ನೊಳಂಬ ಸಂಸ್ಥಾನದ ಇತಿಹಾಸವನ್ನು ಬರಿ ಕಥೆಯಾಗಿ ಕೇಳುವ ಬದಲು ಇಂದಿನ ಸ್ಥಿತಿಗತಿಗಳಿಗೆ ಅನುಗುಣವಾಗಿ ಸಂಶೋಧನೆ ನಡೆಯಬೇಕು – ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ

ತುಮಕೂರು- ಸಮಾಜದಲ್ಲಿ ಇಂದು ಅಸೂಯೆ ಹೆಚ್ಚಾಗುತ್ತಿದೆ. ಬೇರೆಯವರ ಕಾಲು ಎಳೆಯುವ ಬದಲು, ಸಾಧನೆ ಮಾಡುವವರಿಗೆ ಬೆನ್ನುತಟ್ಟುವ ಸಂಸ್ಕೃತಿ ಬೆಳೆಯಬೇಕು. ನೊಳಂಬ ಸಂಸ್ಥಾನದ ಇತಿಹಾಸವನ್ನು ಬರಿ ಕಥೆಯಾಗಿ ಕೇಳುವ ಬದಲು, ಇಂದಿನ ಸ್ಥಿತಿಗತಿಗಳಿಗೆ ಅನುಗುಣವಾಗಿ ಅದರ ಸಂಶೋಧನೆ ನಡೆಯಬೇಕು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಅವರಿಂದು ತುಮಕೂರು ವಿಶ್ವವಿದ್ಯಾನಿಲಯದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ತುಮಕೂರು ವಿವಿ ಮತ್ತು ಬೆಂಗಳೂರಿನ ನೊಳಂಬ ಲಿಂಗಾಯತ ಸಂಘದ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ನೊಳಂಬ ಸಂಸ್ಕೃತಿ ಅಧ್ಯಯನ ಪೀಠದ ಉದ್ಘಾಟನಾ ಕಾರ್ಯಕ್ರಮ ಹಾಗೂ ನೊಳಂಬ ಸಂಸ್ಕೃತಿ ಸಂಪದ ವಿಚಾರ ಸಂಕಿರಣದಲ್ಲಿ ಅಧ್ಯಯನ ಪೀಠದ ಪ್ರೇರಣಾ ಲಾಂಛನ ಅನಾವರಣಗೊಳಿಸಿ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಇತಿಹಾಸವನ್ನು ಮರೆತು ಬದುಕುತ್ತಿದ್ದೇವೆ. ಇತಿಹಾಸ ಗೊತ್ತಿಲ್ಲದವನು ವಿಜ್ಞಾನ ಓದಲು ಸಾಧ್ಯವಿಲ್ಲ. ಹಾಗಾಗಿ, ನಮ್ಮ ಮಕ್ಕಳಿಗೆ ನಾವು ಯಾರು ಮತ್ತು ನಮ್ಮ ಇತಿಹಾಸವೇನು ಎಂಬ ಅರಿವು ಮೂಡಿಸುವ ನಿಟ್ಟಿನಲ್ಲಿ ನೊಳಂಬ ಅಧ್ಯಯನ ಪೀಠವು ಮಹತ್ವದ ಪಾತ್ರ ವಹಿಸಲಿದೆ ಎಂದರು.

ಈ ಅಧ್ಯಯನ ಪೀಠವು ವಿಶ್ವವಿದ್ಯಾನಿಲಯ ಸ್ವಯಂ ಪ್ರೇರಿತವಾಗಿ ಕೈಗೊಂಡ ಕಾರ್ಯವಲ್ಲ. ಬದಲಿಗೆ, ಪರಶಿವಮೂರ್ತಿ ಹಾಗೂ ಯೋಗೇಶ್ವರಪ್ಪ ಅವರಂತಹ ಶಿಕ್ಷಣ ತಜ್ಞರ ನಿರಂತರ ಕಾಳಜಿಯ ಫಲವಾಗಿದೆ. ನಾನು ಸಚಿವನಾಗಿದ್ದ ಅವಧಿಯಲ್ಲಿ ಈ ಇಬ್ಬರು ಗಣ್ಯರು ಪೀಠದ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು ಎಂದು ಹೇಳಿದರು.

ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸೆಮಿನಾರ್‍ಗಳು ಮತ್ತು ಸಂಶೋಧನಾ ಕಾರ್ಯಕ್ರಮಗಳ ಮೂಲಕ ಪೀಠಕ್ಕೆ ಮೀಸಲಿಟ್ಟ ಹಣವನ್ನು ಸದ್ಬಳಕೆ ಮಾಡಿಕೊಂಡು, ಇತಿಹಾಸದ ಪುನರುತ್ಥಾನ ಮಾಡುವುದು ಈ ಪೀಠದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ನೊಳಂಬರು ಕೇವಲ ದೇಶವನ್ನಾಳಿದವರಲ್ಲ, ಬದಲಾಗಿ ಉನ್ನತವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದರು. ಈ ಇತಿಹಾಸವನ್ನು ಗ್ರಂಥಗಳು, ಪ್ರವಚನಗಳು ಮತ್ತು ಭಾಷಣಗಳ ಮೂಲಕ ಸಮಾಜದ ಮುಂದೆ ತರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ನದಿಗಳೆಲ್ಲವೂ ಸೇರಿ ಸಮುದ್ರವಾಗುವಂತೆ, ಸಮುದಾಯದ ವಿವಿಧ ಕವಲುಗಳು ಒಂದಾಗಿ ಶಕ್ತಿಯಾಗಿ ರೂಪುಗೊಳ್ಳಬೇಕು. ಈ ಸಂಘಟನೆಯು ಯಾರನ್ನೂ ದ್ವೇಷಿಸಲು ಅಲ್ಲ, ಬದಲಾಗಿ ಧರ್ಮ ಮತ್ತು ಸಮಾಜಕ್ಕೆ ಶಕ್ತಿ ನೀಡಲು ಎಂದು ಅವರು ಸ್ಪಷ್ಟಪಡಿಸಿದರು.

ವಿಶ್ವವಿದ್ಯಾನಿಲಯದ ಮುಂದೆ ಬರುವಂತಹ ಕುಲಪತಿಗಳು ಮತ್ತು ಕುಲಸಚಿವರು ಈ ಕಾರ್ಯಕ್ರಮದ ಉದ್ದೇಶವನ್ನು ಅರಿತು ಕೆಲಸ ಮಾಡಬೇಕು. ನೊಳಂಬ ಸಾಹಿತ್ಯ, ಪರಂಪರೆ ಅಥವಾ ನೊಳಂಬ ಡೈನಾಸ್ಟಿ ಬಗ್ಗೆ ಪಿಹೆಚ್.ಡಿ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಅಗತ್ಯವಿದೆ ಎಂದರು.

ತುಮಕೂರು ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನೊಳಂಬರ ಇತಿಹಾಸ ಎಷ್ಟು ವ್ಯಾಪಕವಾಗಿತ್ತು ಎಂಬುದು ಯೋಗೇಶ್ವರಪ್ಪನವರ ಪುಸ್ತಕ ಓದಿದ ಮೇಲೆ ಅರಿವಿಗೆ ಬರುತ್ತಿದೆ. ಈ ಅರಿವನ್ನು ಜನಸಾಮಾನ್ಯರಿಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಅವರು ನೊಳಂಬ ಸಮುದಾಯದ ಚರಿತ್ರೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುವ ಅಗತ್ಯವಿದೆ, ನೊಳಂಬರ ಚರಿತ್ರೆ, ಸಂಸ್ಕೃತಿಯ ಹಾಗೂ ಸಮುದಾಯದ ಇತಿಹಾಸದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯ ಅತ್ಯಗತ್ಯ ಎಂದ ಅವರು, ನೊಳಂಬರ ಇತಿಹಾಸದ ಬಗ್ಗೆ ಇಂದಿನ ಪೀಳಿಗೆಗೆ ಮಾತ್ರವಲ್ಲದೆ ಸ್ವತಃ ಸಮುದಾಯದವರಿಗೂ ಹೆಚ್ಚಿನ ಅರಿವಿಲ್ಲದಿರುವುದು ವಿಷಾದನೀಯ ಸಂಗತಿ ಎಂದರು.

ಈ ಸಮುದಾಯವು ಕೇವಲ ಆಡಳಿತವಷ್ಟೇ ಅಲ್ಲದೆ, ಸಾಮಾಜಿಕ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆ ನೀಡಿದೆ. ಶಾಸಕರಾದ ನಂತರವಷ್ಟೇ ತಮಗೆ ಜಾತಿಗಳ ಬಗ್ಗೆ ಹೆಚ್ಚಿನ ಅರಿವು ಉಂಟಾಯಿತು ಎಂದು ಅವರು ಮಾರ್ಮಿಕವಾಗಿ ನುಡಿದರು.
ವಿಚಾರ ಸಂಕಿರಣದ ಮೂಲಕ ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ಬೆಳಕಿಗೆ ಬರಬೇಕು. ಸಂಶೋಧನೆಯ ಫಲಿತಾಂಶಗಳನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೊಳಂಬ ಸಮುದಾಯವು ಸುಮಾರು 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಒಂದು ಬಲಿಷ್ಠ ಸಮುದಾಯವಾಗಿದೆ. ಈ ಸಮುದಾಯದಿಂದ ಈ ಹಿಂದೆ ಟಿ.ಎಂ. ಮಂಜುನಾಥ್ ಅವರು ಪ್ರಥಮವಾಗಿ ಮಂತ್ರಿಯಾಗಿದ್ದರು. ನಂತರ ಮಾಧುಸ್ವಾಮಿ ಅವರು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದರೂ, ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಉತ್ತಮ ಪರಿಸರದಲ್ಲಿ ಇಂತಹ ಅರ್ಥಪೂರ್ಣ ವಿಚಾರಗಳು ಚರ್ಚೆಯಾಗುತ್ತಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದ ಅವರು, ನೊಳಂಬ ಸಂಸ್ಕೃತಿ ಅಧ್ಯಯನ ಪೀಠಕ್ಕೆ 5 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದರು.

ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗಾಗಿ ದಾಖಲಿಸುವ (ಡಾಕ್ಯುಮೆಂಟರಿ) ಕಾರ್ಯ ತುರ್ತಾಗಿ ಆಗಬೇಕಿದೆ. ಅಧ್ಯಯನ ಪೀಠದಲ್ಲಿ ನಡೆದ ಮಹತ್ವದ ಸಂಶೋಧನೆಗಳು ಮತ್ತು ಸಮುದಾಯದ ಸಾಧನೆಗಳು ಜನಸಾಮಾನ್ಯರಿಗೆ ತಲುಪಬೇಕು. ನಮ್ಮ ಸಂಸ್ಕೃತಿ ಮತ್ತು ಇತಿಹಾಸವನ್ನು ಡಾಕ್ಯುಮೆಂಟರಿ ಮಾಡುವ ಕೆಲಸ ನಡೆಯಬೇಕಿದೆ. ಈ ನಿಟ್ಟಿನಲ್ಲಿ ದಾನಿಗಳು ತಮ್ಮ ಶಕ್ತಿಯನುಸಾರ ಉದಾರವಾಗಿ ದೇಣಿಗೆ ನೀಡುವ ಮೂಲಕ ಸಹಕರಿಸಬೇಕು ಎಂದರು.

ಪ್ರಸ್ತುತ ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಬಲವಾಗಿವೆ. ನಮ್ಮ ಸಮುದಾಯದ ಇತಿಹಾಸ ಮತ್ತು ಅಧ್ಯಯನ ಪೀಠದ ಕೆಲಸಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ, ಸೋಶಿಯಲ್ ಮೀಡಿಯಾ ಮೂಲಕ ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕು. ಶಾಸಕರ ಅನುದಾನದಲ್ಲಿ ಅವಕಾಶವಿದ್ದರೆ ಅನುದಾನ ಒದಗಿಸುವುದಾಗಿ ತಿಳಿಸಿ ಅವರು, ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗದಿದ್ದಲ್ಲಿ, ಪರ್ಯಾಯವಾಗಿ 5 ಲಕ್ಷ ರೂಪಾಯಿಗಳನ್ನು ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ತುಮಕೂರು ವಿವಿ ಕುಲಪತಿ ಪೆÇ್ರ. ವೆಂಕಟೇಶ್ವರಲು ಮಾತನಾಡಿ, ತುಮಕೂರು ಜಿಲ್ಲೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಇತಿಹಾಸದಲ್ಲಿ ಇಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಕಳೆದ ನಾಲ್ಕು ವರ್ಷಗಳ ಸತತ ಪ್ರಯತ್ನದ ಫಲವಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ನೊಳಂಬ ಅಧ್ಯಯನ ಪೀಠ ಉದ್ಘಾಟನೆಗೊಂಡಿದೆ ಎಂದರು.

2022ರ ಕೊನೆಯಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ತಿಪಟೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಪೀಠದ ಸ್ಥಾಪನೆಗಾಗಿ 5 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದರು. ತಾಂತ್ರಿಕ ಕಾರಣಗಳಿಂದಾಗಿ ಈ ಮೊತ್ತ ಬಿಡುಗಡೆಯಾಗದಿದ್ದರೂ, ಪೀಠದ ಪದಾಧಿಕಾರಿಗಳಾದ ಚಂದ್ರಶೇಖರ್, ಎಸ್.ಆರ್. ಪಾಟೀಲ್ ಹಾಗೂ ಸುನಿಲ್ ಪ್ರಸಾದ್ ಅವರ ಉತ್ಸಾಹ ಕುಗ್ಗಲಿಲ್ಲ. ಈ ಪೀಠದ ಸ್ಥಾಪನೆಗಾಗಿ ನೊಳಂಬ ಸಮಾಜದ ಮುಖಂಡರು ಮತ್ತು ಸಾರ್ವಜನಿಕರಿಂದ ಸುಮಾರು 26 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದೆ. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯದ ವತಿಯಿಂದ 15 ಲಕ್ಷ ರೂಪಾಯಿ ಸೇರಿ ಒಟ್ಟು 41 ಲಕ್ಷ ರೂಪಾಯಿಗಳ ನಿಧಿಯೊಂದಿಗೆ ಪೀಠವು ಕಾರ್ಯಾರಂಭ ಮಾಡಿದೆ ಎಂದರು.

8 ರಿಂದ 11ನೇ ಶತಮಾನದವರೆಗಿನ ನೊಳಂಬ ಸಂಸ್ಕೃತಿ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಈ ಪೀಠದ ಪ್ರಮುಖ ಉದ್ದೇಶವಾಗಿದೆ. ವಿಶ್ವವಿದ್ಯಾಲಯದ ಮುಖ್ಯ ಗುರಿ ಸಂಶೋಧನೆಯಾಗಿದ್ದು, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಪೀಠವು ಕಾರ್ಯನಿರ್ವಹಿಸಲಿದೆ ಎಂದ ಅವರು, ಇಡೀ ಕರ್ನಾಟಕದಲ್ಲಿ ಇಂತಹ ವಿಶಿಷ್ಟ ಚಾರಿಟಿ ಮತ್ತು ಜನ ಬೆಂಬಲವಿರುವ ಜಿಲ್ಲೆ ಮತ್ತೊಂದಿಲ್ಲ ಎಂದು ಶ್ಲಾಘಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಡಿ.ವಿ. ಪರಶಿವಮೂರ್ತಿ ಮಾತನಾಡಿ, ಈ ಪೀಠದ ಸ್ಥಾಪನೆಯಲ್ಲಿ ಮಾಜಿ ಕುಲಪತಿ ಪೆÇ್ರ. ಸಿದ್ದೇಗೌಡ ಅವರ ಪಾತ್ರ ಮಹತ್ವದ್ದಾಗಿದ್ದು, ಅಂದು ಅವರು ಹಾಕಿಕೊಟ್ಟ 25 ಲಕ್ಷ ರೂಪಾಯಿಗಳ ಅನುದಾನದ ಅಡಿಪಾಯವನ್ನು ಇಂದಿನ ಕುಲಪತಿಗಳಾದ ಪೆÇ್ರ. ಎಂ. ವೆಂಕಟೇಶ್ವರಲು ಅವರು ಅತ್ಯಂತ ಉತ್ಸಾಹದಿಂದ ಮುಂದುವರಿಸಿ ಇಂದು ಉದ್ಘಾಟನೆಯ ಹಂತಕ್ಕೆ ತಂದಿದ್ದಾರೆ ಎಂದರು.

8ನೇ ಶತಮಾನದಿಂದ 15ನೇ ಶತಮಾನದವರೆಗೆ ‘ನೊಳಂಬ’, ‘ನೊಣಂಬ’ ಎಂದಿದ್ದ ಶಬ್ದವು ಕಾಲಕ್ರಮೇಣ ಭಾಷಾಶಾಸ್ತ್ರದ ದೃಷ್ಟಿಯಿಂದ ‘ನೊಣಬ’ ಎಂದು ರೂಪಾಂತರಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್, ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ಪಾಟೀಲ್, ತುಮಕೂರು ವಿವಿ ಸಲಹಾ ಸಮಿತಿ ಸದಸ್ಯ ಹಾಗೂ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಟಿ.ಎಸ್. ಸುನಿಲ್ ಪ್ರಸಾದ್, ಬೇಲೂರು ಮಾಜಿ ಶಾಸಕ ಲಿಂಗೇಶ್, ವಿವಿಯ ನೊಳಂಬ ಸಂಸ್ಕೃತಿ ಅಧ್ಯಯನ ಪೀಠದ ನಿರ್ದೇಶಕ ಡಾ. ನೀಲಕಂಠ ಎನ್.ಟಿ. ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *