ತುಮಕೂರು : ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬರೂ ಉತ್ತಮವಾದ ಆರೋಗ್ಯ ಸೇವೆಯನ್ನು ಪಡೆಯುವಂತೆ ನೋಡಿಕೊಳ್ಳುವುದು ಪ್ರತಿಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಸಾಹೇ ವಿಶ್ವ ವಿದ್ಯಾಲಯದ ಕುಲಾಧಿಪತಿಗಳು ಹಾಗೂ ರಾಜ್ಯ ಸರ್ಕಾರದ ಗೃಹಸಚಿವರಾದ ಡಾ.ಜಿ. ಪರಮೇಶ್ವರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಅಗಲಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿನ ಹೆಚ್ ಎಂ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದಂತಹ ಇಂಡಿಯನ್ ಮಡಿಕಲ್ ಅಸೋಸಿಯೇಷನ್ ತುಮಕೂರುವತಿಯಿಂದ ಆಯೋಜಿಸಿದ್ದಂತಹ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವದಲ್ಲಿ ಅತೀ ಹೆಚ್ಚು ವೈದ್ಯರು ಹೊರಬರುತ್ತಿರುವುದು ಭಾರತದಿಂದ. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದು ಆರೋಗ್ಯ ಕ್ಷೇತ್ರದ ಮೇಲೆ. ಒಂದು ದೇಶದ ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಉತ್ತಮವಾದ ಆರೋಗ್ಯ ಸೇವೆಯನ್ನು ನಿಡುತ್ತಿದ್ದರೆ ಆ ದೇಶ ಆರೋಗ್ಯವಾಗಿರುತ್ತದೆ ಎಂದರು.
ವೈದ್ಯರು ಸಮಾಜಕ್ಕೆ ತಮ್ಮಿಂದ ಯಾವ ರೀತಿ ಸೇವೆಯನ್ನು ನೀಡಬೇಕು ಎಂಬುದನ್ನು ಚಿಂತಿಸಬೇಕು. ಇಂದು ಸಾಕಷ್ಟು ವಿದೇಶಿ ನೇರ ಬಂಡವಾಳಗಳು ಹೂಡಿಕೆಯಾಗುತ್ತಿರುವುದು ವೈದ್ಯಕೀಯ ಕ್ಷೇತ್ರದಲ್ಲಿ. ಇದು ಹೆಚ್ಚಾದರೆ ಸಾಮಾನ್ಯ ಬಡ ಜನರಿಗೆ ಉತ್ತಮವಾದ ಆರೋಗ್ಯ ಸೇವೆ ದೊರೆಯದೆ ಹೋಗಬಹುದು. ಹಾಗಾಗಿ ನಾವು ಇದಕ್ಕೆ ಹೆಚ್ಚು ಅವಕಾಶಮಾಡಿಕೊಡದೆ ಪ್ರತಿಯೊಬ್ಬರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಡಾ. ಜಿ ಪರಮೇಶ್ವರ್ ಹೇಳಿದರು.
ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ಗುಂಡೂರಾವ್ ಮಾತನಾಡಿ ವೈದ್ಯಕೀಯ ವೃತ್ತಿಯಲ್ಲಿ ಮಾನವೀಯತೆ ಜೊತೆಗೆ ಸೇವಾಮನೋಭಾವ ಇರುವುದು ಪ್ರಮುಖವಾಗಿದೆ. ಇಲ್ಲವಾದರೆ ವೈದ್ಯಕೀಯ ವೃತ್ತಿಗೆ ಮೌಲ್ಯವೇ ಇಲ್ಲದಂತಾಗುತ್ತದೆ. ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಮನೋಧರ್ಮ ವೈದ್ಯರಲ್ಲಿ ಇರಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಹಣವೇ ಮುಖ್ಯವಾಗದೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಕಡು ಬಡವರಿಗೂ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯಬೇಕು. ಇಂದು ವೈದ್ಯಕೀಯ ಕ್ಷೇತ್ರದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಕಾಯ್ದೆಗಳನ್ನು ರೂಪಿಸಲಾಗಿದೆ ಈ ಮೂಲಕ ವೈದ್ಯರು, ಶೃಶ್ರೂಷಕರ ರಕ್ಷಣೆ ಈ ಕಾಯ್ದೆಗಳ ಮೂಲಕ ಆಗುತ್ತದೆ ಎಂದು ಹೇಳಿದರು.
ಈ ಸಮ್ಮೆಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ್, ಐಎಂಎ ಕೇಂದ್ರ ಕಚೇರಿಯ ಕಾರ್ಯದರ್ಶಿ ಡಾ. ಶಾರ್ಬರಿ ದತ್ತ, ಸಮ್ಮೇಳನದ ಅಧ್ಯಕ್ಷರಾದ ಡಾ.ವೀರಭದ್ರಯ್ಯ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.