ತುಮಕೂರು : ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವು ಏಪ್ರಿಲ್ 1ರಂದು ಬೆಳಿಗ್ಗೆ 11ಗಂಟೆಗೆ ಸಿದ್ಧಗಂಗಾ ಮಠದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರಿ ಸಿದ್ಧಲಿಂಗಸ್ವಾಮಿಗಳು ತಿಳಿಸಿದರು.
ಭಾನುವಾರದಂದು ಮಠದ ಆಡಳಿತ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವ್ಯ ನೇತೃತ್ವವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮಿಗಳು ವಹಿಸಲಿದ್ದು, ದಿವ್ಯ ಸಾನಿಧ್ಯವನ್ನು ಮೈಸೂರಿನ ಸುತ್ತೂರು ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮಿಗಳು ವಹಿಸಲಿದ್ದು, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಡಾ.ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.

ಗೌರವ ಅತಿಥಿಗಳಾಗಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್, ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ, ಕೇಂದ್ರ ಸರ್ಕಾರದ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರುಗಳಾದ ಕೆ.ಎನ್.ರಾಜಣ್ಣ, ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಗಿನ ಜಾವ ವಿವಿಧ ವಿಶೇಷ ಪೂಜೆಗಳು ನಡೆಯಲಿದ್ದು, ಬೆಳಿಗ್ಗೆ 8ಗಂಟೆಗೆ ಡಾ.ಶ್ರೀ ಶಿವಕುಮಾರಸ್ವಾಮಿಗಳ ಪುತ್ಥಳಿಯ ಉತ್ಸವ ನಡೆಯಲಿದ್ದು, ಮಧ್ಯಾಹ್ನ ಬೆಂಗಳೂರಿನ ಜ್ಯೋತಿ ಚೇತನ್ ತಂಡದಿಂದ ವೀಣಾ ವಾದನ ಮತ್ತು ಮೈಸೂರಿನ ಶೈಲಾ ಸಿದ್ಧರಾಮಪ್ಪ ತಂಡದ 119 ಮಹಿಳೆಯರಿಂದ ವಚನ ಗಾಯನ ನಡೆಯಲಿದೆ ಎಂದು ತಿಳಿಸಿದರು.
ಮಠಕ್ಕೆ ಬರುವವರಿಗೆ ವಿಶೇಷ ಸೂಚನೆ : ಶ್ರೀಗಳ ಜಯಂತಿಗೆ ತುಮಕೂರು ಕಡೆಯಿಂದ ಮಠಕ್ಕೆ ಬರುವ ಭಕ್ತಾದಿಗಳು ಎಪಿಎಂಸಿ ಯಾರ್ಡ್ ಪಕ್ಕದ ಸರ್ವಿಸ್ ರಸ್ತೆಯ ಮೂಲಕ ಬಂಡೆಪಾಳ್ಯದ ಮುಖಾಂತರ ದನಗಳ ಜಾತ್ರೆಯ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿ ಬರುವುದು, ಕ್ಯಾತ್ಸಂದ್ರದಿಂದ ಮತ್ತು ಕ್ಯಾತ್ಸಂದ್ರ ರೈಲ್ವೆ ನಿಲ್ದಾಣದಿಂದ ಬರುವವರು ಕ್ಯಾತ್ಸಂದ್ರ ಅಂಡರ್ ಪಾಸ್ ಮೂಲಕ ಬರಲು ತಿಳಿಸಲಾಗಿದೆ.
ಜಯಂತಿಗೆ ಬರುವ ಭಕ್ತಾದಿಗಳು ನೀರಿನ ಬಾಟಲ್, ಆಯುಧ, ಬೆಂಕಿ ಕಾರಕ ವಸ್ತುಗಳನ್ನು ತರುವುದನ್ನು ನಿಷೇದಿಸಲಾಗಿದೆ. ಜಯಂತಿಗೆ ಬರುವವರು ಬೆಳಿಗ್ಗೆ 10ಗಂಟೆಯೊಳಗೆ ಕಡ್ಡಾಯವಾಗಿ ಬರಬೇಕು ಆನಂತರ ಬರುವವರು ವಸ್ತುಪ್ರದರ್ಶನ ಗೇಟ್ ಮುಖಾಂತರ ಬರಲು ವ್ಯವಸ್ಥೆ ಇರುತ್ತದೆ ಎಂದು ಮಠದ ಆಡಳಿತಾಧಿಕಾರಿ ಜೈ ವಿಭವ ಸ್ವಾಮಿ ತಿಳಿಸಿದರು.
ಪತ್ರಿಕಾಗೋóಷ್ಠಿಯಲ್ಲಿ ನಂಜುಂಡಪ್ಪ, ಶಿವಕುಮಾರಯ್ಯ ಮುಂತಾದವರು ಉಪಸ್ಥಿತರಿದ್ದರು.