ಫೆ.12ರಂದು ಕಾರ್ಮಿಕ ಸಂಘಟನೆಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಮುಷ್ಕರ

ತುಮಕೂರು:ಲೇಬರ್ ಕೋಡ್ ರದ್ದು, ನರೇಗಾ ಪುನರ್ ಸ್ಥಾಪನೆ ಸೇರಿದಂತೆ 11 ವಿವಿಧ ಬೇಡಿಕೆಗಳನ್ನು ಮುಂದಿಟ್ಟು 9 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12 ರಂದು ರಾಷ್ಟ್ರೀಯ ಮುಷ್ಕರಕ್ಕೆ ಕೆರೆ ನೀಡಿದ್ದು,ಕಾರ್ಮಿಕರು, ರೈತರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಐಟಿಯುಸಿಯ ಕಂಬೇಗೌಡ ತಿಳಿಸಿದ್ದಾರೆ.

ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಜೆಸಿಟಿಯು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಾರ್ಮಿಕರ ವಿಷಯ ಕೇಂದ್ರ ಮತ್ತು ರಾಜ್ಯಗಳ ಸಮವರ್ತಿ ಪಟ್ಟಿಯಲ್ಲಿದ್ದರೂ ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆಯ ಮೂಲಕ ರಾಜ್ಯಗಳನ್ನು ಪರಿಗಣಿಸದೆ, ಕಾರ್ಮಿಕ ವಿರೋಧಿ, ಕಾರ್ಪೋರೇಟ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ವರ್ಗದ ಕಾರ್ಮಿಕರಿಗೂ ಅನ್ಯಾಯ ಮಾಡುತ್ತಿದೆ. ಹಾಗಾಗಿ ಫೆ.12 ರಂದು ಕಾರ್ಮಿಕರು ತಮ್ಮ ಕೆಲಸ ಸ್ಥಗಿತಗೊಳಿಸಿ, ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ಹಲವಾರು ಹೋರಾಟದ ಮೂಲಕ ಕಾರ್ಮಿಕರು ಪಡೆದಿದ್ದ 44 ಕಾಯ್ದೆಗಳನ್ನು ರದ್ದುಗೊಳಿಸಿ, 4 ಸಂಹಿತೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ.ಕೇರಳ, ತಮಿಳುನಾಡು, ಪಂಜಾಬ್ ಹೊರತುಪಡಿಸಿ,ಕರ್ನಾಟಕವೂ ಸೇರಿದಂತೆ ಉಳಿದ ಎಲ್ಲಾ ರಾಜ್ಯಗಳು ತರಾತುರಿಯಲ್ಲಿ ಈ ಸಂಹಿತೆಯನ್ನು ಜಾರಿಗೆ ತಂದಿವೆ.ಇದರಿಂದಾಗಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಶೇ90ರಷ್ಟು ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರು ಸಹ ಕಾರ್ಮಿಕರು ಹಕ್ಕುಗಳಿಂದ ವಂಚಿತರಾಗಲಿದ್ದಾರೆ ಎಂದು ಕಂಬೇಗೌಡ ಅರೋಪಿಸಿದರು,

ಸಿಐಟಿಯುನ ಸೈಯದ್ ಮುಜೀಬ್ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ದೇಶದಲ್ಲಿ ಕಾರ್ಮಿಕರ ಸ್ಥಿತಿ ಅದೋಗತಿಗೆ ಇಳಿದಿದೆ.ಕಾರ್ಮಿಕ ಅನ್ನುವ ವ್ಯಾಖ್ಯಾನವನ್ನೇ ಕೇಂದ್ರ ಸರಕಾರ ಬದಲಾಯಿಸಿದೆ. ಕೇಂದ್ರದ ಪ್ರಕಾರ ಮಾಸಿಕ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವವರು ಮಾತ್ರ ಕಾರ್ಮಿಕರು ಎನ್ನಲಾಗಿದೆ.ಈ ಮಾನದಂಡದಿಂದ ಶೇ95ಕ್ಕೂ ಹೆಚ್ಚು ಜನ ಕಾರ್ಮಿಕರು ಕಾಯ್ದೆಯಿಂದ ಹೊರಗೆ ಉಳಿಯಲಿದ್ದಾರೆ.ಕಾರ್ಮಿಕರಿಗೆ ಕೇಂದ್ರ ಸರಕಾರ ಇಂತಹ ಬೆಲೆ ಹೆಚ್ಚಳದ ಕಾಲದಲ್ಲಿಯೂ ದಿನಕ್ಕೆ 175 ರೂ ವೇತನ ನಿಗಧಿ ಮಾಡಿದೆ.ಇಷ್ಟು ಕಡಿಮೆ ವೇತನಕ್ಕೆ ಕಾರ್ಮಿಕರು ಬದುಕಲು ಸಾಧ್ಯವೇ ಎಂಬುದು ಪ್ರಶ್ನೆ.ಅಲ್ಲದೆ ವೇತನ ನಿಗಧಿಯಂತಹ ಸಂದರ್ಭಗಳಲ್ಲಿ ಸರಕಾರ, ಕಾರ್ಮಿಕರು ಮತ್ತು ಅಧಿಕಾರಿಗಳನ್ನ ಒಳಗೊಂಡ ಇಂಡಿಯನ್ ಲೇಬರ್ ಕಾರ್ಪರೆನ್ಸ್‍ನ ಸಭೆ ನಡೆಸಿ ನಿರ್ಧರಿಸಬೇಕು ಎಂಬ ನಿಯಮವಿದ್ದರೂ ಕಳೆದ 11 ವರ್ಷಗಳಿಂದ ಈ ಸಭೆಯೇ ನಡೆದಿಲ್ಲ.ಎಲ್ಲ ಅಧಿಕಾರವನ್ನು ಅಧಿಕಾರಿಗಳ ಕೈಗೆ ನೀಡಿ, ಉದ್ಯಮಿಗಳಿಗೆ ಲಾಭವಾಗುವಂತಹ ವಾತಾವರಣ ಸೃಷ್ಟಿಸಲಾಗಿದೆ.ಇದರ ವಿರುದ್ದ ಕಾರ್ಮಿಕ ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲದಂತೆ ತಿದ್ದುಪಡಿ ಮಾಡಲಾಗಿದೆ ಎಂದರು.

ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ರಸಗೊಬ್ಬರದ ಮೇಲೆ ಸಬ್ಸಿಡಿ ಕೇಳಿದರೆ ಇಲ್ಲ ಎನ್ನುವ ಸರಕಾರ,ಹೊಸದಾಗಿ ಉದ್ಯಮ ಪ್ರಾರಂಭಿಸುವ ಉದ್ದಿಮೆಗಳಿಗೆ 2047ರವರೆಗೆ ತೆರಿಗೆ ವಿನಾಯಿತಿ ನೀಡಿದೆ.ಈ ಮೊದಲು ಕನಿಷ್ಠ ಐದು ವರ್ಷ ನಿರಂತರವಾಗಿ ಕೆಲಸ ಮಾಡಿದ ಕಾರ್ಮಿಕನಿಗೆ ಮಾತ್ರ ಪಿ.ಎಫ್., ಇಎಸ್‍ಐ ಸೌಲಭ್ಯ ನೀಡಲು ಅವಕಾಶವಿತ್ತು.ಈಗ ಅದನ್ನು 1 ವರ್ಷಕ್ಕೆ ಇಳಿಸಲಾಗಿದೆ.ಇದರಿಂದ ಕಾರ್ಮಿಕರಿಗೆ ಲಾಭಕ್ಕಿಂತ ನಷ್ಟೇವೇ ಹೆಚ್ಚು.ಖಾಯಂ ಸ್ವರೂಪದ ನೌಕರಿಯೇ ಇಲ್ಲದಂತಾಗುವ ಆಪಾಯವಿದೆ. ಹಾಗಾಗಿ ಎಲ್ಲಾ ಕಾರ್ಮಿಕರು ಕೇಂದ್ರ ಸರಕಾರದ ಈ ನೀತಿಗಳನ್ನು ವಿರೋಧಿಸಿ ಫೆ.12 ರಂದು ಮುಷ್ಕರದಲ್ಲಿ ಪಾಲ್ಗೊಳ್ಳುತಿದ್ದಾರೆ. ತುಮಕೂರು ಜಿಲ್ಲೆಯ ಎಲ್ಲಾ ಕೈಗಾರಿಕಾ ವಲಯದ ಕಾರ್ಮಿಕರು, ತಮ್ಮ ಕೆಲಸಕ್ಕೆ ರಜೆ ನೀಡಿ, ನೇರವಾಗಿ ಟೌನ್‍ಹಾಲ್ ಬಳಿ ಸೇರಿ,ಅಲ್ಲಿಂದ ಬಿ.ಎಸ್.ಎನ್.ಎಲ್.ಕಚೇರಿಯವರೆಗೆ ಮೆರವಣಿಗೆ ನಡೆಸಿ, ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸೈಯದ್ ಮುಜೀಬ್ ತಿಳಿಸಿದರು.

ಸಂಯುಕ್ತ ಹೋರಾಟ-ಕರ್ನಾಟಕದ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು ಮತ್ತು ಕಾರ್ಮಿಕರನ್ನು ಶೋಷಣೆಗೆ ಒಳಪಡಿಸುತ್ತಿವೆ.ಗ್ರಾಮೀಣ ಭಾಗದಲ್ಲಿ ಬಡವರಿಗೆ ಮನೆ ಬಾಗಿಲಲ್ಲಿಯೇ ಕೆಲಸ ನೀಡುತ್ತಿದ್ದ ನೆರೇಗಾ ರದ್ದು ಮಾಡಿ, ವಿಬಿ ಜಿ ರಾಮ್ ಜಿ ಜಾರಿಗೆ ತಂದು ಬಡವರ ಉದ್ಯೋಗ ಕಸಿದಿದೆ.ಹಾಗಾಗಿ ಸಂಯುಕ್ತ ಹೋರಾಟ ಫೆ.12 ರ ಮುಷ್ಕರಕ್ಕೆ ಬೆಂಬಲ ಸೂಚಿಸಿ, ಪಾಲ್ಗೊಳ್ಳುತಿದ್ದೇವೆ ಎಂದರು.

ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಶ್ ಮಾತನಾಡಿ,ರಾಜ್ಯ ಸರಕಾರ ಜಾರಿಗೆ ತಂದು ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ,ವಿದ್ಯುತ್ ಖಾಸಗೀಕರಣ ಕಾಯ್ದೆಗಳನ್ನು ಜನಸಾಮಾನ್ಯರ ವಿರೋಧದ ನಡುವೆಯೂ ವಾಪಸ್ ಪಡೆದಿಲ್ಲ.ಈ ಕಾಯ್ದೆಗಳಿಂದ ರೈತರ ಬದುಕು ಬೀದಿಗೆ ಬೀಳುತ್ತಿದೆ.ಹಾಗಾಗಿ ಫೆ.12 ರ ಮುಷ್ಕರದಲ್ಲಿ ರೈತ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಐಯುಟಿಯುಸಿಯ ಮಂಜುಳಾ,ಐಎನ್‍ಟಿಯುಸಿಯ ನವಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *