ಸಾಹಿತಿಗಳ ಗುಂಪುಗಾರಿಕೆ ಪುಸ್ತಕ ಪ್ರಕಾಶನದಲ್ಲೂ ಮುಂದುವರೆದಿದೆ-ಪತ್ರಕರ್ತ ರಘುನಾಥ.ಚ.ಹ.

ತುಮಕೂರು:ಪುಸ್ತಕ ಪ್ರಕಾಶನ ಉದ್ಯಮವಾಗಿ ಕೋಟ್ಯಾಂತರ ರೂ. ವ್ಯವಹಾರ ನಡೆಸುತಿದ್ದು,ಸಾಹಿತಿಗಳ ಗುಂಪು ಗಾರಿಕೆ,ಪುಸ್ತಕ ಪ್ರಕಾಶನದಲ್ಲಿಯೂ ಮುಂದುವರೆದಿದ್ದು, ಇದಕ್ಕೆ ಇತ್ತೀಚೆಗೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳವೇ ಸಾಕ್ಷಿ ಎಂದು ಕಥೆಗಾರ, ಪತ್ರಕರ್ತ ರಘುನಾಥ ಚ.ಹ. ವಿಷಾದ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಶಾಖೆ ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ದವನ ಭೂಮಿಕೆ ಸಾಂಸ್ಕøತಿಕ ಟ್ರಸ್ಟ್, ಜಿಲ್ಲಾ ಲೇಖಕಿಯರ ಸಂಘ, ಪ್ರಕೃತಿ ಜನಸೇವ ಟ್ರಸ್ಟ್ ಇವರ ಸಹಯೋಗದಲ್ಲಿ ಡಾ.ಓ.ನಾಗರಾಜು ಅವರ “ಹಿಂದೂಪುರ” ಕಾದಂಬರಿಯ ಲೋಕಾರ್ಪಣೆ ಮಾಡಿ ಮಾತನಾಡುತಿದ್ದ ಅವರು, ವೀರಲೋಕ ಎನ್ನುವ ಪ್ರಕಾಶನ ಸಂಸ್ಥೆಯೊಂದು ಒಂದು ವರ್ಷದಲ್ಲಿ ಸುಮಾರು 1.04 ಕೋಟಿ ರೂ.ಗಳ ವಹಿವಾಟು ನಡೆಸಿದೆ.ಆದರೆ ಅವರು ಪ್ರಕಟಿಸಿದ ಒಂದೇ ಒಂದು ಕೃತಿ ಕೂಡ ಸಾರ್ವಜನಿಕವಾಗಿ ಚರ್ಚೆಯಾಗಿಲ್ಲ. ಆದರೆ ದಲಿತ, ಬಂಡಾಯ ಬರಹಗಾರರು ಬರೆದ ಅನೇಕ ಕೃತಿಗಳು ಚರ್ಚೆಯಾಗಿವೆ.ಚರ್ಚೆಯ ವಸ್ತು ಲೇಖಕನೇ ಆಗಿರುವುದು ವಿಪರ್ಯಾಸ ಎಂದರು.

ಸಾಹಿತ್ಯವೂ ಒಂದು ಪ್ರದರ್ಶನ ಕಲೆಯಾಗಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ.ಪುಸಕ್ತವನ್ನು ಪ್ರಸಾದ ಎನ್ನುಕೊಳ್ಳುವ ಗುಂಪು ಒಂದಾದರೆ, ಪುಸ್ತಕವನ್ನು ಪದಾರ್ಥ ಎನ್ನುವ ಗುಂಪು ಮತ್ತೊಂದು ಇದೆ. ಈ ಎರಡು ಗುಂಪನ್ನು ಮೀರಿದ ಕೃತಿ ಹಿಂದೂಪುರ. ಇದು ಸ್ತ್ರೀ ಕಥನವಾಗಿದೆ.ಬಹುತ್ವದ ನೆಲೆಗಟ್ಟಿನಲ್ಲಿ ರಚಿತವಾದ ನೈತಿಕತೆ ಮತ್ತು ಅನೈತಿಕತೆಯ ನಡುವಿನ ಮುಖಾಮುಖಿಯಾಗಿದೆ. ಈ ಕೃತಿಯಲ್ಲಿ ಹಲವು ಸಂಗತಿಗಳು ದಲಿತರು, ಹಿಂದುಳಿದವರು ನೈತಿಕತೆಯ ವಾರಸುದಾರರು ಎಂಬುದನ್ನು ಸಾರಿ ಹೇಳಿವೆ.ಬೌದ್ದಿಕ ತಾತ್ವಿಕತೆ ಮತ್ತು ಶಿಕ್ಷಣದ ಬೆಳಕು ಎರಡನ್ನು ಕೃತಿಯಲ್ಲಿ ತರಲಾಗಿದೆ. ಈ ಕೃತಿಗೆ ನ್ಯಾಯವಾದ ವಿಮರ್ಶೆ ಸಿಗಬೇಕು. ಹಾಗೆಯೇ ನಮ್ಮ ನಡುವೆ ಚರ್ಚೆಯ ವಸ್ತುವಾಗಿಸುವ ಕೆಲಸ ಆಗಬೇಕು ಎಂದು ರಘುನಾಥ ಚ.ಹ. ಸಲಹೆ ನೀಡಿದರು.

ಕೃತಿಯ ಕುರಿತು ಮಾತನಾಡಿದ ಡಾ.ಲಕ್ಷ್ಮಿನಾರಾಯಣಸ್ವಾಮಿ,ಕನ್ನಡ ಸಾಹಿತ್ಯದಲ್ಲಿರುವ ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯಗಳಲ್ಲಿನ ದಲಿತತ್ವದ ಪ್ರತಿನಿಧಿಕರಣ ಕೃತಿ ಇದಾಗಿದೆ.ಗಾಂಧಿಯ ಗ್ರಾಮ ಭಾರತದ ಎಲ್ಲಾ ಪಾತ್ರಗಳು ಡಾ.ಓ.ನಾಗ ರಾಜು ಅವರ ಹಿಂದೂಪುರ ಕೃತಿಯಲ್ಲಿ ಸಾಕಾರಗೊಂಡಿದೆ.ಈ ಕೃತಿಗೆ ಚಾರಿತ್ರಿಕ ಮಹತ್ವ ಮತ್ತು ಸಮಕಾಲಿನ ಸ್ಪಂದನೆ ಎರಡು ದೊರೆಯಬೇಕಿದೆ.ಡಾ.ಓ.ನಾಗರಾಜು ಅವರ ಕುರಂಗರಾಯ ಕೃತಿ ಒಳಮೀಸಲಾತಿಯ ಮೊದಲ ಪ್ರಶ್ನೆಯನ್ನು ಎತ್ತಿದ್ದು,ಅದು ಇಂದು ಸಾಕಾರಗೊಂಡಿದೆ.ಇದರ ನಂತರವೂ ಎಡ-ಬಲ ಸಮುದಾಯಗಳು ಒಗ್ಗೂಡಬೇಕು ಎಂಬ ಆಶಯವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.ಮೂರು ತಲೆಮಾರುಗಳ ಕಥನದಲ್ಲಿ ಹಲವಾರು ಸಾಮಾಜಿಕ ಮಾರ್ಪಡುಗಳನ್ನು ಕಾಣಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ,ಕನ್ನಡ ಸಾಹಿತ್ಯದಲ್ಲಿ ಬಂಡಾಯ, ದಲಿತ, ಪ್ರಗತಿಪರ ಸಾಹಿತಿಗಳ ಕೃತಿಗಳನ್ನು ವಿಮರ್ಶಕರು ನೋಡುವ ದೃಷ್ಟಿಕೋನ ಬದಲಾಗಿದೆ.ಹಾಗಾಗಿಯೇ ಅನೇಕ ಕೃತಿಗಳು ಜನರ ನಡುವೆ ಚರ್ಚೆಗೆ ಬಾರದಂತಾಗಿವೆ.ಇದರಿಂದ ಲೇಖಕರರು ಅಧೀರರಾಗುವ ಅವಶ್ಯಕತೆಯಿಲ್ಲ. ಸಿದ್ದಮಾದರಿಯ ಸಾಹಿತ್ಯ ಮತ್ತು ವಿಮರ್ಶೆಯ ನೋಟವನ್ನು ಹತ್ತಿಕ್ಕುವ ಹಿನ್ನಲೆಯಲ್ಲಿ ಬರವಣಿಗೆ ಮುಂದುವರೆಯಬೇಕು. ಕೆಲವೊಂದು ಸಂದರ್ಭದಲ್ಲಿ ವಿಮರ್ಶೆ ಕೂಡ ಜಾತಿ, ವರ್ಗ, ಪಂಥ, ಜೀವನ ಕ್ರಮ, ಸಾಹಿತ್ಯ ಕೃತಿಯ ಕುರಿತ ವಿಮರ್ಶಕನ ಪರಿಕಲ್ಪನೆ ಇವೆಲ್ಲವನ್ನು ಅವಲಂಭಿಸಿರುತ್ತದೆ. ಒಂದು ರೀತಿಯಲ್ಲಿ ಪೂರ್ವಗ್ರಹದ ಪಾಪದ ಕೂಸುಗಳಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್.ನಾಗಣ್ಣ, ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್, ಕುಂದೂರು ತಿಮ್ಮಯ್ಯ, ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ,ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು,ವಿರೂಪಾಕ್ಷ ಡ್ಯಾಗೇರಹಳ್ಳಿ, ಬಸವರಾಜಪ್ಪ ಅಪ್ಪಿನಕಟ್ಟೆ,ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ತಿಪ್ಪೇಸ್ವಾಮಿ, ಹಿಂದೂಪುರ ಕಾದಂಬರಿಯ ಲೇಖಕರಾದ ಡಾ.ಓ.ನಾಗರಾಜು,ಉಪನ್ಯಾಸಕರಾದ ರೇಣುಕಪ್ರಸಾದ್,ಮಂಜುಳ ಓ.ನಾಗರಾಜು ಮತ್ತಿತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *