ತುಮಕೂರು: ಚಾಮರಾಜಪೇಟೆಯ ಶಾಸಕರಾದ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ, ಅಲ್ಪಸಂಖ್ಯಾತರು ಹಾಗೂ ವಿವಿಧ ಸಮುದಾಯಗಳ ಜನರು ನಗರ ಟೌನ್ಹಾಲ್ ವೃತ್ತ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಅತೀಕ್ ಅಹಮದ್ ಅವರ ನೇತೃತ್ವದಲ್ಲಿ ನೂರಾರು ಅಲ್ಪಸಂಖ್ಯಾತ, ದಲಿತ,ಹಿಂದುಳಿದ ವರ್ಗಗಳ ಮುಖಂಡರು ಪ್ರತಿಭಟನೆ ನಡೆಸಿ,ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಎಲ್ಲಾ ವರ್ಗದ ಜನರ ಪ್ರೀತಿಗಳಿಸಿರುವ,ಸದಾ ಜನರ ಒಳಿತಿಗಾಗಿ ದುಡಿಯುತ್ತಿರುವ ಜಮೀರ್ ಅಹಮದ್ ಖಾನ್ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ನ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ,ಜಮೀರ್ ಅಹಮದ್ ಖಾನ್ ಅವರು ಕೇವಲ ಮುಸ್ಲಿಂರಿಗೆ ಅಲ್ಲ, ಎಲ್ಲಾ ಜನಾಂಗದ ಪ್ರೀತಿಗಳಿಸಿದ್ದಾರೆ.ಕಷ್ಟ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಯೇ ಇಲ್ಲ. ಪಕ್ಷ ಮತ್ತು ಸರಕಾರ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ,ಸರಕಾರಕ್ಕೆ, ಪಕ್ಷಕೆ ಒಳ್ಳೆಯ ಹೆಸರು ಬರುವಂತೆ ಮಾಡಿದ್ದಾರೆ. ಇಂತಹವರನ್ನು ನಕಲಿ ಆಡಿಯೋ ಒಂದರ ನೆಪದಲ್ಲಿ ಸಂಪುಟದಿAದ ಹೊರಗಿಟ್ಟಿರುವುದು ಸರಿಯಲ್ಲ ಎಂದರು.
ಈ ಹಿಂದೆ 2024ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ದಾವಣೆಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು, ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದರು.ಅದನ್ನು ಸ್ವತಃಹ ಮಾಧ್ಯಮಗಳ ಮುಂದೆ ಒಪ್ಪಿಕೊಂಡರು.ಆದರೆ ಅವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಹೈಕಮಾಂಡ್,ಉಪಚುನಾವಣೆ ಸಂದರ್ಭದ್ದು ಎನ್ನಲಾದ ಫೇಕ್ ಆಡಿಯೋ ಒಂದನ್ನು ಮುಂದಿಟ್ಟುಕೊAಡು ಜಮೀರ್ ಅಹಮದ್ಖಾನ್ ಅವರನ್ನು ಅಧಿಕಾರದಿಂದ ದೂರ ಇಡುವುದು ಕಾಂಗ್ರೆಸ್ನ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದು ಅತೀಕ್ ಅಹಮದ್ ನುಡಿದರು.
