ತುಮಕೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಶ್ರಯದಲ್ಲಿ ಈ ತಿಂಗಳ 6 ಮತ್ತು 7ರಂದು ರಾಜ್ಯ ಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನ ಹಾಗೂ ತುಮಕೂರು ಸಂಸ್ಥೆಯ ಬೆಳ್ಳಿಹಬ್ಬ ಆಚರಣಾ ಸಮಾರಂಭವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷೆ ಉಮಾ ರೆಡ್ಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಹೊರವಲಯದ ಹೆಗ್ಗೆರೆಯ ಹೆಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್ನಲ್ಲಿ ಸಮ್ಮೇಳನ ಹಮ್ಮಿಕೊಂಡಿದ್ದು 6ರಂದು ಬೆಳಿಗ್ಗೆ 10.30ಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಮ್ಮೇಳನ ಉದ್ಘಾಟಿಸುವರು, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಹಲವು ಸಚಿವರು, ಜಿಲ್ಲೆಯ ಶಾಸಕರು ಭಾಗವಹಿಸುವರು ಎಂದು ತಿಳಿಸಿದರು.
1916ರಲ್ಲಿ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಕಳೆದ 110 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಒತ್ತಾಸೆಯಾಗಿರುವ ಎಫ್.ಕೆ.ಸಿ.ಸಿ.ಐ ಸರ್ಕಾರ ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಕೈಗಾರಿಕಾ ಪರವಾದ ನಿಲುವುಗಳನ್ನು ತೆಗೆದುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರಂತರ ನೆರವು ನೀಡುತ್ತಾ ಬಂದಿದೆ. ಸರ್ಕಾರ ವಾಣಿಜ್ಯ ಮತ್ತು ಕೈಗಾರಿಕಾ ಪರವಾದ ನೀತಿಗಳನ್ನು ಅನುμÁ್ಠನಗೊಳಿಸಲು ಸಂಸ್ಥೆ ನಿರಂತರವಾಗಿ ಕೈ ಜೋಡಿಸುತ್ತಾ ಬಂದಿದೆ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ, ಹೊಸ ಆವಿಷ್ಕಾರಗಳು, ಉದ್ಯಮಶೀಲತೆಯಲ್ಲಿ ದೇಶದಲ್ಲಿಯೇ ಮುಂಚೂಣಿ ರಾಜ್ಯವಾಗಿದೆ ಎಂದು ಉಮಾ ರೆಡ್ಡಿ ಹೇಳಿದರು.
ಬೆಂಗಳೂರು ದೇಶದ ಐಟಿ ರಾಜಧಾನಿಯೆಂದೇ ಹೆಸರು ಪಡೆದಿದೆ, ಆದರೆ ಕೈಗಾರಿಕಾ ಬೆಳವಣಿಗೆಗಳನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ, ತುಮಕೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಮಂಗಳೂರಿನಂತಹ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಒತ್ತು ನೀಡಬೇಕು. ಕೈಗಾರಿಕಾ ಕ್ಷೇತ್ರಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾದಾಗ ರಾಜ್ಯದ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಕರ್ನಾಟಕ ವಿದೇಶಿ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ರಾಜ್ಯವಾಗಿದ್ದು, ದೇಶದಲ್ಲಿಯೇ ಕೈಗಾರಿಕೋದ್ಯಮ ಸ್ನೇಹಿ ರಾಜ್ಯ ಎಂಬ ಖ್ಯಾತಿಯನ್ನು ಗಳಿಸಿದೆ ಎಂದರು.
ಜಿಲ್ಲೆಗಳಲ್ಲಿ ಪ್ರಸ್ತುತ ಎದುರಿಸುತ್ತಿರುವ ವಾಣಿಜ್ಯ, ಕೈಗಾರಿಕಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಈ ಸಮ್ಮೇಳನ ವೇದಿಕೆ ಯಾಗಲಿದೆ. ರಾಜ್ಯದಲ್ಲಿ 38 ಲಕ್ಷ ಎಂಎಸ್ಎಂಇ ಉದ್ಯಮಗಳಿದ್ದು, ಇವು ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜತೆಗೆ ಸಾವಿರಾರು ಕೋಟಿ ವಹಿವಾಟು ನಡೆಸುತ್ತಿವೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ, ಬೇರೆ ಜಿಲ್ಲೆಗಳಲ್ಲೂ ಇ-ಖಾತಾ ಜನರೇಟ್ ಆಗುತ್ತಿಲ್ಲ. ಖಾತೆಯಲ್ಲಿ ತಪ್ಪಾಗಿರುವುದಕ್ಕೆ ಸರಿಪಡಿಸಲು ಸಾಕಷ್ಟು ಸಮಯ ಹಿಡಿಯುತ್ತಿದೆ. ಖಾತಾ ಪಡೆಯಲು ವಿಳಂಬವಾಗಿ ಅನೇಕ ಕೈಗಾರಿಕೆಗಳು ನೋಂದಣಿ ಆಗುತ್ತಿಲ್ಲ. ಅನೇಕರು ಉದ್ಯಮಕ್ಕಾಗಿ ಸಾಲ ಪಡೆದು ಪ್ರಕ್ರಿಯೆ ವಿಳಂಬದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಾವೇರಿ ಪೊರ್ಟಲ್ ಕಾರ್ಯ ನಿರ್ವಹಿಸುತ್ತಿಲ್ಲ. ಪಂಚಾಯತ್ ತೆರಿಗೆಯಲ್ಲೂ ಕಾನೂನು ಉಲ್ಲಂಘನೆ ಆಗುತ್ತಿದೆ. ಹಾಗೂ ಕೈಗಾರಿಕೆಗಳ ಮೂಲ ಭೂತ ಸೌಕರ್ಯದ ಅಭಿವೃದಿಗೆ ಹೆಚ್ಚು ಒತ್ತು ನೀಡಬೇಕು. ಈ ಎಲ್ಲಾ ವಿಷಯಗಳ ಬಗ್ಗೆ ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಹಾಗೂ ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಜಿಲ್ಲೆಗಳ ಅಭಿವೃದ್ಧಿಯ ಬಗ್ಗೆ ಈ ಸಮ್ಮೇಳನವು ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಾಂಡುರಂಗ ಕುರಂದರವಾಡ ಮಾತನಾಡಿ, ಇದೇ ವೇಳೆ ಜಿಲ್ಲಾ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ 7ರಂದು ರಜತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಆಚರಣೆ ಜೊತೆಗೆ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚೆ ಮಾಡುವುದು ಸಮ್ಮೇಳನದ ಆಶಯವಾಗಿದೆ. ಕೆಐಎಡಿಬಿಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಭಾಗವಹಿಸುತ್ತಿದ್ದು, ಸದಸ್ಯರ ಜೊತೆ ಸಂವಾದ ಏರ್ಪಡಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ತುಮಕೂರಿನ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ತುಮಕೂರು ಕೈಗಾರಿಕೆಗಳ ಧೈಯ ಮತ್ತು ಅಭಿವೃದ್ದಿಯ ಬಗ್ಗೆ ಸಮ್ಮೇಳನದಲ್ಲಿ ಮಾತನಾಡಲಿದ್ದಾರೆ. ಇ-ಖಾತಾ ಮತ್ತು ಆಸ್ತಿ ತೆರಿಗೆಯ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ದೀಪಾ ಚೋಳನ್ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಿದ್ದು ಸದಸ್ಯರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನ ಆಚರಣಾ ಸಮಿತಿ ಅಧ್ಯಕ್ಷ ಸುಜ್ಞಾನ್ ಹಿರೇಮಠ್ ಮಾತನಾಡಿ, ರಾಜ್ಯದ ಎಲ್ಲಾ 30 ಜಿಲ್ಲೆಗಳ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಸ್ಥಳೀಯ ಸಮಸ್ಯೆಗಳನ್ನು ಸಮ್ಮೇಳನದಲ್ಲಿ ಪ್ರಸ್ತಾಪಿಸುವರು. ರಾಜ್ಯದಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಸಾಧ್ಯವಾಗುವಂತೆ ಅತ್ಯಾಧುನಿಕ ಏಕಗವಾಕ್ಷಿ ಪೊರ್ಟಲ್ ನ್ನು ಅಭಿವೃದ್ಧಿ ಪಡಿಸಬೇಕು. ಇದರಲ್ಲಿ ಹೂಡಿಕೆಗೆ ಅವಶ್ಯವಿರುವ ಸಮಗ್ರ ಮಾಹಿತಿಯೊಂದಿಗೆ ಸುಮಾರು 30 ಇಲಾಖೆಗಳ 130ಕ್ಕೂ ಹೆಚ್ಚು ಅನುಮೋದನೆ, ಹಂಚಿಕೆ, ಅನುಮತಿ, ನಿರಾಕ್ಷೇಪಣಾ ಸೇವೆಗಳನ್ನು ಏಕೀಕರಣ ಮಾಡಬೇಕು. ಈ ಪೆÇೀರ್ಟಲ್ ಮೂಲಕ ಉದ್ದಿಮೆ, ಕೈಗಾರಿಕಗಳನ್ನು ಆರಂಭಿಸಲು ಅಗತ್ಯವಿರುವ ಮಾಹಿತಿ ಹಾಗೂ ಸೇವೆಗಳನ್ನು ಪಡೆಯುವಂತಾಗ ಬೇಕು ಎಂದು ಮನವಿ ಮಾಡಿದರು.
ಎಫ್ಕೆಸಿಸಿ ಉಪಾಧ್ಯಕ್ಷ ಟಿ.ಸಾಯಿರಾಮ್ಪ್ರಸಾದ್, ಕಾರ್ಯದರ್ಶಿ ಬಿ.ಪಿ.ಶಶಿಧರ್, ಟಿಡಿಸಿಸಿ ಮಾಜಿ ಅಧ್ಯಕ್ಷರಾದ ಟಿ.ಜೆ. ಗಿರೀಶ್, ಸುರೇಂದ್ರ ಶಾ, ವಿಶೇಷ ಆಹ್ವಾನಿತರಾದ ಟಿ.ಆರ್.ಸದಾಶಿವಯ್ಯ, ಎಸ್.ಸಿ.ಅಮರೇಶ್, ನಿರ್ದೇಶಕರಾದ ಡಿ.ಆರ್.ಮಲ್ಲೇಶಯ್ಯ, ಸದಾಶಿವ ಆರ್. ಅಮಿನ್, ಜಿ.ಆರ್.ಸುರೇಶ್, ಹೆಚ್.ಪಿ.ಮೋಹನ್ಕುಮಾರ್, ಆನಂದಕುಮಾರ್, ಮೊಹಮದ್ ವಾಜೀದ್, ಎನ್.ವಿ.ಅನ್ಸಿಕ್, ಟಿ.ಆರ್.ಆನಂದ್, ಜಿ.ಆರ್.ಮನು, ನಾಗೇಶ್ಬಾಬು, ಎ.ಎಸ್.ಬಸವರಾಜು ಹಿರೇಮಠ್, ಎ.ಎಂ.ರವಿಶಂಕರ್, ಸಿ.ವಿ.ಶ್ರೀನಿವಾಸಗುಪ್ತ ಮೊದಲಾದವರು ಹಾಜರಿದ್ದರು.