ತುಮಕೂರು : ನಗರದ ಎನ್.ಆರ್. ಕಾಲೋನಿಯ ಪರಿಶಿಷ್ಟ ಕೋಮಿನ ಮಾದಿಗ ಜನಾಂಗಕ್ಕೆ ಸೇರಿರುವ ನಗರದ ಸ.ನಂ 299/1 ರಲ್ಲಿನ ಹರಿಜನ ಸ್ಮಶಾನದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿ. ನಮ್ಮ ಪೂರ್ವಜರ ಸಮಾದಿಗಳನ್ನು ನೆಲಸಮಗೊಳಿಸಿ ಸಮಾದಿಗಳ ಅಸ್ಥಿಪಂಜರಗಳನ್ನು ಅಕ್ರಮವಾಗಿ ಸ್ಥಳಾಂತರಗೊಳಿಸಿರುವುದನ್ನು ಖಂಡಿಸಿ, ಆ ಜಾಗವನ್ನು ಸ್ಮಶಾನಕ್ಕೆ ಉಳಿಸಲು ಒತ್ತಾಯಿಸಿ ಎನ್.ಆರ್. ಕಾಲೋನಿ, ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ ನಿವಾಸಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸ್ಮಶಾನಕ್ಕೆ ಮೀಸಲಾದ ಜಮೀನು ಹಾಗೂ ಅದಕ್ಕೆ ಹೊಂದಿಕೊಂಡಿರುವ ಖರಾಬು ಸರ್ಕಾರಿ ಜಮೀನಲ್ಲಿ ಲೇಔಟ್ ಮಾಡಿರುವ ಚಿದಾನಂದ್ ಮತ್ತು ಕೊಮಾರಯ್ಯನ ಮಕ್ಕಳನ್ನು ಬಂಧಿಸಬೇಕು. ಸೃಷ್ಟಿಸಿರುವ ಸುಳ್ಳು ದಾಖಲೆಗಳನ್ನು ವಜಾಗೊಳಿಸಿ ನ್ಯಾಯ ದೊರಕಿಸಿಕೊಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.

ತುಮಕೂರು ನಗರ ವ್ಯಾಪ್ತಿಯ 19 ಮತ್ತು 20ನೇ ವಾರ್ಡಿನ ಎನ್.ಆರ್ ಕಾಲೋನಿ ದೊಡ್ಡಟ್ಟಿ, ಪಿ.ಕೆ,ಎಸ್ ಕಾಲೋನಿ (ನಿರ್ವಾಣಿ ಲೇಔಟ್) ಮತ್ತು ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಜನಾಂಗಕ್ಕೆ ಸೇರಿದ 2 ಸಾವಿರ ಕುಟುಂಬಗಳು ವಾಸಿಸುತ್ತಿರುವುದು ಇಲ್ಲಿರುವ ಜನರು ಶ್ರಮ ಜೀವಿಗಳು ತುಮಕೂರು ನಗರದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿರುತ್ತಾರೆ. ಅಂಬೇಡ್ಕರ್ ನಗರ ವ್ಯಾಪ್ತಿಯಲ್ಲಿರುವ ಸ.ನಂ.299/1ರ ಜಮೀನಿನ ವಿಸ್ತೀರ್ಣ 1925ನೇ ಕಂದಾಯ ಇಲಾಖೆಯ ಮೂಲ ದಖಲೆಯಾದ ಪ್ರಿಲಿಮಿನರಿ ರಿಜಿಸ್ಟರ್ ದಾಖಲೆಯಂತೆ ಒಟ್ಟು ವಿಸ್ತೀರ್ಣ 12.19 ಗುಂಟೆ ಇದ್ದು ಇದರಲ್ಲಿ ಪೂಟ್ ಖರಾಬು 6ಎಕರೆ 0.19 ಗುಂಟೆ ಜಾಗ ಉಳಿಕೆ 6 ಎಕರೆ ಖುಷಿ ಜಮೀನು ಇರುತ್ತದೆ. ಸದರಿ ಜಮೀನು ಇದೇ ಎನ್.ಆರ್ ಕಾಲೋನಿಯ ವಾಸಿಯಾಗಿದ್ದ ಮಾದಿಗ ಜನರಿಗೆ ಸೇರಿದ್ದ ದೊಡ್ಡಹನುಮಯ್ಯನವರಿಗೆ ಸೇರಿದ್ದಂತೆ ಪ್ರಿಲಿಮಿನರಿ ರಿಜಿಸ್ಟರ್ ದಾಖಲೆಯ ಕಲಂ-14ರಲ್ಲಿ ನಮೂದಾಗಿರುತ್ತದೆ. ದೊಡ್ಡಹನುಮಯ್ಯನವರ ಹಕ್ಕು ಪವತಿಯ ನಂತರ ಸ್ವಾಧೀನಾನುಭವದಲ್ಲಿದ್ದ ಇವರ ಒಬ್ಬನೇ ಮಗನಾದ ಸಂಜೀವಯ್ಯನವರ ಹೆಸರಿಗೆ ಪವತಿವಾರಸುದಾರರ ಹಕ್ಕು ಬದಲಾವಣೆಯಾಗಿರುತ್ತದೆ ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರು ವಿವಾದಿದ ಜಾಗಕ್ಕೆ ಭೇಟಿ ನೀಡಿ ನಿವಾಸಿಗಳ ಅಹವಾಲು ಕೇಳಿದರು. ನಂತರ ಅಲ್ಲಿಂದ ಸಾವಿರ ಸಂಖ್ಯೆಯಲ್ಲಿ ಎನ್.ಆರ್. ಕಾಲೋನಿ, ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ ನಿವಾಸಿಗಳು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಂದು ಪ್ರತಿಭಟನೆ ನಡೆಸಿದರು.
ಪ್ರಗತಿಪರ ಚಿಂತಕ ಕೆ. ದೊರೈರಾಜ್, ನಗರ ಸಭೆ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ, ನಗರಪಾಲಿಕೆ ಮಾಜಿ ಉಪ ಮೇಯರ್ ರೂಪಶ್ರೀ ಶೆಟ್ಟಳ್ಳಯ್ಯ, ಮಾಜಿ ಸದಸ್ಯರಾದ ಹೆಚ್.ಆರ್. ಹನುಮಂತರಾಯಪ್ಪ, ನರಸಿಯಪ್ಪ, ಶ್ರೀನಿವಾಸ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಾರಾಯಣಮೂರ್ತಿ, ಕೊಳಗೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ. ನರಸಿಂಹಮೂರ್ತಿ, ಮುಖಂಡರಾದ ಜಯಮೂರ್ತಿ, ಕಿರಣ್, ಡಿಎಸ್ಎಸ್ ನರಸಿಂಹಯ್ಯ, ನರಸಿಂಹರಾಜು, ಜಿ. ವೆಂಕಟೇಶ್, ಜಯಮೂರ್ತಿ, ಬಿ.ಪಿ. ಅಂಜನಮೂರ್ತಿ, ಶೇಟ್ಟಳ್ಳಯ್ಯ, ಕೇಬಲ್ ರಘು, ಚಂದ್ರಯ್ಯ, ಕಿಶೋರ್, ಮೋಹನ್ಕುಮಾರ್, ಗಂಗಾಧರ್, ಎನ್. ರಾಜಣ್ಣ, ರಾಮಯ್ಯ, ಗೋಪಾಲ್, ಮೋಹನ್, ಯೋಗೀಶ್, ಹನುಮನರಸಯ್ಯ, ಶಾಂತಣ್ಣ, ಶ್ರೀನಿವಾಸ್, ಚಿಕ್ಕಹನುಮಂತಯ್ಯ, ಅನ್ನಪೂರ್ಣಮ್ಮ, ನಾಗಮ್ಮ, ಇಂದಿರಮ್ಮ, ಗಂಗಹನುಮಯ್ಯ ಮೊದಲಾದವರು ಪ್ರತಿಭಟನೆ ನೇತೃತ್ವವಹಿಸಿದ್ದರು.
ಸದರಿ ಖರಾಬು 6 ಎಕರೆ 0.19 ಗುಂಟೆ ಜಮೀನಿನಲ್ಲಿ 1980 ಇಸವಿಯಿಂದಲೂ ವಾಸ ಮಾಡಲು ಜಾಗವಿಲ್ಲದೆ ಬೀದಿಬದಿಯಲ್ಲಿ ವಾಸ ಮಾಡುತ್ತಿದ್ದ ಎನ್ ಆರ್ ಕಾಲೋನಿಯ ದಲಿತ ಕೋಮಿನ ವಸತಿ ರಹಿತ ಮಾದಿಗ ಕುಟುಂಬ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಸ್ವಾತಂತ್ರ್ಯ ಪೂರ್ವದಿಂದ ಈ ಭಾಗದ ಎನ್.ಆರ್ ಕಾಲೋನಿ ಇಂದಿರಾನಗರ ನಿರ್ವಾಣಿ ಲೇಔಟ್(ಪಿ.ಕೆ.ಎಸ್ ಕಾಲೋನಿ), ಅಂಬೇಡ್ಕರ್ ನಗರಗಳಲ್ಲಿದೆ ಅಕ್ಕಪಕ್ಕದ ಬಟವಾಡಿ ದೇವರಾಯ ಪಟ್ಟಣ ಹಾಗೂ ಕುರಿಪಾಳ್ಯದ ಏರಿಯಗಳ ಸಹೋದರ ಸಂಬಂಧಿಗಳ ಶವ ಸಂಸ್ಕಾರಕ್ಕಾಗಿ ಬಳಸುತ್ತಿರುವ ಹರಿಜನ ಸ್ಮಶಾನದ ಭೂಮಿಯನ್ನು ಅಕ್ರಮವಾಗಿ ಅತೀಕ್ರಮ ಪ್ರವೇಶಮಾಡಿ ಮಾದಿಗ ಜನಾಂಗದ ಪೂರ್ವಿಕರ ಶವ ಸಂಸ್ಕಾರದ ಸಮಾಧಿಗಳನ್ನು ನೆಲಸಮಗೊಳಿಸಿ ಭೂಮಿ ಬಗೆದು ಅದರಲ್ಲಿನ ಅಸ್ತಿಪಂಜರಗಳನ್ನು ಅಮಾನೀಯವಾಗಿ ಹೊರಗೆಳೆದು ಚೀಲಗಳಿಗೆ ತುಂಬಿ ಟ್ರ್ಯಾಕ್ಟರ್ ಮೂಲಕ ಅಜ್ಞಾತ ಸ್ಥಳಕ್ಕೆ ಸಾಗಿಸಿ ನೆರಳಿಗಾಗಿ ಬೆಳಸಿದ್ದ ನೂರಾರು ವರ್ಷಗಳ ಬೃಹತ್ ಗಾತ್ರದ ಮರಗಳನ್ನು ನೆಲಕ್ಕುರುಳಿಸಿ ಸಾಕ್ಷಿ ನಾಶಗೊಳಿಸಿರುತ್ತಾರೆ. ಇಂತಹ ಕೃತ್ಯಗಳನ್ನು ನಡೆಸಿರುವ ಇವರ ವಿರುದ್ಧ ತುಮಕೂರು ನಗರ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಾಗಿ ಪ್ರಕರಣ ದಾಖಲಿಸಲಾಗಿದೆ. ಆದುದ್ದರಿಂದ ಈ ಜಮೀನಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಸೃಷ್ಟಿಸಿರುವ ದಾಖಲೆಗಳಾದ ಮ್ಯೂಟೇಷನ್ ರೆಕಾರ್ಡ್ ಹಾಗೂ ಆರ್ಟಿಸಿಗಳಂತಹ ದಾಖಲೆಗಳನ್ನು ವಜಾಗೊಳಿಸಿ, ದಲಿತ ಸಮುದಾಯದ ಸ್ಮಶಾನಕ್ಕೆ ಜಮೀನು ಉಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.