ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಗಳಿಗೆ ಚುನಾವಣೆ ನಡೆದಿಲ್ಲ.
ಸಂವಿಧಾನದ ಅನುಚ್ಛೇದ 243E: ಪ್ರತಿ ಪಂಚಾಯತ್ ಐದು ವರ್ಷಗಳ ಅವಧಿಯನ್ನು ಹೊಂದಿದ್ದು, ಚುನಾವಣೆಗಳನ್ನು ಮುಕ್ತಾಯದ ಮೊದಲು ನಡೆಸಬೇಕೆಂದು ಹೇಳುತ್ತದೆ.
ಆದರೆ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ವಿಂಗಡನೆ ಅಯೋಗವನ್ನು ರಚಿಸುವ ಮೂಲಕ ಜಿಲ್ಲಾ ಪಂಚಯಾತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಮುಂದೂಡಿತ್ತು. ಈ ತಿದ್ದುಪಡಿಗೆ ಸಭಾತ್ಯಾಗ ಮಡುವ ಮೂಲಕ ಹಿಂಬಾಗಿಲಿನಿಂದ ಕಾಂಗ್ರೇಸ್ ಪಕ್ಷವು ಕೈ ಜೋಡಿಸಿತ್ತು.
ನಂತರದಲ್ಲಿ ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬಂದರೂ ಅದು ಕೂಡ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸುವ ಬದಲು ಹೊಸ ಹೊಸ ದಾರಿಗಳನ್ನು ಹುಡುಕುವ ಮೂಲಕ ಚುನಾವಣೆಗಳನ್ನು ಮುಂದೂಡುತ್ತಲೇ ಬರುತ್ತಿದೆ.
ಚುನಾವಣೆ ನಡೆಸಲು ಅವಕಾಶ ಕೋರಿ ದೇಶದ ಇತಿಹಾಸದಲ್ಲೇ ಮೊದಲು ರಾಜ್ಯ ಚುನಾವಣಾ ಅಯೋಗವೊಂದು ರಾಜ್ಯ ಸರ್ಕಾರದ ವಿರುದ್ಧ ಉಚ್ಚನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಅದೇಶ ನೀಡಿತ್ತು. ಆದರೆ ನ್ಯಾಯಾಲದ ಆದೇಶವನ್ನು ಸರ್ಕಾರ ಉಲಂಘಿಸಿತ್ತು. ಕೆಳೆದ ಫೆಬ್ರವರಿ ಯಲ್ಲಿ ರಾಜ್ಯ ಸರ್ಕಾರ ಮೇ30 ಕ್ಕೆ ಕ್ಷೇತ್ರವಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ನ್ಯಾಯಾಲಯವು ಸಂಬಂಧಿಸಿದ ಮೊಕದ್ದಮೆಯನ್ನು ಮುಗಿಸಿತ್ತು. ಆದರೆ ರಾಜ್ಯ ಸರ್ಕಾರ ಮೇ 30 ಕ್ಕೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿಲ್ಲ. ಹಾಗಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ನಡೆಯುವಂತೆ ಕಾಣುತ್ತಿಲ್ಲ. ಇದರಿಂದಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾಣೆಯಲ್ಲಿ ಸ್ಪರ್ಧಿಸಲು ಕಾತುರದಿಂದ ಬಕಪಕ್ಷಿಯಂತೆ ಕಾಯುತ್ತಿದ್ದ ಅಕಾಂಕ್ಷಿಗಳಿಗೆ ಮತ್ತೆ ಭ್ರಮನಿರಸನವಾಗಿದೆ. ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲಾ ಎನ್ನುವಂತಾಗಿದೆ.
ಸಂವಿಧಾನದ ಮೂಲ ಆಶಯವಾದ ಸಾಮಾಜಿಕ ನ್ಯಾಯವನ್ನು, ಮಹಿಳೆಯರಿಗೆ , ಪರಿಶಿಷ್ಟ ಜಾತಿ ಪಂಗಡದವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ಮೂಲಕ ರಾಜಕೀಯ ಅಧಿಕಾರ ನೀಡಿ ರಕ್ತರಹಿತ ಕ್ರಾಂತಿಯ ಮೂಲಕ ಅನುಷ್ಠಾನಕ್ಕೆ ತಂದದ್ದು ಪಂಚಾಯತ್ ರಾಜ್ ವ್ಯವಸ್ಥೆಯ ಮಹತ್ವದ ಸಾಧನೆ
.
ಆದರೆ ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ ಎಂದು ಸಂವಿಧಾನ ಪುಸ್ತಕ ಹಿಡಿದು ಎಲ್ಲಾ ವೇದಿಕೆಗಳಲ್ಲಿ ಹೋರಾಡುವ ಕಾಗ್ರೇಸಿಗರಿಗೆ ಚುನಾವಣೆ ನಡೆಸುವುದು ಸಂವಿಧಾನದ ಆಶಯ ಎಂಬುದು ತಿಳಿದಿಲ್ಲವೆ?.
ಚುನಾವಣೆ ನಡೆಸದೆ ಶೋಷಿತ ವರ್ಗಗಳನ್ನು ರಾಜಕೀಯ ಅಧಿಕಾರದಿಂದ ದೂರವಿಟ್ಟಂತಾಗಿಲ್ಲವೆ. ಇದು ಸಾಮಾಜಿಕ ನ್ಯಾಯದ ಕಡೆಗಣೆಯಲ್ಲವೆ?.
ಗಾಂಧೀಜಿಯವರ ವಾರಸದಾರರೆಂದು ಹೇಳಿಕೊಳ್ಳುವ ಕಾಂಗ್ರೇಸಿಗರೇ ಗಾಂಧಿ ಕನಸಿನ ಗ್ರಾಮಸ್ವರಾಜ್ಯ ಅನುಷ್ಠಾನ ತಮ್ಮ ಜವಾಬ್ದಾರಿಯಲ್ಲವೆ?.
ಜನರ ಕೈಗೆ ಅಧಿಕಾರ ನೀಡಲು ಸಂವಿಧಾನದ ತಿದ್ದುಪಡಿಗೆ ಮುಂದಾಗಿ ತಮ್ಮ ವಿಧೆಯಕಕ್ಕೆ ರಾಜ್ಯ ಸಭೆಯಲ್ಲಿ ಒಂದು ಮತದಲ್ಲಿ ಸೋಲಾದಾಗ ಜನರಕೈಗೆ ಅಧಿಕಾರ ನೀಡಲು ಸಾಧ್ಯವಾಗಲಿಲ್ಲವಲ್ಲಾ ಎಂದು ಸದನದಲ್ಲಿ ಒಬ್ಬ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಗಳಗಳನೆ ಅತ್ತಿದ್ದು ಇತಿಹಾಸ ಅವರ ಪಕ್ಷವೇ ಅವರ ಆಶಯದ ವಿರುದ್ಧ ನಡೆಯುತ್ತಿರುವುದು ವಿಷಾದನೀಯ.
ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ರಾಜಕಾರಣ ಪ್ರಾರಂಭಿಸಿ ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಮೌನವಾಗಿರುವಾಗಿದ್ದುದ್ದೇಕೆ…!….?
ಇತರ ರಾಜಕೀಯ ಪಕ್ಷಗಳು ಅದೇ ದಾರಿಯಲ್ಲಿರುವುದು. ಎಲ್ಲಾ ಪಕ್ಷಗಳ ಶಾಸಕರು ಗಳು ಧ್ವನಿ ಎತ್ತದಿರುವುದು, ಅವರು ತಮ್ಮ ಕೆಳಗಿನ ಜನಪ್ರತಿಧಿಗಳೊಡನೆ ಅಧಿಕಾರ ಹಂಚಿಕೊಳ್ಳಲು ಹಿಂಜರಿಯುತ್ತಿರುವುದರಿAದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಗಳ ಆಡಳಿತವು ಅಧಿಕಾರಿಗಳ ಹಿಡಿತಕ್ಕೆ ಸಿಕ್ಕು ನಲುಗುತ್ತಿದೆ. ಅಧಿಕಾರಿಗಳು ನಿರಂಕುಶ ಪ್ರಭುಗಳಾಗಿದ್ದಾರೆ.
ಇದಕ್ಕೆ ಮುಕ್ತಿ ನೀಡಲು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕವೇ ರಾಜಕೀಯ ಪ್ರವೇಶ ಮಾಡಿ ಈಗ ಮುಖ್ಯಮಂತ್ರಿಯಾಗುತ್ತಿರುವ ಡಿ.ಕೆ.ಶೀವಕುಮಾರ್ ಅವರು ಪ್ರಯತ್ನಿಸುವರೇ!.
ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಚುನಾವಣೆ ನಡೆಸಿ ಸಂವಿಧಾನವನ್ನು ರಕ್ಷಿಸುವಂತೆ ಜನರ ಕೈಗೆ ಅಧಿಕಾರ ನೀಡುವಂತೆ ಧ್ವನಿ ಎತ್ತಬೇಕಾಗಿದೆ, ಮತ್ತೆ ಜನಾಧಿಕಾರ ಜಾರಿಯಾಗಬೇಕಿದೆ.

– ಕಾಡಶೆಟ್ಟಿಹಳ್ಳಿ ಸತೀಶ್
ಗ್ರಾಮ ಸ್ವರಾಜ್ಯ ಕರ್ನಾಟಕ