ಉದ್ಯಮದ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ- ಡಾ.ಜಿ.ಪರಮೇಶ್ವರ ಕರೆ

ತುಮಕೂರು: ಬದಲಾಗುತ್ತಿರುವ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI), ಕುರಿತು ನಿರಂತರವಾಗಿ ಕಲಿಯಬೇಕು. ಜೊತೆಗೆ ಉದ್ಯಮದ ಅಗತ್ಯಗಳಿಗೆ ತಕ್ಕಂತೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಕರೆ ನೀಡಿದರು.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕ್ಯಾತಸಂದ್ರ ಟೋಲ್ ಗೇಟ್ ಬಳಿ ಇರುವ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರದಂದು ಹೊಸ ಬ್ಯಾಚ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡಲು ಕಂಪನಿಗಳು ವಿದ್ಯಾರ್ಥಿಗಳಿಗೆ ಜ್ಞಾನ, ತರಬೇತಿ ಮತ್ತು ಅವಕಾಶಗಳನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟ ಅವರು ಉನ್ನತ ಶಿಕ್ಷಣದಲ್ಲಿ ಅಭೂತಪೂರ್ವ ಸವಾಲುಗಳು ಮತ್ತು ಅವಕಾಶಗಳಿವೆ. ಅಧ್ಯಾಪಕರು ಪಠ್ಯಪುಸ್ತಕಗಳ ಜೊತೆಗೆ ಸಂಶೋಧನಾ ಪತ್ರಿಕೆಗಳು ಮತ್ತು ಹೊಸ ತಂತ್ರಜ್ಞಾನಗಳ ಮೂಲಕ ತಮ್ಮ ಜ್ಞಾನವನ್ನು ನಿರಂತರವಾಗಿ ಉನ್ನತೀಕರಿಸಿಕೊಂಡು ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಪಡಿಸಬೇಕು ಎಂದು ಡಾ.ಜಿ.ಪರಮೇಶ್ವರ ಕರೆ ನೀಡಿದರು.

ಯಾವುದೇ ಒಂದು ದೇಶ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತಿದೆ. ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ರಾಜ್ಯದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳ ಮಟ್ಟಕ್ಕೆ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿರುವುದಾಗಿ ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಜಿಸಿಸಿ ಕೈಂಡ್ರಿಲ್ ಉದ್ಯಮದ ಉಪಾಧ್ಯಕ್ಷರು ಪ್ರಶೋಭ್ ಚಂದ್ರಕಾಂತ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ತಾಂತ್ರಿಕ ಜ್ಞಾನಕ್ಕೆ ಸಮಾನವಾಗಿ ಉತ್ತಮ ಕಥೆ ನಿರೂಪಣೆ, ಕುತೂಹಲ ಸಂಗತಿಗಳ ವ್ಯಾಖ್ಯಾನ, ಸಂದೀಗ್ಧ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುವ ಗುಣ, ಸಹಾನುಭೂತಿ ಮತ್ತು ಧೈರ್ಯದಂತಹ ಗುಣಗಳನ್ನು ಸಂವನಕ್ಕಾಗಿ ಬೆಳಿಸಿಕೊಳ್ಳಿ ಎಂದು ಕರೆ ನೀಡಿದರು.

ಕೃತಕ ಬುದ್ದಿಮತ್ತೆ ಬೆಳವಣಿಗೆಯಿಂದ ಉದ್ಯೋಗಗಳ ಸ್ವರೂಪ ಬದಲಾಗಬಹುದು, ಆದರೆ ಕೆಲಸದ ಅವಕಾಶಗಳು ಸಂಪೂರ್ಣವಾಗಿ ಕಣ್ಮರೆಯಾಗುವುದಿಲ್ಲ ಎಂದ ಅವರು ವಿದ್ಯಾರ್ಥಿಗಳು ಕೇವಲ ಉತ್ತಮ ಅಂಕಗಳು ಮತ್ತು ಉದ್ಯೋಗಗಳತ್ತ ಗಮನಹರಿಸದೆ, ಸಮಾಜದಲ್ಲಿ ತಮ್ಮದೇ ಆದ ಪ್ರಭಾವ ಮತ್ತು ಗುರುತನ್ನು ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಐಬಿಎಂನ ಮಾಜಿ ಉಪಾಧ್ಯಕ್ಷ ಸತ್ಯೇನ್ ಪಾರಿಖ್ ಅವರು ಮಾತನಾಡಿ, ವಿದ್ಯಾರ್ಥಿಗಳು ಪದವಿಯ ಜೊತೆಗೆ ತಾಂತ್ರಿಕ ಜ್ಞಾನ, ಸಂವಹನ ಕೌಶಲ್ಯ, ತಂಡದ ಕೆಲಸ ಮತ್ತು ಸಮಸ್ಯೆ ಪರಿಹರಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ವೇಗವಾಗಿ ಬದಲಾಗುತ್ತಿರುವ ಎಐ, ರೊಬೋಟಿಕ್ಸ್ ಮತ್ತು ಯಾಂತ್ರೀಕೃತಗೊಂಡ ತಂತ್ರಜ್ಞಾನಗಳೊಂದಿಗೆ ಹೊಂದಿಕೊಳ್ಳಲು ನಿರಂತರ ಕಲಿಕೆ ಅಗತ್ಯ ಎಂದರು.

ಅಂಕಗಳಿಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳು ಹೊಸ ವಿಚಾರಗಳನ್ನು ಅನ್ವೇಷಿಸಿ, ತಮ್ಮ ಜ್ಞಾನವನ್ನು ನೈಜ ಜಗತ್ತಿನಲ್ಲಿ ಅನ್ವಯಿಸಬೇಕು ಎಂದು ಕರೆ ನೀಡಿದ ಅವರು ತಂತ್ರಜ್ಞಾನವನ್ನು ವಿವೇಚನೆಯಿಂದ ಬಳಸಿಕೊಂಡು, ಸವಾಲುಗಳನ್ನು ಎದುರಿಸಿ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ ಕೆ.ಬಿ. ಲಿಂಗೇಗೌಡ, ಕುಲಸಚಿವರಾದ ಡಾ. ಅಶೋಕ್ ಮೆಹ್ತಾ, ಕುಲಾಧಿಪತಿಗಳ ಸಲಹೆಗಾರಾರದ ಡಾ.ವಿವೇಕ್ ವೀರಯ್ಯ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಸುನಿಲ್ ಕೆ., ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್.ಸಂಜೀವ್ ಕುಮಾರ್, ಎಸ್‍ಎಸ್‍ಐಟಿ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ. ನಡಕಟ್ಟಿ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ, ಜಿಲ್ಲಾಧಿಕಾರಿಗಳಾದ ಶುಭಕಲ್ಯಾಣ್, ಎಸ್ಪಿ ಅಶೋಕ್, ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನ್ ಡಾ. ಮಂಜುನಾಥ್‍ಗೌಡ ಎಂ.ಆರ್. ಪ್ರವೇಶಾತಿ ಉಸ್ತುವಾರಿಯ ಪೆÇ್ರ. ರಾಜೇಶ್ ಎಚ್.ಎಂ. ಹಾಗೂ ಸಂಯೋಜಕರಾದ ಡಾ. ಅಂಜನ್ ಕುಮಾರ್ ಸೇರಿದಂತೆ ವಿಭಾಗ ಮುಖ್ಯಸ್ಥರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *