ತುಮಕೂರು: ನವಭಾರತದ ನಿರ್ಮಾಣದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಪಾತ್ರ ಅನನ್ಯವಾಗಿದ್ದು, ದೇಶದ ರಕ್ಷಣಾ ಸಚಿವರಾಗಿ ಅವರು ತೋರಿದ ಚಾಣಕ್ಷತನ ಇತಿಹಾಸ ನಿರ್ಮಿಸಿದೆ. ಅಧಿಕಾರ ಎಂಬುದು ಕೆಲವರಿಗೆ ಕೇವಲ ಸ್ಥಾನಮಾನವಾದರೆ, ಇನ್ನು ಕೆಲವರಿಗೆ ಅದು ಸಮಾಜ ಪರಿವರ್ತನೆಯ ಸಾಧನವಾಗುತ್ತದೆ. ಅಂತಹ ಪರಿವರ್ತನೆಯ ಸಂಕೇತವಾಗಿ ಹೊರಹೊಮ್ಮಿದವರು ಬಾಬು ಜಗಜೀವನ್ ರಾಮ್ ಎಂದು ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಏ. 7 ಮಂಗಳವಾರದಂದು ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠದ ವತಿಯಿಂದ ಆಯೋಜಿಸಲಾಗಿದ್ದ ಅವರ 119ನೇ ಜನ್ಮ ದಿನಾಚರಣೆ ಹಾಗೂ ‘ನವಭಾರತ ನಿರ್ಮಾತೃ ಪ್ರಜ್ಞೆ ಮತ್ತು ಸಾಮಾಜಿಕ ನ್ಯಾಯದ ಕಾಯ್ದೆ, ಕೊಡುಗೆಗಳು’ ಎಂಬ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ ಇಲ್ಲದಿದ್ದರೂ ಸ್ಕಾಲರ್ಶಿಪ್ ಮೂಲಕ ಶಿಕ್ಷಣ ಪಡೆದ ಜಗಜೀವನ್ ರಾಮ್ ಅವರು ಇಂದಿನ ವಿದ್ಯಾರ್ಥಿಗಳಿಗೆ ದೊಡ್ಡ ಸ್ಪೂರ್ತಿಯಾಗಿದ್ದಾರೆ. ಇಂದು ಓದಲು ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಒಂದು ಗುರಿಯೊಂದಿಗೆ ಸಾಗಬೇಕು. ಸಾಧಕರನ್ನು ನೆನಪಿಸಿಕೊಳ್ಳುವುದು ಹೊಸ ತಲೆಮಾರಿಗೆ ಪ್ರೇರಣೆ ನೀಡುತ್ತದೆ. ಇಂದಿನ ಯುದ್ಧದ ಪರಿಸ್ಥಿತಿಯಲ್ಲಿ ನಮ್ಮ ದೇಶ ಭದ್ರವಾಗಿರಲು ಇಂತಹ ಮಹಾನ್ ವ್ಯಕ್ತಿಗಳೇ ಕಾರಣ. ಮಾಹಿತಿ ವಿನಿಮಯಕ್ಕೆ ಹಾಗೂ ಕಾರ್ಮಿಕ ಸಚಿವರಾಗಿ ಶ್ರಮಿಕ ವರ್ಗಕ್ಕೆ ಅವರು ನೀಡಿದ ಕೊಡುಗೆಗಳು ಅಪಾರವಾದವು. ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದವರು ಅವರು ದೇಶಕ್ಕೆ ತನ್ನದೆಯಾದ ಅಸ್ಮಿತೆಯನ್ನು ಪರಿಚಯಿಸಿದ್ದಾರೆ. ಬಾಬೂಜೀ ಅವರು ಅಸಮಾನತೆಯ ವಿರುದ್ಧ ಬಂಡಾಯವೆದ್ದು, ಶೋಷಿತ ಸಮುದಾಯದ ಧ್ವನಿಯಾಗಿ ಬೆಳೆದರು ಎಂದರು. 1971ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಕೇವಲ 13 ದಿನಗಳಲ್ಲಿ ಭಾರತ ಜಯಭೇರಿ ಬಾರಿಸಲು ಜಗಜೀವನ್ ರಾಮ್ ಅವರ ಸಮರ್ಥ ನಾಯಕತ್ವವೇ ಕಾರಣವಾಗಿತ್ತು ಎಂದು ಅವರು ಬಣ್ಣಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಚಿಂತಕ ಆರ್. ಲೋಕೇಶ್ ಅವರು ಮಾತನಾಡಿ, ಪ್ರಸ್ತುತ ಎ ಐ (ಂI) ಯುಗದಲ್ಲಿಯೂ ಜಗಜೀವನ್ ರಾಮ್ ಅವರ ಚಿಂತನೆಗಳು ಪ್ರಸ್ತುತವಾಗಿವೆ. 1970ರ ದಶಕದಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭದಲ್ಲಿ ಜಗಜೀವನ್ ರಾಮ್ ಅವರು ತೋರಿದ ಧೈರ್ಯ ಅಪ್ರತಿಮವಾದದ್ದು. ‘ಡಿಪ್ರೆಸ್ಡ್ ಕ್ಲಾಸಸ್ ಲೀಗ್’ ಆರಂಭಿಸಿದ ಅವರು ಬ್ರಿಟಿಷ್ ಸರ್ಕಾರದ ಮಧ್ಯಂತರ ಆಡಳಿತದಲ್ಲಿ ಕಾರ್ಮಿಕ ಸಚಿವರಾಗಿ ತಮಗೆ ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡರು. ಸದೃಢ ಭಾರತದ ನಿರ್ಮಾಣಕ್ಕೆ ಯುವ ರಾಜಕಾರಣಿಗಳ ಅಗತ್ಯವಿದ್ದು, ರಾಜಕೀಯ ಕ್ಷೇತ್ರವನ್ನು ಸರಿಪಡಿಸುವ ಜವಾಬ್ದಾರಿ, ಸಂವಿಧಾನ ಮತ್ತು ದೇಶದ ಸಂಪತ್ತನ್ನು ರಕ್ಷಿಸುವ ಹೊಣೆಗಾರಿಕೆ ಇಂದಿನ ಯುವಜನತೆಯ ಮೇಲಿದೆ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತನಾಡಿ, ಮಹನೀಯರ ಜನ್ಮದಿನಾಚರಣೆಗಳನ್ನು ಆಯೋಜಿಸುವುದು ಮತ್ತು ಗಣ್ಯರನ್ನು ಆಹ್ವಾನಿಸುವುದು ಕೇವಲ ಸಂಪ್ರದಾಯಕ್ಕಾಗಿ ಅಲ್ಲ; ಬದಲಿಗೆ ಅವರ ಉದಾತ್ತ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ಪಸರಿಸುವ ಮೂಲಕ ಅವರಲ್ಲಿ ಸುಪ್ತ ಮನೋಭಾವಗಳನ್ನು ಎಚ್ಚರಿಸುವುದೇ ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶ,. ನಮ್ಮ ವಿಶ್ವವಿದ್ಯಾನಿಲಯದಿಂದ ಪ್ರತಿಭಾವಂತ ಬಡ ಕುಟುಂಬದ ಐವರು ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಲಂಡನ್ಗೆ ಕಳುಹಿಸಿರುವುದು ವಿವಿಯ ಹೆಮ್ಮೆಯ ಸಾಧನೆಯಾಗಿದೆ. ತುಮಕೂರು ವಿವಿಯ ಸಮಗ್ರ ಅಭಿವೃದ್ಧಿಯೇ ನನ್ನ ಕನಸು. ಈ ಸಂಸ್ಥೆಗೆ ನಾನು ಕೇವಲ ಕುಲಪತಿಯಾಗಿ ಬಂದಿಲ್ಲ, ಬದಲಿಗೆ ಒಬ್ಬ ಸಾಮಾನ್ಯ ಕೆಲಸಗಾರನಾಗಿ ದುಡಿದು ವಿವಿಯನ್ನು ಉನ್ನತ ಪಥಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇನೆ. ವಿದ್ಯಾರ್ಥಿಗಳ ಹಸಿವು ನೀಗಿಸಲು ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ 2026ನೇ ಸಾಲಿನ ಡಾ. ಬಾಬು ಜಗಜೀವನ್ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ನರಸೀಯಪ್ಪ ಅವರನ್ನು ಗೌರವಿಸಲಾಯಿತು.
ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠದ ಸಂಯೋಜಕರಾದ ಡಾ. ದ್ವಾರಕನಾಥ್ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವರಾದ ಡಾ. ಮೋಹನ್ ಎಚ್.ಎಸ್., ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ಡಾ. ಎಸ್. ಶ್ರೀನಿವಾಸ್, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.