ದಾವಣಗೆರೆ ಉಪಚುನಾವಣೆಯ ಸಂದರ್ಭದಲ್ಲಿ ಜಮೀರ್ ಅಹಮದ್ಖಾನ್ ಅವರು, ಕೇರಳದ ಸ್ಟಾರ್ ಕ್ಯಾಂಪೈನರ್ ಆಗಿ ಕೆಲಸ ಮಾಡುತ್ತಿದ್ದರು.ಪಕ್ಷ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ.ಇಂತಹ ವ್ಯಕ್ತಿಯನ್ನು ಸಚಿವ ಸಂಪುಟದಿಂದ ದೂರ ಇಡುವ ಮೂಲಕ ತಾರತಮ್ಯ ನೀತಿಯನ್ನು ಕಾಂಗ್ರೆಸ್ ಪಕ್ಷ ಅನುಸರಿಸಿದೆ.ಕೂಡಲೇ ಮುಖ್ಯಮಂತ್ರಿಗಳು,ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,ಸೋನಿಯಾಗಾಂಧಿ, ರಾಹುಲ್ಗಾಂಧಿ, ಪ್ರಿಯಾಂಕ ಗಾಂಧಿ ಅವರುಗಳು ಈ ಅನ್ಯಾಯವನ್ನು ಸರಿಪಡಿಸಬೇಕು ಎಂದರು. ಈ ಹಿಂದೆ ಡಾ. ಜಿ. ಪರಮೇಶ್ವರ್ ರವರು ಕೆಪಿಸಿಸಿ ಅಧ್ಯಕ್ಷರಾಗಿದ್ದವೇಳೆ ಅವರನ್ನು ಸೋಲಿಸಲು ವ್ಯವಸ್ಥಿತವಾಗಿ ತಂತ್ರವನ್ನು ರೂಪಿಸಿ ತುಮಕೂರು ಜಿಲ್ಲೆಗೆ ಹಾಗೂ ದಲಿತ ಸಮುದಾಯಕ್ಕೆ ಅನ್ಯಾಯ ಎಸೆಗಲಾಯಿತು. ಸುಮಾರು ಎಂಟು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿ ಸರ್ಕಾರ ಬರಲು ಶ್ರಮಿಸಿದ ಪರಮೇಶ್ವರ ಅವರಿಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ನೀಡುವ ಅವಕಾಶವಿದ್ದರೂ ಕೊಡದೆ ಇರುವುದು ಸಹ ತಾರತಮ್ಯ ನೀತಿಯಾಗಿದ್ದು, ಮುಂದಿನ ದಿನಗಳಲ್ಲಿ ಡಾಕ್ಟರ್ ಜಿ ಪರಮೇಶ್ವರ್ ರವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದರ ಮೂಲಕ ಎಲ್ಲಾ ಅಸಮಾನತೆಗಳನ್ನು ಹೋಗಲಾಡಿಸಬೇಕೆಂದು ಅತೀಕ್ ಅಹಮದ್ ಆಗ್ರಹಿಸಿದರು.
ದಲಿತ ಮುಖಂಡರಾದ ಶಿವಾಜಿ ಮಾತನಾಡಿ,ಜಮೀರ್ ಅಹಮದ್ ಖಾನ್ ಕೇವಲ ಅಲ್ಪಸಂಖ್ಯಾತರ ನಾಯಕರಷ್ಟೇ ಅಲ್ಲ, ಎಲ್ಲಾ ವರ್ಗದ ನಾಯಕರು, ಸರ್ವರಿಗೂ ಸಮಪಾಲು, ಸರ್ವರಿಗು ಸಮಬಾಳು ಎಂಬ ನೀತಿಗಳ ಅಡಿಯಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವಂತಹ ವ್ಯಕ್ತಿ. ಮುಸ್ಲಿಂರನ್ನು ಅಧಿಕಾರದಿಂದ ದೂರು ಇಡುವುದು ಕಾಂಗ್ರೆಸ್ ಪಕ್ಷದ ಸಂಪ್ರದಾಯಕ ಮತದಾರರನ್ನು ದೂರ ಇಟ್ಟಂತೆ ಆಗುತ್ತದೆ.ಇದು ಶೋಷಿತರ ನಡುವೆ ದೊಡ್ಡ ಕಂದಕ ಉಂಟು ಮಾಡಲಿದೆ. ಹಾಗಾಗಿ ಪಕ್ಷ ಎಚ್ಚೆತ್ತು ಜಮೀರ್ ಅಹಮದ್ ಖಾನ್ ಅವರನ್ನು ಮಂತ್ರಿ ಮಾಡಬೇಕೆಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ನದೀಂಪಾಷ(ಚಿಚ್ಚ), ನದಾಫ್ ಪಿಂಜಾರಾ ಸಂಘದ ಅಧ್ಯಕ್ಷ ಬಷೀರ್ ಅಹಮದ್,ಮುಜೀಬ್ ಅಹಮದ್, ಸೆಮಿವುಲ್ಲಾ, ಬಷೀರ್, ಪ್ರದೀಪಕುಮಾರ್, ಶಿವಾಜಿ, ಬಂಡೆಕುಮಾರ್, ಗುರುಪ್ರಸಾದ್, ನಯನ, ಗಂಗಮ್ಮ, ನಶಿಭಾ ಖಾನಂ, ಫಾತಿಮ, ದಸ್ತಗೀರ್, ಮೆಹಬೂಬ್ ಖಾನ್, ಇರ್ಷಾದ್ ಅಹಮದ್, ಚಾಂದ್ ಪಾಷ, ಷಾಹಬಾಜ್, ಆಲಿ, ಕಲಿಂ ಪಾಷ, ತೌಶಿಫ್ ಮತ್ತಿತರರು ಭಾಗವಹಿಸಿದ್ದರು.