ಜನಸ್ಪಂದನ ಕಾರ್ಯಕ್ರಮ 700 ಅಹವಾಲುಗಳನ್ನು ಸ್ವೀಕರಿಸಿದ ಸಚಿವ ಡಾ: ಜಿ. ಪರಮೇಶ್ವರ

ತುಮಕೂರು : ಜನರ ಸಮಸ್ಯೆಗೆ ಸ್ಪಂದಿಸುವುದೇ ಒಳ್ಳೆಯ ಆಡಳಿತ, ಈ ನಿಟ್ಟಿನಲ್ಲಿ ಇಂದಿನ ಜನ ಸ್ಪಂದನ ಕಾರ್ಯಕ್ರಮದಲ್ಲಿ ಗರಿಷ್ಠ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ.

ತುಮಕೂರು ಜಿಲ್ಲಾಡಳಿತದಿಂದ ಬುಧವಾರ ನಗರ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಯಾರಿಗೆ ಸುದೀರ್ಘವಾದ ಸಮಸ್ಯೆಗಳಿರುತ್ತವೆ. ಅಂತಹ ಸಮಸ್ಯೆಗಳನ್ನು ಕಾನೂನು ಚೌಕಟ್ಟಿನಲ್ಲಿ ಪೂರ್ಣಗೊಳಿಸಲಾಗುವುದು. ಇದಕ್ಕೆ ಯಾರ ಶಿಫಾರಸ್ಸು ನಡೆಯುವುದಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡಲು ಆಗುವುದಿಲ್ಲ. ಸರ್ಕಾರ ಜನರ ಹತ್ತಿರ ಹೋಗಿ ಆಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಬೇಕು, ಸುಲಭವಾಗಿ ಸಿಗಬೇಕು ಎಂಬ ನಿಟ್ಟಿನಲ್ಲಿ ಜನಸಂದರ್ಶನ ಕಾರ್ಯಕ್ರಮ ಮಾಡಲಾಗಿದೆ.

ಜನಸಮುದಾಯದ ಸಮಸ್ಯೆಗಳನ್ನು ಆಲಿಸಿ, ಕೂಡಲೇ ಬಗೆಹರಿಸಲು ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ ಆಯಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಎಲ್ಲ ಅಧಿಕಾರಿಗಳು ಜನರ ಸ್ಪಂದನೆ ಮಾಡುತ್ತ ಬಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ ಮಾಡಿಕೊಂಡು ಬಂದಿದ್ದಾರೆ.

ಜಿಲ್ಲಾಧಿಕಾರಿಗಳು ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಿದ್ದಾರೆ. ಎಲ್ಲ ತಾಲ್ಲೂಕುಗಳಿಂದ 2500 ಅರ್ಜಿಗಳು ಬಂದಿವೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು 15 ದಿವಸದೊಳಗೆ ಮಾಡಬೇಕು ಎಂದು ಸೂಚಿಸಿದಾಗ ಕೆಲಸಗಳು ಆಗುತ್ತವೆ. ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲೆಗುಂಪಾಗಿದ್ದ ಕೆಲಸಗಳು ಇಂದು ಪೂರ್ಣಗೊಂಡಿವೆ ಎಂದರು.

ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 700ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಆ ಅರ್ಜಿಗಳನ್ನು ಖುದ್ದು ಸಹಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ. ಅಧಿಕಾರಿಗಳು ಕಾಲಮಿತಿಯಲ್ಲಿ ಈ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿರುವುದಾಗಿ ಅವರು ತಿಳಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅತಿ ಹೆಚ್ಚು 450 ಅರ್ಜಿಗಳು ಬಂದಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 13, ಆರ್‍ಡಿಪಿಆರ್‍ಗೆ 40 ಅರ್ಜಿ, ಮಹಾನಗರ ಪಾಲಿಕೆಗೆ 33 ಅರ್ಜಿ ಬಂದಿವೆ. ಎಸಿ, ತಹಶೀಲ್ದಾರ್‍ಗಳು ಆಯಾ ಹಂತದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಕಾಣಿಸುತ್ತದೆ. ತಹಶೀಲ್ದಾರ್‍ಗಳಿಗೆ ಸಂಬಂಧಿಸಿದ್ದು ಹೆಚ್ಚಿನ ದೂರುಗಳು ಬಂದಿವೆ. ಸರಿಯಾಗಿ ಸ್ಪಂದಿಸದೆ ಹೋದರೆ ಹೀಗೆ ಆಗುತ್ತದೆ. ಕೇವಲ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಮಾಡಲು ಒಂದು ವರ್ಷದಿಂದ ತಿರುಗಾಡುತ್ತಿದ್ದಾರೆ. ಕೋರ್ಟ್ ಆದೇಶ ಬಂದಾಗ ಅನುμÁ್ಠನಗೊಳಿಸಬೇಕಾದದು ಕಾನೂನಿನಲ್ಲಿ ಕೊಟ್ಟಿರುವ ಅಧಿಕಾರ. ಇದನ್ನು ಮಾಡದೆ ಜನರನ್ನು ಅಲೆದಾಡಿಸುವಂತೆ ಮಾಡುವುದು ಯಾವ ನ್ಯಾಯ? ಇದೇ ರೀತಿಯ ಮುಂದುವರೆದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕಾಗುತ್ತದೆ ಎಂದು ಸೂಚಿಸಿರುವುದಾಗಿ ಅವರು ತಿಳಿಸಿದರು.

ಸುಮಾರು 3 ಗಂಟೆಗಳ ಕಾಲ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಮಸ್ಯೆಗಳನ್ನು ಹೊತ್ತ ಸಾರ್ವಜನಿಕರು, ರೈತರು ಅರ್ಜಿಗಳನ್ನು ಹಿಡಿದು ಸಾಲುಸಾಲಾಗಿ ಸಚಿವರ ಮುಂದೆ ಆಗಮಿಸಿ ಅಹವಾಲು ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ. ಸುರೇಶ್ ಗೌಡ, ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಬಿ.ಎಂ.ಟಿ.ಸಿ. ಉಪಾಧ್ಯಕ್ಷ ನಿಖೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *