ಸನ್ಯಾಸಿಗಳು ಪೂಜೆ-ಪುನಸ್ಕಾರಗಳಂತೆ ಹೋರಾಟಗಳಲ್ಲೂ ಭಾಗವಹಿಸಬೇಕು, 2ನೇ ದಿನಕ್ಕೆ ಮುಟ್ಟಿದ ಸತ್ಯಾಗ್ರಹ

ತುಮಕೂರು:ಧಾರ್ಮಿಕ ಮುಖಂಡರಾದ ಸನ್ಯಾಸಿಗಳು ಕೇವಲ ಪೂಜೆ,ಪುನಸ್ಕಾರಗಳಲ್ಲಿ ಮಾತ್ರ ತೊಡಗಿಕೊಳ್ಳದೆ,ಇಂತಹ ರೈತ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಯುವ ರೈತರು ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೆಪಣೆ ನೀಡಬೇಕಾಗಿದೆ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ.ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಅವರು ನಗರದ ಟೌನ್‍ಹಾಲ್ ಮುಂಭಾಗದಲ್ಲಿ ದೊಡ್ಡ ಹೊಸೂರಿನ ರೈತರ ಸತ್ಯಾಗ್ರಹದ ಎರಡನೇ ದಿನ ಕ್ರಾಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ರೈತರ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಪೂಜೆಗಳು ಮನಸ್ಸಿಗೆ ಶಾಂತಿ ನೀಡಿದರೆ, ಇಂತಹ ಕಾರ್ಯಕ್ರಮಗಳು ದೇಶದಲ್ಲಿ ಸಮೃದ್ದಿ ತರಲಿವೆ. ಹಾಗಾಗಿ ಸ್ವಾಮೀಜಿಗಳು ಸಹ ಕೃಷಿಕರನ್ನು ಪ್ರೋತ್ಸಾಹಿಸುವುದನ್ನು ತಮ್ಮ ದೈನಂದಿನ ಚಟುವಟಿಕೆಯ ಭಾಗವಹಿಸಿಕೊಳ್ಳುವ ಅಗತ್ಯವಿದೆ ಎಂದರು.

ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಕೈಗೊಂಡಿರುವ ಹಲವಾರು ಕ್ರಮಗಳನ್ನು ಅನುಸರಿಸಿದರೆ ಜನರಿಗೆ ವಿಷ ಮುಕ್ತ ಆಹಾರ ನೀಡುವುದರ ಜೊತೆಗೆ, ಅದಾಯವನ್ನು ಗಳಿಸಲು ಅವಕಾಶವಿದೆ.ಯುವಜನರು ಇಂತಹ ತೋಟಗಳಿಗೆ ಭೇಟಿ ನೀಡಿ,ಇಲ್ಲಿ ಅನುಸರಿಸುತ್ತಿರುವ ವಿಧಿ ವಿಧಾನಗಳನ್ನು ಕಲಿತು,ತಮ್ಮ ಹೊಲ, ಗದ್ದೆಗಳಲ್ಲಿ ಅಳವಡಿಸಿ ಕೊಂಡರೆ ಸಾವಯವ ಕೃಷಿ ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬಹುದು.ಮಣ್ಣು ಮತ್ತು ನೀರು ಕಲುಷಿತವಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ. ಅ ಮೂಲಕ ದೇಹ ಕಲುಷಿತವಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ ಎಂದು ಡಾ.ಶ್ರೀನಿಶ್ಚಲಾನಂದ ಸ್ವಾಮೀಜಿ ತಿಳಿಸಿದರು.

ರಾಜ್ಯ ಸರಕಾರ ಮುಂದಿನ ಬಜೆಟ್‍ನಲ್ಲಿ ಮಣ್ಣು, ನೀರು ಮತ್ತು ವಿದ್ಯುತ್ ಕುರಿತಂತೆ, ಮತ್ತು ಕೃಷಿಗೆ ಅಗತ್ಯವಾದ ಬೀಜ, ಗೊಬ್ಬರ ಹಾಗೂ ಇನ್ನಿತರ ಕೃಷಿಗೆ ಪೂರಕ ವಸ್ತುಗಳ ಕುರಿತು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ಸರಕಾರದ ಮೇಲೆ ಒತ್ತಡ ತರಬೇಕಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಗತಿಪರ ಆಲೋಚನೆ ಉಳ್ಳವರು, ಹಾಗಾಗಿ ಅವರಿಗೆ ನಾನು ಸಹ ವಯುಕ್ತಿಕವಾಗಿ ಮನವಿ ಮಾಡುತ್ತೇನೆ.ರೈತರು ಸಹ ಈ ನಿಟ್ಟಿನಲ್ಲಿ ನಿಯೋಗ ಹೋಗಿ ಮನವಿ ಮಾಡಿದರೆ ಮತ್ತಷ್ಟು ಅನುಕೂಲವಾಗುತ್ತದೆ.ಇದರಿಂದ ಲಕ್ಷಾಂತರ ರೂ ವೇತನ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿರುವ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ರಂತಹ ಯುವಜನರು ಏನನ್ನಾದರೂ ಸಾಧಿಸಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದರು.

ಚಿಕ್ಕನಾಯಕನಹಳ್ಳಿಯ ಇಮ್ಮಡಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ,ಆಸೆ ಬಿದ್ದ ರೈತ ಕೃಷಿಗೆ ಬೇಕಾದ ಮಣ್ಣು ಮತ್ತು ನೀರನ್ನು ಕುಲುಷಿತಗೊಳಿಸಿಕೊಂಡಿದ್ದಾನೆ.ಇದರ ಜೊತೆಗೆ ರೈತರ ಫಲವತ್ತಾದ ಭೂಮಿ ಕೈಗಾರಿಕೆ, ರಸ್ತೆ, ಕಾರಿಡಾರ್, ರಿಂಗ್ ರಸ್ತೆ ಹೆಸರಿನಲ್ಲಿ ಬಂಡವಾಳಶಾಹಿಗಳ ಪಾಲಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.ವ್ಯಾಪಾರಕ್ಕೆ ಬಂದ ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದರು. ಇಂದು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಭೂಮಿ ಮತ್ತು ನೀರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿವೆ. ಇದಕ್ಕೆ ನಾವು ಎಂದಿಗೂ ಅವಕಾಶ ಮಾಡಿಕೊಡಬಾರದು.ಡಾ.ಮಂಜುನಾಥ್ ಅವರು ಈ ನಿಟ್ಟಿನಲ್ಲಿ ರೈತರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.ಈ ಮಣ್ಣಿನ ಮೇಲೆ ಮನುಷ್ಯನಷ್ಟೇ ಅಲ್ಲ, ಗಿಡ, ಮರ, ಪ್ರಾಣಿ ಪಕ್ಷಗಳಿಗೂ ಹಕ್ಕಿದೆ.ಬುದ್ದಿವಂತನಾದ ಮನುಷ್ಯ ಅವುಗಳನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ನೀಡುವ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಎಲ್ಲರೂ ಇಂತಹ ಹೋರಾಟಗಳಿಗೆ ಕೈಜೋಡಿಸಬೇಕೆಂದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದ ಅಡಿಯಲ್ಲಿ ಮಣ್ಣು ಮತ್ತು ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಸತ್ಯಾಗ್ರಹ ಆರಂಭಿಸಲಾಗಿದೆ.ಎಐ ತಂತ್ರಜ್ಞಾನದಿಂದ ನಮ್ಮ ಭೂಮಿ ಮತ್ತು ನೀರಿಗೆ ಯಾವ ರೀತಿ ಅಪಾಯವಿದೆ.ನಮ್ಮ ಮಕ್ಕಳ ಉದ್ಯೋಗದ ಮೇಲೆ ಯಾವ ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಮಂಡಿಸಿ, ಜನರ ಗಮನ ಸೆಳೆಯಲಾಗಿದೆ. ಅದರ ಮುಂದುವರೆದ ಭಾಗವಾಗಿ ಇಂದು ಎಐ ತಂತ್ರಜ್ಞಾನದಿಂದ ನೀರು ಮತ್ತು ಭೂಮಿಗೆ ಆಗುವ ತೊಂದರೆ ಕುರಿತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಲು ರೈತರು, ಕಾರ್ಮಿಕರು, ನೀರಾವರಿ ತಜ್ಞರು ಇಲ್ಲಿಗೆ ಬಂದಿದ್ದೇವೆ. ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಮೂಲಕ ರಾಮನಗರಕ್ಕೆ ತೆಗೆದುಕೊಂಡು ಹೋಗುವ ಹುನ್ನಾರವನ್ನು ನಾವು ವಿರೋಧಿಸುತ್ತಿದ್ದೇವೆ. ಹಾಗೆಯೇ ನಂದಿಹಳ್ಳಿ ಯಿಂದ ಮಲ್ಲಸಂದ್ರ ಮೂಲಕ ವಸಂತನರಸಾಪುರಕ್ಕೆ ಹೋಗುವ ಔಟರ್ ರಿಂಗ್ ರಸ್ತೆಯ ಸಂತ್ರಸ್ಥರು ಸಹ ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದರು.

ನಂದಿಹಳ್ಳಿಯಿಂದ ಮಲ್ಲಸಂದ್ರ ಮೂಲಕ ವಸಂತನಾರಸಾಪುರಕ್ಕೆ ಹೋಗಲು ಈಗಾಗಲೇ ಅನೇಕ ಮಾರ್ಗಗಳಿದ್ದರೂ ಸಹ ಔಟರ್ ರಿಂಗ್ ರಸ್ತೆಯ ಅಗತ್ಯವೇನಿತ್ತು ಎಂಬುದು ನಮಗೆ ತಿಳಿಯದಾಗಿದೆ.ಸುಮಾರು 750 ರೈತರ 900 ಎಕರೆಗೂ ಹೆಚ್ಚು ಭೂಮಿಯನ್ನು ರಸ್ತೆಗಾಗಿ ವಶಪಡಿಸಿಕೊಳ್ಳಲಾಗುತ್ತಿದೆ.ಶೇ70 ಭಾಗ ತೋಟ, ತುಡಿಕೆಗಳಿರುವ ಫಲವತ್ತಾದ ಭೂಮಿಯನ್ನೇ ವಶಪಡಿಸಿಕೊಳ್ಳಲು ಹೊರಟಿದೆ.ಈ ಸಂಬಂಧ ರೈತರ ಪ್ರಬಲ ಹೋರಾಟ ಮುಂದುವರೆದಿದೆ. ರೈತ ಸಂಘದ ಜೊತೆಗೆ, ಸಂಯುಕ್ತ ಹೋರಾಟ ಕರ್ನಾಟಕ, ಗಾಂಧಿ ಸಹಜ ಬೇಸಯ ಆಶ್ರಮ ಸೇರಿದಂತೆ ಹಲವು ಸಂಘಟನೆಗಳು ನಮ್ಮ ಜೊತೆ ಕೈಜೋಡಿಸಿ, ಈ ಅವೈಜ್ಞಾನಿಕ ಯೋಜನೆಯನ್ನು ಕೈಬಿಡುವಂತೆ ಹೋರಾಟ ಮಾಡಲಾಗಿದೆ.ಸ್ಥಳ ಪರಿಶೀಲನೆ ನಡೆಸುವ ಭರವಸೆ ನೀಡಿದ್ದ ಡಿಸೀಯಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಇದುವರೆಗೂ ಭೇಟಿ ನೀಡಿಲ್ಲ.ಆದರೆ ಪೊಲೀಸ್ ಬಂದೋಬಸ್ತ್‍ನಲ್ಲಿ ಸರ್ವೆ ಮಾಡಿ ಕಲ್ಲು ಹಾಕಲು ಮುಂದಾಗಿದ್ದಾರೆ.ಇದು ಅತ್ಯಂತ ಖಂಡನೀಯ. ಅಧಿಕಾರಿಗಳು ಈ ನೆಲದ ಕಾನೂನು ಗೌರವಿಸಬೇಕು.ಸುಳ್ಳು ಡಿಪಿಆರ್ ಕೈಬಿಡಬೇಕು. ಸೋಷಿಯಲ್ ಅಡಿಟ್ ನಡೆಸಬೇಕು.ಸುಳ್ಳು ವರದಿ ನೀಡಿರುವ ಎಸ್.ಎಲ್.ಓ ಅವರನ್ನು ಅಮಾನತ್ತು ಮಾಡಬೇಕೆಂದು ಎ.ಗೋವಿಂದರಾಜು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಿಕ್ಕನಾಯಕನಹಳ್ಳಿಯ ಶ್ರೀಮೃತ್ಯುಂಜನ ದೇಶಿಕೇಂದ್ರ ಸ್ವಾಮೀಜಿ,ಸಂಯುಕ್ತ ಹೋರಾಟ ಕರ್ನಾಟಕದ ಸಿ.ಯತಿರಾಜು, ಪಂಡಿತ ಜವಹರ್,ಗಾಂಧಿ ಸಹಜ ಬೇಸಾಯ ಆಶ್ರಮದ ಕೃಷಿ ವಿಜ್ಞಾನಿ ಡಾ.ಮಂಜುನಾಥ್, ರವೀಶ್,ರೈತ ಸಂಘದ ಚಿಕ್ಕಬೋರೇಗೌಡ,ಗುಬ್ಬಿ ಲೋಕೇಶ್, ನಂದಿಹಳ್ಳಿ ಉದಯಕುಮಾರ್, ರಮೇಶ, ನಿಂಗರಾಜು, ರಾಜಶೇಖರ್,ಸುರೇಶ್ ಕೃಷಿ ವಿಜ್ಞಾನಿಗಳು, ಯುವ ರೈತರು,ರೈತ ಮಹಿಳೆಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *