ಬೀದಿ ಬದಿ ವ್ಯಾಪಾರಿಗಳ ಏಕಾಏಕಿ ತೆರವು ನಿಲ್ಲಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೆತ್ತೇನಹಳ್ಳಿ ಮಂಜುನಾಥ್ ಆಗ್ರಹ



ತುಮಕೂರು : ನಗರ ಸೌಂದರ್ಯೀಕರಣ, ಅಭಿವೃದ್ಧಿ ಹಾಗೂ ಕಾನೂನು ಪಾಲನೆಯ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಯಾವುದೇ ಸಮರ್ಪಕ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸುವುದು ಆತಂಕಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಹೆತ್ತೇನಹಳ್ಳಿ ಮಂಜುನಾಥ್ ಹೇಳಿದ್ದಾರೆ.



ವರ್ಷಗಳಿಂದ ಬೀದಿ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸಿಕೊಂಡು ಕುಟುಂಬ ನಿರ್ವಹಿಸುತ್ತಿರುವ ನೂರಾರು ಬಡ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳ ಜೀವನೋಪಾಯಕ್ಕೆ ತೆರವು ಕಾರ್ಯಾಚರಣೆ ನೇರ ಹೊಡೆತ ನೀಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ದುಡಿಯುವ ಜನರ ಬದುಕನ್ನೇ ಅಸ್ಥಿರಗೊಳಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕಾನೂನು ಪಾಲನೆ ಹಾಗೂ ಸಂಚಾರ ವ್ಯವಸ್ಥೆ ಕಾಪಾಡುವ ಅಗತ್ಯವನ್ನು ವಿರೋಧಿಸುವುದಿಲ್ಲ. ಆದರೆ ಕಾನೂನು ಜಾರಿಗೊಳಿಸುವ ಸಂದರ್ಭದಲ್ಲಿ ಮಾನವೀಯತೆ, ಜೀವನೋಪಾಯದ ಹಕ್ಕು ಹಾಗೂ ಪುನರ್ವಸತಿ ಕ್ರಮಗಳನ್ನೂ ಪರಿಗಣಿಸಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವು ಕಾರ್ಯಾಚರಣೆ ನಡೆಸುವ ಬದಲು ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರ್ಯಾಯ ಸ್ಥಳ ಕಲ್ಪಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



ಪಾಲಿಕೆಗೆ 10 ಸಲಹೆಗಳು

ತೆರವುಗೊಳಿಸಲಾದ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ, ಅರ್ಹರಿಗೆ ಗುರುತಿನ ಚೀಟಿ ಹಾಗೂ ವ್ಯಾಪಾರ ಪರವಾನಗಿ ನೀಡಬೇಕು. ಸೂಕ್ತ ಪ್ರದೇಶಗಳಲ್ಲಿ ವೆಂಡಿಂಗ್ ಝೋನ್‌ಗಳನ್ನು ನಿರ್ಮಿಸಿ ಪರ್ಯಾಯ ಸ್ಥಳ ಕಲ್ಪಿಸಬೇಕು. ಅಲ್ಲದೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ತ್ಯಾಜ್ಯ ನಿರ್ವಹಣೆ ಹಾಗೂ ವಾಹನ ನಿಲುಗಡೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.



ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು. ಸಂಚಾರಕ್ಕೆ ಅಡ್ಡಿಯಾಗುವ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಪ್ರದೇಶಗಳಲ್ಲಿ ನಿಯಂತ್ರಿತ ಸಮಯ, ಸ್ಥಳ ಹಾಗೂ ವ್ಯಾಪಾರದ ಗಾತ್ರವನ್ನು ನಿಗದಿಪಡಿಸಬಹುದು. ತೆರವು ಕಾರ್ಯಾಚರಣೆಗೆ ಮುನ್ನ ಸಮರ್ಪಕ ನೋಟಿಸ್ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದ್ದಾರೆ.



ಮಹಿಳೆಯರು, ವೃದ್ಧರು, ಅಂಗವಿಕಲರು ಹಾಗೂ ಅತ್ಯಂತ ದುರ್ಬಲ ವರ್ಗದ ವ್ಯಾಪಾರಿಗಳಿಗೆ ವಿಶೇಷ ಪರಿಗಣನೆ ನೀಡಬೇಕು. ಸಣ್ಣ ವ್ಯಾಪಾರಿಗಳಿಗೆ ಸ್ಥಳಾಂತರದ ಅವಧಿಯಲ್ಲಿ ಸಾಲ, ಸ್ವಸಹಾಯ ಸಂಘಗಳು ಹಾಗೂ ಸರ್ಕಾರಿ ಯೋಜನೆಗಳ ಮೂಲಕ ಆರ್ಥಿಕ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.



“ತೆರವು ಮಾತ್ರ ಪರಿಹಾರವಲ್ಲ; ಕ್ರಮಬದ್ಧಗೊಳಿಸುವಿಕೆ ಮತ್ತು ಪುನರ್ವಸತಿಯೇ ಶಾಶ್ವತ ಪರಿಹಾರ” ಎಂಬ ದೃಷ್ಟಿಕೋನವನ್ನು ಮಹಾನಗರ ಪಾಲಿಕೆ ಅಳವಡಿಸಿಕೊಳ್ಳಬೇಕು ಎಂದು ಹೆತ್ತೇನಹಳ್ಳಿ ಮಂಜುನಾಥ್ ಹೇಳಿದ್ದಾರೆ.



ನಗರದ ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳು, ಕಟ್ಟಡಗಳು ಮತ್ತು ಸೌಂದರ್ಯೀಕರಣವಲ್ಲ. ನಗರದಲ್ಲಿ ದುಡಿಯುವ ಸಾಮಾನ್ಯ ಜನರ ಬದುಕು ಕೂಡ ಅಭಿವೃದ್ಧಿಯ ಭಾಗವಾಗಬೇಕು. ಹೀಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ತೆರವುಗೊಳಿಸಲಾದ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ಹಾಗೂ ಜೀವನೋಪಾಯದ ಭದ್ರತೆ ಕಲ್ಪಿಸುವ ಸಮಗ್ರ ಕಾರ್ಯಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *