ತುಮಕೂರು: ಇತರೆ ಜಾತಿ, ಧರ್ಮಗಳಲ್ಲಿರುವಂತೆ ಲಿಂಗಾಯತ ಸಮಾಜದಲ್ಲೂ ಇರುವ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಾವೆಲ್ಲರೂ ಲಿಂಗಾಯತರೆಂಬ ಅಭಿಮಾನ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರಬೇಕಾದ ಅವಶ್ಯಕತೆಯಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಮಹಾದೇವ ಬಿದರಿ ಹೇಳಿದರು.
ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ನಗರದ ಇತರೆ ವೀರಶೈವ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರರ ಜಂಟಿ ಉತ್ಸವದ ಅಂಗವಾಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ನಡೆದ ವೀರಶೈವ ಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವೀರಶೈವರು ಹಾಗೂ ಲಿಂಗಾಯತರು ಎಂಬುದು ಬೇರೆಬೇರೆಯಲ್ಲ, ಎರಡೂ ಒಂದೇ ಎಂದು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು, ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳು ಹೇಳಿದ್ದರು. ಎಲ್ಲರೂ ಪೂಜ್ಯರ ಈ ಮಾತನ್ನು ಚಾಚೂ ತಪ್ಪದೆ ಪಾಲಿಸಿ ಒಗ್ಗಟ್ಟಿನಿಂದ ಬಾಳಬೇಕು ಎಂದು ಶಂಕರ ಬಿದರಿ ಮನವಿ ಮಾಡಿದರು.
ಬಸವಣ್ಣನವರು, ಅಲ್ಲಮ ಪ್ರಭು, ಅಕ್ಕಮಹಾದೇವಿಯವರ ಕಾಲದಲ್ಲಿ ವಿವಿಧ ವೃತ್ತಿ ಮಾಡುತ್ತಿದ್ದವರು ಸೇರಿ ಲಿಂಗಾಯತ ಸಮಾಜವಾಗಿದೆ. ಎಲ್ಲಾ ವೃತ್ತಿಗಳನ್ನು ನಾವು ಗೌರವಿಸಬೇಕು. ಲಿಂಗಾಯತರಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೂ ಸರಿಸಮಾನರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ತುಮಕೂರು ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿ, 1963ರಲ್ಲಿ ಆರಂಭವಾದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಂದಿನಿಂದ ಇಂದಿನವರೆಗೂ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ, ಜೊತೆಗೆ ವೀರಶೈವ ಸಮಾಜದ ಅಂಗಸಂಸ್ಥೆಗಳು ಆರಂಭವಾಗಿ ಸೇವಾಕಾರ್ಯಗಳನ್ನು ವಿಸ್ತರಿಸಿಕೊಂಡು ಮಾಡಲಾಗುತ್ತಿದೆ ಎಂದರು.
ಹಿರಿಯರ ಸಲಹೆಯಂತೆ ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರರ ಜಂಟಿ ಉತ್ಸವ ಆಚರಿಸಲಾಗುತ್ತಿದೆ. ಮುಂದೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಉತ್ಸವವನ್ನೂ ಈ ಮಹನೀಯರ ಉತ್ಸವದೊಂದೊಗೆ ಆಚರಿಸಲಾಗುವುದು ಎಂದು ಹೇಳಿದರು.
ಶಿವಗಂಗೆಯ ಮೇಲಣಗವಿ ಮಠಾಧ್ಯಕ್ಷರಾದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ಮಾಜಿ ಅಧ್ಯಕ್ಷರಾದ ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಕೆ.ನಂಜುಂಡಪ್ಪ, ಸಿ.ವಿ.ಮಹದೇವಯ್ಯ ಮೊದಲಾದವರು ಭಾಗವಹಿಸಿದ್ದರು.