ಸಮಾಜ ಸುಧಾರಕ ಕುದ್ಮುಲ್ ರಂಗರಾವ್

ನನ್ನ ಶಾಲೆಯಲ್ಲಿ ಓದಿದ ದಲಿತರು ವಿದ್ಯಾವಂತರಾಗಿ ,ಸರ್ಕಾರದಲ್ಲಿ ಅಧಿಕಾರಿಗಳಾಗಿ ,ನಮ್ಮ ಊರಿನ ರಸ್ತೆಗಳ ಮೇಲೆ ಕಾರಿನಲ್ಲಿ ಬಂದು, ಧೂಳು ನನ್ನ ಹಣೆಗೆ ಬಡಿದ ದಿನ ನನ್ನ ಬದುಕು ಸಾರ್ಥಕ, ಎಂದು ಹೇಳಿದವರು ಈ ದೇಶ ಕಂಡ ಮಹಾನ್ ಸಮಾಜ ಸುಧಾರಕ ಮಂಗಳೂರಿನಲ್ಲಿ ಹುಟ್ಟಿ ಮಹತ್ಮ ಗಾಂಧೀಜಿಯವರನ್ನು ದಲಿತರ ಸೇವೆಗೆ ಪ್ರೇರೇಪಿಸಿದ ಕುದ್ಲುಲ್ ರಂಗರಾವ್.

ಸರಸ್ವತ ಗೌಡ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ, ದಲಿತರ ಏಳಿಗೆಗಾಗಿ ತಮ್ಮ ಬದುಕಿನಲ್ಲಿ ಬದ್ಧತೆಯಿಂದ ಮತ್ತು ಪರಿಣಾಮಕಾರಿಯಾಗಿ ದುಡಿದಂತಹ ಯಾವುದೇ ರೀತಿಯ ಅಧಿಕಾರ ಅಂತಸ್ತುಗಳನ್ನು ಬಯಸದೆ ನಿರ್ಮಲ ಹೃದಯದಿಂದ ಕಾರ್ಯವನ್ನು ಮಾಡಿದ ಮಹಾನ್ ಚೇತನ ಇವರು .

ಬಡವರ ಜನರ ವಕೀಲ, ಬಡವರ ಸ್ನೇಹಿತ, ಎಂದೇ ಇವರು ಪ್ರಸಿದ್ಧರಾಗಿದ್ದರು, ಬಾಲ್ಯದಿಂದಲೂ ಹಲವಾರು ಸಂಕಷ್ಟಗಳನ್ನು ಇವರು ಎದುರಿಸಿದ್ದರು. ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ನಂತರ ಶಿಕ್ಷಕರಾಗಿ ಕೆಲಸವನ್ನು ಮಾಡಿ ಮುಂದೆ ವಕೀಲರು ಆಗಿ ಹೆಸರು ಗಳಿಸಿದರು .

ಶೋಷಿತ ವರ್ಗದ ಜನರ ಕಲ್ಯಾಣಕ್ಕಾಗಿ ದುಡಿಯಬೇಕೆಂದು ನಿರ್ಧಾರವನ್ನು ಮಾಡಿ ಅದಕ್ಕಾಗಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಮಾಡಿರುತ್ತಾರೆ.

ತಾವು ವಕೀಲರಾಗಿ ಸಂಪಾದಿಸಿದ ಬಂದಂತಹ ಹಣ ಮತ್ತು ತಮಗೆ ದೊರೆತ ಜಮೀನು ಇವು ಎಲ್ಲವನ್ನು ದಲಿತರ ಕುಟುಂಬಗಳಿಗೆ ಹಂಚಿಕೆ ಮಾಡಿ ಅವರಿಗೆ ಬದುಕನ್ನು ಕಟ್ಟಿಕೊಟ್ಟಂತಹ ವ್ಯಕ್ತಿ ಇವರಾಗಿರುತ್ತಾರೆ.

ದಲಿತರಿಗೆ ಪಂಚಮ ರ ಶಾಲೆ, ತೆರೆದು ಅವರಿಗೆ ಶಿಕ್ಷಣವನ್ನು ನೀಡುವ ಸಲುವಾಗಿ ಇವರು ಅನುಭವಿಸಿದಂತಹ ಹಿಂಸೆ ಮತ್ತು ಕಿರುಕುಳ ಸಾಮಾನ್ಯವಾಗಿದ್ದಲ್ಲ. ಇವರು ದಲಿತರಿಗಾಗಿ ಶಾಲೆಗಳನ್ನ ನಡೆಸಲು ಕಟ್ಟಡಗಳನ್ನು ಕಟ್ಟಿದಾಗ ಅಲ್ಲಿನ ಮೇಲ್ವರ್ಗದ ಜನ ಇದಕ್ಕೆ ವಿರೋಧಿಸಿದರು. ಶಾಲೆಗಳು ನಡೆಯದಂತೆ ಒತ್ತಡಗಳನ್ನು ತಂದರು .ಇವರು ಮತ್ತೆ ತಮ್ಮದೇ ಜಮೀನಿನಲ್ಲಿ ಶಾಲೆಗಳನ್ನ ಕಟ್ಟಿ ದಲಿತರಿಗೆ ಶಿಕ್ಷಣವನ್ನ ಕೊಟ್ಟರು ಈ ಸಂದರ್ಭದಲ್ಲಿ ಯಾವ ಶಿಕ್ಷಕರು ಇವರ ಶಾಲೆಗಳಲ್ಲಿ ಪಾಠ ಮಾಡಲು ಬರಲಿಲ್ಲ. ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಶಿಕ್ಷಕರನ್ನ ನೇಮಿಸಿಕೊಂಡು ಮಕ್ಕಳಿಗೆ ಪಾಠವನ್ನು ಹೇಳಿಕೊಟ್ಟಿರುತ್ತಾರೆ. ವಿಧವೆಯರ ಬಗ್ಗೆ ಅಪಾರವಾದಂತಹ ಕಾಳಜಿ ಇದ್ದವರು ವಿಧವಾ ವಿವಾಹಕ್ಕಾಗಿ ಉತ್ತೇಜನವನ್ನು ನೀಡಿ ತಮ್ಮ ಕುಟುಂಬದಲ್ಲಿಯೇ ವಿಧವಾ ವಿವಾಹವನ್ನು ಮಾಡಿಸಿ ಎಲ್ಲರಿಗೂ ಮಾದರಿಯಾದರು. ಮಹಿಳೆಯರಿಗೆ ಶಿಕ್ಷಣವನ್ನ ಕೊಡಬೇಕು ಅವರು ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕು ಎಂದು ಇವರು ಹಲವಾರು ಕಾರ್ಯಕ್ರಮಗಳನ್ನು ಅವರಿಗಾಗಿ ರೂಪಿಸಿದ್ದರು.

ರಂಗರಾವ್ ರವರ ದಲಿತರ ವಿಚಾರದಲ್ಲಿ ನಡೆಸುತ್ತಿದ್ದ ರಚನಾತ್ಮಕವಾದಂತ ಕಾರ್ಯಕ್ರಮಗಳು, ಅವರಿಗಿದ್ದಂತಹ ಕಾಳಜಿ, ಇವುಗಳನ್ನು ಗಮನಿಸಿದಂತಹ ಮಹಾತ್ಮ ಗಾಂಧೀಜಿಯವರು ದಲಿತರ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲು ನನಗೆ ಇವರೇ ಮಾರ್ಗದರ್ಶಕರು ಎಂದು ಹೇಳಿದ್ದಾರೆ.

ಇವರ ಧರ್ಮಪತ್ನಿ ರುಕ್ಮಿಣಿ ಅಮ್ಮನವರು ಪತಿಯ ಸಾಮಾಜಿಕ ಕಾರ್ಯದಲ್ಲಿ ಮತ್ತು ಸಂಪಾದನೆಯ ಹಣವನ್ನ ದಲಿತರ ಉದ್ಧಾರಕ್ಕಾಗಿ ಮಹಿಳೆಯರ ಕಲ್ಯಾಣಕ್ಕಾಗಿ ಬಳಸುವುದಕ್ಕೆ ಎಂದೂ ವಿರೋಧವನ್ನ ವ್ಯಕ್ತಪಡಿಸಲಿಲ್ಲ.

ಇವರು 19 28ರ ಜೂನ್ 30ರಂದು ನಿಧನರಾಗಿರುತ್ತಾರೆ.

1897ರಲ್ಲಿ ಇವರು ಮಂಗಳೂರಿನಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಮಿಷಿನ್ ,ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಶೋಷಿತರು ಮತ್ತು ಹಿಂದುಳಿದ ವರ್ಗದವರು ಇತರೆ ಸಮುದಾಯದವರಿಗೆ ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತರುವಂತಹ ಕಾರ್ಯಕ್ರಮಗಳನ್ನು ರೂಪಿಸಿದರು. ಈ ಸಂಸ್ಥೆಯ ಉದ್ದೇಶ ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಹಾಗೂ ಸಾಮಾಜಿಕ ಜಾಗೃತಿ ಮುಂತಾದವು. ಅಸ್ಪೃಶ್ಯತೆಯ ಮತ್ತು ಜಾತಿ ತಾರತಮ್ಯದ ವಿರುದ್ಧದ ಸಂಘಟಿತ ಹೋರಾಟಕ್ಕೆ ಇದು ವೇದಿಕೆಯಾಗಿತ್ತು. ಜನರಲ್ಲಿ ಆತ್ಮ ಗೌರವ ಮತ್ತು ವಿಶ್ವಾಸವನ್ನು ಮೂಡಿಸಲು ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿತು. ಸಮಾಜದಲ್ಲಿ ಬದಲಾವಣೆಗಳನ್ನು ತರುವ ಸಂದರ್ಭದಲ್ಲಿ ಇವರಿಗೆ ,ಇವರ ಬಂಧುಗಳಿಂದಲೂ ಮತ್ತು ಸ್ನೇಹಿತರಿಂದಲೂ ವಿರೋಧಗಳು ವ್ಯಕ್ತವಾಯಿತು .ಇವುಗಳನ್ನು ಲೆಕ್ಕಿಸದೆ ತಮ್ಮ ದಾರಿಯಲ್ಲಿ ಸಾಗಿದರು.

ಭಾರತ ದೇಶದಲ್ಲಿ ಅನೇಕ ಸಮಾಜ ಸುಧಾರಕರ ಹೆಸರುಗಳು ನಮ್ಮ ಪಠ್ಯಪುಸ್ತಕದಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ . ಬಹುತೇಕ ಉತ್ತರ ಭಾರತೀಯರ ಹೆಸರುಗಳು ಪ್ರಮುಖವಾಗಿ ದಾಖಲಾಗಿರುತ್ತದೆ.ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಶತಮಾನಗಳ ಹಿಂದೆಯೇ ಇಂತಹ ಮಹಾನ್ ಸೇವೆಯನ್ನು ಮಾಡಿದ ಇವರ ಹೆಸರುಗಳು ನಮ್ಮ ದೇಶದ ರಾಜಕೀಯ ಚರಿತ್ರೆಯಲ್ಲಿ ಅಥವಾ ಸಾಮಾಜಿಕ ಚರಿತ್ರೆಯಲ್ಲಿ ಪ್ರಮುಖವಾಗಿ ದಾಖಲಿಸದೇ ಇರುವುದು ಸಹ ಬೇಸರದ ಸಂಗತಿ.

ಮೇಲು ವರ್ಗದ ಎಲ್ಲರೂ ಸಹ ಕೋಮುವಾದಿಗಳು ಅಲ್ಲ ,ಅದೇ ರೀತಿಯಲ್ಲಿ ಶೋಷಿತ ವರ್ಗದ ವಿರೋಧಿಗಳು ಅಲ್ಲ, ಎನ್ನುವ ಸತ್ಯವನ್ನು ಇವರು ಪ್ರತಿಪಾದಿಸಿದ್ದಾರೆ .

ಕೆ ಎಸ್ ನಾಗರಾಜ್

Leave a Reply

Your email address will not be published. Required fields are marked *