ನೇತ್ರಾವತಿಯವರ ‘ಬ್ರೋಕನ್ ಫ್ಯಾಮಿಲಿ’ ಮಹಿಳಾ ದಲಿತ ಆತ್ಮಕಥೆ

ತುಮಕೂರು: ಕೆ.ಬಿ.ನೇತ್ರಾವತಿ ಅವರು ಅನುಭವಿಸಿದ ನಂತರ ಬರೆದಿದ್ದಾರೆ. ಮುಂದಿನ ಪೀಳಿಗೆ ಅನುಭವಿಸಬೇಕಾಗಿರುವ ಸನ್ನಿವೇಶದೊಳಗೆ ನಾವು ಸಂಕೀರ್ಣ ಸ್ಥಿತಿಯಲ್ಲಿದ್ದೇವೆ. ಸಾಹಿತ್ಯದ ಮೂಲಕವಾಗಬಹುದು, ವೈಚಾರಿಕತೆಯ ಮೂಲಕವಾಗಿರಬಹುದು, ಸಾಮಾಜಿಕ ಚಿಂತನೆಗಳ ಮೂಲಕವಾಗಿರಬಹುದು ನಡೆಯುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸುಮ್ಮನಿರುತ್ತೇವೆ ಯಾಕೆ? ಎಂದು ಲೇಖಕಿ ಬಾ.ಹ.ರಮಾಕುಮಾರಿ ಪ್ರಶ್ನಿಸಿದರು.

ಬೆವರ ಹನಿ ಪ್ರಕಾಶನ ಹಾಗೂ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯ ಸಹಯೋಗದಲ್ಲಿ ಭಾನುವಾರ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿರುವ ಐಎಂಎ ಸಭಾಂಗಣದಲ್ಲಿ ಬೆವರಹನಿ ಪ್ರಕಾಶನ ಹೊರತಂದಿರುವ ಲೇಖಕಿ ಕೆ.ಬಿ.ನೇತ್ರಾವತಿ ಅವರ ಬ್ರೋಕನ್ ಫ್ಯಾಮಿಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿಧಾನ ಪರಿಷತ್‍ನಲ್ಲಿ ಬಸವರಾಜ ಹೊರಟ್ಟಿಯವರು ನಡೆದುಕೊಂಡ ರೀತಿ, ಆಡಿತಂತಹ ಮಾತುಗಳು ಸರಿಯಾಗಿರಲಿಲ್ಲ. ಅರಸಿಕೆರೆ ಶಾಸಕರೊಬ್ಬರು ಆಡಿದ ಮಾತುಗಳು ಉಚಿತವಾಗಿರಲಿಲ್ಲ. ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಗೌರವವಿತ್ತು. ಅವರ ಹಿನ್ನೆಲೆ ಏನೇ ಇದ್ದರೂ, ಕೆಟ್ಟ ವ್ಯಕ್ತಿತ್ವ ಇದ್ದರೂ ಕೂಡ ಬಹಿರಂಗವಾಗಿ ಹೇಳದೇನೆ ಅವರಿಗೆ ತೋರಿಕೆಗಾದರೂ ಗೌರವ ಕೊಡುವ ಪರಿಸ್ಥಿತಿ ಇತ್ತು. ಆದರೆ ಇವತ್ತು ಅವಹೇಳನ ಮಾಡುವುದನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವುದನ್ನೆಲ್ಲ ನೋಡಿದರೆ ಖಂಡನ ನಿರ್ಣಯ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸೃಜನಶೀಲತೆಯನ್ನು ದಮನಗೊಳಿಸುವ ಯತ್ನ ನಡೆಯುತ್ತಿದೆ. ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂದು ನಮ್ಮನ್ನು ನಿಯಂತ್ರಿಸುವಂತಹ ಶಕ್ತಿ ಕೇಂದ್ರದಿಂದ ಹಿಡಿದುಕೊಂಡು ಎಲ್ಲಾ ಕಡೆ ಹರಡುತ್ತಿದೆ. ಇದರಿಂದ ನಾಗರಿಕ ಶಕ್ತಿ ಹುದುಗಿ ಹೋಗಿರುವುದನ್ನು ನೋಡುತ್ತಿದ್ದೇವೆ. ಇದನ್ನು ಖಂಡಿಸದೆ ನಮ್ಮಷ್ಟಕ್ಕೆ ನಾವೇ ಬೈದುಕೊಂಡು ಸುಮ್ಮನಾಗುವಂತಹ ಮನಸ್ಥಿತಿಯಲ್ಲಿ ನಾವಿದ್ದೇವೆ ಎಂದರು.

