ಹಳಗನ್ನಡ ಓದನ್ನು ವಿದ್ಯಾರ್ಥಿಗಳಲ್ಲಿ ಉದ್ದೀಪನಗೊಳಿಸಿ-ಕುಲಪತಿ ಡಾ. ವೆಂಕಟೇಶ್ವರಲು

ತುಮಕೂರು : ಇಂದಿನ ವಿಜ್ಞಾನ ಮತ್ತು ತಾಂತ್ರಿಕಯುಗದಲ್ಲಿ ವಿದ್ಯಾರ್ಥಿಗಳಲ್ಲಿಯೇ ಅಲ್ಲದೆ  ಸಾಮಾನ್ಯ ಜನರಲ್ಲಿಯೂ ಕೂಡಾ ಮಾತೃಭಾಷಾ ಕಲಿಕೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಕುಂಠಿತವಾಗುತ್ತಿದೆ. ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಹೆಚ್ಚಿಸಬೇಕಾದರೆ ಹಳಗನ್ನಡದ ಪಾಠಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಪಠ್ಯದಲ್ಲಿ ಅಳವಡಿಸಬೇಕಾದ ಅನಿವಾರ್ಯತೆ ಇದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.

ಅವರು ನಗರದ ಕನ್ನಡ ಭವನದಲ್ಲಿ ಕನ್ನಡ ವಿವಿ ಹಂಪೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಭಾಷಾ ಪ್ರೌಢಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಹಳಗನ್ನಡ ಓದು ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿ.ವಿ. ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿಯವರು ಮಾತನಾಡಿ ನಾಡಿನ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯೆಯನ್ನು ಕಲಿಸಿದರೆ ಕನ್ನಡ ವಿಶ್ವವಿದ್ಯಾನಿಲಯ ವಿದ್ಯೆಯನ್ನು ಸೃಷ್ಟಿಸುವ ವಿದ್ಯಾನಿಲಯವಾಗಿದೆ. ಇದುವರೆಗೆ ಈ ವಿ.ವಿಯಿಂದ 1500 ವಿವಿಧ ಕ್ಷೇತ್ರದ ಕನ್ನಡ ಕೃತಿಗಳನ್ನು ಪ್ರಕಟಿಸಿರುವುದೇ ಅಲ್ಲದೆ ನಾಡಿನ ವಿವಿಧ ಸ್ಥಳದ ಜನರಿಂದ 5000 ಪ್ರಾಚೀನ ಕಾವ್ಯಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿಟ್ಟುಕೊಂಡು ದೇಶದಲ್ಲಿಯೇ ವಿನೂತನ ವಿಶ್ವವಿದ್ಯಾಲಯ ಎಂಬ ಗೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಹಳಗನ್ನಡ ಸಾಹಿತ್ಯದ ಓದನ್ನು ಹಾಳು ಮಾಡಿದ್ದೇ ಅದಕ್ಕೆ ಬಂದಿರುವ ಗದ್ಯಾನುವಾದಗಳು ಎಂದು ನುಡಿದ ಅವರು ಮೂಲ ಕೃತಿಗಳನ್ನು ಅಧ್ಯಯನ ಮಾಡದೆ ಅಧ್ಯಾಪಕರು ಮಾರುಕಟ್ಟೆಯ ಗೈಡ್‍ಗಳ ಮೇಲೆ ಅವಲಂಬಿತರಾಗಿ ಹಳಗನ್ನಡ ಓದನ್ನು ವಿದ್ಯಾರ್ಥಿ ಸಮೂಹದಲ್ಲಿ ಕ್ಲಿಷ್ಟಗೊಳಿಸಿದ್ದಾರೆ ಎಂದು ವಿಷಾದಿಸಿದರು.

ವಿಶೇಷ ಉಪನ್ಯಾಸ ನೀಡಿದ ಡಾ. ಎಸ್.ಪಿ. ಪದ್ಮಪ್ರಸಾದ್ ಮಾತನಾಡಿ ಹಳಗನ್ನಡದ ಓದು ಮತ್ತು ಮರು ಓದುಗಳಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತ್ಯೇಕವಾದ ಪ್ರಭಾವಲಯವನ್ನು ಸೃಷ್ಟಿಸಲು ಸಾಧ್ಯ. ಈ ಕಾರ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಂದ ಮಾತ್ರ ಸಾಧ್ಯ ಆದುದರಿಂದ ಈ ಹಂತಗಳ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳು ಅತ್ಯಾವಶ್ಯಕವಾಗಿವೆ ಎಂದರು.   

ಡಿ.ಎಲ್. ನರಸಿಂಹಾಚಾರ್ ದತ್ತಿನಿಧಿಯಿಂದ ಏರ್ಪಾಟಾದ ಮೂರು ದಿನಗಳ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಡಿ.ಎಲ್. ನರಸಿಂಹಾಚಾರ್ ಅಳಿಯ ಸೀತಾರಾಮ ಅಯ್ಯಂಗಾರ್ ಮೊಮ್ಮಗ ಜಯಸಿಂಹ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗಧಾಮಯ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಕಾರ್ಯದರ್ಶಿ ಡಾ. ಡಿ.ಎನ್. ಯೋಗೀಶ್ವರಪ್ಪ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ. ಕೆ. ರವೀಂದ್ರನಾಥ್ ಹಾಜರಿದ್ದರು.

ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಮತ್ತು ಶಿಬಿರದ ನಿರ್ದೇಶಕ ಪ್ರೊ. ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಡಿ.ಎನ್. ಯೋಗೀಶ್ವರಪ್ಪ ಸ್ವಾಗತಿಸಿದರು. ಗೋಣಿಬಸಪ್ಪ ವಂದಿಸಿದರು. ಪ್ರೌಢಶಾಲೆ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಕೃಷ್ಣಪ್ಪ ನಿರೂಪಿಸಿದರು.

Leave a Reply

Your email address will not be published. Required fields are marked *