
ತುಮಕೂರು.ಅ.16:ನಾಟಕಗಳು ಮನುಷ್ಯನನ್ನು ಸದಾ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತವೆ ಎಂದು ಹಿರಿಯ ಚಲನಚಿತ್ರನಟ ಹಾಗೂ ರಂಗಭೂಮಿ ಕಲಾವಿದ ಡಾ.ಸುಂದರ್ರಾಜ್ ಅಭಿಪ್ರಾಯ ಪಟ್ಟರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾ ದಸರಾ ಉತ್ಸವ ಸಮಿತಿವತಿಯಿಂದ 33ನೇ ವರ್ಷದ ದಸರಾ ಉತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಭಾಷೆ,ಅಭಿನಯ,ಗಾಯನ ಎಲ್ಲವನ್ನು ಒಳಗೊಂಡ ನಾಟಕಗಳು,ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿವೆ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳಿಗೆ ಪ್ರೇಕ್ಷಕರನ್ನು ಕರೆತರುವುದು ಒಂದು ಸವಾಲಿನ ಕೆಲಸವಾಗಿದೆ. ಆದರೆ ತುಮಕೂರಿನಲ್ಲಿ ಇದಕ್ಕೆ ಅಪವಾದವೆಂಬಂತೆ ಪ್ರತಿ ಶನಿವಾರ,ಭಾನುವಾರ ಕಲಾಕ್ಷೇತ್ರದಲ್ಲಿ ಕಿಕ್ಕಿರದ ಪ್ರೇಕ್ಷಕರ ನಡುವೆ ಪೌರಾಣಿಕ ನಾಟಕಗಳನ್ನು ಪ್ರದರ್ಶನಗೊಳ್ಳುತ್ತಿದ್ದು,ಇದರ ಹಿಂದಿನ ಶಕ್ತಿ ನಾಟಕರತ್ನ ಗುಬ್ಬಿ ವೀರಣ್ಣ ಅವರಾಗಿದ್ದಾರೆ.1986-87ರಲ್ಲಿ ನಮಗೆ ಚಲನಚಿತ್ರದಲ್ಲಿ ಅವಕಾಶಗಳು ಕಡಿಮೆಯಾದಾಗ ತುಮಕೂರಿನ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಚನ್ನಬಸವೇಶ್ವರ ನಾಟಕ ಕಂಪನಿಗೆ ಬಂದು ಬಣ್ಣಹಚ್ಚಿ, ಪಾತ್ರ ಮಾಡಿ, ಅದರಿಂದ ಬಂದ ಹಣದಿಂದ ನಾನು ಮತ್ತು ನನ್ನ ಪತ್ನಿ ಜೀವನ ನಡೆಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಡಾ.ಸುಂದರ್ರಾಜ್ ತಿಳಿಸಿದರು.
ಇಂದು ರಂಗಭೂಮಿಯಲ್ಲ, ಸಿನಿಮಾಗಳು ಸಹ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ.ಮೊದಲು 500-600 ಜನ ಕುಳಿತು ನೋಡಬಹುದಾದ ಥಿಯೇಟರ್ಗಳು ಇಂದು ಕೇವಲ 35-40 ಜನ ಕುಳಿತು ನೋಡುವಷ್ಟು ಕಿರಿದಾಗುತ್ತಿವೆ.ನಾಟಕ ಕ್ಷೇತ್ರ ಸರ್ವಕಾಲಿಕವಾದುದ್ದು,ಜಾಗತಿಕವಾಗಿ ಇಂದು ಏನೆಲ್ಲಾ ನಡೆಯುತ್ತಿದೆ.ಜೀವ ನೀಡುವ ಶಕ್ತಿ ಇಲ್ಲದ ಮನುಷ್ಯ, ಮತ್ತೊಬ್ಬರ ಜೀವ ತೆಗೆಯುವ ಕೆಲಸ ಮಾಡುತಿದ್ದಾನೆ.ಪ್ರಾಣಿಗಳನ್ನು ನೋಡಿ ನಾವು ಕಲಿಯಬೇಕಾಗಿ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ದಸರಾ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ಪರಮೇಶ್,ಇದೇ ಮೊದಲ ಬಾರಿಗೆ ನಮ್ಮ ಸಂಸ್ಕøತಿ,ಪರಂಪರೆಯ ಪ್ರತೀಕವಾದ ನಾಟಕ ಸ್ಪರ್ಧೆಗಳನ್ನು ನಡೆಸಲು ಕಳೆದ ಮೂರು ತಿಂಗಳಿನಿಂದ ತಯಾರಿ ನಡೆಸಲಾಗಿದೆ.ಹಲವಾರು ಜನರು ಇದಕ್ಕಾಗಿ ದುಡಿದ್ದಾರೆ.ನಿರೀಕ್ಷೆಗೂ ಮೀರಿ ನೊಂದಣಿಗಳು ಬಂದರೂ ಮೊದಲು ನೊಂದಣಿಯಾದ ಸುಮಾರು 16 ತಂಡಗಳಿಗೆ ಇಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಇದಲ್ಲದೆ ಅಕ್ಟೋಬರ್ 21 ರಿಂದ 24ರವರೆಗೆ ಹೈಸ್ಕೂಲ್ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕøತಿಕ ದಸರ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ, ಅಧ್ಯಕ್ಷ ಬಿ.ಎಸ್.ಮಂಜುನಾಥ್,ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸತ್ಯಮಂಗಲ ಸದಾಶಿವಯ್ಯ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್,ರುದ್ರೇಶ್, ಸತ್ಯಮಂಗಲ ಜಗದೀಶ್, ಅನಿರುದ್,ಹನುಮಂತರಾಜು, ರೇಖಾ ಶಿವಕುಮಾರ್,ವಿರೂಪಾಕ್ಷಪ್ಪ, ನಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.