ತುಮಕೂರು:ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಮುತ್ತುಗದಹಳ್ಳಿ ಸರ್ವೆ ನಂ 31 ರಲ್ಲಿ ಕಳೆದ ನಲವತ್ತು ವರ್ಷಗಳ ಹಿಂದೆ ಸುಮಾರು 60 ಜನರಿಗೆ ಸಾಗುವಳಿ ಚೀಟಿ ನೀಡಲಾಗಿದ್ದು, ಅದರಂತೆ ಅನೇಕರು ಕೃಷಿ, ತೋಟಗಾರಿಕಾ ಬೆಳೆಗಳನ್ನು ನಾಶ ಪಡಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗು ಪದಾಧಿಕಾರಿಗಳು ಖಂಡಿಸಿದ್ದಾರೆ.
ಸುಮಾರು ನಾಲ್ಕು ದಶಕಗಳ ಕಾಲದಿಂದಲೂ ಅನುಭವದಲ್ಲಿ ಇರುವ ಹತ್ತಾರು ಕೋಟಿ ಬೆಲೆ ಬಾಳುವ ಅಡಿಕೆ, ತೆಂಗು,ಬಾಳೆ, ಮಾವು ಇತ್ಯಾದಿ ಬೆಳೆಗಳನ್ನು ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಬಲ ಬಳಸಿ ಜೆಸಿಬಿಗಳ ಮೂಲಕ ನೆಲಗೊಳಿಸಿರುವುದು ಖಂಡನೀಯ.
ಕಂದಾಯ ಇಲಾಖೆಯೇ ಬಗರ್ ಹುಕ್ಕಂ ಸಾಗುವಳಿಯಲ್ಲಿ ರೈತರಿಗೆ ನೀಡಿದ್ದ ಭೂಮಿಯನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಳ್ಳುತ್ತಿರುವುದನ್ನು ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ. ಅರಣ್ಯ ಇಲಾಖೆಯ ದೌರ್ಜನ್ಯಕ್ಕೆ ಬಲಿಯಾಗಿರುವ ರೈತರಿಗೆ ಕೂಡಲೇ ಭೂಮಿಯನ್ನು ಹಿಂದುರಿಗಿಸಬೇಕು. ಅವರ ಕೃಷಿ ಬದುಕನ್ನು ಪುನರಸ್ಥಾಪಿಸಬೇಕೆಂಬುದು ರೈತ ಸಂಘದ ಆಗ್ರಹಿಸಿದೆ.
ಸದರಿ ಭೂಮಿಯನ್ನು ಆಶ್ರಯಿಸಿದ್ದ ರೈತರು ಮತ್ತು ಅವರ ಭೂಮಿಯ ಮೇಲಾಗಿರುವ ದೌರ್ಜನ್ಯ ಮತ್ತು ನಷ್ಟಕ್ಕೆ ಸರಕಾರವೇ ಹೊಣೆಯಾಗಿದ್ದು, ರೈತರಿಗೆ ಆಗಿರುವ ನಷ್ಟವನ್ನು ಅರಣ್ಯ ಇಲಾಖೆ ಭರಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸದರಿ ಭೂಮಿಯನ್ನು ಪುನರ್ ಪರಿಶೀಲಿಸಿ, ಸಂತ್ರಸ್ಥ ಕುಟುಂಬಗಳ ಆಹಾರ ಭದ್ರತೆಗೋಸ್ಕರ, ಉಳುಮೆ ಮಾಡುತ್ತಿದ್ದ ಭೂಮಿಯನ್ನು ರೈತರಿಗೆ ನೀಡಿ, ಪಹಣಿ ಮಾಡಿಕೊಡಬೇಕೆಂದು ರೈತರ ಸಂಘ ಒತ್ತಾಯಿಸುತ್ತದೆ.
ಸರಕಾರ ಅರಣ್ಯ ಭೂಮಿ, ಗೋಮಾಳದ ಹೆಸರಿನಲ್ಲಿ ಈಗಾಗಲೇ ಬದುಕು ಕಟ್ಟಿಕೊಂಡಿರುವ ರೈತರನ್ನು ಬೀದಿ ಪಾಲು ಮಾಡಬಾರದು.ಈ ದೇಶದ ಆಹಾರ ಭದ್ರತೆ ನಿಂತಿರುವುದೇ ರೈತರಿಂದ. ಆದ್ದರಿಂದ ಜಿಲ್ಲಾಡಳಿತ ಹಾಗೂ ಸರಕಾರ ಕೂಡಲೇ ಭೂಮಿಯನ್ನು ಸಂಬಂಧಪಟ್ಟ ರೈತರಿಗೆ ಹಿಂದಿರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಜಿಲ್ಲಾ ಘಟಕದ ಕಾರ್ಯದರ್ಶಿ ಆರೇಹಳ್ಳಿ ಮಂಜುನಾಥ, ತುಮಕೂರು ತಾಲೂಕು ಅಧ್ಯಕ್ಷರಾದ ಚಿಕ್ಕಬೋರೇಗೌಡ, ಗುಬ್ಬಿ ತಾಲೂಕು ಅಧ್ಯಕ್ಷರಾದ ವೆಂಕಟೇಗೌಡ, ಕಾರ್ಯದರ್ಶಿ ಸಿ.ಜೆ.ಲೋಕೇಶ್ ಅವರುಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.