ಗುಬ್ಬಿ : ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಗುಬ್ಬಿ ತಾಲ್ಲೂಕಿನಲ್ಲಿ ಟಿಕೆಟ್ ನೀಡಲಾಗುವುದು:- 2023ರ ಚುನಾವಣೆಗೆ ಗುಬ್ಬಿ ತಾಲ್ಲೂಕಿನ ಪಕ್ಷದ ಕಾರ್ಯಕರ್ತರ ಮತ್ತು ಜನರಾಭಿಪ್ರಾಯ ಸಂಗ್ರಹಿಸಿ ಪಕ್ಷಕ್ಕಾಗಿ ದುಡಿಯುತ್ತಿರುವ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿಯವರು ಆರಂಭಿಸಿರುವ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಿದ್ಧತೆಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರೊಬ್ಬರು ಗುಬ್ಬಿಯಲ್ಲಿ ಬೇರೆ ಪಕ್ಷದಿಂದ ಬರುವವರಿಗೆ ಟಿಕೆಟ್ ನೀಡುವ ಹುನ್ನಾರವಿದೆಯಲ್ಲ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಅವರು, ಗುಬ್ಬಿ ಕ್ಷೇತ್ರದಲ್ಲಿ ಶಾಸಕರಿಲ್ಲದಿದ್ದರೂ ಪಕ್ಷ ಸಂಘಟನೆಯನ್ನು ನಮ್ಮ ಪಕ್ಷದ ಸ್ಥಳೀಯ ನಾಯಕರುಗಳು ನಿರೀಕ್ಷೆಗೂ ಮೀರಿ ಮಾಡುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ನಾಯಕರು ಮತ್ತು ಜನಾಭಿಪ್ರಾಯದ ಮೇಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು, ಬೇರೆ ಪಕ್ಷದಿಂದ ಯಾರು ಕಾಂಗ್ರೆಸ್ಗೆ ಬರುವುದು ನಮಗೆ ಮಾಹಿತಿ ಇಲ್ಲ ಎಂದರು.