ತುಮಕೂರು : ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶೈಕ್ಷಣಿಕ ಮೂಲಸೌಕರ್ಯಗಳ ನಿರ್ಮಾಣವು ಜ್ಞಾನ, ಸಂಶೋಧನೆ, ನಾವೀನ್ಯತೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದ್ದು, “ಅಭಿವೃದ್ಧಿ ಹೊಂದಿದ ಭಾರತ-2047” ಗುರಿ ಸಾಧನೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ನ ಬಿದರಕಟ್ಟೆಯಲ್ಲಿ ಸೋಮವಾರ ನಡೆದ ಹೊಸದಾಗಿ ನಿರ್ಮಿಸಲಾದ ಕೇಂದ್ರೀಕೃತ ಅಡುಗೆಮನೆ, ಗ್ರಂಥಾಲಯ ಕಟ್ಟಡ ಹಾಗೂ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಮತ್ತು ಶೈಕ್ಷಣಿಕ ಬ್ಲಾಕ್–2ರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯದಲ್ಲಿ ನಿರ್ಮಾಣಗೊಂಡಿರುವ ಹೊಸ ಮೂಲಸೌಕರ್ಯಗಳು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಅತ್ಯುತ್ತಮ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾನಿಲಯದ ಹೆಗ್ಗಳಿಕೆಯನ್ನು ಹೆಚ್ಚಿಸಲಿವೆ ಎಂದು ರಾಜ್ಯಪಾಲರು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯಕ್ಕೆ ಹಲವು ಬಾರಿ ಭೇಟಿ ನೀಡಿರುವುದಾಗಿ ತಿಳಿಸಿದ ರಾಜ್ಯಪಾಲರು, ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಪ್ರಶಂಸನೀಯವಾಗಿದ್ದು, ಸರ್ಕಾರದ ಜೊತೆಗೆ ವಿವಿಧ ಲೋಕೋಪಕಾರಿ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಅSಖ) ಅಡಿಯಲ್ಲಿ ದೊರೆತಿರುವ ಸಹಕಾರವು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದೆ. ಸಿಎಸ್ಆರ್ ನೆರವಿನಡಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಇನ್ಕ್ಯುಬೇಷನ್ ಕೇಂದ್ರವು ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸಂಶೋಧನೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸಲಿದೆ. ಜ್ಞಾನಸಿರಿ ಕ್ಯಾಂಪಸ್ನಲ್ಲಿ ಜೀವವೈವಿಧ್ಯ ಸಂರಕ್ಷಣೆ ಹಾಗೂ ಹಸಿರು ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳೂ ಶ್ಲಾಘನೀಯವೆಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ-2020 ಶಿಕ್ಷಣವನ್ನು ಬಹುಆಯಾಮದ, ಸಂಶೋಧನಾ ಆಧಾರಿತ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿಸಿದ್ದು, ಜ್ಞಾನವುಳ್ಳ, ಸ್ವಾವಲಂಬಿ ಹಾಗೂ ರಾಷ್ಟ್ರಸಮರ್ಪಿತ ಯುವಜನತೆಯನ್ನು ರೂಪಿಸುವ ಗುರಿಯನ್ನು ಹೊಂದಿದೆ ಎಂದು ರಾಜ್ಯಪಾಲರು ತಿಳಿಸಿದರು. ಇಂದು ಉದ್ಘಾಟನೆಗೊಂಡ ಯೋಜನೆಗಳು ಹಾಗೂ ಶೈಕ್ಷಣಿಕ ಬ್ಲಾಕ್–2ರ ಭೂಮಿಪೂಜೆ ಇದೇ ಶಿಕ್ಷಣ ತತ್ವವನ್ನು ಸಾಕಾರಗೊಳಿಸುವ ಹೆಜ್ಜೆಯಾಗಿವೆ ಎಂದರು.
ಗ್ರಂಥಾಲಯವು ಯಾವುದೇ ವಿಶ್ವವಿದ್ಯಾನಿಲಯದ ಹೃದಯವಾಗಿದ್ದು, ಅದು ಕೇವಲ ಪುಸ್ತಕಗಳ ಸಂಗ್ರಹವಲ್ಲ; ಸಂಶೋಧನೆ, ನಾವೀನ್ಯತೆ ಹಾಗೂ ಬೌದ್ಧಿಕ ಸಂವಾದದ ಕೇಂದ್ರವಾಗಿದೆ. ಹೊಸ ಗ್ರಂಥಾಲಯವು ವಿದ್ಯಾರ್ಥಿಗಳಿಗೆ ಡಿಜಿಟಲ್ ಸಂಪನ್ಮೂಲಗಳು, ಇ-ಪುಸ್ತಕಗಳು ಹಾಗೂ ಆಧುನಿಕ ಅಧ್ಯಯನ ಸೌಲಭ್ಯಗಳ ಮೂಲಕ ವಿಶ್ವದರ್ಜೆಯ ಅಧ್ಯಯನ ಮತ್ತು ಸಂಶೋಧನೆಗೆ ವೇದಿಕೆಯಾಗಲಿದೆ. ಕೇಂದ್ರೀಕೃತ ಅಡುಗೆಮನೆಯು ವಿದ್ಯಾರ್ಥಿಗಳ ಆರೋಗ್ಯ, ನೈರ್ಮಲ್ಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ವಿಶ್ವವಿದ್ಯಾನಿಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆರೋಗ್ಯಕರ ವಿದ್ಯಾರ್ಥಿಗಳೇ ಬಲಿಷ್ಠ ರಾಷ್ಟ್ರ ನಿರ್ಮಾಣದ ಆಧಾರವಾಗಿದ್ದು, ಗುಣಮಟ್ಟದ ಆಹಾರವು ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಒಳಾಂಗಣ ಕ್ರೀಡಾಂಗಣವು ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಮಹತ್ವ ನೀಡುವ ವಿಶ್ವವಿದ್ಯಾನಿಲಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ ರಾಜ್ಯಪಾಲರು, ಕ್ರೀಡೆಗಳು ಶಿಸ್ತು, ನಾಯಕತ್ವ, ಆತ್ಮವಿಶ್ವಾಸ ಹಾಗೂ ತಂಡ ಮನೋಭಾವವನ್ನು ಬೆಳೆಸುತ್ತವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಫಿಟ್ ಇಂಡಿಯಾ” ಹಾಗೂ “ಖೇಲೋ ಇಂಡಿಯಾ” ಅಭಿಯಾನಗಳು ದೇಶದಲ್ಲಿ ಕ್ರೀಡಾ ಸಂಸ್ಕೃತಿಗೆ ಹೊಸ ದಿಕ್ಕು ನೀಡಿದ್ದು, ಈ ಕ್ರೀಡಾಂಗಣದಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶೈಕ್ಷಣಿಕ ಬ್ಲಾಕ್–2ರ ನಿರ್ಮಾಣವು ಭವಿಷ್ಯದ ಪೀಳಿಗೆಯ ಕನಸುಗಳಿಗೆ ಭದ್ರ ಅಡಿಪಾಯವಾಗಿದ್ದು, ಆಧುನಿಕ ಪ್ರಯೋಗಾಲಯಗಳು, ಸ್ಮಾರ್ಟ್ ತರಗತಿ ಕೊಠಡಿಗಳು, ಸಂಶೋಧನಾ ಸೌಲಭ್ಯಗಳು ಹಾಗೂ ನಾವೀನ್ಯತೆ ಕೇಂದ್ರಗಳ ಮೂಲಕ ವಿಶ್ವವಿದ್ಯಾನಿಲಯವು ಶ್ರೇಷ್ಠತೆಯ ಹೊಸ ಎತ್ತರವನ್ನು ತಲುಪಲಿದೆ. ಇಂದು ಜಗತ್ತು ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಜೈವಿಕ ತಂತ್ರಜ್ಞಾನ, ಹಸಿರು ಶಕ್ತಿ, ಸೈಬರ್ ಭದ್ರತೆ ಹಾಗೂ ಡಿಜಿಟಲ್ ನಾವೀನ್ಯತೆಗಳ ಯುಗವನ್ನು ಪ್ರವೇಶಿಸಿದ್ದು, ಈ ಪರಿವರ್ತನೆಗೆ ಭಾರತ ನಾಯಕತ್ವ ನೀಡುವ ಸಾಮರ್ಥ್ಯ ಹೊಂದಿದೆ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಸಂಸತ್ ಹಾಗೂ ವಿಧಾನಮಂಡಲದ ಸದಸ್ಯರು, ಸಿಂಡಿಕೇಟ್ ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯರು, ಸಾರ್ವಜನಿಕ ಪ್ರತಿನಿಧಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.