತಿ ಹೋಗಲಿಲ್ಲ. ಇದು ನಮ್ಮ ಸರ್ಕಾರಗಳು ಪ್ರಾಮಾಣಿಕ ಪತ್ರಕರ್ತರಿಗೆ ಕೊಡುವ ಕೊಡುಗೆ.

ಇವರಿಗೆ ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ರಾಜ್ಯ ಸರ್ಕಾರ ನೀಡುವ Pension ನಿಂದಲೇ ಅವರ ಸಂಸಾರ, ಜೀವನ ನಡೆಯ ಬೇಕಿತ್ತು, ಇಂತಹ ಕಾಲದಲ್ಲೇ ಅವರ ಪತ್ನಿ ಕಾಯಿಲೆ ಬಿದ್ದು ವರ್ಷಾನುಗಟ್ಟಲೇ ಹಾಸಿಗೆ ಹಿಡಿದು ಕಳೆದ ಆರು ತಿಂಗಳ ಹಿಂದೆ ಮೃತಪಟ್ಟರು, ಇದನ್ನೇ ಮನಸ್ಸಿಗೆ ಹಚ್ಚಿಕೊಂಡರೋ ಏನೋ ಇತ್ತೀಚೆಗೆ ಖಿನ್ನತೆಗೆ ಒಳಗಾದವರಂತೆ ಕಾಣುತ್ತಿದ್ದ ಹೆಚ್.ಜಿ.ವೆಂಕಟೇಶಮೂರ್ತಿವರನ್ನು 2026ರ ಜುಲೈ.25ರಂದು ಮೈಸೂರಿನಲ್ಲಿ ಏರ್ಪಡಿಸಿದ್ದ ಔತಣಕೂಟದ ಸಮಾರಂಭಕ್ಕೆ ನಾನು ಮುಖ್ಯ ಅತಿಥಿಗಾಳಗಿ ಕರೆದಾಗ ಸಂತೋಷದಿಂದ ಮಗನೊಂದಿಗೆ ಬಂದು ಭಾಗವಹಿಸಿದ್ದರು.
ಒಂದು ತಿಂಗಳ ನಂತರ ಅವರಿಗೆ ಜ್ವರ ಎಂದು ಆಸ್ಪತ್ರೆಗೆ ಹೋದವರಿಗೆ ಡೆಂಗ್ಯೂ ಇರಬಹುದೆಂದು ದಾಖಲಾತಿಯಾಗಿ, ನಂತರ ಪ್ರಜ್ಞೆ ತಪ್ಪಿದ್ದರಿಂದ ಈಗ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯ ಐ.ಸಿ.ಯು.ನಲ್ಲಿ ಮಲಗಿದ್ದಾರೆ, ವೆಂಕಟೇಶಮೂರ್ತಿಯವರು ತಾವು ಆರೋಗ್ಯ ಚೆನ್ನಾಗಿರುವ ತನಕ ಒಂದಲ್ಲ ಒಂದು ಕೆಲಸ ಮಾಡುತ್ತಾ ಸ್ವಾಭಿಮಾನದಿಂದ ಬದುಕನ್ನು ನಡೆಸಿದರವರು.
ಇಂತಹ ಪತ್ರಿಕಾ ಭೀಷ್ಮ ಐ.ಯು.ಸಿ.ನಲ್ಲಿ ಮಲಗಿರುವುದನ್ನು ನನ್ನಂತಹವನಿಗೆ ಅಘಾತ ಮತ್ತು ನೋವನ್ನುಂಟು ಮಾಡಿದೆ, ತನ್ನ ಸಹದ್ಯೋಗಿ ಪತ್ರಕರ್ತರಿಗೆ ಕೈ ಚಾಚಿ ಕಾಪಾಡಿದ ಒಬ್ಬ ಪ್ರಾಮಾಣಿಕ ಪತ್ರಕರ್ತ ಇಳಿ ವಯಸ್ಸಿನಲ್ಲಿ ಐ.ಸಿ.ಯು.ನಲ್ಲಿ ಮಲೆಗಿರುವಾಗ, ಅವರ ಮಗ, ಭಾಮೈದರು ಮತ್ತು ಮೈಸೂರಿನ ಗೆಳೆಯರು ಆಸ್ಪತ್ರೆಯ ಖರ್ಚಿಗೆ ಪರದಾಡುತ್ತಿರುವುದನ್ನು ನೋಡಿದಾಗ ಕರುಳು ಕಿತ್ತು ಬರುವಂತಾಗುತ್ತದೆ, ಸದಾ ಒಳಿತನ್ನೇ ಬಯಸಿದ, ತಮ್ಮ ಶತೃಗಳಿಗೂ ಒಳಿತನ್ನೇ ಬಯಸಿದವರು. ಅವರಿಗೆ ಬೈಯ್ದರು ನಕ್ಕು ತಬ್ಬಿಕೊಳ್ಳುತ್ತಿದ್ದ ಹೆಚ್.ಜಿ.ವೆಂಕಟೇಶಮೂರ್ತಿಯವರಿಗೆ ಈಗ ನಿಜಕ್ಕೂ ಹಣದ ಸಹಾಯ ಬೇಕಾಗಿದೆ, ಅವರು ಚೆನ್ನಾಗಿದ್ದ ಕಾಲದಲ್ಲಿ ಯಾರನ್ನೂ ಏನನ್ನೂ ಕೇಳದೆ ಸ್ವಾಭಿಮಾನದಿಂದ ಬದುಕಿದ್ದ ಹಿರಿಯ ಪತ್ರಕರ್ತರಿಗೆ ಇಂತಹ ಸಂದರ್ಭದಲ್ಲಿ ಹನಿ ಹನಿಗೂಡಿದೆ ಹಳ್ಳ ಎನ್ನುವಂತಹ ಸಹಾಯ ಬೇಕಾಗಿದೆ.
ಅವರು ಐ.ಸಿ.ಯು.ಯಿಂದ ಚೆನ್ನಾಗಿ ಬಂದರೆ ಮತ್ತಷ್ಟು ದಿನ ಅವರ ಜೊತೆ ಮಾತನಾಡುವ, ಕಾಲ ಕಳೆಯುವ ಅಮೃತ ಕ್ಷಣಗಳು ಎಲ್ಲರದಾಗಿರುತ್ತವೆ. ಮಹಾಭಾರತದ ‘ಭೀಷ್ಮ ಶರಶಯ್ಯೆ’ ಮೇಲೆ ಮಲಗಿದ್ದರು, ಅದೇ ಪತ್ರಿಕಾ ಕ್ಷೇತ್ರದ ಭೀಷ್ಮ ಎಂದೇ ಕರೆಯಲ್ಪಡುವ ಹೆಚ್.ಜಿ.ವೆಂಕಟೇಶಮೂರ್ತಿಯವರು ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಮಲಗಿದ್ದಾರೆ, ನನ್ನಂತಹವನಿಗೆ ಪತ್ರಿಕಾ ಧರ್ಮ, ಪತ್ರಿಕಾ ಬರವಣಿಗೆ ಕಲಿಸಿದ ಪತ್ರಿಕಾ ಗುರುಗಳು ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.
-ವೆಂಕಟಾಚಲ.ಹೆಚ್.ವಿ.