ನಮ್ಮ ನಾಗರಿಕ ಹಕ್ಕನ್ನು ಮರೆತಿರುವಂತಹ ಈ ಕಾಲಘಟ್ಟದಲ್ಲಿ ಬ್ರೋಕನ್ ಫ್ಯಾಮಿಲಿಯಂತಹ ಪುಸ್ತಕಗಳ ಓದು ತಮ್ಮನ್ನು ಎಚ್ಚರಿಸಬೇಕು ಮತ್ತು ಪ್ರೇರೇಪಿಸಬೇಕು. ಬ್ರೋಕನ್ ಫ್ಯಾಮಿಲಿ ಕರ್ತೃ ಬಹಳ ಧೈರ್ಯವಾಗಿ ಮತ್ತು ಮುಕ್ತವಾಗಿ ಎಲ್ಲವನ್ನೂ ಬರೆದಿದ್ದಾರೆ. ಆ ಕಾಲಘಟ್ಟದಲ್ಲಿ ಓದುತ್ತಿದ್ದ ಸಂದರ್ಭದಲ್ಲಿನ ಅನುಭವಗಳನ್ನು ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಕೃತಿಯಲ್ಲಿ ಬರುವ ಸನ್ನಿವೇಶಗಳು ಎಲ್ಲಾ ಜಾತಿಯಲ್ಲಿ ಕಾಣಬಹುದು. ಆದರೆ ಅದನ್ನೇ ಶೋಷಣೆಯನ್ನಾಗಿ ಮಾಡಿಕೊಳ್ಳುವುದನ್ನು ಅವರ ಸಮುದಾಯದಲ್ಲಿ ಕಾಣಬಹುದು. ಇದು ಮಾನಸಿಕತೆಯನ್ನು ಕುಗ್ಗಿಸುವ ರೀತಿ ಇದೆ. ಆದರೆ ಲೇಖಕಿ ಅದನ್ನು ಮೀರುವ ಶಕ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಹೋರಾಟಗಾರ್ತಿ ಅನುರಾಧ ಕೆ.ದೊರೈರಾಜ್ ಮಾತನಾಡಿ, ನಾವು ಚಿಕ್ಕನಾಯಕನಹಳ್ಳಿಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ದೊರೈರಾಜ್ ಪ್ರಿನ್ಸಿಪಾಲರಾಗಿದ್ದರು. ಆಗ ನಾವಿದ್ದ ಮನೆಗೆ ನೇತ್ರಾವತಿ ಬರುತ್ತಿದ್ದರು. ಒಂದು ಸಾರಿ ನೇತ್ರಾ ಮನೆಯಲ್ಲಿ ದೊಡ್ಡ ಗಲಾಟೆ ಆಗಿತ್ತು ಅನಿಸುತ್ತದೆ. ಮನೆಯಲ್ಲಿ ನೇತ್ರಾವತಿ ಕೈ ಕುಯ್ಯಿಕೊಂಡು ಬೆಡ್ ಮೇಲೆ ಮಲಗಿದ್ದಳು. ರಕ್ತ ನೆಲದ ಮೇಲೆ ಬಿದ್ದು ಹೆಪ್ಪುಗಟ್ಟಿತ್ತು. ಕೂಡಲೇ ನೇತ್ರಾಳನ್ನು ಚಿಕ್ಕನಾಯಕನಹಳ್ಳಿ ಕರೆತಂದಿದ್ದರು. ಅಷ್ಟೆಲ್ಲ ಆಗಿದ್ದರೂ ಏನಿಲ್ಲ ಬಿಡಕ್ಕ ಅಂದಿದ್ದು ಈಗಲೂ ನೆನಪಿದೆ. ಈಗಲೂ ಹಾಗೆಯೇ ಇದ್ದಾರೆ. ನೇತ್ರಾ ಗಟ್ಟಿಗಿತ್ತಿ. ಮುಂದಿನ ದಿನಗಳಲ್ಲಿ ನೆಮ್ಮದಿಯಾಗಿ ಇರಲಿ. ನೇತ್ರಾರಂಥ ಧೈರ್ಯವಂತ ಹೆಣ್ಣು ಮಕ್ಕಳು ಎಲ್ಲರ ಮನೆಯಲ್ಲಿ ಹುಟ್ಟಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಶಾಖೆಯ ಜಿಲ್ಲಾಧ್ಯಕ್ಷ ಡಾ.ಆಶಾ ಬಗ್ಗನಡು ಮಾತನಾಡಿ, ಬ್ರೋಕನ್ ಫ್ಯಾಮಿಲಿ ಕೃತಿ ತುಮಕೂರು ಭಾಗದಲ್ಲಿ ಬಂದಿರುವಂತಹ ಮೊಟ್ಟಮೊದಲ ಮಹಿಳಾ, ದಲಿತ ಆತ್ಮಕಥೆ ಇದಾಗಿದೆ. ಹೀಗಾಗಿ ಈ ಕೃತಿಗೆ ಬಹಳ ಮಹತ್ವವಿದೆ ಮತ್ತು ಈ ಕಾರಣಕ್ಕಾಗಿ ಲೇಖಕಿಯನ್ನು ಅಭಿನಂದಿಸುತ್ತೇನೆ ಎಂದರು.

ಭಾರತ ದೇಶದಲ್ಲಿ ಬಹಳಷ್ಟು ಜಾತಿಗಳು, ಸಮುದಾಯಗಳು, ಸಂಸ್ಕøತಿಗಳು ಇರುವಂತಹ ಈ ನೆಲದಲ್ಲಿ ಒಂದೇ ರೀತಿಯಾದ ಅನುಭವಗಳು ಎಲ್ಲಾ ಜಾತಿ ಹೆಣ್ಣು ಮಕ್ಕಳದ್ದಾಗಿದೆ. ಇಲ್ಲಿ ಬೇರೆ ಬೇರೆ ಜಾತಿ, ಸಮುದಾಯದ ಅನುಭವ, ಸಂಕಟಗಳು ಬೇರೆ ಬೇರೆ ಇದ್ದಾಗ ಅದನ್ನ ನಾವು ಅದೇ ರೀತಿಯಲ್ಲಿ ಹೇಳಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಾಗ ಅವರೇನೋ ಬೇರೆ ಯೋಚನೆ ಮಾಡುತ್ತಿದ್ದಾರೆ ಎನ್ನುವುದು ಸರಿಯಲ್ಲ. ನೇತ್ರಾವತಿ ಮಾಡಿರುವುದು ಇದನ್ನೇ ಎಂದು ಹೇಳಿದರು.

ಲೇಖಕಿ ಕೆ.ಬಿ.ನೇತ್ರಾವತಿ ಮಾತನಾಡಿದರು. ಹೆಸರಾಂತ ಲೇಖಕಿ, ವಿಮರ್ಶಕಿ ದಯಾ ಗಂಗನಘಟ್ಟ ಅವರ ಭಾಷಣವನ್ನು ಚೈತ್ರಾ ಓದಿದರು. ಬೆವರ ಹನಿ ಪ್ರಕಾಶನದ ಪ್ರಕಾಶಕ ಕುಚ್ಚಂಗಿ ಪ್ರಸನ್ನ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮರಿಯಂಬಿ ನಿರೂಪಿಸಿ, ಗಂಗಲಕ್ಷ್ಮಿ ವಂದಿಸಿದರು.

Leave a Reply

Your email address will not be published. Required fields are marked *