ಎತ್ತಿನ ಹೊಳೆ : ಅಕ್ಟೋಬರ್ ವೇಳೆಗೆ ತುಮಕೂರುವರೆಗೆ ಹರಿಯಲಿದೆ ನೀರು : ಸಚಿವ ರಾಮಲಿಂಗಾರೆಡ್ಡಿ

ತುಮಕೂರು : ಬರುವ ಅಕ್ಟೋಬರ್ ವೇಳೆಗೆ ತುಮಕೂರುವರೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮಹತ್ವದ ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ಸಂಬಂಧ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪ್ಯಾಕೇಜ್ 11 ಕಂಚಿಗಾನಹಳ್ಳಿ, ಮಾರಶೆಟ್ಟಿಹಳ್ಳಿ ಅರಣ್ಯ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹತ್ವದ ಎತ್ತಿನಹೊಳೆ ಯೋಜನೆ ಕಾಮಗಾರಿ ಒಟ್ಟು 252 ಕಿ.ಮೀ.ಇದ್ದು, ಈಗಾಗಲೇ 220 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. 23 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಬಾಕಿ 9 ಕಿ.ಮೀ. ಕಾಮಗಾರಿ ಆಗಬೇಕಿದೆ. ಈ ವ್ಯಾಪ್ತಿಯಲ್ಲಿ 6 ಕಿ.ಮೀ. ಅರಣ್ಯ ಪ್ರದೇಶ ಇದ್ದುದರಿಂದ ಕಾಮಗಾರಿ ವಿಳಂಬಕ್ಕೆ ಕಾರಣವಾಯಿತು. ಇದೀಗ ಕೇಂದ್ರ ಸರ್ಕಾರ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದು, ಕಾಮಗಾರಿ ಪೂರ್ಣಗೊಂಡು ಅಕ್ಟೋಬರ್ ವೇಳೆಗೆ ತುಮಕೂರಿನವರೆಗೆ ಎತ್ತಿನಹೊಳೆ ನೀರು ಹರಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

ಮಾರಶೆಟ್ಟಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ 1.9 ಕಿ.ಮೀ. ಕಾಲುವೆ ಹಾದು ಹೋಗಲಿದ್ದು, ಕಾಮಗಾರಿ ವಿಳಂಬವಾಗಿತ್ತು. ಇದೀಗ ಎಲ್ಲಾ ತೊಡಕುಗಳು ಇತ್ಯರ್ಥವಾಗಿದ್ದು, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಅವರು ಮರ ಕಡಿಯಲು ಈಗಾಗಲೇ ಕಾರ್ಯಾದೇಶ ನೀಡಿದ್ದಾರೆ. ಅರಣ್ಯದಲ್ಲಿನ ಪ್ರಾಣಿ, ಪಕ್ಷಿಗಳಿಗೆ ಯಾವುದೇ ತೊಂದರೆಯಾಗದಂತೆ ಮುಚ್ಚಿದ ಕಾಲುವೆಯನ್ನು ನಿರ್ಮಿಸುವ ಷರತ್ತಿಗೊಳಪಟ್ಟು ಅನುಮತಿ ಇರುವುದರಿಂದ ಈ ಅರಣ್ಯ ಪ್ರದೇಶದಲ್ಲಿ ಮುಚ್ಚಿದ ಕಾಲುವೆಯ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮುಂದಿನ 100 ದಿನಗಳಲ್ಲಿ ಒಟ್ಟಾರೆ 174 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಸಕ್ತ ವರ್ಷ ಮುಂಗಾರು ಮಳೆ ಕ್ಷೀಣಿಸುತ್ತಿರುವುದು ಆತಂಕದ ಸಂದರ್ಭವನ್ನು ಸೃಷ್ಟಿಸಿದೆ ಎಂದ ಅವರು, ಮಧ್ಯ ಭಾರತದ ಸುಮಾರು 12 ರಾಜ್ಯಗಳಿಗೆ ಈ ಬಾರಿ ಮಳೆ ಕೊರತೆಯಾಗಿದೆ. ಕಳೆದ ವರ್ಷ ಈ ದಿನಗಳಿಗೆ ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳು ತುಂಬಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ರಾಜ್ಯ ಸಂಕಷ್ಟ ಎದುರಿಸಬೇಕಾಗಿದೆ. ಪ್ರಸ್ತುತ ಮುಂದಿನ 2 ತಿಂಗಳವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಬೇಸಾಯಕ್ಕೆ ಮಳೆಯ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು. 

ತುಮಕೂರಿನ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ಗೊಂದಲಗಳ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದ ಅವರು, ಯೋಜನೆಯ ಕುರಿತು ಉಭಯ ನಾಯಕರಲ್ಲಿ ಯಾವುದೇ ಗೊಂದಲಗಳಿಲ್ಲ. ಯೋಜನೆಯನ್ನು ಅನುಷ್ಠಾನಗೊಳಿಸುವ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ನಾಲಾ ಯೋಜನೆಯ ಮುಖ್ಯ ಇಂಜಿನಿಯರ್ ಹೆಚ್.ಎಸ್. ಆನಂದ್, ಕಾರ್ಯಪಾಲಕ ಇಂಜಿನಿಯರ್ ಮುರುಳೀಧರ್, ಸಹಾಯಕ ಇಂಜಿನಿಯರ್ ಶಶಾಂಕ್, ತಹಶೀಲ್ದಾರ್ ಆರತಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *