ತುಮಕೂರು : ತುಮಕೂರು ನಗರ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯಾಗಿರುವ ನೀರು ಗೋವಿಂದರಾಜು ಮತ್ತು ಅಟಿಕಾ ಬಾಬು ನಡುವೆ ಟಿಕೆಟ್ ವಿಚಾರಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಚುನಾವಣೆಗೂ ಮುನ್ನವೇ ಒಬ್ಬರಿಗೊಬ್ಬರನ್ನು ಕಾಲೆದುಕೊಳ್ಳುವ ಮೂಲಕ ತುಮಕೂರು ಜನರಿಗೆ ಮನರಂಜನೆ ಒದಗಿಸಿದ್ದಾರೆ.
ಡಿಸೆಂಬರ್ 1ರಂದು ನಡೆದ ಪಂಚರತ್ನ ಯಾತ್ರೆ ಸಮಯದಲ್ಲೇ ಗೋವಿಂದರಾಜು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಿಸಿದರು, ಮೊನ್ನೆ ಬಿಡುಗಡೆಯಾದ ಪಟ್ಟಿಯಲ್ಲೂ ಗೋವಿಂದರಾಜು ಹೆಸರಿದೆ.
ಈ ಮಧ್ಯೆ ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟಿಕಾಬಾಬು ಪತ್ರಿಕಾಗೋಷ್ಠಿ ನಡೆಸಿ 2023ಕ್ಕೆ ನಾನೇ ಎಂಎಲ್ಎ ಎಂದು ನೀರು ಗೋವಿಂದರಾಜುಗೆ ಟ್ಯಾಂಗ್ ಕೊಟ್ಟಿದ್ದಲ್ಲದೆ, ತುಮಕೂರಿನಲ್ಲಿ ನಡೆದ ಪಂಚರತ್ನ ಯಾತ್ರೆಗೆ ದುಡ್ಡು ಖರ್ಚು ಮಾಡಿದ್ದು ನಾನೇ, ಇದರಿಂದಲೇ ಗೋವಿಂದರಾಜು ನನ್ನ ಪೋಟೋವನ್ನು ಬ್ಯಾನರ್, ಪ್ಲೆಕ್ಸ್ಗಳಲ್ಲಿ ಹಾಕಿದ್ದು ಎಂದು ನೇರವಾಗಿ ಹೇಳಿದರು.
ಈ ಮಧ್ಯೆ ನೀರು ಗೋವಿಂದರಾಜು ಚುನಾವಣೆಗೆ ನಿಲ್ಲುವುದಿಲ್ಲವೆಂದು ಅಟಿಕಾಬಾಬುರವರಿಂದ ಡೀಲ್ ಆಗಿದ್ದಾರೆ ಎಂಬ ಗಾಳಿ ಸುದ್ದಿಯು ಹರಡಿತು. ಇದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಗೋವಿಂದರಾಜು ತುಮಕೂರಿನ ಮತದಾರರನ್ನು ಟೆಂಪಲ್ರನ್ಗೆ ಕರೆದುಕೊಂಡು ಹೋಗುತ್ತಿರುವುದು ಜಗಜಾಹೀರಾದಾಗ, ದತ್ತಯಾತ್ರೆಯನ್ನು ಮಾಡಿದರೆ ಯಾರೂ ಕೇಳುವುದಿಲ್ಲ, ನಮ್ಮ ಕಾರ್ಯಕರ್ತರು ದೇವಸ್ಥಾನಕ್ಕೆ ಹೋಗೋದು ತಪ್ಪಾ ಎಂದು ಪ್ರಶ್ನಿಸಿದರು.
ಈ ಮಧ್ಯೆ ತುಮಕೂರಿನ ಹಿರಿಯ ಜೆಡಿಎಸ್ ನಾಯಕರನ್ನು ಗೋವಿಂದರಾಜು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಅಟಿಕಾಬಾಬು ಪತ್ರಿಕಾಗೋಷ್ಠಿಯಲ್ಲಿ ಏಪ್ರಿಲ್ನಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿ, ನನಗೆ ಕುಮಾರಣ್ಣನೇ ನಾಯಕರು ಎಂದು ಮಾರ್ಮಿಕವಾಗಿ ಹೇಳಿದರು.
ಈ ಇಬ್ಬರ ಮುಸುಕಿನ ಗುದ್ದಾಟದ ಬಗ್ಗೆ ರಾಜ್ಯದ ಜೆಡಿಎಸ್ ವರಿಷ್ಠರು ಯಾವ ಹೇಳಿಕೆಯನ್ನು ನೀಡಿಲ್ಲ, ಈ ಮಧ್ಯೆ ಗೋವಿಂದರಾಜು ಸೋಲುತ್ತೇನೆ ಎಂಬ ಹತಾಸೆಯಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದಲ್ಲದೆ, ಟೆಂಪಲ್ರನ್ ಮಾಡಿಸುವುದು, ಅಟಿಕಾಬಾಬು ಮೇಲೆ ಗಲಾಟೆ ಮಾಡಿಸುವುದು ಮಾಡುತ್ತಿದ್ದಾರೆ, ಇವರೆ ಅಭ್ಯರ್ಥಿ ಎಂದು ಘೋಷಣೆಯಾದ ಮೇಲೆ ಬಂದು ಹೋಗುವವರ ಮೇಲೆ ಇವರ ಕಡೆಯವರು ಹೋಗಿ ಗಲಾಟೆ ಮಾಡುವುದರಿಂದ ಜನಕ್ಕೆ ಬೇರೆ ಸಂದೇಶ ಹೋಗುತ್ತಿದೆ ಎಂದು ಜೆಡಿಎಸ್ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ.
ಕೆಲ ಸಣ್ಣ ನಾಯಕರಿಂದ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವುದಲ್ಲದೆ, ಹಿರಿಯ ಜೆಡಿಎಸ್ ನಾಯಕರಿಗೆ ಗೌರವ ಸಹ ನೀಡುವುದಿಲ್ಲ ಎಂಬ ದೂರುಗಳು ಕುಮಾರಸ್ವಾಮಿಯವರ ಎದುರಲ್ಲೇ ಅಸಮದಾನ ಸ್ಪೋಟಗೊಂಡಿದ್ದನ್ನು ಜೆಡಿಎಸ್ನ ಕೆಲ ಕಾರ್ಯಕರ್ತರು ಹೇಳಿಕೊಂಡು ತಿರುಗುತ್ತಿದ್ದಾರೆ.
ಗೋವಿಂದರಾಜು ಯಾರನ್ನು ನಂಬುವುದಿಲ್ಲ ಎಂಬ ಆರೋಪವೂ ಇದೆ ಎನ್ನಲಾಗುತ್ತಿದೆ, ಒಬ್ಬ ಜನಪ್ರತಿನಿಧಿಯಾಗುವವರಿಗೆ ಜನರ, ಕಾರ್ಯಕರ್ತರ ಮತ್ತು ಪಕ್ಷದ ನಾಯಕರ ಪ್ರೀತಿ, ವಿಶ್ವಾಸ ಬಹಳ ಮುಖ್ಯ ಎಂದು ಜೆಡಿಎಸ್ ಹಿರಿಯ ನಾಯಕರೊಬ್ಬರ ಮಾತು, ಗೋವಿಂದರಾಜು ಎಚ್ಚರಿಕೆಯಿಂದ ನಡೆದುಕೊಳ್ಳದಿದ್ದರೆ ಚುನಾವಣೆ ವೇಳೆಗೆ ಏನು ಬೇಕಾದರೂ ಆಗಬಹುದು ಎನ್ನಲಾಗುತ್ತಿದೆ.
ಶುಕ್ರವಾರ ರಾತ್ರಿ ಅಟಿಕಾಬಾಬು ಮೇಲೆ ಹಲ್ಲೆಗೆ ಯತ್ನಿಸಿದಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ಬೆಂಬಲಿಗರ ಮೇಲೆ ತುಮಕೂರು ನಗರಠಾಣೆಯಲ್ಲಿ ಕೊಲೆ ಬೆದರಿಕೆ ಎಂದು ದೂರು ದಾಖಲಿಸಲಾಗಿದೆ.