ತುಮಕೂರು: ಈ ಸಾಲಿನ ರಾಜ್ಯ ಮಟ್ಟದ ಬಾಬೂ ಜಗಜೀವನರಾಮ್ ಪ್ರಶಸ್ತಿ ಪುರಸ್ಕøತರಾಗಿರುವ ನಗರಸಭೆ ಮಾಜಿ ಸದಸ್ಯ ನರಸಿಯಪ್ಪ ಅವರನ್ನು ಮಾದರ ಮಹಾಸಭಾದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಅವರು ಈ ವೇಳೆ ಮಾತನಾಡಿ, ಹಲವಾರು ವರ್ಷಗಳಿಂದ ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಶೋಷಿತರ ಪರವಾಗಿ ಹೋರಾಟ ಮಾಡಿಕೊಂಡು ಬಂದಿರುವ ನರಸಿಯಪ್ಪನವರಿಗೆ ಬಾಬೂ ಜಗಜೀವನರಾಮ್ ಪ್ರಶಸ್ತಿ ದೊರಕಿರುವುದು ಅವರ ಅರ್ಹತೆ, ಹೋರಾಟಕ್ಕೆ ಸಂದ ಗೌರವ ಎಂದು ಹೇಳಿದರು.
ಸಜ್ಜನ, ಸಹೃದಯಿಯಾಗಿರುವ ನರಸಿಯಪ್ಪನವರು ತುಮಕೂರು ನಗರಸಭೆ ಸದಸ್ಯರಾಗಿ, ಖಾದಿ ಬೋರ್ಡ್ ಅಧ್ಯಕ್ಷರಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ ಸಾರ್ವಜನಿಕವಾಗಿ ಗುರುತಿಸಿಕೊಂಡು ಹೆಸರಾಗಿದ್ದಾರೆ. ಪ್ರತಿಷ್ಠಿತ ಬಾಬೂ ಜಗಜೀವನರಾಮ್ ಪ್ರಶಸ್ತಿ ಪಡೆಯುವ ಮೂಲಕ ನರಸಿಯಪ್ಪನವರು ತುಮಕೂರಿಗೆ ಕೀರ್ತಿ ತಂದಿದ್ದಾರೆ ಎಂದು ವೈ.ಹೆಚ್. ಹುಚ್ಚಯ್ಯ ಅಭಿನಂದಿಸಿದರು.
ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ. ಬಾಲಕೃಷ್ಣಪ್ಪ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಗಂಗರಾಜು, ಸಿದ್ಧಗಂಗಮ್ಮ, ಮಾದರ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹೆಚ್.ಎ. ಆಂಜನಪ್ಪ, ಕಾರ್ಯದರ್ಶಿ ದಾಸಪ್ಪ, ಮುಖಂಡ ನಟರಾಜಪ್ಪ, ಗೌತಮ ಪ್ರೌಢಶಾಲೆ ಮುಖ್ಯಶಿಕ್ಷಕ ನರಸಿಂಹಮೂರ್ತಿ ಸೇರಿದಂತೆ ಮಹಾಸಭಾದ ಸದಸ್ಯರು ಹಾಜರಿದ್ದರು.