ತುಮಕೂರು : ತುಮಕೂರು ನಗರದ ಶಿರಾದಿಂದ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾದ ರಂಗಾಪುರದ ಮೇಲುಸೇತುವೆಯನ್ನು ಶೀಘ್ರವಾಗಿ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಸುಲಭ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿಗಳಿಗೆ ತಾಕೀತು ಮಾಡಿದರು.
ಶಾಸಕರು ತುಮಕೂರು ಮಹಾನಗರಪಾಲಿಕೆಯಲ್ಲಿ ನಗರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವಿಧ ಇಲಾಖೆಯ ಸಮನ್ವಯ ಸಭೆ ನಡೆಸಿದರು.
ಬೆಂಗಳೂರು - ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯು ತುಮಕೂರು ನಗರದ ಮಧ್ಯಭಾಗದಲ್ಲಿ ಹಾದುಹೋಗಿದ್ದು, ಸಾರ್ವಜನಿಕ ಉಪಯುಕ್ತಕತೆಯು ನೀರು, ಚರಂಡಿ, ಒಳಚರಂಡಿ ಪೈಪ್ಲೈನ್ಗಳು ಹಾದು ಹೋಗಿದ್ದು, ದುರಸ್ಥಿ ಕಾರ್ಯಗಳು ಹಾಗೂ ಹೊಸ ಯೋಜನೆಗಳು ಅನುಷ್ಠಾನಗೊಳಿಸಲು ತುಮಕೂರು ಮಹಾನಗರಪಾಲಿಕೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಿ ತುಮಕೂರು ನಗರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕೆಂದು ಸಭೆಯಲ್ಲಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಟವಾಡಿಯಿಂದ ಮಲ್ಲಸಂದ್ರದವರೆಗೂ ವೈಟ್ ಟಾಪಿಂಗ್ ಸಿಸಿ ರಸ್ತೆಯಾಗುತ್ತಿದ್ದು, ಹತ್ತಾರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖವಾದ ರಸ್ತೆ ಇದಾಗಿದ್ದು, ಮೊದಲಿಗೆ ಭೀಮಸಂದ್ರದ ಹೊಸ ಸೇತುವೆಯನ್ನು ನಿರ್ಮಾಣ ಮಾಡಿ ನಂತರ ತುಮಕೂರು ಕಡೆಗೆ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಮಾಡಿದರೆ ಸಂಚಾರದ ಸಮಸ್ಯೆಗಳನ್ನು ತಗ್ಗಿಸಬಹುದೆಂದು ತಿಳಿಸಿದರು.
ಮಳೆಗಾಲದ ಸಮಯದಲ್ಲಿ ಕೆಳಸೇತುವೆಗಳಾದ ಅಂತರಸನಹಳ್ಳಿ (ಮಧುಗಿರಿ ರಸ್ತೆ), ದೇವರಾಯಪಟ್ಟಣದಿಂದ - ಭಾರತಿನಗರದ ಕೆಳಸೇತುವೆಗಳ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು.
ತದನಂತರ ತುಮಕೂರು ನಗರದ ದಕ್ಷಿಣ ಭಾಗಕ್ಕೆ ನಿರಂತರವಾಗಿ ನೀರು ಸರಬರಾಜು ಮಾಡುವ ದೃಷ್ಟಿಯಿಂದ ವೀರಸಾಗರದ ಟೂಡಾ ಲೇಔಟ್ನಲ್ಲಿರುವ ಸರ್ಕಾರಿ ಜಾಗವನ್ನು ತುಮಕೂರು ಮಹಾನಗರಪಾಲಿಕೆಯವರಿಗೆ ಶೀಘ್ರವಾಗಿ ಹಸ್ತಾಂತರ ಮಾಡಲು ಕ್ರಮವಹಿಸುವಂತೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಶಾಸಕರು ಸೂಚನೆ ನೀಡಿ, ಸಿರಾಗೇಟ್ ವೃತ್ತದಿಂದ 150 ಅಡಿ ರಸ್ತೆಗೆ ಅಡ್ಡವಿರುವ ಅಂಗಡಿ ಮಳಿಗೆ, ಮನೆಗಳನ್ನು ಈಗಾಗಲೇ ತುಮಕೂರು ಮಹಾನಗರಪಾಲಿಕೆ ವತಿಯಿಂದ ಗುರುತಿಸಲಾಗಿದ್ದು, ಭೂಸ್ವಾಧೀನಪಡಿಸಿಕೊಡಲು ಟೂಡಾದಲ್ಲಿ ನಿಧಿಯನ್ನು ಕಾಯ್ದಿರಿಸಲಾಗಿದೆ. ಈ ಸಂಬಂಧ ತುರ್ತಾಗಿ ಭೂಸ್ವಾಧೀನಪಡಿಸಿಕೊಡಲು ಟೂಡಾ ಆಯುಕ್ತರಿಗೆ ಶಾಸಕರು ಸೂಚನೆ ನೀಡಿದರು.
ಮೆಳೇಕೋಟೆ ರಸ್ತೆ ಅಗಲೀಕರಣ ಮಾಡುವ ಸಮಯದಲ್ಲಿ 50 ಕ್ಕೂ ಹೆಚ್ಚು ಸ್ವತ್ತುಗಳಲ್ಲಿ ರಸ್ತೆಯು ಹಾದು ಹೋಗಿದ್ದು, ಆದರೆ ನಿವೇಶನದ ಅಳತೆಗಳಲ್ಲಿ ಇಂದಿಗೂ ಸಹ ಪೂರ್ಣ ಪ್ರಮಾಣದ ಅಳತೆ ಇದ್ದು, ಸ್ವತ್ತಿನ ಕಂದಾಯ ಹೆಚ್ಚಾಗಿ ಬರುತ್ತಿವೆ. ರಸ್ತೆ ಅಗಲೀಕರಣಕ್ಕೆ ಸೇರ್ಪಡೆಯಾಗಿರುವ ಸ್ವತ್ತುಗಳ ಅಳತೆಯನ್ನು ಕಳೆದು ಉಳಿಕೆ ಅಳತೆಯನ್ನು ತಿದ್ದುಪಡಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕರು ಸೂಚನೆ ನೀಡಿದರು.
ತುಮಕೂರು ನಗರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕೆಲಸಗಳು ಮಾಡುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವ ಅವಶ್ಯಕತೆಯಿರುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಅಭಿವೃದ್ಧಿಗೆ ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ನಗರದ ಬಟವಾಡಿಯಿಂದ ಮಲ್ಲಸಂದ್ರದವರೆಗೆ ವೈಟ್ ಟಾಪಿಂಗ್ ಕಾಮಗಾರಿಯು ಪ್ರಾರಂಭವಾಗಿದ್ದು, ಈಗಾಗಲೇ ಉಂಟಾಗಿರುವ ವಾಹನಗಳ ಸಂಚಾರದ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಶೀಘ್ರವಾಗಿ ಸಭೆ ಕರೆಯಲು ಶಾಸಕರು ತುಮಕೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರಪಾಲಿಕೆಯ ಆಯುಕ್ತರಾದ ಶ್ರೀಮತಿ ಶುಭ, ಟೂಡಾ ಆಯುಕ್ತರಾದ ಉಮೇಶ್ ಚಂದ್ರ, ರಾಷ್ಟ್ರೀಯ ಹೆದ್ದಾರಿ ಸೇವಾ ಪ್ರಾಧಿಕಾರದ ಯೋಜನಾಧಿಕಾರಿಯಾದ ಅನುಪ್ ಶರ್ಮ, ಪಾಲಿಕೆ ಉಪ-ಆಯುಕ್ತರಾದ ಮನುಕುಮಾರ್, ಅಧೀಕ್ಷಕ ಕಾರ್ಯಪಾಲಕ ಅಭಿಯಂತರರಾದ ಸಂದೀಪ್, ಕಾರ್ಯಪಾಲಕ ಇಂಜಿನಿಯರಾದ ಪ್ರವೀಣ್ ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರಾದ ಅನಿಲ್ಕುಮಾರ್, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರಾದ ನಾಗರಾಜು, ಕೊಳಚೆ ನಿರ್ಮೂಲನ ಮಂಡಳಿಯ ಸಹಾಯಕ ಇಂಜಿನಿಯರಾದ ಭಾನು, ಮುಂತಾದ ಅಧಿಕಾರಿಗಳು ಹಾಜರಿದ್ದರು.