ತುಮಕೂರು : ಏಪ್ರಿಲ್ 1ರಿಂದ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ನೀಡಿದ್ದಾರೆ.
ತುಮಕೂರು ನಗರದ ವಿವಿಧ ಬಡಾವಣೆಗಳಿಗೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಮೊಬೈಲ್ ಮೂಲಕ ನಾಗರಿಕರು ಸ್ವಯಂ ಗಣತಿ ಮಾಡುವುದು ಹೇಗೆ ಎಂಬುದನ್ನು ಖುದ್ದು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ಭಾರತ ಸರ್ಕಾರ ಜನಗಣತಿ ಮಾಡುತ್ತದೆ. ಅಂತೆಯೇ ಇದೀಗ 2027ರ ಜನಗಣತಿ ಏಪ್ರಿಲ್ 1ರಿಂದ ಆರಂಭವಾಗಿದ್ದು ಏಪ್ರಿಲ್ 15ರವರೆಗೆ ಸ್ವಯಂ ಗಣತಿ ನಂತರ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಮಾಡಲಿದ್ದಾರೆ ಎಂದರು.
ದೇಶದ ಅಭಿವೃದ್ಧಿ ದೃಷ್ಟಿಯಿಂದ ಗಣತಿ ಕಾರ್ಯ ಪ್ರಮುಖ ಪಾತ್ರವಿದೆ ಎಂದ ಅವರು ದೆಶದ ಜನಸಂಖ್ಯೆ ಮಾಹಿತಿ ಪಡೆದು ಅದಕ್ಕನುಗುಣವಾಗಿ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳಿಗನುಸಾರ ನೀತಿಗಳನ್ನು ರೂಪಿಸಲು ಗಣತಿ ಅಂಕಿ ಅಂಶಗಳು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಜನರು ಜನಗಣತಿಯಲ್ಲಿ ಪಾಲ್ಗೊಳಬೇಕಿದೆ ಎಂದರು.
ಪ್ರಸ್ತುತ ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿ ಆರಂಭವಾಗಿದ್ದು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ವಿವರಗಳನ್ನು ದಾಖಲಿಸಬೇಕಿದೆ. ಈ ದಾಖಲೆಗಳು ಅತ್ಯಂತ ಗೌಪ್ಯವಾಗಿರಿಸಲಾಗುವುದು ಮತ್ತು ಇದು ಸರ್ಕಾರದ ಯೋಜನಗಳ ರೂಪಿಸುವ ಉದ್ದೇಶಕ್ಕೆ ಮಾತ್ರ ಬಳಕೆ ಆಗಲಿದೆ ಎಂದರು.
ತಮ್ಮ ಮೊಬೂಲ್ ನಲ್ಲಿ https://Se.census.gov.in ಈ ಲಿಂಕನ್ನು ತೆರೆದು ಅಲ್ಲಿ ತಮ್ಮ ಕುಟುಂಬ ಮುಖ್ಯಸ್ಥರು ವಿವರಗಳನ್ನು ದಾಖಲಿಸಬೇಕಿದೆ. ಕೇವಲ 33 ಪ್ರಶ್ನೆಗಳಿಗೆ 3 ನಿಮಿಷದಲ್ಲಿ ಉತ್ತರಿಸಿ ಗಣತಿ ಕಾರ್ಯವನ್ನು ಸುಲಭವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಬಹುದು ಎಂದರು.
ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಒಂದು ಐಡಿ ನಂಬರ್ ಬರುತ್ತದೆ ಅದನ್ನು ಸ್ಕ್ರೀನ್ ಷಾಟ್ ತೆಗೆದಿಟ್ಟುಕೊಂಡು ಏಪ್ರಿಲ್16ರಿಂದ ಗಣತಿದಾರರು ಮನೆ ಮನೆಗೆ ಗಣತಿಗಾಗಿ ಆಗಮಿಸಿದಾಗ ಈ ಐಡಿ ನಂಬರನ್ನು ತೋರಿಸಿದಲ್ಲಿ ಅದನ್ನು ಒಮ್ಮೆ ಪರಿಶೀಲಿಸಿ ಆಗಿದೆ ಎಂದು ನಮೂದಿಸಿಕೊಳ್ಳುತ್ತಾರೆ. ಈಗ ಮಾಡಿಲ್ಲದವರು ಗಣತಿದಾರರಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
1872ರಲ್ಲಿ ದೇಶದಲ್ಲಿ ಮೊದಲ ಜನಗಣತಿ ಮಾಡಲಾಗಿದ್ದು ಆ ನಂತರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಅಲ್ಲದೆ 1948ರ ಗಣತಿ ಕಾಯ್ದೆಯಂತೆ ಈ ಪ್ರಕ್ರಿಯೆ ನಡೆಯಲಿದ್ದು ಸಾರ್ವಜನಿಕರು ಸಹಕರಿಸಬೇಕು ಹಾಗೂ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ. ಮಾತನಾಡಿ, ಏಪ್ರಿಲ್ 1ರಿಂದ ತಮ್ಮ ಸಿಬ್ಬಂದಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಏಪ್ರಿಲ್ 16ರಿಂದ ಗಣತಿದಾರರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಐಡಿ ಕಾರ್ಡಿನೊಂದಿ ಅವರು ಬರಲಿದ್ದಾರೆ ಅದನ್ನು ಪರಿಶೀಲಿಸಿ ಸಾರ್ವಜನಿಕರು ಗಣತಿಗೆ ಮಾಹಿತಿ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.