ತುಮಕೂರು : ಪ್ರಸಕ್ತ ಸಾಲಿನಲ್ಲಿ 11 ದಿನಗಳ ತುಮಕೂರು ದಸರಾ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಹಲವು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ತುಮಕೂರು ದಸರಾ-2025ರ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ 9 ದಿನಗಳ ಕಾಲ ನಡೆದಿದ್ದ ತುಮಕೂರು ದಸರಾ ಈ ಬಾರಿ ಪಂಚಾಂಗದ ಪ್ರಕಾರ 11 ದಿನಗಳ ಕಾಲ ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದು ಈ ಬಾರಿಯ ತುಮಕೂರು ದಸರಾ ಕಳೆದ ಬಾರಿಗಿಂತಲೂ ಹಲವು ವಿಶೇಷತೆಗಳಿಂದ ಕೂಡಿರಲಿದೆ ಎಂದು ಅವರು ತಿಳಿಸಿದರು.
ದಸರಾ ಆಚರಣೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಡಳಿತ ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಿದೆ ಎಂದ ಅವರು, ಸೆ.8ರಂದು ತುಮಕೂರು ದಸರಾ-2025ರ ಲಾಂಛನ ಬಿಡುಗಡೆ ಮಾಡಲಾಗುವುದು ಹಾಗೂ ಸೆ.22 ರಿಂದ ಅಕ್ಟೋಬರ್ 2 ರವರೆಗೆ ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಹಾಗೂ ದಸರಾ ಮಹೋತ್ಸವ ನಡೆಲಿದೆ ಎಂದರು.
ಕಳೆದ ಬಾರಿಯಂತೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನವರಾತ್ರಿಯ ಪೂಜಾ ಕೈಂಕರ್ಯಗಳು ನಡೆಯಲಿದ್ದು, ನವದುರ್ಗೆಯರಿಗೆ ದಿನವೂ ವಿಶೇಷ ಅಲಂಕಾರ, ಪೂಜಾ ವಿಧಿವಿಧಾನ, ಹೋಮ, ಹವನಗಳು ನಡೆಯಲಿವೆ ಹಾಗೂ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸೆಪ್ಟೆಂಬರ್ 22ರಂದು ಮೊದಲ ದಿನವೇ ಗಾಜಿನ ಮನೆಯಲ್ಲಿ ಫಲಪುಷ್ಟ ಪ್ರದರ್ಶನ, ನಗರಾದ್ಯಂತ ವಿಶೇಷ ವಿದ್ಯುತ್ ದೀಪಾಲಂಕಾರ ಉದ್ಘಾಟನೆ ಹಾಗೂ ದಸರಾ ವಿಶೇಷವಾಗಿ ಸಾರ್ವಜನಿಕರ ನಗರ ವೀಕ್ಷಣೆಗಾಗಿ ಉಚಿತ ಅಂಬಾರಿ ವಿಶೇಷ ಬಸ್ಗೆ ಚಾಲನೆ ನೀಡಲಾಗುವುದು ಎಂದರು.
ಇದಲ್ಲದೆ ಮಹಿಳಾ ಮತ್ತು ಮಕ್ಕಳ ದಸರಾ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತುಪ್ರದರ್ಶನ, ಯುವ ದಸರಾ, ಕವಿಗೋಷ್ಠಿ, ವಿಶೇಷಕಾರ್ ಷೋ, ವಿಂಟೇಜ್ ಬೈಕ್ ಷೋ ಇತ್ಯಾದಿ ಕಾರ್ಯಕಮಗಳು ದಿನವೂ ಸಾರ್ವಜನಿಕರ ವೀಕ್ಷಣೆಗೆ ಹಾಗೂ ಮನರಂಜನೆಗಾಗಿ ಏರ್ಪಡಿಸಲಾಗುತ್ತಿದೆ.
ಪಂಜಿನ ಕವಾಯತು ಹಾಗೂ ದ್ರೋಣ್ ಪ್ರದರ್ಶನವನ್ನು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಿಶೇಷವಾಗಿ ಏರ್ಪಡಿಸಲಾಗುತ್ತಿದ್ದು, ಚೆನ್ನೈನಿಂದ ಆಗಮಿಸಿರುವ ಪರಿಣಿತರು ನಮ್ಮ ಪೆÇಲೀಸ್ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಅಲ್ಲದೆ ಕೊನೆಯ ಮೂರು ದಿನಗಳು ಈ ಬಾರಿ ವಿಶೇಷ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಇದಕ್ಕಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು, ನಟರನ್ನು ಸಂಪರ್ಕಿಸಲಾಗಿದೆ ಎಂದರು.
ಕೊನೆಯ ದಿನವಾದ ಅ.2ರಂದು ಜಂಭೂ ಸವಾರಿ ಮೆರವಣಿಗೆ ಕೂಡ ಮೈಸೂರು ದಸರಾ ಮಾದರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ನಾಡಿನ ಹೆಸರಾಂತ ಜಾನಪದ ಕಲಾ ತಂಡಗಳು, ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಪ್ರಭುಜಿ. ಜಿಲ್ಲಾ ಪೆÇಲೀಸ್ ಅಧೀಕ್ಷಕ ಅಶೋಕ್ ಕೆ.ವಿ., ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಆಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.