ಕುರಿ-ಉಣ್ಣೆ ಅಭಿವೃದ್ದಿ ಮಂಡಳಿಗೆ ಶಾಸಕರ ನೇಮಕಾತಿಗೆ ತೀವ್ರ ವಿರೋಧ

ತುಮಕೂರು:ಸರಕಾರ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ದಿ ಮಂಡಳಿಯ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ 2026ರ ಫೆಬ್ರವರಿ 21 ರಂದು ಹೊರಡಿಸಿರುವ ಪರಿಷ್ಕøತ ಆದೇಶವನ್ನು ವಾಪಸ್ ಪಡೆಯಬೇಕು ಹಾಗೂ ಅನುಗ್ರಹ ಯೋಜನೆಯ ಬಾಕಿ ಪರಿಹಾರದ ಧನ ಬಿಡುಗಡೆಗೆ ಒತ್ತಾಯಿಸಿ ಮಾರ್ಚ್ 12 ರಂದು ಮುಖ್ಯಮಂತ್ರಿ ಮನೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಕುರಿ ಮಹಾಮಂಡಲದ ತುಮಕೂರು ಜಿಲ್ಲೆಯ ನಿರ್ದೇಶಕ ಲಿಂಗರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಇದುವರೆಗೆ ರಾಜ್ಯದಲ್ಲಿ ಕುರಿಗಾಯಿಗಳ ಸಹಕಾರ ಸಂಘದಲ್ಲಿ ಹೆಸರು ನೊಂದಾಯಿಸಿ, ಸಕ್ರಿಯವಾಗಿ ಕುರಿ ಸಾಕಾಣಿಕೆಯಲ್ಲಿ ತೊಡಗಿರುವ ಕುರಿಗಾಯಿಗಳನ್ನು ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ವಿವಿಧ ಸೌಲಭ್ಯಗಳ ಫಲಾನುಭವಿಗಳಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ನೇತೃತ್ವದ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತಿತ್ತು.ಆದರೆ ಈಗ ಫಲಾನುಭವಿಗಳ ಆಯ್ಕೆ ಅಧಿಕಾರವನ್ನು ಶಾಸಕರಿಗೆ ವಹಿಸಲಾಗಿದೆ.ಶಾಸಕರ ನೇತೃತ್ವದ ಸಮಿತಿಯಿಂದ ಸೌಲಭ್ಯಗಳು ಶಾಸಕರ ಹಿಂಬಾಲಕರು, ಅನುಯಾಯಿಗಳಿಗೆ ದೊರೆಯುತ್ತದೆಯೋ ಹೊರತು, ನಿಜವಾದ ಫಲಾನುಭವಿಗಳಿಗೆ ದೊರೆಯುವುದಿಲ್ಲ. ಹಾಗಾಗಿ ಈ ಹಿಂದಿನ ರೀತಿಯೇ ಸಿ.ಇ.ಓ ನೇತೃತ್ವದ ಸಮಿತಿಯನ್ನು ಫಲಾನುಭವಿಗಳ ಆಯ್ಕೆಗೆ ಮುಂದುವರೆಸಬೇಕೆಂಬುದು ರಾಜ್ಯದ ಕುರಿಗಾಯಿಗಳ ಆಗ್ರಹವಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು 694 ಕುರಿಗಾಯಿ ಸಹಕಾರ ಸಂಘಗಳಿದ್ದು,ಲಕ್ಷಾಂತರ ಜನರು ಸದಸ್ಯರಾಗಿದ್ದಾರೆ.ಜಿಲ್ಲೆಯಲ್ಲಿ 22 ಕುರಿಗಾಯಿ ಸಹಕಾರ ಸಂಘಗಳಿದ್ದು,35 ಸಾವಿರಕ್ಕೂ ಹೆಚ್ಚು ಜನ ಸದಸ್ಯತ್ವ ಪಡೆದಿದ್ದಾರೆ.ನಿಗಮದ ನಿಯಮದ ಪ್ರಕಾರ,ಸಹಕಾರ ಸಂಘಗಳಲ್ಲಿ ನೊಂದಾಯಿಸಿರುವ ಸದಸ್ಯರಿಗೆ ಮಾತ್ರ ಸರಕಾರದ ಸವಲತ್ತುಗಳು ಹಂಚಿಕೆಯಾಗಬೇಕು.ಆದರೆ 21-02-2026ರ ಪರಿಷ್ಕøತ ಆದೇಶದಲ್ಲಿ ಈ ಷರತ್ತನ್ನು ರದ್ದು ಮಾಡಿ, ಶಾಸಕರಿಗೆ ಫಲಾನುಭವಿಗಳ ಆಯ್ಕೆ ಮಾಡುವ ಜವಾಬ್ದಾರಿ ನೀಡಿರುವುದು,ಕುರಿಗಾಯಿ ಸಹಕಾರ ಸಂಘಗಳ ಅಸ್ಥಿತ್ವವನ್ನೇ ಪ್ರಶ್ನಿಸುವಂತಿದೆ.ಸ್ವತಹಃ ನಾನು ಕುರಿಗಾಯಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಪರಿಶೀಲನೆ ನಡೆಸಿ,ಸದರಿ ಪರಿಷ್ಕøತ ಆದೇಶವನ್ನು ಹಿಂಪಡೆಯಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದು ಲಿಂಗರಾಜು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಜೆಟ್‍ನಲ್ಲಿ ಘೋಷಿಸಿದ ಅನುಗ್ರಹ ಯೋಜನೆಗೆ ಕಳೆದ 2024ರ ನವೆಂಬರ್‍ನಿಂದ ಪರಿಹಾರದ ಹಣ ಬಿಡುಗಡೆಯಾಗಿಲ್ಲ.ರಾಜ್ಯದಲ್ಲಿ ಸುಮಾರು 21 ಕೋಟಿ ಬಾಕಿ ಇದ್ದು, ತುಮಕೂರು ಜಿಲ್ಲೆಗೆ 7 ಕೋಟಿ ರೂ ಪರಿಹಾರದ ಧನ ಬಾಕಿ ಬರಬೇಕಾಗಿದೆ.ಸರಕಾರದ ಅನುದಾನ ನೀಡಲು ವಿಳಂಭ ಮಾಡಿದ ಹಿನ್ನೆಲೆಯಲ್ಲಿ ಹಲವು ಕುರಿ ಗಾಯಿಗಳು ಅರ್ಜಿ ಸಲ್ಲಿಸುವುದೇ ನಿಲ್ಲಿಸಿದ್ದಾರೆ.ಅಲ್ಲದೆ ಕುರಿಗಾಯಿ ಸಹಕಾರ ಸಂಘಗಳಿಗೆ ನೀಡುತ್ತಿದ್ದ ಸುತ್ತ ನಿಧಿಯನ್ನು ರದ್ದು ಮಾಡಿದ್ದಾರೆ.ಮುಖ್ಯಮಂತ್ರಿಗಳ ನಡೆಯನ್ನು ನಾವು ಖಂಡಿಸುತ್ತೇವೆ ಎಂದರು.

ಮೇಲಿನ ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟು ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೋಡೋಣ ಎಂಬ ಹಾರಿಕೆ ಉತ್ತರವಾಗಿ ಕುರಿ ಗಾಯಿಗಳ ಸಹಕಾರ ಸಂಘದ ನಿಯೋಗಕ್ಕೆ ಮುಖ್ಯಮಂತ್ರಿಗಳು ನೀಡಿದ್ದಾರೆ.ಮಾರ್ಚ್ 06 ರ ಬಜೆಟ್‍ನವರೆಗೂ ಕಾಯುತ್ತೇವೆ. ನಮಗೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೆ,2026ರ ಮಾರ್ಚ್ 12 ರಂದು ರಾಜ್ಯದ ಎಲ್ಲಾ ಕುರಿಗಾಯಿ ಸಹಕಾರ ಸಂಘಗಳ ಸದಸ್ಯರು, ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ , ಕುರಿ ಮಹಾಮಂಡಲದ ಎಲ್ಲರೂ ಸೇರಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಲಿಂಗರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಕುರಿಗಾಯಿ ಸಹಕಾರ ಸಂಘಗಳ ಸದಸ್ಯರಾದ ತಿರುಮಲ, ರಾಮಚಂದ್ರಪ್ಪ, ಲಕ್ಷ್ಮೀಶರೆಡ್ಡಿ, ರಾಮಕೃಷ್ಣ, ಅನಿಲ್‍ಕುಮಾರ್, ಕೃಷ್ಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *