ಎಸ್‍ಐಆರ್ ಪ್ರಕ್ರಿಯೆ; ಶೇ. 88.89ರಷ್ಟು ಪ್ರಗತಿ – ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್)-2026 ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೂ ಶೇ. 88.89ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

 ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಸಮರ್ಪಕವಾಗಿ ನಡೆಯುತ್ತಿದೆ. ಈಗಾಗಲೇ ಒಟ್ಟು 20,43,439 ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದ್ದು,  37,842 ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಬೇಕಾಗಿದೆ. ಗಣತಿ ನಮೂನೆಗಳನ್ನು ನಿಯಮಾನುಸಾರ ಕೊನೆಯ ದಿನವಾದ ಆಗಸ್ಟ್ 8ರೊಳಗೆ ಹಿಂಪಡೆದು ಗಣಕೀಕರಣಗೊಳಿಸಬೇಕಿರುವುದರಿಂದ ಕೂಡಲೇ ಮತದಾರರು ತಮ್ಮ ಭರ್ತಿ ಮಾಡಿದ ಗಣತಿ ನಮೂನೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ತ್ವರಿತವಾಗಿ ಹಿಂತಿರುಗಿಸುವ ಮೂಲಕ ಎಸ್‍ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

 ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಕಚೇರಿ, ನಗರ ಸ್ಥಳೀಯ ಸಂಸ್ಥೆ ಹಾಗೂ ತುಮಕೂರು ಮಹಾ ನಗರಪಾಲಿಕೆಯ ಎಲ್ಲಾ ವಾರ್ಡುಗಳಲ್ಲಿ ಮತದಾರರ ಸಹಾಯವಾಣಿ ಕೇಂದ್ರಗಳನ್ನು ಸಾರ್ವಜನಿಕರ ಸಹಾಯಕ್ಕಾಗಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕಾಗಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ 2627 ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಅರ್ಹ ಮತದಾರರು ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

 ಎಸ್‍ಐಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಗೆ ಬಾರದೆ, ಗಣತಿ ನಮೂನೆ ಹಿಂಪಡೆಯದಿದ್ದಲ್ಲಿ, ಸರಿಯಾದ ಮಾಹಿತಿ ನೀಡದಿದ್ದಲ್ಲಿ ಇಂತಹ ಯಾವುದೇ ಸಮಸ್ಯೆಗಳಿದ್ದಲ್ಲಿ ಮತದಾರರು ಸಹಾಯವಾಣಿ ಮೊಬೈಲ್ ಸಂಖ್ಯೆ 7304975519 ಅಥವಾ ಸ್ಥಿರ ದೂರವಾಣಿ ಸಂಖ್ಯೆ 0816-2213400ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಂಡು ಪ್ರಕ್ರಿಯೆಗೆ ಸಹಕಾರ ನೀಡುವಂತೆ ಅವರು ತಿಳಿಸಿದ್ದಾರೆ. 

 ಮತದಾರರು ತಮ್ಮ ಮಾಹಿತಿ ನೀಡುವಾಗ ಯಾವುದೇ ಕಾರಣಕ್ಕೆ ತಪ್ಪು ಮಾಹಿತಿ ಅಥವಾ ಪುನರಾವರ್ತಿತ ಮತದಾರರು ಎಂಬ ಮಾಹಿತಿ ಲಭ್ಯವಾದರೆ ಅಂತಹವರ ವಿರುದ್ಧ ಶಿಕ್ಷಾರ್ಹ ಅಪರಾಧದ ದಂಡನೆಯನ್ನು ವಿಧಿಸಲು ಅವಕಾಶವಿರುತ್ತದೆ. ಆದ್ದರಿಂದ ಮತದಾರರು ಎಚ್ಚರ ವಹಿಸಬೇಕು ಎಂದು  ತಿಳಿಸಿದ್ದಾರೆ.

  ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬಿಎಲ್‍ಎಗಳನ್ನು ನೇಮಿಸಲಾಗಿದ್ದು, ಮತದಾರರ ಪಟ್ಟಿಯಿಂದ ಹೊರಗುಳಿಯಬಹುದಾದ ಮತದಾರರ ಲಭ್ಯ ಮಾಹಿತಿಯನ್ನು ನೀಡಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟ ನಂತರ ಮತದಾರರು ತಮ್ಮ ಹಕ್ಕು ಆಕ್ಷೇಪಣೆಗಳನ್ನು ಸೂಕ್ತ ದಾಖಲೆಯೊಂದಿಗೆ ಸಲ್ಲಿಸಲು ಆಗಸ್ಟ್ 17 ರಿಂದ ಸೆಪ್ಟೆಂಬರ್ 16ರವರೆಗೆ ಕಾಲಾವಕಾಶವಿದ್ದು, ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವುದರಿಂದ ಅದಕ್ಕೆ ಪೂರ್ವದಲ್ಲಿಯೇ ಸರಿಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *