ಚುನಾವಣಾ ಸುಧಾರಣೆಯೇ ಮಾಜಿ ಸಚಿವ ವೀರಣ್ಣನವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ತುಮಕೂರು. : ಇಂದು ಚುನಾವಣಾ ವ್ಯವಸ್ಥೆ ಹದಗೆಟ್ಟಿರುವ ಕಾಲಘಟ್ಟದಲ್ಲಿ ಸುಧಾರಣೆ ತರುವುದೇ ಮಾಜಿ ಸಚಿವ ವೀರಣ್ಣನವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವೀರಣ್ಣ ಅಭಿಮಾನಿ ಬಳಗ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆ ವರಿಯಿಂದ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿದ್ದ ವೀರಣ್ಣ ಅವರಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವ್ಯವಸ್ಥೆ ಬಹಳ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಅಭಿಪ್ರಾಯ ನನ್ನದು. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ವ್ಯವಸ್ಥೆ ಸುಧಾರಣೆಯಾಗದೆ ನಾನು ಪ್ರಾಮಾಣಿಕ ಎಂದರೆ ಆತ್ಮ ವಂಚನೆಯಾಗುತ್ತದೆ ಎಂದರು.

ವೀರಣ್ಣನವರ ಪ್ರಾಮಾಣಿಕತೆ,ಬದ್ದತೆ,ಸರಳತೆ ಅಳವಡಿಸಿಕೊಳ್ಳುವುದು ಇಂದಿನ ರಾಜಕಾರಣಕ್ಕೆ ಕಷ್ಟ. ಹಾಗಾಗಿ ಚುನಾವಣಾ ವ್ಯವಸ್ಥೆ ಸುಧಾರಣೆಗೆ ಜನರು ಹೋರಾಟ ನಡೆಸಬೇಕಿದೆ. 1983 ನಾನು ವೀರಣ್ಣ ಸ್ನೇಹಿತರು, ವಿಧಾನಸಭೆಗೆ ತಪ್ಪಿಸಿಕೊಂಡವರಲ್ಲ. ಜನರ ಸಮಸ್ಯೆಗಳನ್ನು ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡ ಸೇರಿದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಕಷ್ಟು ಅನುಕೂಲವಾಯಿತು.ಯಾವುದೇ ಖಾತೆ ನೀಡಿದರೂ ದಕ್ಷತೆಯಿಂದ ಕೆಲಸ ಮಾಡಿ, ಹೆಸರು ಮಾಡಿದರು.ವೀರಣ್ಣ ನವರನ್ನು ವಾಲ್ಮೀಕಿ ಸಮುದಾಯ ಮರೆಯುವಂತಿಲ್ಲ. ಅವರ ಆತ್ಮಕ್ಕೆ ಶಾಂತಿ ನೀಡುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಸಿದ್ದರಾಮಯ್ಯ ನುಡಿದರು.

ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಮಾತನಾಡಿ, ಇಂದಿನ ಕಲುಷಿತ ರಾಜಕಾರಣದಲ್ಲಿ ವೀರಣ್ಣನವರಂತಹ ವ್ಯಕ್ತಿತ್ವ ವಿರಳ. ಹಣವೇ ಎಲ್ಲವನ್ನು ನಿರ್ಧರಿಸುವ ಕಾಲದಲ್ಲಿ, ವೀರಣ್ಣನವರ ರಾಜಿಯಾಗದ ಮನಸ್ಥಿತಿ ನಿಜಕ್ಕು ಶ್ಲಾಘನೀಯ. 2008 ರ ಕೊರಟಗೆರೆ ಚುನಾವಣೆಯಲ್ಲಿ ಸಹಾಯ ಮಾಡಿದ್ದರು. ಅವರನ್ನು ಕಳೆದುಕೊಂಡು ತುಂಬಾ ನೋವಾಗಿದೆ.ಯುವಜನರಲ್ಲಿ ಸಾಕಷ್ಟು ಬದಲಾಗಿದ್ದಾರೆ. ನಮ್ಮ ಭವಿಷ್ಯವೇನು ಎಂಬ ಆತಂಕದಲ್ಲಿದ್ದಾರೆ. ಅವಕಾಶ ವಂಚಿತರಾಗುತ್ತಿದ್ದಾರೆ. ಬಡವ- ಶ್ತೀಮಂತರ ನಡುವಿನ ಅಂತರ ಹೆಚ್ಚಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ನಮಗೆಲ್ಲರಿಗೂ ವೀರಣ್ಣ ಅವರ ನಡೆ ಮಾದರಿ. ತುಮಕೂರು ಜಿಲ್ಲೆಯಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಸಂಸದ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆ ರಾಜ್ಯಾಧ್ಯಕ್ಷ ವಿ.ಎಸ್. ಉಗ್ರಪ್ಪ ಮಾತನಾಡಿ, ನನ್ನ ಬದುಕಿನ ಆದರ್ಶ ವ್ಯಕ್ತಿ ವೀರಣ್ಣ. ವಾರದ ಅನ್ನದ ವಿದ್ಯಾರ್ಥಿಯಾಗಿದ್ದ ನನಗೆ ಸೋಮವಾರದ ಊಟ ನೀಡಿದ್ದು ವೀರಣ್ಣ ಕುಟುಂಬ.ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೂ ಅದರ ಆಶಯ ಈಡೇರಿಲ್ಲ ಎಂಬ ಆತಂಕವಿತ್ತು. ಸಂವಿಧಾನದ 9ನೇ ಷಡ್ಯೂಲ್ ಗೆ ಸೇರಿಸಿದರೆ ವೀರಣ್ಣ ಅವರ ಆತ್ಮಕ್ಕೆ ನಿಜವಾಗಿಯೂ ಶಾಂತಿ ದೊರೆಯಲಿದೆ.ಇದಕ್ಕೆ ಎಲ್ಲ ನಾಯಕರು ಮನಸ್ಸು ಮಾಡಬೇಕು ಎಂದರು.

ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ವೀರಣ್ಣ ವ್ಯಕ್ತಿತ್ವದ ಜೊತೆಗೆ, ರಾಜಕೀಯ,ಸಾಮಾಜಿಕ ಕಾಲಘಟ್ಟವನ್ನು ತೆರೆದಿಟ್ಟಿದೆ. ಮೌಲ್ಯಾಧಿಕಾರಣ, ಸಾಮಾಜಿಕ ನ್ಯಾಯ,ಆದರ್ಶಗಳು ಕುಂಟಿತಗೊಂಡಿರುವ ಕಾಲದಲ್ಲಿ ವೀರಣ್ಣ ಅವರ ರಾಜಕೀಯ ಎಲ್ಲರಿಗೂ ಮಾದರಿ. ಬಿಟ್ಟಿ ಭಾಗ್ಯ ಅಣಕಿಸುವವರು ಬಡವರ ವಿರೋಧಿಗಳು, ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ, ನೈತಿಕತೆ,ಸರಳತೆ ಎಂಬ ಗ್ಯಾರಂಟಿಗಳನ್ಬು ರಾಜಕೀಯ ನಾಯಕರು ಅಳವಡಿಸಿಕೊಂಡರೆ ರಾಜ್ಯ ಸುಭೀಕ್ಷವಾಗಲಿದೆ.ಯಾರಿಗೂ ಬೇಡದ ಸಣ್ಷ ಉಳಿತಾಯ ಖಾತೆಗೆ ಘನತೆ ತಂದುಕೊಟ್ಟರವರು ವೀರಣ್ಣ, ತನಗೆ ವಹಿಸಿದ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಿದವರು. ಅಂಟಿ ಚೇಂಬರ್ ಎಂಬುದು ಅವರ ರಾಜಕೀಯ ಜೀವನದಲ್ಲಿ ಇರಲಿಲ್ಲ. ಇಂತಹವರ ಸಂಖ್ಯೆ ಹೆಚ್ಚಬೇಕಿದೆ ಎಂದರು.

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ವೀರಣ್ಣನವರು ಅತ್ಯಂತ ಪ್ರಾಮಾಣಿಕ,ದಕ್ಷ ರಾಜಕಾರಿಣಿ, ಮೊದಲ ಬಾರಿಗೆ ಕರ್ನಾಟಕ ದಲ್ಲಿ ಕಾಂಗ್ರೆಸೇತರ ಸರಕಾರ ಬರಲು ಕಾರಣರಾದವರು ವೀರಣ್ಣ. ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತೊಂದು ಹೆಸರು ವೀರಣ್ಣ. ಸಣ್ಣ ಉಳಿತಾಯ, ಸಾರಿಗೆ ಸೇರಿದಂತೆ ಏಳು ಖಾತೆಗಳನ್ನು ನಿರ್ವಹಿಸಿ, ಮುಖ್ಯಮಂತ್ರಿ ಹಾಗೂ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರಿಂದಲೂ ಪ್ರಶಂಶೆಗೆ ಪಾತ್ರರಾದರು. ಅವರ ಹೆಸರಿನಲ್ಲಿ ಇಂದಿನ ಉಪಮುಖ್ಯಮಂತ್ರಿಗಳು ಜನತೆ ಸದಾ ನನಪಿನಲ್ಲಿ ಇಡುವಂತಹ ಕಾರ್ಯಕ್ರಮ ರೂಪಿಸುವಂತೆ ಡಾ.ಜಿ.ಪರಮೇಶ್ವರ್ ಅವರಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಂದ್ರ, ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆಯ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ, ವೀರಣ್ ಅವರ ಪ್ರಾಮಾಣಿಕತೆ, ಬದ್ದತೆ,ಸರಳತೆ ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾರ ಶ್ರೀನಿವಾಸ್, ಅಶೋಕ ಪಟ್ಟಣಶೆಟ್ಟಿ, ಮಾಜಿ ವಿಧಾನಪರಿಷತ್ ಡಾ.ಎಂ.ಆರ್.ಹುಲಿನಾಯ್ಕ್ರರ್, ಪತ್ರಕರ್ತರಾದ ಎಸ್.ನಾಗಣ್ಣ, ಸಾಹಿತಿ ವಿ.ಎನ್.ಮೂರ್ತಿ, ನರಸಿಂಹಯ್ಯ, ಹೆಚ್.ಸಿ.ಹನುಮಂತಯ್ಯ, ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *