ಹಾಳಾದ ತೀಟ ನೆನಪಿಗೇ ಬರಲಿಲ್ಲ, (Trigonometry) ಬದುಕಿನ ಪಾಠ ಕಲಿಸಿದ ಬಿ.ಕೆ.ಎಂ.(ಪ್ರೊ.ಬಿ.ಕೆ.ಮಲ್ಲೇಶ್) ಮೇಷ್ಟ್ರು

ಅವರನ್ನು ಮೊದಲ ಸಲ ನೋಡಿದರೆ ಎಂತಹವರು ಹೆದರಿಕೊಳ್ಳಬೇಕು, ದೊಡ್ಡ ಶರೀರ, ದಪ್ಪ-ಉದ್ದ ಮೀಸೆ ಅಗಲಗಣ್ಣು ಬಾಯಿ ತುಂಬಾ ಹಲ್ಲು ತೋರಿಸುತ್ತಾ ಒಮ್ಮೆ ನಗುತ್ತಾ ನೋಡಿದರೆ ಎಂತಹವರ ಎದೆಯು ಛಲ್ಲೆನ್ನಬೇಕು.

ನಾನು ಮೊದಲ ಪಿಯುಸಿಗೆ ತುಮಕೂರಿನ ವಿಜ್ಞಾನ ಕಾಲೇಜಿಗೆ (ಈಗಿನ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು) ಸೇರಿದಾಗ ಮೊದಲ ತರಗತಿಯೆ ಗಣಿತ(ಮ್ಯಾಥಮ್ಯಾಟಿಕ್ಸ್) ದೊಡ್ಡ ಆಲದ ಮರದಂತಹ ದೊಡ್ಡ ಶರೀರದ ದಪ್ಪ ಮೀಸೆಯ, ದೊಡ್ಡ ಕಣ್ಣಿನ 50 ವಯಸ್ಸಿನ ವ್ಯಕ್ತಿಯೊಬ್ಬರು ಬಂದು ತರಗತಿಯ ಪ್ಲಾಟ್ ಫಾರಂ ಮೇಲೆ ನಿಂತು ಒಮ್ಮೆ ನಕ್ಕರು, ಆ ನಗುವಿಗೆ ವಿದ್ಯಾರ್ಥಿಗಳೆಲ್ಲಾ ಗಪ್-ಚಿಪ್.

ಅಷ್ಟರೊಳಗೆ ಜವಾನ ಹಾಜರಿ ಪುಸ್ತಕ, ಸೀಮೆಸುಣ್ಣ, ಡಸ್ಟರ್ ತಂದು ಮೇಜಿನ ಮೇಲೆ ಇಟ್ಟು ಹೋದರು, ಮತ್ತೆ ಇನ್ನೊಮ್ಮೆ ನಕ್ಕ ಅವರು, ತರಗತಿಯ ವಿದ್ಯಾರ್ಥಿಗಳನ್ನೆಲ್ಲಾ ಒಮ್ಮೆ ಎಣಿಸಿ, ಸರ್ವೋದಯ ಪ್ರೌಢಶಾಲೆಯಿಂದ ಯಾರ್ಯಾರು ಬಂದಿದ್ದೀರಿ ಎದ್ದೇಳಿ ಎಂದರು. ಸರ್ವೋದಯ ಶಾಲೆಯಿಂದ ಬಂದ ವಿದ್ಯಾರ್ಥಿಗಳು ನಮ್ಮನ್ನೆಲ್ಲಾ ಬುದ್ದಿವಂತರು ಅಂತ ಹೊಗಳುತ್ತಾರೆಂದು ಹತ್ತರಿಂದ ಹದಿನೈದು ಜನ ಎದ್ದು ನಿಂತರು.

ಒಬ್ಬೊಬ್ಬರ ಹೆಸರು, ಅವರು ತಂದೆ ಮಾಡುವ ಕೆಲಸ ಕೇಳಿಕೊಂಡ ಅವರು, ಅಮ್ಮ ಚೆನ್ನಾಗಿ ಮಾಡಿ ಹಾಕಿರಬೇಕು ಚೆನ್ನಾಗಿ ತಿಂದು ಬಂದಿದ್ದೀರ ಅಂತ ಮತ್ತೊಮ್ಮೆ ಗಹಗಹಿಸಿ ನಕ್ಕರು, ಅಷ್ಟಕ್ಕೆ ಸುಮ್ಮನಾಗದ ಅವರು ನೀವೆಲ್ಲಾ ‘ಚೌಳು’ ನೋಡಿದ್ದೀರ ಎಂದು ಕೇಳಿದಾಗ ಸರ್ವೋದಯ ವಿದ್ಯಾರ್ಥಿಗಳೆಲ್ಲಾ ಮೇಲೆ ಕೆಳಗೆ ಕಣ್ಣು ಬಿಟ್ಟುಕೊಂಡು ಬಾಯಿ ಮುಚ್ಚಿಕೊಂಡರು.

ನಿಮ್ಮಪ್ಪ ಚೆನ್ನಾಗಿ ಬಿಟ್ಟಿ ದುಡ್ಡು ತಂದು ಹಾಕಿಬಿಟ್ಟ, ನೀವು ಒಳ್ಳೆ ಬಟ್ಟೆ ಹಾಕಿಕೊಂಡು ಕಾಲೇಜಿಗೆ ಹೋಗೋದು, ಬರೋದು ಹೊರಗಿನ ಜ್ಞಾನ ಏನು ಅನ್ನೋದೆ ಗೊತ್ತಿಲ್ಲ ನೀವೆಲ್ಲಾ ಕತ್ತೆ ಕಾಯೋದಕ್ಕೆ ಲಾಯಕ್ಕು, ಯಾವಾನರ ಬಾಲ ಬಿಚ್ಚಿದರೆ ಕಟ್ ಮಾಡೋದು ನನಗೆ ಗೊತ್ತಿದೆ, ಯಾವಾನರ, ಯಾವಳಾರ ಈ ಕಾಲೇಜಿನಲ್ಲಿ ನಾನೇ ಬುದ್ದಿವಂತ ಅಂದುಕೊಂಡ್ರೆ ಇವತ್ತೆ ಬಾಲ ಕಟ್ಟು ಮಾಡಿ ಬಿಸಾಕಿ ಬಿಡ್ತೀನಿ, ಕೂತ್ಕಳಿ ದಡ್ಡ ಬಡ್ಡೆತ್ತೆವ ಅಂತ ಕೂರಿಸಿದರು.

ಹಳ್ಳಿಯಿಂದ ಬಂದಿರುವವರು ಯಾರ್ಯಾರು ಎದ್ದೇಳಿ ಎಂದುರು ಸುಮಾರು 25ರಿಂದ 30 ವಿದ್ಯಾರ್ಥಿಗಳು ಎದ್ದು ನಿಂತರು ಎಲ್ಲಾರ ಹೆಸರು, ಊರಿನ ಹೆಸರು, ತಂದೆ ಏನು ಕೆಲಸ ಮಾಡುತ್ತಾರೆ ಅಂತ ಕೇಳಿ, ನೋಡಿ ಇವರು ಜಾಣ ಮಕ್ಕಳು, ನೋಡ್ರೋ ಹುಡುಗ, ಹುಡುಗಿರು ಹಳ್ಳಿಯಿಂದ ಬಂದಿದ್ದೀರಿ, ನಿಮ್ಮಪ್ಪ-ಅಮ್ಮ, ದನ ಮೆಯಿಸೋದು, ಹೊಲದ ಕೆಲಸ, ಮನೆ ಕೆಲಸ ಅಂತ ನೂರೆಂಟು ಇರುತ್ತವೆ ಅವರಿಗೆ ಅಷ್ಟು ದುಡ್ಡು ಕೊಡಿ, ಇಷ್ಟು ದುಡ್ಡು ಕೊಡಿ ಅಂತ ಕಾಟ ಕೊಡಬೇಡಿ. ಇಲ್ಲಿ ಶೋಕಿ ಮಾಡಬೇಡಿ ಹವಾಯಿ ಚಪ್ಪಲಿಯಲ್ಲಿಯೇ ಬನ್ರಿ, ಚೆನ್ನಾಗಿ ಓದ್ರಿ, ದಿನ ಸ್ನಾನ ಮಾಡಿಕೊಳ್ಳಿ, ಒಂದೇ ಅಂಗಿ, ಪ್ಯಾಂಟ್ ಇರಲಿ ರಾತ್ರಿ ಒಗೆದು ಬೆಳಿಗ್ಗೆ ಇಟ್ಟಕೊಂಡು ಬನ್ನಿ, ಹುಡುಗ್ರು ಏನಾದರೂ ಕೆಲ್ಸ ಮಾಡಿ ರೂಂ ಬಾಡಿಗೆ ಕಟ್ಟಿ, ಊರಿಗೆ ಹೋದಾಗ ರಾಗಿ, ಅಕ್ಕಿ, ಚೆಟ್ನಿ ಪುಡಿ ತಂದಿಟ್ಟುಕೊಳ್ಳಿ, ಹುಡಿಗಿರು ಹಾಸ್ಟಲ್ ಸೇರಿಕೊಂಡು, ಯಾವೋನೋ ಹಿಂದೆ ತಿರುಗೋದು, ಸ್ಟೇಡಿಯಂಗೆ ಹೋಗೋದು ಮಾಡದೆ ಕುಕ್ಕರಿಸಿಕೊಂಡು ಓದಿ ನೀವೆಲ್ಲಾ ಹಳ್ಳಿ ಮಕ್ಕಳು ಜಾಣ ಮಕ್ಕಳು ಅಂದರು.

ನಾನು ಮುಂದಿನ ಬೆಂಚಿನಲ್ಲಿ ಕೂತಿದ್ದರಿಂದ ಯಾವೂರು ಅಂದರು ಹೊಸಹಳ್ಳಿ ಅಂದೆ, ಏ ಹೊಸಹಳ್ಳಿ ಚೌಳು ಅಂದ್ರೆ ಏನು ಅಂದರು,ನನಗೆ ಬೀಜ ಬಾಯಿಗೆ ಬಂದಗಾಯಿತು, ನಾನು ಸಾರ್ ಚಳಿಗಾಲದಲ್ಲಿ ಜೌಗು ಪ್ರದೇಶದಲ್ಲಿ ಬೆಳ್ಳಗೆ ಉಬ್ಬುತ್ತೆ, ಆ ಬಿಳಿ ಮಣ್ಣನ್ನು ನಾವೆಲ್ಲಾ ಹೋಗಿ ಗುಡಿಸಿಕೊಂಡು ಮನೆಯಲ್ಲಿ ಮಡಿಕೆಗೆ ಹಾಕಿ ಇಟ್ಟುಕೊಂಡು ಬಟ್ಟೆಗೆ ಸೋಪಿನಂತೆ ಹಾಕಿ ತೊಳದುಕೊಳ್ಳೂತ್ತೇವೆ ಎಂದಾಗ, ಪಕಾರ ನಕ್ಕು ಜಾಣ. ನೋಡ್ರೋ ಹಳ್ಳಿ ಮಕ್ಕಳು ಎಷ್ಟು ಜಾಣ ಇರುತ್ತಾರೆ, ಮತ್ತೆ ಹಾಸ್ಟಲ್ ಸೇರಿದ್ದೀಯ ಅಂದ್ರು, ನಾನು ಹೆದರುತ್ತಲೇ ಹೌದು ಸಾರ್ ಎಂದೆ, ಹಾಸ್ಟಲ್‍ನಲ್ಲಿ ಮುದ್ದೆ ತಿಂದು ಮಲಗಬೇಡ ಓದು ಕೂತ್ಕೋ ಅಂದ್ರು, ಹೋದ ಜೀವ ಬಂದಂತಾಯಿತು.

ನ್ಯಾನು ಯಾರು ಗೊತ್ತಾ ಪ್ರೊ. ಬಿ.ಕೆ. ಮಲ್ಲೇಶ್ ಅಂತ ಎರಡೆರಡು ಸಲ ಹೇಳಿ, ಆಗಿನ ಕಾಲಕ್ಕೆ ಆನರ್ಸ್ ನಲ್ಲಿ ಎಂ.ಎಸ್ಸಿ, ಮ್ಯಾಥ್ಯಮಾಟಿಕ್ಸ್ ಮಾಡಿರೋನು ನಿಮಗೆ ಟ್ರಿಗ್ನೋಮೀಟ್ರಿ ತಗೋತ್ತೀನಿ ಅಂದರು.

ಈಗ ಇನ್ನೊಂದು ವಿಷಯ ಯಾವಾನಾದ್ರೂ ಬಾರ್‍ಲೈನ್‍ಗೆ ಟ್ಯೂಷನ್‍ಗೆ ಹೋಗೋದು ಕಂಡ್ರೆ ಎಲ್ಲೆಲ್ಲಿ ಕಟ್ ಮಾಡುತ್ತೀನಿ ಗೊತ್ತಿಲ್ಲ ಅಂತ ತಮ್ಮ ದಪ್ಪ ಮೀಸೆ ನೀವಿಕೊಂಡು ಮೀಸೆ ಕುಣಿಸುತ್ತಾ ನಕ್ಕು, ಮುಖದ ಮೇಲೆ ಹರಿಯುತ್ತಿದ್ದ ಸೆಕೆ ನೀರನ್ನು ಒರಸಿಕೊಂಡರು.

ಅಂದು ಅವರು ಹಾಜರಾತಿ ಹಾಕಿ, ಕುರ್ಚಿ ಮೇಲೆ ಕೂರದೆ ಟೇಬಲ್ ಮೇಲೆ ಕೂತು, ನಾನು ಟ್ರಿಗ್ನೋಮೀಟರ್ ತಗೊಳೋದು ಅದರಲ್ಲಿ ಸೈನ್ ತೀಟ, ಕಾಸ್ ತೀಟ, ಟ್ಯಾನ್ ತೀಟ, ಕೋಸೆಂಟ್ ತೀಟ ಅಂತೆಲ್ಲ ಇರುತ್ತವೆ ಅಂತ ಹೇಳಿದರು. ವಿಜ್ಞಾನ ತರಗತಿಯಾದರೂ ಅವರು ಎಲ್ಲಿಯೂ ಇಂಗ್ಲೀಷ್ ನಲ್ಲಿ ಮಾತನಾಡಲೇ ಇಲ್ಲ, ನಾವು ಹಳ್ಳಿಯಿಂದ ಕನ್ನಡ ಮಾಧ್ಯಮದಿಂದ ಬಂದಿದ್ದರಿಂದ ಇಲ್ಲಿಯೂ ಕನ್ನಡದಲ್ಲೇ ಮಾತನಾಡಿದ್ದಕ್ಕೆ ಓದಲು ಸಮಸ್ಯೆ ಇಲ್ಲ ಅನ್ನಿಸಿತು. ಅಷ್ಟೊತ್ತಿಗೆ ಬೆಲ್ ಹೊಡೆಯಿತು ಅವರು ಹೋದರು, ನಾಲ್ಕು ತರಗತಿ ಇದ್ದುದರಿಂದ ಮತ್ತೆ ಮೂರು ಜನ ಅಧ್ಯಾಪಕರು ಬಂದು ಪರಿಚಯ ಮಾಡಿಕೊಂಡರೂ ಬಿ.ಕೆ.ಮಲ್ಲೇಶ್ ತರಹ ಮಕ್ಕಳಿಗೆ ನೀತಿಯನ್ನಾಗಲಿ, ಹೇಗೆ ಓದಬೇಕೆಂಬುದನ್ನು ಹೇಳದೆ ಅವರ ಪರಿಚಯ, ನಮ್ಮ ಪರಿಚಯ ಮಾಡಿಕೊಂಡು, ಅವರು ಪಾಠ ಮಾಡುವ ವಿಷಯದ ಬಗ್ಗೆ ಬರೆಸಿ ಪಾಠ ಮಾಡಿ ಹೋದರು.

ನಮಗೆ ಈ ಹಾಸ್ಟಲ್‍ಗಳಲ್ಲಿ ಕಜ್ಜಿಯಾಗಿ ತೀಟೆ ಗೊತ್ತಿತ್ತೆ ವಿನಃ ತೀಟ ಅನ್ನುವ ಒಂದು ಪಾಠ ಇರುತ್ತದೆ ಅಂತ ಬಿಕೆಎಂ ಹೇಳಿದಾಗಲೇ ಗೊತ್ತಾಗಿದ್ದು. ಮತ್ತೆ ಅವರ ತರಗತಿ ಬರುವ ತನಕ ಈ ತೀಟ ಎಷ್ಟು ನೆನಪಿಸಿಕೊಂಡರೂ ನೆನಪಿಗೆ ಬರಲಿಲ್ಲ, ಎಂದಾದರೂ ಕೇಳಿ ಬರೆದಿದ್ದರೆ ಅಲ್ಲವೆ ನೆನಪಿಗೆ ಬರೋದು, ಮತ್ತೆ ಅವರು ತರಗತಿಗೆ ಬಂದು Trigonometry ಅಂತ ಬರೆದು Sin Theeta ಅಂತ ಮತ್ತೆ ಬರೆದಾಗಲೇ ಹಾಳಾದ ತೀಟ ನೆನಪಾಗಿದ್ದು. ಬಿಕೆಎಂ ಏನಾದರೂ ಕೇಳಿದ್ದರೆ ನನ್ನ ಕತೆ ಗೋವಿಂದ.

ನನಗೆ ಬಿ.ಕೆ.ಮಲ್ಲೇಶ್ ಮೇಷ್ಟ್ರು ಸತತವಾಗಿ 5 ವರ್ಷ ಮೇಷ್ಟ್ರಾಗಿದ್ದರು, ಅವರು ಎಂದೂ ಪುಸ್ತಕ ತಂದು ಪಾಠ ಮಾಡಿದ್ದು ನೋಡಲೇ ಇಲ್ಲ, ಒಂದು ಸಣ್ಣ ಹಾಳೆಯಲ್ಲಿ ಲೆಕ್ಕಗಳನ್ನು ಬರೆದುಕೊಂಡು ಬರುತ್ತಿದ್ದರು, ನಾನು ಎಲ್ಲಿಗೆ ನಿಲ್ಲಿಸಿದ್ದೆ ಅಂತ ಕೇಳಿ, ಮುಂದಿನ ಲೆಕ್ಕ ಹಾಕಿ ಎಕ್ಸ್‍ಪ್ಲೌನ್ ಮಾಡೋರು, ಅಷ್ಟಾದ ಮೇಲೂ ಯಾರಿಗಾದರೂ ಅರ್ಥ ಆಗಿಲ್ಲವ ಮತ್ತೆ ಹೇಳುತ್ತೇನೆ ಅನ್ನೋರು, ತರಗತಿಯಲ್ಲಿ ನಾಚಿಕೆಯಾದ್ರೆ ನನ್ನ ಕೊಠಡಿಗೆ ಬಂದು ಕೇಳಬಹುದು ಅನ್ನೋರು.

ಆಗಾಗ ಸರ್ವೋದಯ ಶಾಲೆಯ ಮಕ್ಕಳನ್ನು ಎಬ್ಬಿಸಿ ಬೋರ್ಡ್ ಮೇಲೆ ಲೆಕ್ಕ ಹಾಕಿ ಮಾಡು ಅನ್ನೋರು ಮಾಡದಿದ್ದರೆ ವಾಚಾಮಗೋಚರ ಬೈಯೋರು, ಆದರೆ ಹಳ್ಳಿಮಕ್ಕಳಿಗೆ ಹಾಗೆ ಕೇಳುತ್ತಿರಲಿಲ್ಲ, ಆಗಾಗ ಬಾರ್ ಲೈನ್ ಗೆ ಹೋಗೋರು ಇದ್ರೆ ಹೇಳ್ರೋ ಅನ್ನೋರು, ಕೆಲವು ಗೆಳೆಯರು ಬಾರ್ ಲೈನ್‍ನ ಹೆಚ್.ಎಸ್.ಮಹದೇವಪ್ಪನವರ ಹತ್ತಿರ ಟ್ಯೂಷನ್ ಗೆ ಹೋಗೋರ ಹತ್ತಿರ ಟ್ಯೂಷನ್ ಗೆ ಹೋಗದೆ ಇದ್ದವರು ನೋಟ್ಸ್ ಕೇಳಿದಾಗ ಕೊಡದೆ ಇದ್ದಾಗ ಬಿ.ಕೆ.ಎಂ.ಗೆ ಇಂತಿಹವರು ಹೋಗ್ತಾರೆ ಅಂತ ಹೇಳಿದಾಗ ಅವರನ್ನೆಲ್ಲಾ ನಿಲ್ಸಿ ನಾಳೆ ಆ ನೋಟ್ಸ್ ತಂದು ಕೊಡಿ ಮುಖ್ಯವಾದ ಲೆಕ್ಕಗಳನ್ನು ಗುರುತು ಮಾಡಿಕೊಡುತ್ತೇನೆ ಅಂತ ಹೇಳಿ ನೋಟ್ಸ್ ತರಿಸಿಕೊಳ್ಳೋರು, ಹೆಚ್.ಎಸ್.ಮಹದೇವಯ್ಯ ಮಾಡಿಸಿದ ಲೆಕ್ಕಗಳನ್ನೆಲ್ಲಾ ಗುರುತು ಹಾಕಿಕೊಂಡು ಪರೀಕ್ಷೆಯಲ್ಲಿ ಆ ಪ್ರಶ್ನೆಗಳನ್ನೆಲ್ಲಾ ಬರದಂತೆ ನೋಡಿಕೊಳ್ಳುತ್ತಿದ್ದರು.

ಬಾರ್ ಲೈನ್ ಟ್ಯೂಷನ್ ಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿ ಉಳಿದ ವಿದ್ಯಾರ್ಥಿಗಳಿಗೆ ಕೆಲ ಲೆಕ್ಕಗಳನ್ನು ಕೊಟ್ಟು ಅವರಿಗೆ ತೋರಿಸ ಬೇಡಿ ಇವೆ ಪರೀಕ್ಷೆಗೆ ಬರೋದು, ಯಾವ್ಯಾನರ ತೋರಿಸಿದರೆ ಅವನ ಕತೆ ಅಷ್ಟೆ ಅನ್ನೋರು. ಪರೀಕ್ಷೆಯಲ್ಲಿ ಇವರು ಬರೆಸಿದ ಲೆಕ್ಕಗಳೇ ಬರುತ್ತಿದ್ದವು, ಬಾರ್ ಲೈನ್ ಟ್ಯೂಷನ್ ಹುಡುಗರ ಪಜೀತಿ ಹೇಳತೀರದು ಹಾಗೆ ಆಗುತ್ತಿತ್ತು. ಆಗಿನ ದ್ವಿತೀಯ ಪಿಯುಸಿ ಮತ್ತು ಪದವಿಗೆ ಪ್ರಶ್ನೆ ಪತ್ರಿಕೆಯನ್ನು ಬಿಕೆಎಂ ಅವರೇ ಬೋರ್ಡ್‍ನಲ್ಲಿ ಸೆಲೆಕ್ಟ್ ಮಾಡುತ್ತಿದ್ದರಂತೆ, ಕೆಲವು ಸಲ ಈ ಲೆಕ್ಕ ಮುಖ್ಯ ಅಂತ ಬರೆಸಿರೋರು ಆ ಲೆಕ್ಕಗಳೇ ಪರೀಕ್ಷಯಲ್ಲಿ ಬರುತ್ತಿದ್ದವು.

ಆಗಿನ ವಿಜ್ಞಾಣ ಕಾಲೇಜಿನಲ್ಲಿ ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕರಾಗಿದ್ದ ಬಿ.ಕೆ.ಮಲ್ಲೇಶ್‍ರವರಿಗೂ, ಹೆಚ್.ಎಸ್.ಮಹದೇವಪ್ಪ ಅವರಿಗೆ ಪ್ರಾಂಶುಪಾಲರ ಹುದ್ದೆಯ ವಿಷಯಕ್ಕೆ ಜಗಳ ನಡೆದು ಬಿ.ಕೆ.ಮಲ್ಲೇಶ್ ಅವರು ಮಹದೇವಪ್ಪನವರನ್ನು ಎತ್ತಿ ನೆಲಕ್ಕೆ ಒಗೆದು ಬಿಟ್ಟರಂತೆ ಈ ಅವಮಾನ ತಡೆಯಲಾರದೆ ಮಹದೇವಪ್ಪ ಕೆಲಸಕ್ಕೆ ರಾಜೀನಾಮೆ ನೀಡಿ ಬಾರ್ ಲೈನ್ ನಲ್ಲಿ ಟ್ಯೂಷನ್ ಪ್ರಾರಂಭ ಮಾಡಿದ್ದರು. ಈ ಹಿನ್ನೆಲೆಯಲ್ಲಿಯೇ ಬಾರ್ ಲೈನ್ ಗೆ ಟ್ಯೂಷನ್ ಗೆ ಹೋಗೋರಿಗೆ ಚೆನ್ನಾಗಿ ಬೈಯುತ್ತಿದ್ದರು.

ವಿಜ್ಞಾನ ಕಾಲೇಜಿಗೆ ಹೊಸದಾಗಿ ಗಣಿತಕ್ಕೆ ಅಧ್ಯಾಪಕರಾಗಿ ಬಂದಿದ್ದವರೊಬ್ಬರು ಅಂತಿಮ ಪದವಿಯ ವಿದ್ಯಾರ್ಥಿಗಳ ಮುಂದೆ ಒಂದು ಲೆಕ್ಕ ಹಾಕಿ ಈ ಲೆಕ್ಕ ಮಾಡಿಸಿಕೊಂಡು ಬಂದರೆ ಮೀಸೆ ಬೋಳಿಸಿಕೊಳ್ಳುವುದಾಗಿ ಸುಂದರ ಹುಡುಗಿಯರ ಕಂಡು ಚಾಲೆಂಜ್ ಮಾಡಿದ್ದರು.

ಹುಡುಗರು ಬಿ.ಕೆ.ಮಲ್ಲೇಶ್ ಬಳಿ ಹೋಗಿ ಲೆಕ್ಕ ಮಾಡಿಸಿಕೊಂಡು ಬಂದು, ಆ ಲೆಕ್ಚರರ್ ಬಂದಾಗ ಲೆಕ್ಕ, ರೇಜರ್ ಇಟ್ಟು ಮೀಸೆ ಬೋಳಿಸಿಕೊಳ್ಳುವಂತೆ ದೊಡ್ಡ ಗಲಾಟೆಯೇ ನಡೆದು ಹೋಯಿತು. ಇದು ಪ್ರಾಂಶುಪಾಲರಾಗಿದ್ದ ಮಹದೇವಯ್ಯ ಅವರ ಗಮನಕ್ಕೂ ಹೋಗಿ ವಿದ್ಯಾರ್ಥಿಗಳನ್ನು, ಲೆಕ್ಚರರ್‍ನ್ನು ಕರೆಸಿ ಸಮಾದಾನ ಮಾಡಿ, ಆ ಹೊಸ ಲೆಕ್ಚರರ್ ಗೆ ಬುದ್ದಿವಾದ ಹೇಳಿ ಕಳಿಸಿದ್ದರು, ಅವರಿಗೆ ಅವಮಾನ ತಡೆದುಕೊಳ್ಳಲು ಆಗದೆ ಆರು ತಿಂಗಳ ನಂತರ ಕೋಲಾರಕ್ಕೆ ವರ್ಗಾವಣೆಯಾಗಿ ಹೋದರು.

ನಮ್ಮ ಅಣ್ಣನವರು ಓದುವಾಗ ಎಸ್ಸಿ-ಎಸ್ಟಿ ಮಕ್ಕಳಿಗೆ ಸಂಜೆ ವೇಳೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಬೇಕಿತಂತೆ, ಬಿ.ಕೆ.ಮಲ್ಲೇಶ್ ಒಂದೂ ತರಗತಿ ತೆಗೆದುಕೊಂಡಿರಲಿಲ್ಲವಂತೆ, ನಮ್ಮ ಅಣ್ಣನೇ ಇಂಗ್ಲೀಷ್ ನಲ್ಲಿ ಪ್ರಾಂಶುಪಾಲರಿಗೆ ಬಿ.ಕೆ.ಮಲ್ಲೇಶ್ Not at all single Class ಅಂತ ಬರೆದು ದೂರು ನೀಡಿದ್ದರಂತೆ ಅಂದು ತರಗತಿಗೆ ಬಂದ ಬಿಕೆಎಂ ಯಾವೋನೋ ಇಂಗೀಷ್ ನಲ್ಲಿ Not at all single Class ಅಂತ ಬರೆದಿರೋನು ಅವನೋನು ಇಂಗ್ಲೀಷ್ ಪಂಡಿತಾನಾ ಅಂತ ಬೈದುಕೊಂಡರಂತೆ, ಅವನು ಯಾರು ಕಂಡಿ ಹಿಡಿಯೋ ಅಂತ ನಮ್ಮ ಅಣ್ಣನಿಗೆ ಹೇಳಿದ್ರಂತೆ.

ಇಂತಹ ಬಿ.ಕೆ.ಎಂ. ನಮಗೆಲ್ಲಾ Trigonometry ಬದುಕನ್ನು, ಬದುಕುವುದನ್ನು ಕಲಿಸಿದರು. ಪದವಿಯಲ್ಲಿ ನನಗೆ ಅರ್ಥವಾಗದನ್ನು ಕೇಳಲು ಅವರ ಕೊಠಡಿಗೆ ಹೋದಾಗಲೆಲ್ಲಾ ಏನೋ ಹೊಸಹಳ್ಳಿ ಅಂತ ಪ್ರಾಬ್ಲಮ್ Solve ಮಾಡಿ ಹೇಳಿ ಕೊಟ್ಟು ನನ್ನ ಕೈಯಲ್ಲಿ ಒಂದೆರಡು ಸಲ ಮಾಡಿಸೋರು.

ಇಂತಹ ಬಿ.ಕೆ.ಎಂ. ಮೇಷ್ಟ್ರು ಕೋರೋನಾ ಬಂದು ಒಂದಾರು ತಿಂಗಳು ಕಳೆದಾಗ ಸಿದ್ಧಗಂಗಾ ಬಡಾವಣೆಯ ಅವರ ಮನೆ ಮುಂದೆ ಹೋಗುವಾಗ ಅವರು ಹಾಲ್‍ನಲ್ಲಿ ಕುಳಿತಿರುವುದನ್ನು ನೋಡಿ ಒಳ ಹೋಗಿ ಅವರಿಗೆ ನಮಸ್ಕಾರ ಮಾಡಿ ನಿಂತಾಗ ನನ್ನನ್ನೇ ನೋಡಿದ ಅವರು ಏನೋ ಹೊಸಹಳ್ಳಿ ಇಷ್ಟು ದಿನ ಆದ ಮೇಲೆ ನೆನಪಾದನೆ ಅಂದರು, ಅವರ ಮೆಮೋರಿ ನೋಡಿ ದಂಗಾಗಿ ಹೋದೆ.

ಅವರ ಮಗ ಅಮೇರಿಕಾದಲ್ಲಿ ಇರೋದಕ್ಕೇ ತುಂಬಾ ವ್ಯಥೆ ಮತ್ತು ಬೇಸರ ಮಾಡಿಕೊಂಡರು, ತಿನ್ನೋ ಇಷ್ಟು ಅನ್ನಕ್ಕೆ ಅಮೇರಿಕಾಕ್ಕೆ ಹೋಗಿದ್ದಾನೆ, ನಾನ್ನು ನನ್ನ ಹೆಂಡತಿ ಸತ್ತರೆ ನಮ್ಮ ಹೆಣ ಕೊಳತ ಮೇಲೆ ಬರುತ್ತಾನೆ ಅಂತ ಬೈಯ್ದುಕೊಂಡರು, ಈಗ ಮಗನ ಜೊತೆ ಮಾತನಾಡುವುದನ್ನು ಬಿಟ್ಟಿದ್ದೇನೆ, ನೋಡು ನನ್ನ ಹೆಂಡತಿಗೂ ಅಡಿಗೆ ಮಾಡಲು ಆಗುವುದಿಲ್ಲ ಭಟ್ಟರನ್ನು ಇಟ್ಟುಕೊಂಡಿದ್ದೇವೆ ಅಂತ ಹೇಳಿ, ಭಟ್ಟರಿಗೆ ಹೇಳಿ ತಿಂಡಿ ತರಿಸಿ ತಿನ್ನುವತನಕ ಬಿಡಲಿಲ್ಲ, ಕಾಫಿಯನ್ನು ಮಾಡಿಸಿದರು ಇಬ್ಬರು ಕಾಫಿ ಕುಡಿದ ಮೇಲೆ ಬರುತ್ತೇನೆ ಅಂದಾಗ ನನ್ನ ನಂಬರ್ ತಗೊಂಡರು, ಒಂದು ಪೋಟೋ ಸಹ ತಗೊಂಡರು. ಒಂದೆರಡು ಸಲ ಬಿಕೆಎಂ ಬಂದು ಹೋಗು ಹೊಸಹಳ್ಳಿ ಅಂತ ಕರೆ ಮಾಡಿದರು.

ಒಮ್ಮೆ ಹೋದಾಗ ಅವರ ಮಗ ಬಾರದೆ ಇರುವುದಕ್ಕೆ ಅತ್ತರು, ಅದನ್ನು ನನ್ನಿಂದ ನೋಡಲಾಗಲಿಲ್ಲ, ಬರುವಾಗ ಒಂದು ಕೆಜಿ ಮಾವಿನ ಹಣ್ಣು ಕೊಟ್ಟು ಹೋಗಿ ಬಾ ಅಂತ ಬಾಗಿಲ ತನಕ ಬಂದು ಟಾಟಾ ಮಾಡಿದರು ಅದೇ ಕೊನೆ ಮತ್ತೆ ಅವರು ಕರೆಯನ್ನೂ ಮಾಡಲಿಲ್ಲ, ನಾನು ಹೋಗಲ್ಲಿಲ್ಲ, ಕಳೆದ ವರ್ಷ ಅವರ ಮಡದಿ, ಅವರು ತೀರಿ ಹೋದರಂತೆ, ಈಗ ಅವರ ಮನೆ ಮುಂದೆ ಇದ್ದ ಪ್ರೊ.ಬಿ.ಕೆ.ಮಲ್ಲೇಶ್ ಎಂಬ ಬೋರ್ಡ್ ತೆಗದು ಹಾಕಿ, ಒಂದು ಸಹಕಾರ ಸಂಘಕ್ಕೆ ಮನೆಯನ್ನು ಬಾಡಿಗೆ ನೀಡಲಾಗಿದೆ.

ನನ್ನ ಗುರುಗಳಾದ ನನಗೆ ಬದುಕಿನ ಪಾಠ ಕಲಿಸಿದ ಬಿ.ಕೆ.ಎಂ. ಗೆ ಬುದ್ಧ ನಮನಗಳನ್ನಷ್ಟೇ ಹೇಳಲು ಸಾಧ್ಯ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *