ತುಮಕೂರು: ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿ ಮೂಲಕ ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ವಾಣಿಜ್ಯ ಮತ್ತು ಕೈಗಾರಿಕೆಗಳ ಬೆಳವಣಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಸಹಕರಿಸಿದ್ದಾರೆ. ಈ ಮೂಲಕ ಶಕ್ತಿಯುತ ಭಾರತ ನಿರ್ಮಾಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ಸಹಕರಿಸುತ್ತಿವೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶ್ಲಾಘಿಸಿದರು.
ಶನಿವಾರ ನಗರದ ಹೊರವಲಯದ ಹೆಗ್ಗೆರೆಯ ಹೆಚ್.ಎಂ. ಗಂಗಾಧರ ಸಮುದಾಯ ಭವನದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಶ್ರಯದ ರಾಜ್ಯ ಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನ ಉದ್ಘಾಟಿಸಿ, ಸಂಸ್ಥೆಯ ‘ಸಮನ್ವಯ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ತುಮಕೂರು ಬಳಿ ಕೈಗಾರಿಕೆಗಳ ಸ್ಥಾಪನೆಗೆ ವಿಫುಲವಾದ ಅವಕಾಶಗಳಿವೆ, ವಸಂತನರಸಾಪುರ, ಶಿರಾ ಕೈಗಾರಿಕಾ ಪ್ರದೇಶ ಹಾಗೂ ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ತುಮಕೂರಿನ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದರು.
ಕಾರ್ಮಿಕರಿಲ್ಲದೆ ಕೈಗಾರಿಕೆಗಳಿಲ್ಲ, ಕೈಗಾರಿಕೆಗಳು ಕಾರ್ಮಿಕರ ಹಿತ ಕಾಪಾಡಬೇಕು. ಕೈಗಾರಿಕೋದ್ಯಮಿಗಳ ದೂರದೃಷ್ಟಿಯ ಚಿಂತನೆ, ಶ್ರಮ, ಶ್ರದ್ಧೆಯು ಸಂಸ್ಥೆಯ ಯಶಸ್ಸಿಗೆ ಕಾರಣವಾಗುತ್ತದೆ. ಕೈಕಾರಿಕಾ ಸಂಸ್ಥೆಗಳು ಜಾಗತಿಕ ಮಟ್ಟದ ಸ್ಪರ್ಧೆಗೆ ಸಜ್ಜಾಗಬೇಕು, ಬೇಡಿಕೆಗೆ ಅನುಗುಣವಾದ ಉತ್ಪನ್ನ ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡುವ ಮೂಲಕ ಭಾರತದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೆ ನೆರವಾಗಬೇಕು. ದೇಶವನ್ನು ಸದೃಢವಾಗಿ ನಿರ್ಮಾಣ ಮಾಡಿದರೆ ಮಾತ್ರ ಎದುರಾಗಬಹುದಾದ ಗಂಡಾಂತರಗಳಿಂದ ಪಾರು ಮಾಡಬಹುದು ಎಂದು ಸಚಿವ ಸೋಮಣ್ಣ ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಭಾರತದ ಜಿಡಿಪಿ ಬೆಳವಣಿಗೆಯಲ್ಲಿ ಕೈಗಾರಿಕೆಗಳ ಪಾತ್ರ ಪ್ರಮುಖವಾಗಿದೆ. ಸರ್ಕಾರೇತರ ಉದ್ಯೋಗ ಸೃಷ್ಟಿಯಲ್ಲಿ ಕೈಗಾರಿಕೆಗಳ ಪಾಲು ದೊಡ್ಡದಿದೆ. ಸಾಲ ಪಡೆದು, ಶ್ರಮ ಹಾಕಿ, ಕಾರ್ಮಿಕರನ್ನು ಬಳಸಿಕೊಂಡು ಸವಾಲುಗಳನ್ನು ಎದುರಿಸಿಕೊಂಡು ಕೈಗಾರಿಕೆಗಳನ್ನು ಬೆಳೆಸಬೇಕಾಗಿದೆ. ಆ ಕಾರ್ಯದಲ್ಲಿ ಕೈಗಾರಿಕೆಗಳು ಯಶಸ್ವಿಯಾಗಲಿ ಎಂದು ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷೆ ಉಮಾ ರೆಡ್ಡಿ ಸಮಾರಂಭದ ಅಧ್ಯಕ್ಷತೆವಹಿಸಿ, ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಒತ್ತಾಸೆಯಾಗಿರುವ ಎಫ್.ಕೆ.ಸಿ.ಸಿ.ಐ ಸರ್ಕಾರ ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಕೈಗಾರಿಕಾ ಪರವಾದ ನಿಲುವುಗಳನ್ನು ತೆಗೆದುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರಂತರ ನೆರವು ನೀಡುತ್ತಾ ಬಂದಿದೆ. ಸರ್ಕಾರ ವಾಣಿಜ್ಯ ಮತ್ತು ಕೈಗಾರಿಕಾ ಪರವಾದ ನೀತಿಗಳನ್ನು ಅನುμÁ್ಠನಗೊಳಿಸಲು ಸಂಸ್ಥೆ ನಿರಂತರವಾಗಿ ಕೈ ಜೋಡಿಸುತ್ತಾ ಬಂದಿದೆ. ವಾಣಿಜ್ಯ, ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಈ ಸಮ್ಮೇಳನ ವೇದಿಕೆಯಾಗಲಿದೆ ಎಂದರು.
ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಾಂಡುರಂಗ ಕರಂದವಾಡ ಮಾತನಾಡಿ, ಎಲ್ಲಾ ಜಿಲ್ಲೆಗಳಲ್ಲೂ ಇ-ಖಾತಾ ಸಮಸ್ಯೆ ಇದೆ. ಖಾತಾ ಪಡೆಯಲು ವಿಳಂಬವಾಗಿ ಅನೇಕ ಕೈಗಾರಿಕೆಗಳು ನೋಂದಣಿ ಆಗುತ್ತಿಲ್ಲ. ಅನೇಕರು ಉದ್ಯಮಕ್ಕಾಗಿ ಸಾಲ ಪಡೆದು ಪ್ರಕ್ರಿಯೆ ವಿಳಂಬದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ತೆರಿಗೆಯಲ್ಲೂ ಕಾನೂನು ಉಲ್ಲಂಘನೆ ಆಗುತ್ತಿದೆ. ಹಾಗೂ ಕೈಗಾರಿಕೆಗಳ ಮೂಲ ಭೂತ ಸೌಕರ್ಯದ ಅಭಿವೃದಿಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷ ಸುಜ್ಞಾನ್ ಹಿರೇಮಠ್ ಮಾತನಾಡಿ, ಇ ಖಾತಾ ಸಮಸ್ಯೆ ಜೊತೆಗೆ ಕೆಎಐಡಿಬಿಯಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸರ್ಕಾರ ಈ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ವಾಣಿಜ್ಯ ಮತ್ತು ಕೈಗಾರಿಕೆಗಳ ಪ್ರಗತಿಗೆ ಸಹಕರಿಸಬೇಕು ಎಂದು ಕೋರಿದರು.
ಎಫ್ಕೆಸಿಸಿ ಹಿರಿಯ ಉಪಾಧ್ಯಕ್ಷರಾದ ಟಿ.ಸಾಯಿ ರಾಮ್ಪ್ರಸಾದ್, ಉಪಾಧ್ಯಕ್ಷ ಬಿ.ಪಿ.ಶಶಿಧರ್, ಮಾಜಿ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ತುಮಕೂರು ಸಂಸ್ಥೆ ಉಪಾಧ್ಯಕ್ಷ ಸಿ.ಎಸ್. ಸಂಜಯ್, ಕಾರ್ಯದರ್ಶಿ ಟಿ.ಎನ್. ಶ್ರೀಕಂಠಸ್ವಾಮಿ, ಜಂಟಿ ಕಾರ್ಯದರ್ಶಿ ಎಂ.ಎಸ್. ಉಮೇಶಯ್ಯ, ಖಜಾಂಚಿ ಜಿ.ಆರ್.ಎಸ್. ರವಿಶಂಕರ್, ನಿಕಟಪೂರ್ವ ಅಧ್ಯಕ್ಷರೂ ರಜತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಟಿ.ಜೆ. ಗಿರೀಶ್, ಸಂಯೋಜಕ ಜಿ.ಆರ್. ಸುರೇಶ್, ನಿಕಪೂರ್ವ ಅಧ್ಯಕ್ಷ ಆರ್. ಶಿವಕುಮಾರ್, ಸೇರಿದಂತೆ ನಿಕಟಪೂರ್ವ ಅಧ್ಯಕ್ಷರು, ನಿರ್ದೇಶಕರು, ಸಮನ್ವಯ ಸಮಿತಿ ಸದಸ್ಯರು ಭಾಗವಹಿಸಿದ್ದರು.
ವಿವಿಧ ಜಿಲ್ಲೆಗಳ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಇದೇ ವೇದಿಕೆಯಲ್ಲಿ ಭಾನುವಾರ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು, ವಿವಿಧ ಗಣ್ಯರು ಭಾಗವಹಿಸುವರು.