ತುಮಕೂರು: ಸಮುದಾಯ ಬಾನುಲಿ ಕೇಂದ್ರಗಳ ಕರ್ನಾಟಕ ಶಾಖೆಯು 2026-2029ರ ಅವಧಿಗೆ (ಮೂರು ವರ್ಷಗಳು) ‘ರೇಡಿಯೋ ಶಿವಮೊಗ್ಗ’ದ ಗುರುಪ್ರಸಾದ್ ಅವರ ನೇತೃತ್ವದ ಹೊಸ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಗೌರವಾಧ್ಯಕ್ಷರಾಗಿ ತುಮಕೂರಿನ ರೇಡಿಯೋ ಸಿದ್ಧಾರ್ಥದ ಡಾ.ಬಿ.ಟಿ. ಮುದ್ದೇಶ್ ಅವರು ಆಯ್ಕೆಯಾಗಿದ್ದಾರೆ.
ರೇಡಿಯೋ ಶಿವಮೊಗ್ಗದ ಜಿ.ಎಲ್.ಜನಾರ್ಧನ ಅವರನ್ನು ಸಮುದಾಯ ಬಾನುಲಿ ಕೇಂದ್ರಗಳ ರಾಷ್ಟ್ರೀಯ ಸಮಿತಿಗೆ ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಅವರು ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ.
ತುಮಕೂರು ನಗರದ ಎಸ್ಎಸ್ಐಟಿ ಕ್ಯಾಂಪಸ್ನ ಪಿಜಿ ಸೆಮಿನಾರ್ ಸಭಾಂಗಣದಲ್ಲಿ ರೇಡಿಯೋ ಸಿದ್ಧಾರ್ಥ 90.8 ಸಿಆರ್ಎಸ್, ತುಮಕೂರು ಹಾಗೂ ಸಮುದಾಯ ರೇಡಿಯೋ ಸಂಘ-ಕರ್ನಾಟಕ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ “ರೇಡಿಯೋ ಆಲಿಸುವಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಕುರಿತು” ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಅವಿರೋದ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಅಧಿಕಾರ ಹಸ್ತಾಂತರದಲ್ಲಿ ಮಾತನಾಡಿದ ಕಳೆದ ಸಾಲಿನ ಅಧ್ಯಕ್ಷೆ ಡಾ. ರಶ್ಮಿ ಅಮ್ಮೆಂಬಳ, ಪ್ರೋತ್ಸಾಹ ಮತ್ತು ಸಹಕಾರಕ್ಕಾಗಿ ಎಲ್ಲಾ ಸದಸ್ಯರು ಧನ್ಯವಾದಗಳನ್ನು ಹೇಳಿದರಲ್ಲದೆ, ಶಾಖೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಹೊಸ ಸಮಿತಿಗೆ ಎಲ್ಲ ರೀತಿಯ ಸಹಕಾರ ಮುಂದುವರಿಸುವುದಾಗಿ ತಿಳಿಸಿದರು.
ದಕ್ಷಿಣ ವಲಯದ ಜಂಟಿ ಕಾರ್ಯದರ್ಶಿ ಶಿವಶಂಕರ್ ಅವರು ಮಾತನಾಡಿ, ಕರ್ನಾಟಕದಲ್ಲಿ ಸಮುದಾಯ ರೇಡಿಯೋ ಚಳುವಳಿಯನ್ನು ಮುನ್ನಡೆಸುವ ಮತ್ತು ಬಲಪಡಿಸುವ ಕಾರ್ಯವನ್ನು ಮುಂದುವರಿಸಲು, ಪ್ರಸಾರ ಕ್ಷೇತ್ರಕ್ಕೆ ಹೊಸ ಚೈತನ್ಯವನ್ನು ತುಂಬುವ ಪ್ರಯತ್ನವನ್ನು ಮಾಡೋಣ ಎಂದು ಹೇಳಿದರು.
ಹೊಸ ಭರವಸೆ:
ನೂತನ ಅಧ್ಯಕ್ಷರಾದ ಗುರು ಪ್ರಸಾದ್ ಮಾತನಾಡಿ, ಗಟ್ಟಿಯಾದ ಬುನಾದಿ ಮತ್ತು ಅಸೋಸಿಯೇಷನ್ಗೆ ತಂದುಕೊಟ್ಟ ಗೌರವ ಹಾಗೂ ಮನ್ನಣೆ ಅತ್ಯಂತ ಶ್ಲಾಘನೀಯವಾಗಿದೆ. ಬಾನುಲಿಯ ದೂರದೃಷ್ಟಿಯ ಕೆಲಸಗಳು ಸದಾ ಪ್ರೇರಣೆ. ಕಳೆದ ಸಾಲಿನ ಪಧಾಧಿಕಾರಿಗಳು ಸಮರ್ಥ ಹಾಗೂ ಅನುಭವಿಗಳ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ನೂತನ ತಂಡವು ಇಡೀ ರಾಜ್ಯದ ಸಮುದಾಯ ರೇಡಿಯೋ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಉನ್ನತಿಗಾಗಿ ಬದ್ಧತೆಯಿಂದ ಶ್ರಮಿಸಲಿದೆ ಎಂದರು.
ಶೋತೃಗಳ ನಂಬಿಕೆಯನ್ನು ಉಳಿಸಿಕೊಂಡು, ಸಂಘವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದ ಗುರುಪ್ರಸಾದ್ ಸಮುದಾಯ ರೇಡಿಯೋ ಅಸೋಸಿಯೇಷನ್ ಹಾಗೂ ರೇಡಿಯೋ ಸಿದ್ಧಾರ್ಥ ವತಿಯಿಂದ ಆಯೋಜಿಸಿದ್ದ ಕಾರ್ಯಾಗಾರ ಯಶಸ್ವಿಯಾಗಿದೆ, ಇದೇ ರೀತಿಯ ಸಹಕಾರ ಮತ್ತು ಒಗ್ಗಟ್ಟಿನಿಂದ ಮುಂದೆಯೂ ಸಮುದಾಯ ರೇಡಿಯೋ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.
ಇದೇ ವೇಳೆ ಗುರು ರೇಣುಕಾ ಪೆÇ್ರಡಕ್ಷನ್ಸ್ನ ನಟ-ನಿರ್ಮಾಪಕ ನವೀನ್ ಎನ್.ಜಿ. ಅವರು ಪ್ರಸಾರ ಮಾಧ್ಯಮದಲ್ಲಿ ಸಂಕಲನದ ಮಹತ್ವ ಮತ್ತು ಪಾತ್ರ ಕುರಿತು ಮಾತನಾಡಿ, ಪ್ರಸಾರ ಮಾಧ್ಯಮದಲ್ಲಿ ವಸ್ತುವಿಷಯದಷ್ಟೆ ಮಹತ್ವ ಸಂಕಲನಕ್ಕೆ ಇರುತ್ತದೆ. ಸಂಕಲನಕಾರರ ಕ್ರಿಯಾಶೀಲತೆ ಮತ್ತು ತಂತ್ರಗಳು ಅತ್ಯಂತ ಮುಖ್ಯವಾಗಿರುತ್ತದೆ ಎಂದರು. ಪ್ರಾಯೋಗಿಕ ಪ್ರಾತ್ಯಕ್ಷತೆಯ ಮೂಲಕ ಸಂಕಲನ ಪ್ರಕ್ರಿಯೇಯನ್ನು ವಿವರಿಸಿದರು.
ರೇಡಿಯೋ ಶಿವಮೊಗ್ಗ ಜಿ.ಎಲ್.ಜನಾರ್ಧನ ಅವರುಸಮುದಾಯ ಬಾನುಲಿ ಕೇಂದ್ರಗಳ ರಾಷ್ಟ್ರೀಯ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಹಾಗೆಯೇ ಅಧ್ಯಕ್ಷರಾಗಿ ರೇಡಿಯೋ ಶಿವಮೊಗ್ಗ ಗುರುಪ್ರಸಾದ್ ಉಪಾಧ್ಯಕ್ಷರಾಗಿ ಉಜರೆ ರೇಡಿಯೋ ನೀನಾದದ ವಿ. ಕೆ. ಕಡಬ,ಗೌರವಾಧ್ಯಕ್ಷರಾಗಿ ತುಮಕೂರು ರೇಡಿಯೋ ಸಿದ್ಧಾರ್ಥದ ಡಾ. ಬಿ. ಟಿ. ಮುದ್ದೇಶ್, ಕಾರ್ಯದರ್ಶಿಯಾಗಿ ಹುಬ್ಬಳ್ಳಿ ಕೆಎಲ್ಇ ಧ್ವನಿ-(ಬಿವಿಬಿ) 90.4ನ ರವೀಂದ್ರ ಕವಠೇಕರ್, ಜಂಟಿ ಕಾರ್ಯದರ್ಶಿಯಾಗಿ ಗದುಗಿನ ಸಹಕಾರ ರೇಡಿಯೋದ ಡಾ.ಲಲಿತಾ ಅಸುತಿ,ಖಜಾಂಚಿಯಾಗಿ ಮಂಗಳೂರು ರೇಡಿಯೋ ಸಾರಂಗ್ನ ಅಭಿಷೇಕ್ ಆಯ್ಕೆಯಾದರೆ, ಸಲಹಾ ಸಮಿತಿಗೆ ಮಂಜುನಾಥ್–ಕೆಎಲ್ಇ ವೇಣುಧ್ವನಿ 90.4, ಬೆಳಗಾವಿ,ಡಾ. ನಾಗೇಶ್–ಕಲ್ಯಾಣ ಕೃಷಿ ರೇಡಿಯೋ, ರಾಯಚೂರು,ರಾಜು–ಜ್ಞಾನ ಧ್ವನಿ ರೇಡಿಯೋ, ಮೈಸೂರು, ಡಾ. ಸುರೇಖಾ ಸಂಕನಗೌಡರ್–ಕೃಷಿ ಸಮುದಾಯ ರೇಡಿಯೋ, ಧಾರವಾಡ ಇವರು ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ನಿರ್ಗಮಿತ ಸಮುದಾಯ ಬಾನುಲಿ ಕೇಂದ್ರಗಳ ದಕ್ಷಿಣ ವಲಯದ ಜಂಟಿ ಕಾರ್ಯದರ್ಶಿ ಶಿವಶಂಕರ್, ಕರ್ನಾಟಕ ಅಧ್ಯಾಯದ ಅಧ್ಯಕ್ಷೆ ಡಾ. ರಶ್ಮಿ ಅಮ್ಮೆಂಬಳ, ಕಾರ್ಯದರ್ಶಿ ಭರತ್ ಬಿ. ಬಡಿಗೇರ್, ಕಾರ್ಯಕಾರಿ ಸಮಿತಿಯ ಶಿವರಾಜ್ ಶಾಸ್ತ್ರಿ, ರೇಡಿಯೋ ಸಿದ್ಧಾರ್ಥ90.8 ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಡಾ.ಜ್ಯೋತಿ ಸಿ., ಶ್ವೇತ ಎಂ.ಪಿ., ರೇಡಿಯೋ ಕಾರ್ಯಕ್ರಮ ನಿರ್ವಾಹಕರಾದ ಗೌತಮ್ ಎ.ವಿ. ರವಿಕುಮಾರ್ ಸಿ.ಎಚ್., ಹರೀಶ್ ಎನ್., ಸೇರಿದಂತೆ ರಾಜ್ಯದ ವಿವಿಧ ಸಮುದಾಯ ಬಾನುಲಿ ಕೇಂದ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.