ಸರಳ ಸಜ್ಜನಿಕೆಯ ಮಹಾತಾಯಿ ಚನ್ನಮ್ಮ: ಸುರೇಶ್‍ಗೌಡ

ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಅವರು ಎಲ್ಲರನ್ನೂ ಆಧರಿಸುವ ಸರಳ ಸಜ್ಜನಿಕೆಯ ಮಹಾತಾಯಿ. ದೇವೇಗೌಡರು ಹಾಗೂ ಚೆನ್ನಮ್ಮನವರ ದಾಂಪತ್ಯ ಆದರ್ಶವಾದದ್ದು, ಈಗಿನ ಹೆಣ್ಣುಮಕ್ಕಳು ಚನ್ನಮ್ಮನವರಂತೆ ಬಾಳಿದರೆ ಸಂಸಾರ ಯಶಸ್ವಿಯಾಗುತ್ತದೆ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್‍ಗೌಡರು ಹೇಳಿದರು.

ಚನ್ನಮ್ಮ ಅವರ ನಿಧನ ಹಿನ್ನೆಲೆಯಲ್ಲಿ ಕುಣಿಗಲ್ ತಾಲ್ಲೂಕಿನ ಅಂಚೆಪಾಳ್ಯದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸುರೇಶ್‍ಗೌಡರು, ತಮ್ಮ ಪತಿ ಪ್ರಧಾನ ಮಂತ್ರಿ, ಮಕ್ಕಳು ಮಂತ್ರಿ, ಮುಖ್ಯಮಂತ್ರಿಯಾದರೂ ಚನ್ನಮ್ಮ ಅವರು ಯಾವತ್ತೂ ರಾಜಕೀಯಕ್ಕೆ ಬಂದವರಲ್ಲ. ಆದರೆ ಮನೆಗೆ ಬರುವ ರಾಜಕೀಯ ವಿರೋಧಿಗಳನ್ನು ಪ್ರೀತಿಯಿಂದ ಆಧರಿಸಿ, ಆತಿಥ್ಯ ನೀಡುವ ದೊಡ್ಡ ಗುಣ ಹೊಂದಿದ್ದರು. ಎಲ್ಲಾ ಪಕ್ಷಗಳ ನಾಯಕರೂ ಆಗಮಿಸಿ ಚನ್ನಮ್ಮನರಿಗೆ ಅಂತಿಮ ನಮನ ಸಲ್ಲಿಸಿದರು. ಈ ಗುಣವೇ ಅವರ ಕುಟುಂಬದ ಘನತೆಯನ್ನು ಎತ್ತಿಹಿಡಿದಿದೆ ಎಂದು ಗುಣಗಾನ ಮಾಡಿದರು.

ದೇವೇಗೌಡರ ಯಶಸ್ಸಿನ ಹಿಂದೆ ದೊಡ್ಡ ಶಕ್ತಿಯಾಗಿದ್ದ ಚನ್ನಮ್ಮ ಅವರು ದೈವಭಕ್ತೆ, ಆದರ್ಶ ಗೃಹಿಣಿಯಾಗಿ ಮಾದರಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಅಗಲಿಕೆ ಶಕ್ತಿಯನ್ನು ಭರಿಸುವ ಶಕ್ತಿ ದೇವೇಗೌಡರಿಗೆ ಹಾಗೂ ಕುಟುಂಬದವರಿಗೆ ದೊರೆಯಲಿ ಎಂದು ಪ್ರಾರ್ಥಿಸಿದರು.
ಮಾಜಿ ಸಚಿವ ಡಿ. ನಾಗರಾಜಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ, ತುಮುಲ್ ನಿರ್ದೇಶಕ ಡಿ. ಕೃಷ್ಣಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ಮುಖಂಡರಾದ ಡಾ. ರವಿ ನಾಗರಾಜಯ್ಯ, ಜಗದೀಶ್ ನಾಗರಾಜಯ್ಯ ಮತ್ತಿತರ ಮುಖಂಡರು ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು.
ನಂತರ ಈ ಮಾರ್ಗವಾಗಿ ಬಂದ ಚನ್ನಮ್ಮ ಅವರ ಪಾರ್ಥಿವಶರೀರಕ್ಕೆ ಮುಖಂಡರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಜೊತೆಯಲ್ಲಿದ್ದ ದೇವೇಗೌಡರಿಗೆ ಸಾಂತ್ವನ ಹೇಳಿದರು.

Leave a Reply

Your email address will not be published. Required fields are marked *