ಶಾಸಕರಿಂದ ಶಿರಾಗೇಟ್ 3ನೇ ವಾರ್ಡಿನ ರೂ.22 ಕೊಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ತುಮಕೂರು: ನಗರದ ಶಿರಾಗೇಟ್‍ನ 3ನೇ ವಾರ್ಡಿನ ಹಲವು ಬಡಾವಣೆಗಳಲ್ಲಿ ವಿವಿಧ ಯೋಜನೆಗಳಡಿಯಲ್ಲಿ ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ರೂ.22 ಕೋಟಿಗಳಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಎಲ್ಲವೂ ಪ್ರಗತಿಯಲ್ಲಿವೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಅವರಿಂದು ಸಂಬಂಧಿಸಿದ ಅಧಿಕಾರಿಗಳೊಂದಿಗೆ 3ನೇ ವಾರ್ಡಿನಲ್ಲಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ ಶಾಸಕರು, ರಿಂಗ್ ರಸ್ತೆಗೆ ಸಂಪರ್ಕ ಒದಗಿಸುವ ಶಿರಾಗೇಟ್ 80 ಅಡಿ ರಸ್ತೆಯಲ್ಲಿ ಸುಮಾರು 14 ಕೋಟಿರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಪುಟ್‍ಬಾತ್, ಸರ್ವೀಸ್ ರಸ್ತೆ ಡಾಂಬರೀಕರಣ, ಚರಂಡಿ ಯುಟಿಲಿಟಿ ಡಕ್ಟ್ ಹಾಗೂ ಕವರಿಂಗ್ ಸ್ಲಾಬ್, ರೋಡ್ ಕ್ರಾಸ್ ಡಕ್ಟ್, ಪುಟ್‍ಬಾತ್, ಕಲ್ವರ್ಟ್ ನಿರ್ಮಾಣ ಕಾಮಗಾರಿ, 1.60 ಕೋಟಿ ರೂ.ಗಳಲ್ಲಿ ಐ.ಡಿ.ಎಸ್.ಎಂ.ಟಿ ಲೇಔಟ್‍ನ ಹೆಚ್.ಎಂ.ಎಸ್ ಸ್ಕೂಲ್ ಹಿಂಭಾಗದಲ್ಲಿ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ, ತುಂಗಭದ್ರ ಬ್ಲಾಕ್ ಮತ್ತು ಅರಳೀಮರದ ಪಾಳ್ಯದ ಮುಖ್ಯರಸ್ತೆಯಲ್ಲಿ ಯುಟಿಲಿಟಿ ಡಕ್ಟ್ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಸಕಾಲದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದರು.

ಅಲ್ಲದೆ, ಎಂ.ಜಿ.ಎನ್.ವಿ.ವೈ. ಯೋಜನೆಯಲ್ಲಿ 2.50 ಕೋಟಿರೂ. ಅಂದಾಜು ವೆಚ್ಚದಲ್ಲಿ 3ನೇ ವಾರ್ಡಿನ ಚಿಕ್ಕವೀರಯ್ಯನಪಾಳ್ಯದ ಮುಖ್ಯರಸ್ತೆಯಿಂದ ಅರಳೀಮರದಪಾಳ್ಯ ಮುಖ್ಯರಸ್ತೆವರೆಗೆ ಎಸ್.ಸಿ.ಎಸ್.ಪಿ ಯೋಜನೆಯಡಿ ರಸ್ತೆ ಡಾಂಬರೀಕರಣ, ಚರಂಡಿ ಯುಟಿಲಿಟಿ ಡಕ್ಟ್ ಹಾಗೂ ಕವರಿಂಗ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿ 3.50 ಕೋಟಿರೂ. ವೆಚ್ಚದಲ್ಲಿ ಅರಳೀಮರದಪಾಳ್ಯದ ಅಡ್ಡರಸ್ತೆಗಳು ಮತ್ತು ನಂಜಪ್ಪ ಬಡಾವಣೆಯ ಅಡ್ಡರಸ್ತೆಗಳಲ್ಲಿ ಮತ್ತು ತುಂಗಭದ್ರಾ ಬ್ಲಾಕ್ ರಸ್ತೆ ಡಾಂಬರೀಕರಣ, ಚರಂಡಿ ಯುಟಿಲಿಟಿ ಡಕ್ಟ್ ಹಾಗೂ ಕವರಿಂಗ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದರು.

ಅಮೃತ್ ಯೋಜನೆಯಡಿ ಐ.ಡಿ.ಎಸ್.ಎಂ.ಟಿ ಬಡಾವಣೆಯ ಮಳೆ ನೀರು ಕೊಯ್ಲು ಪಾರ್ಕ್ ಅಭಿವೃದ್ಧಿ ಕಾಮಗಾರಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿರಾಗೇಟ್‍ನ ಚಂದನ ಪಾರ್ಕ್ ಅಭಿವೃದ್ಧಿ ಕಾಮಗಾರಿ, ಅರಳೀಮರದಪಾಳ್ಯದ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ನಾಗರೀಕರ ಕುಂದು ಕೊರತೆ ಆಲಿಸಿ, ಅಹವಾಲು ಸ್ವೀಕರಿಸಿದರು. ಸಮಸ್ಯೆಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ಥಳದಲ್ಲಿದ್ದ ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಎನ್.ಮಹೇಶ್, ಇಂದ್ರಕುಮಾರ್, ಮುಖಂಡರಾದ ಶೇಷಾಚಲಂ, ಪುಟ್ಟರಾಜು, ಭೀಮರಾಜು, ಲಿಂಗಣ್ಣ, ಭಾನು, ದಿನೇಶ್, ರಮೇಶ್ (ಪ್ರಾಂಶುಪಾಲರು), ಡಾ. ರಮೇಶ್, ನೀಲಕಂಠ, ವಿಶ್ವಣ್ಣ, ಪುನೀತ್, ರಮಾದೇವಿ, ಸುಜಾತ, ನೀತು, ದೀಪು, ದೇವರಾಜು, ಯತೀಶ್, ಸಿದ್ದರಾಮಣ್ಣ, ಬೊಮಣ್ಣ, ಉಮೇಶ್, ವೆಂಕಟೇಶ್, ರಘುನಾಥ್, ಮಹೇಂದ್ರಕುಮಾರ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *