ತುಮಕೂರು: ಏಕವ್ಯಕ್ತಿಯ ಪೂಜೆ ಮತ್ತು ವ್ಯಕ್ತಿತ್ವದ ಅತಿಯಾದ ವೈಭವೀಕರಣವು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾಗಿದೆ ಎಂದು ಮಾಜಿ ಶಾಸಕ ಹಾಗೂ ಸಂಸದೀಯ ಪಟು ವೈ.ಎಸ್.ವಿ. ದತ್ತ ಅವರು ಅಭಿಪ್ರಾಯಪಟ್ಟರು.
ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಓSS) ವತಿಯಿಂದ ತುಮಕೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಾ. 5 ಗುರುವಾರದಂದು ಆಯೋಜಿಸಲಾಗಿದ್ದ “ವಿಕಸಿತ್ ಭಾರತ್ ಯೂತ್ ಪಾರ್ಲಿಮೆಂಟ್-2026” ಜಿಲ್ಲಾ ಮಟ್ಟದ ಯುವ ಸಂಸತ್ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದು ಎಂದು ಒತ್ತಿ ಹೇಳಿದ ದತ್ತ ಅವರು, ಇಂದಿನ ಸಂಕ್ರಮಣ ಕಾಲದಲ್ಲಿ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿವರಿಸಿದರು.
50 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಸ್ಮರಿಸಿದ ಅವರು, “ತುರ್ತು ಪರಿಸ್ಥಿತಿ ಎಂದರೆ ಪ್ರಜಾಪ್ರಭುತ್ವವನ್ನು ಬದಿಗೊತ್ತಿ ಏಕಚಕ್ರಾಧಿಪತ್ಯ ಸ್ಥಾಪಿಸುವುದು. ಸರಿ-ತಪ್ಪುಗಳ ವಿವೇಚನೆಯಿಲ್ಲದೆ ನಡೆಯುವ ಇಂತಹ ಆಡಳಿತ ವ್ಯವಸ್ಥೆ ಮತ್ತೆ ಬರಬಾರದು,” ಎಂದರು.
ಸಂಸದೀಯ ವ್ಯವಸ್ಥೆಯಲ್ಲಿ ನಾವು ಯಾರ ಅಡಿಯಾಳುಗಳಲ್ಲ. ಪ್ರಜಾಪ್ರಭುತ್ವ ಗಟ್ಟಿಯಾಗಲು ಅಲ್ಲಮನ ತಾತ್ವಿಕತೆ, ಬಸವಣ್ಣನವರ ಜನಪರತೆ ಹಾಗೂ ಅಂಬಿಗರ ಚೌಡಯ್ಯನವರ ಆಕ್ರೋಶ (ಸಿಟ್ಟು) ಇಂದಿನ ಯುವಕರಲ್ಲಿ ಇರಬೇಕು ಎಂದು ಕರೆ ನೀಡಿದರು.
ಇಂದಿನ ತಲೆಮಾರು ಮಹಾತ್ಮ ಗಾಂಧೀಜಿಯವರನ್ನು ಅರಿಯುವುದು ಅನಿವಾರ್ಯ. ಈ ಸಂದರ್ಭದಲ್ಲಿ ಅವರು ಜಿ.ಎಸ್. ಶಿವರುದ್ರಪ್ಪ ಹಾಗೂ ಗೋಪಾಲಕೃಷ್ಣ ಅಡಿಗರ ಕವನಗಳನ್ನು ಉಲ್ಲೇಖಿಸಿ ಸಂಸದೀಯ ಮೌಲ್ಯಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತನಾಡಿ, ಯುವಕರು ಮನಸ್ಸು ಮಾಡಿದರೆ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ವಿದ್ಯಾರ್ಥಿಗಳು ಸಕ್ರಿಯವಾಗಿ ರಾಜಕಾರಣಕ್ಕೆ ಬರಬೇಕು. ಎನ್ಎಸ್ಎಸ್ ಶಿಬಿರಗಳು ಶಿಸ್ತು, ಪ್ರಾಮಾಣಿಕತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದರು.
ಪರೀಕ್ಷಾಂಗ ಕುಲಸಚಿವರಾದ ಪೆÇ್ರ. ಮೋಹನ್ ಎಚ್.ಎಸ್ ಮಾತನಾಡಿ, ಯುವಜನತೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಮತ್ತು ಗಾಂಧೀಜಿಯವರ ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನ ಸಂಯೋಜಕರಾದ ಡಾ. ನಾಗಭೂಷಣ್ ಬಗ್ಗನಡು ಸ್ವಾಗತಿಸಿದರು. ವಿಜ್ಞಾನ ಕಾಲೇಜಿನ ಪ್ರಾಂಶುಪಾರಾದ ಪೆÇ್ರ. ಎಸ್. ಶ್ರೀನಿವಾಸ, ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ಪೆÇ್ರ. ಎಂ. ಶೇಟ್ ಪ್ರಕಾಶ್, ಸೇರಿದಂತೆ ಹಲವಾರು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.