
ತುಮಕೂರು : ಪ್ರತಿಯೊಬ್ಬ ನಾಗರೀಕನಿಗೂ ನಮ್ಮ ದೇಶದಲ್ಲಿ ಪ್ರಚಲಿತದಲ್ಲಿರುವ ಕಾನೂನುಗಳ ಬಗ್ಗೆ ಅರಿವಿರಬೇಕು ಹಾಗೂ ಬೇರೆಯವರಿಗೂ ತಿಳಿಸುವ ಕೆಲಸ ಮಾಡಬೇಕು. ಆಗ ಮಾತ್ರ ಬಾಲಕಾರ್ಮಿಕ ಪದ್ದತಿಯನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಬಿ.ಜಯಂತಕುಮಾರ್ ತಿಳಿಸಿದ್ದಾರೆ.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನೆಗಳ ಸೊಸೈಟಿ ಮತ್ತು ವಕೀಲ ಸಂಘದ ವತಿಯಿಂದ ಆಯೋಜಿಸಿದ್ದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ ಕಾರ್ಮಿಕರನ್ನು ಕಂಡಾಗ ಅವರಿಗೆ ತಿಳುವಳಿಕೆ ನೀಡಿ, ಅವರು ಸಹ ನಿಮ್ಮಂತೆ ವಿದ್ಯಾವಂತರಾಗಲು ಇರುವ ಅವಕಾಶಗಳನ್ನು ತಿಳಿಸಬೇಕೆಂದರು.
ಜೀವನದಲ್ಲಿ ಸತ್ಯ ಹೇಳುವುದು ಸುಲಭ. ಆದರೆ ಸುಳ್ಳು ಹೇಳುವುದು ಕಷ್ಟ. ಒಮ್ಮೆ ಸುಳ್ಳು ಹೇಳಿದರೆ, ಅದನ್ನು ಮುಚ್ಚಿ ಹಾಕಲು ಒಂದರಮೇಲೋಂದು ಸುಳ್ಳುಗಳನ್ನು ಹೇಳುತ್ತಲೇ ಹೋಗಬೇಕಾಗುತ್ತದೆ. ಕೊನೆ ಎಂಬುದೇ ಇರುವುದಿಲ್ಲ. ಹಾಗಾಗಿ ಮಕ್ಕಳು ಸತ್ಯ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಾವು ನಾಲ್ಕು ಗೋಡೆಗಳ ಮಧ್ಯೆ ಶಿಕ್ಷಕರಿಂದ ಕಲಿಯುವಂತಹ ಪಾಠ ನಮ್ಮಗೆ ಉದ್ಯೋಗ ದೊರಕಿಸಿಕೊಟ್ಟರೆ, ಸಮಾಜದ ನಡುವೆ ಇದ್ದು, ನಮ್ಮ ನೆರೆ ಹೊರೆಯವರು, ಪ್ರಾಣಿ, ಪಕ್ಷಿಗಳಿಂದ ಕಲಿಯುವಂತಹದ್ದು ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ. ವಿದ್ಯೆ ಎಂಬುದು ಅಹಂಕಾರವಾಗಬಾರದು. ನಮ್ಮ ಬೆಳೆವಣಿಗೆಯ ಮೆಟ್ಟಿಲಾಗಬೇಕು ಎಂದು ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ, ಎಲ್ಲಾ ಬಾಲಕ-ಬಾಲಕಿಯರಿಗೆ ಸಮಾನವಾಗಿ ಬಾಳುವ ಅವಕಾಶವಿದೆ. ಅವರ ಹಕ್ಕುಗಳನ್ನು ಕಸಿಯಬಾರದು ಎಂಬ ಉದ್ದೇಶದಿಂದ ಜನರಿಗೆ ಅರಿವು ಮೂಡಿಸುವ ಸಲುವಾಗಿ ಬಾಲಕಾರ್ಮಿಕ ಪದ್ದತಿ ವಿರುದ್ದ ಜನ ಜಾಗೃತಿ ಅಭಿಯಾನ ಮೂಡಿಸಲಾಗುತ್ತಿದೆ. ಕಿಶೋರ ಕಾರ್ಮಿಕರೆಂದರೆ 16ವರ್ಷದೊಳಗಿನ ಮಕ್ಕಳು, ಇಂತಹವರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಹಾಗೇನಾದರೂ ಮಾಡಿದರೆ 2 ವರ್ಷಗಳ ವರೆಗೆ ಶಿಕ್ಷೆ ಹಾಗು ದಂಡ ವಿಧಿಸಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು ಅವರು ಮಾತನಾಡಿ, ಮಕ್ಕಳು ಮೊದಲು ತಮ್ಮ ಮುಂದಿರುವ ಅವಕಾಶಗಳ ಬಗ್ಗೆ ತಿಳುವಳಿಕೆ ಮೂಡಿಸಿಕೊಳ್ಳಬೇಕು. 1990ರಲ್ಲಿ ದೇಶದಲ್ಲಿ ಒಂದು ಕ್ರಾಂತಿಕಾರಕ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಇಡೀ ಪ್ರಪಂಚವೇ ಒಂದು ಕುಟುಂಬ ಎಂಬ ಭಾವನೆಯೊಂದಿಗೆ ವಸುದೈವ ಕುಟುಂಬಕಂ ಎಂಬ ಉದೇಶದಿಂದ 1991ರಲ್ಲಿ ಸುಧಾರಣಾ ಕ್ರಮಗಳಾದ ಕೃಷಿ, ಕೈಗಾರಿಕೆ, ಸೇವಾ ವಲಯಗಳು, ಸಂಶೋಧನೆ ಕ್ಷೇತ್ರಗಳತ್ತ ಬಹಳ ಕೇಂದ್ರೀಕರಿಸಲಾಯಿತು. ಇದರ ಭಾಗವಾಗಿಯೇ ಮಕ್ಕಳಿಗೆ ಈ ನಾಲ್ಕು ಕ್ಷೇತ್ರಗಳಲ್ಲಿ ಅವರ ಇಚ್ಚೆಗನುಣವಾಗಿ ಅವರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಅನೇಕ ಕಾಯ್ದೆಗಳನ್ನು ತರಲಾಯಿತು. ಖಾಸಗೀಕರಣ, ಉದಾರೀಕರಣ, ಜಾಗತೀಕರಣದ ಫಲವಾಗಿ ಕೈಗಾರಿಕಾ, ಶಿಕ್ಷಣ, ಆರೋಗ್ಯ ಸೇವೆಗಳು ಜನರಿಗೆ ಹೆಚ್ಚು ಅನುಕೂಲವಾಯಿತು. ಯುವಜನರನ್ನೇ ಹೆಚ್ಚಾಗಿ ಹೊಂದಿರುವ ಭಾರತ ದೇಶಕ್ಕೆ ಇದರಿಂದ ಹೆಚ್ಚು ಉಪಯೋಗವಾಗಿದೆ. ದುಡಿಯುವ ವರ್ಗ ತನ್ನ ಮಕ್ಕಳ ಜೊತೆಗೆ, ವಯಸ್ಕರನ್ನು ನೋಡಿಕೊಳ್ಳುವ ಗುರುತರ ಜವಾಬ್ದಾರಿ ಇದೆ. ಅವರಿಗೆ ಒಳ್ಳೆಯ ಭವಿಷ್ಯ ರೂಪಿಸುವ ಕೆಲಸ ನಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ತೇಜಾವತಿ ಅವರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ. ನೂರುನ್ನಿಸಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮರಿಯಪ್ಪ, ಕಾರ್ಮಿಕ ನಿರೀಕ್ಷಕ ನಾಗಭೂಷಣ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಜನಜಾಗೃತಿ ಜಾಥಾವು ನಗರದ ಟೌನ್ಹಾಲ್ ರಸ್ತೆಯ ಮೂಲಕ ಬಸ್ ನಿಲ್ದಾಣದಿಂದ ಗ್ರಂಥಾಲಯ ಆವರಣ ತಲುಪಿತು. ಜಾಥಾ ಕಾರ್ಯಕ್ರಮದಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿದ್ದರು.