
ತುಮಕೂರು:ತೆಂಗು ಮತ್ತು ಕೊಬ್ಬರಿ ದರ ಕುಸಿದಿದ್ದು, ಇದರ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ದ್ವನಿ ಎತ್ತುವಂತೆ ಒತ್ತಾಯಿಸಿ ಆಗಸ್ಟ್ 05 ರಂದು ತೆಂಗು ಬೆಳೆಯುವ ಎಲ್ಲಾ 15 ಜಿಲ್ಲೆಗಳ ಲೋಕಸಭಾ ಸದಸ್ಯರ ಮನೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಸಂಘದ ರಾಜ್ಯ ಸಂಚಾಲಕ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ,ತೆಂಗು ಬೆಳೆಗಾರರ ಸೀಮೆ ಕರ್ನಾಟಕ ಜಂಟಿಯಾಗಿ ಸಂಯುಕ್ತ ಹೋರಾಟ ಕರ್ನಾಟಕದ ತುಮಕೂರು ಜಿಲ್ಲಾ ಸಂಚಾಲಕ ಸಿ.ಯತಿರಾಜು ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತೆಂಗು ಮತ್ತು ಕೊಬ್ಬರಿ ಧಾರಣೆ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳ ಕುರಿತ ಸಮಾಲೋಚನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ತೆಂಗು ಮತ್ತು ಕೊಬ್ಬರಿಗೆ ವೈಜ್ಞಾನಿಕ ಉತ್ಪಾಧನಾ ವೆಚ್ಚಕ್ಕೆ ಅನುಗುಣವಾಗಿ ಬೆಂಬಲ ಬೆಲೆ ನಿಗಧಿ ಪಡಿಸುವಂತೆ ಸರಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಲಾಗುವುದು ಎಂದರು.
ತೆಂಗು ಮತ್ತು ಕೊಬ್ಬರಿ ವೈಜ್ಞಾನಿಕ ಬೆಂಬಲ ಬೆಲೆಯ ಮುಂದುವರೆದ ಭಾಗವಾಗಿ ಆಗಸ್ಟ್ 15 ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸಲಾಗುವುದು.ಅಕ್ಟೋಬರ್ 02ರ ಗಾಂಧಿ ಜಯಂತಿಯಂದು ತಿಪಟೂರಿನಿಂದ ಬೆಂಗಳೂರಿಗೆ 15 ಜಿಲ್ಲೆಗಳ ಜನರು ಪಾದಯಾತ್ರೆ ಆರಂಭಿಸಲಿದ್ದಾರೆ.ಅಕ್ಟೋಬರ್ 07ರಂದು ಪಾದೆಯಾತ್ರೆ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಬೃಹತ್ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದ್ದು, ಈ ಸಮಾವೇಶಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಪ್ರತಿನಿಧಿನಿಗಳನ್ನು ಕರೆಯಿಸಿ ಮನವಿ ಸಲ್ಲಿಸಲಾಗುವುದು ಎಂದು ವಿವರ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ತದ್ವಿರುದ್ದ ನೀತಿಗಳಿಂದ ರೈತರು, ಅದರಲ್ಲಿಯೂ ತೆಂಗು ಮತ್ತು ಕೊಬ್ಬರಿ ಬೆಳೆಗಾರರು ತೀರ ಸಂಕಷ್ಟಕ್ಕೆ ಸಿಲುಕಿದ್ದಾರೆ.ನೆರೆಯ ಶ್ರೀಲಂಕ,ಮಲೇಶಿಯಾ ಇನ್ನಿತರ ದೇಶಗಳಿಂದ ಶೂನ್ಯ ತೆರಿಗೆಯಲ್ಲಿ ತೆಂಗು ಮತ್ತು ಅದರ ಉಪ ಉತ್ಪನ್ನಗಳು ರಪ್ತಾಗುತ್ತಿರುವುದರ ಪರಿಣಾಮ,ಭಾರತದಲ್ಲಿ ಬೆಳೆಯುವ ತೆಂಗು ಮತ್ತು ಕೊಬ್ಬರಿಗೆ ಬೆಲೆ ಇಲ್ಲದಂತಾಗಿದೆ. ಕಳೆದ ವರ್ಷ ಈ ವೇಳೆಗೆ 19000 ರೂ ಕ್ವಿಂಟಾಗೆ ಇದ್ದ ಬೆಲೆ,ಈಗ 7500ಕ್ಕೆ ಕುಸಿದಿರುವುದು ದುರಂತವೇ ಸರಿ ಎಂದರು.
ತೋಟಗಾರಿಕಾ ಇಲಾಖೆ ನೀಡಿದ ವರದಿಯಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು 16730 ರೂ ಇದ್ದರೂ,ಕೇಂದ್ರ ಸರಕಾರ 11750 ರೂಗಳ ಬೆಂಬಲ ಬೆಲೆ ಘೋಷಿಸಿ ಕೈತೊಳೆದುಕೊಂಡಿದೆ.ಇದರ ಜೊತೆಗೆ ರಾಜ್ಯ ಸರಕಾರ 1250 ರೂಗಳ ಪ್ರೋತ್ಸಾಹ ದನ ನೀಡದೆ.ಇವೆರಡು ಸೇರಿದರು ಉತ್ಪಾಧನಾ ವೆಚ್ಚದಷ್ಟು ಬೆಲೆ ಸಿಗುತ್ತಿಲ್ಲ.ಹಾಗಾಗಿ ತೆಂಗು ಮತ್ತು ಕೊಬ್ಬರಿ ದರದ ಸಮಸ್ಯೆಗೆ ತಾತ್ಕಾಲಿಕ ಮತ್ತು ದೂರಗಾಮಿ ಪರಿಣಾಮಗಳ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಮತ್ತು ಸಮನ್ವಯ ಸಮಿತಿಗಳು ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಿದೆ.ಇದರ ಅಂಗವಾಗಿ ಆಗಸ್ಟ್ 25ರಂದು ಮತ್ತೊಂದು ಪೂರ್ವಬಾವಿ ಸಭೆಯನ್ನು ತಿಪಟೂರಿನಲ್ಲಿ ನಡೆಸಲಾಗುವುದು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.
ತೆಂಗು ಮತ್ತು ಕೊಬ್ಬರಿ ಬೆಲೆ ಹೆಚ್ಚಳಕ್ಕೆ ತಾತ್ಕಾಲಿಕ ಪರಿಹಾರವಾಗಿ ಕೇಂದ್ರ ಸರಕಾರ ಕೂಡಲೇ ವಿದೇಶಗಳಿಂದ ಶೂನ್ಯ ತೆರಿಗೆ ಅಡಿಯಲ್ಲಿ ಅಮದಾಗುತ್ತಿರುವ ತೆಂಗು ಉತ್ಪನ್ನಗಳು ಹಾಗೂ ತಾಳೆ ಮತ್ತು ಇನ್ನಿತರ ಖಾದ್ಯ ತೈಲಳಿಗೆ ಕಡಿವಾಣ ಹಾಕಬೇಕು. ದೀರ್ಘಾವಧಿ ಪರಿಹಾರವಾಗಿ ತೆಂಗಿಗೆ ಬರುವ ರೋಗಗಳ ನಿಯಂತ್ರಣ,ಇಳುವರಿ ಕುಸಿತ ತಡೆಯಲು ಕ್ರಮ ಕೈಗೊಳ್ಳುವುದರ ಜೊತೆಗೆ,ನೀರಾ ಮುಕ್ತ ಮಾರಾಟಕ್ಕೆ ಅವಕಾಶ,ಕೊಬ್ಬರಿಗೆ 11,750ರ ಬದಲು 20000 ರೂ ಬೆಂಬಲ ಬೆಲೆ ಕೇಂದ್ರ ಘೋಷಿಸಬೇಕು.ಹಾಗೆಯೇ ರಾಜ್ಯ ಸರಕಾರ 1250ರ ಬದಲು 5000 ರೂ ಪ್ರೋತ್ಸಾಹ ಧನ,ತೆಂಗು ಉತ್ಪನ್ನಗಳನ್ನು ಸರಕಾರದ ಉತ್ಪಾಧನಾ ಸಂಸ್ಥೆಗಳಲ್ಲಿ ಬಳಸಲು ಉತ್ತೇಜಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಬಡಗಲಪುರ ನಾಗೇಂದ್ರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಿ.ಯತಿರಾಜು,ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು,ಕರ್ನಾಟಕ ಕೃಷಿ ಕೂಲಿ ಕಾರ್ಮಿಕರ ಸಂಘದ ಸ್ವಾಮಿ, ಎಂ.ಶಶಿಧರ್,ಸಿಪಿಐನ ಗಿರೀಶ್,ಜಿ.ಗೋಪಾಲ ಪಾಪೇಗೌಡ,ಸಿದ್ದವೀರಪ್ಪ, ಕೆ.ಪಿ.ಆರ್.ಎಸ್.ನ ಹೆಚ್.ಆರ್.ನವೀನ್ಕುಮಾರ್, ಬಿ.ಉಮೇಶ್,ಜಿ.ಸಿ.ಶಂಕರಪ್ಪ, ಲಕ್ಷ್ಮಣಗೌಡ, ಮೂಡ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.