ಸಾಲದ ಸುಳಿಗೆ ಸಿಗದಂತೆ 5 ಗ್ಯಾರಂಟಿಗಳ ಈಡೇರಿಕೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ತುಮಕೂರು : ಸಾಲದ ಸುಳಿಗೆ ಸಿಗದಂತೆ, ಆರ್ಥಿಕ ದಿವಾಳಿಯಾಗದಂತೆ 5 ಗ್ಯಾರಂಟಿಗಳನ್ನು ಈಡೇರಿಸಲಾಗುವುದು ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಸಖಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು.

ನಾವು ಪ್ರಮುಖವಾಗಿ ನಮ್ಮ ಪ್ರಣಾಳಿಕೆ ಮೂಲಕ ಅನೇಕ ಭರವಸೆಗಳನ್ನು ಕೂಡ ಕೊಟ್ಟಿದ್ದೇವೆ. ಎಲ್ಲ ಭರವಸೆಗಳನ್ನು ಒಂದೇ ವರ್ಷದಲ್ಲಿ ಈಡೇರಿಸುವಂತಹದ್ದಲ್ಲ. 5 ವರ್ಷಗಳಲ್ಲಿ ಈಡೇರಿಸುತ್ತೇವೆ. 5 ಗ್ಯಾರಂಟಿಗಳನ್ನು ಜನತೆಗೆ ವಾಗ್ದಾನದ ರೂಪದಲ್ಲಿ ಕೊಟ್ಟಿದ್ದೆವು. ಮೊದಲ ಸಚಿವ ಸಂಪುಟ ಸಭೆಯಲ್ಲೇ 5 ಗ್ಯಾರಂಟಿ ಈಡೇರಿಸುವುದಾಗಿ ಭರವೆ ನೀಡಿದ್ದು, ಸಚಿವ ಸಂಪುಟದಲ್ಲಿ ನಿರ್ಣಯ ಪಡೆದು ಆದೇಶ ಹೊರಡಿಸುವುದಾಗಿ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದರು.

ಈ ಯೋಜನೆಗಳನ್ನು ಜಾರಿಗೆ ತರಲು ವರ್ಷಕ್ಕೆ ಸುಮಾರು 50ಸಾವಿರ ಕೋಟಿ ರೂಪಾಯಿಗಳು ಬೇಕಾಗುತ್ತದೆ, ಯಾವುದೇ ಸಾಲದ ಸುಳಿಗೆ ಸಿಕ್ಕದೆ, ಆರ್ಥಿಕ ಹೊರೆಯಾಗದಂತೆ ಈ ಗ್ಯಾರಂಟಿಗಳನ್ನು ಈಡೇರಿಸಲಾಗುವುದು, ಇಂದಿನ ಸಂಪುಟ ಸಭೆಯಲ್ಲಿ ಈ ಯೋಜನೆಗಳನ್ನು ಈಡೇರಿಸುವ ತಾತ್ವಿಕ ಒಪ್ಪಿಗೆ ನೀಡಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇವುಗಳ ಜಾರಿಗೆ ತೀರ್ಮಾನ ಮಾಡಲಾಗುವುದು ಎಂದರು.

ಯುವನಿಧಿ ಯೋಜನೆಗೆ ಈ ವರ್ಷದಲ್ಲಿ ಪದವಿ ಪಡೆದವರಿಗೆ 2ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡಲಾಗುದು, ಬೆಲೆ ಏರಿಕೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಮನೆ ಖರ್ಚು ನಿಭಾಯಿಸಲು ಮನೆಯೊಡತಿಗೆ ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆಯಡಿ 2000 ರೂಪಾಯಿಗಳನ್ನು ನೀಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಸಖಿ ಯೋಜನೆಯು ಸರ್ಕಾರಿ ಬಸ್‍ಗಳಲ್ಲಿ ಮಾತ್ರ ಪ್ರಯಾಣಕ್ಕೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೇ 22ರಿಂದ 3 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ.

Leave a Reply

Your email address will not be published. Required fields are marked *